ಕೊರೊನಾ ಲಸಿಕೆ ಸಿದ್ಧವಾದ ಮೇಲೆ ಎಲ್ಲರಿಗೂ ಉಚಿತವಾಗಿ ನೀಡಬೇಕು: ನಾರಾಯಣ ಮೂರ್ತಿ
ಕೊರೊನಾ ಲಸಿಕೆ ಸಿದ್ಧವಾದ ಮೇಲೆ ಅದಕ್ಕೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ಜನರಿಗೆ ನೀಡಬೇಕು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಲಸಿಕೆ ಜನರ ಹಿತಕ್ಕಾಗಿ ಎಂಬುದನ್ನು ನಾನು ನಂಬುತ್ತೇನೆ. ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗಬೇಕು. ಈ ಭೂಮಿ ಮೇಲಿನ ಎಲ್ಲರಿಗೂ ಉಚಿತವಾಗಿ ದೊರೆಯಬೇಕು. ಲಸಿಕೆ ಉತ್ಪಾದಿಸುವ ಕಂಪೆನಿಗೆ ವಿಶ್ವಸಂಸ್ಥೆ ಅಥವಾ ಆಯಾ ದೇಶಗಳು ಪರಿಹಾರ ಒದಗಿಸಬೇಕು ಎಂದಿದ್ದಾರೆ.
ಆ ಮೂಲಕ ಲಸಿಕೆ ಉತ್ಪಾದನೆಗೆ ತಗುಲಿದ ವೆಚ್ಚಕ್ಕೇ ಜನಸಾಮಾನ್ಯರಿಗೆ ದೊರೆಯಬೇಕು, ಕಂಪೆನಿಗಳು ದೊಡ್ಡ ಲಾಭ ಇರಿಸಿಕೊಳ್ಳುವಂತಾಗಬಾರದು ಎಂದು ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೊರೊನಾದ ಆರ್ಥಿಕ ಬಿಕ್ಕಟ್ಟಿಗೆ ಇನ್ಫಿ ನಾರಾಯಣ ಮೂರ್ತಿ ಪರಿಹಾರ ಏನು ಗೊತ್ತಾ?
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಅನುಮತಿ ನೀಡಿದ ಮೇಲೆ ಕೊರೊನಾ ಲಸಿಕೆ ಉಚಿತವಾಗಿ ನೀಡುವುದಾಗಿ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಉಲ್ಲೇಖಾರ್ಹ ಎಂದಿದ್ದಾರೆ.
ಯಾವ ಕಂಪೆನಿಗೆ ವೆಚ್ಚ ಭರಿಸುವ ಶಕ್ತಿ ಇದೆಯೋ ಅಂಥವು ಯಾವುದೇ ವೆಚ್ಚ ತೆಗೆದುಕೊಳ್ಳದೆ, ಉಚಿತವಾಗಿ ಉತ್ಪಾದಿಸಬೇಕು. ಇನ್ನು ಯುಎನ್ ಭದ್ರತಾ ಸಮಿತಿ ಸದಸ್ಯರು ಈ ವೆಚ್ಚದ ಪ್ರಮುಖ ಭಾಗವನ್ನು ಹಂಚಿಕೊಳ್ಳಬೇಕು ಎಂದಿದ್ದಾರೆ. ಪಿಫೈಜರ್ ಹಾಗೂ ಮಾಡೆರ್ನಾ ಎರಡೂ ಬಗ್ಗೆ ಮಾತನಾಡಿದ ಅವರು, ಭಾರತದ ಒಟ್ಟು ಜನಸಂಖ್ಯೆಗೆ ಅಂದಾಜು ಮುನ್ನೂರು ಕೋಟಿ ಡೋಸ್ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮಂಗಳವಾರದಂದು ಕೊರೊನಾ ಸೋಂಕಿತ ಪ್ರಕರಣಗಳು ಮೂವತ್ತೆಂಟು ಸಾವಿರಕ್ಕೆ ಏರಿದೆ. ಅಂದಹಾಗೆ, ವರ್ಕ್ ಫ್ರಮ್ ಹೋಮ್ ಶಾಶ್ವತವಾಗಿ ನೀಡುವುದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ನಮ್ಮ ದೇಶದ ಬಹುತೇಕ ಮನೆಗಳು ಬಹಳಾ ಚಿಕ್ಕವು. ಆದ್ದರಿಂದ ಮನೆಗಳಿಂದ ದೀರ್ಘಕಾಲ ಕೆಲಸ ಮಾಡುವುದು ಕಷ್ಟ ಎಂದಿದ್ದಾರೆ.
ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್ ಬಳಕೆ, ಸಾಮಾಜಿಕ ಅಂತರ, ಮಾಸ್ಕ್ ಹೀಗೆ ಎಲ್ಲ ಮುಂಜಾಗ್ರತೆ ತೆಗೆದುಕೊಂಡು, ಶಾಲೆಗಳನ್ನು ತೆರೆಯಬೇಕು. ನಮ್ಮ ಶಾಲೆಗಳನ್ನು ಮುಚ್ಚಲು ಸಾಧ್ಯವಿಲ್ಲ ಎಂದಿದ್ದಾರೆ.
ತಜ್ಞರು ಅಭಿಪ್ರಾಯ ಪಡುವಂತೆ, ಬಡತನ ನಿರ್ಮೂಲನೆ ಆಗಬೇಕು ಅಂದರೆ ಮುಂದಿನ ಹದಿನೈದರಿಂದ ಇಪ್ಪತ್ತು ವರ್ಷಗಳ ಕಾಲ ವಾರ್ಷಿಕವಾಗಿ ಒಂದು ಕೋಟಿ ಉದ್ಯೋಗಿ ಸೃಷ್ಟಿಯಾಗಬೇಕು. ಆದರೆ ಇದು ಅತಿ ದೊಡ್ಡ ಸವಾಲು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.