"ಅಪನಗದೀಕರಣ, ದೋಷಪೂರಿತ GST, ಲಾಕ್ ಡೌನ್ ನಿಂದ ಆರ್ಥಿಕತೆ ರಚನೆ ನಾಶ"
ಕಾಂಗ್ರೆಸ್ ಯುವ ಘಟಕವು ನಿರುದ್ಯೋಗ ಸಮಸ್ಯೆ ವಿರುದ್ಧ "ರೈಸ್ ದ ವಾಯ್ಸ್" ಅಭಿಯಾನವನ್ನು ಭಾನುವಾರ ಆರಂಭಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಅಪನಗದೀಕರಣದ ತೀರ್ಮಾನ ಹಾಗೂ ದೋಷಪೂರಿತ ಜಿಎಸ್ ಟಿ ಜಾರಿ ಹಾಗೂ ಲಾಕ್ ಡೌನ್ ಈ ದೇಶದ ಆರ್ಥಿಕ ರಚನೆಯನ್ನೇ ನಾಶ ಮಾಡಿದವು ಎಂದಿದ್ದಾರೆ.
ನರೇಂದ್ರ ಮೋದಿ ಪ್ರಧಾನಿ ಆಗುವಾಗ ಈ ದೇಶದ ಯುವಜನರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಒದಗಿಸುವ ಮಾತು ನೀಡಿದ್ದರು. ಅವರು ಕನಸುಗಳನ್ನು ಮಾರಿದರು. ಆದರೆ ವಾಸ್ತವದಲ್ಲಿ ನರೇಂದ್ರ ಮೋದಿ ರಾಜಕಾರಣದಿಂದ 14 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ ರಾಹುಲ್.
"ಸರ್ಕಾರದ ವೈಫಲ್ಯಗಳು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಕೇಸ್ ಸ್ಟಡಿಗಳಾಗಬಹುದು"
ಇದು ಯಾಕೆ ಆಯಿತು? ತಪ್ಪಾದ ನೀತಿಗಳಿಂದ. ಅಪನಗದೀಕರಣ, ದೋಷಪೂರಿತ ಜಿಎಸ್ ಟಿ ಜಾರಿ ಹಾಗೂ ಲಾಕ್ ಡೌನ್- ಈ ಮೂರು ಹೆಜ್ಜೆಗಳು ದೇಶದ ಆರ್ಥಿಕತೆ ರಚನೆಯನ್ನೇ ನಾಶ ಮಾಡಿದವು. ಈಗ ಸತ್ಯ ಏನೆಂದರೆ, ಯುವಜನರಿಗೆ ಉದ್ಯೋಗ ನೀಡುವ ಸ್ಥಿತಿಯಲ್ಲಿ ಭಾರತ ಇಲ್ಲ. ಆ ಕಾರಣಕ್ಕೆ ಯುವ ಕಾಂಗ್ರೆಸ್ ರಸ್ತೆಗೆ ಇಳಿದು ಈ ವಿಚಾರದ ವಿರುದ್ಧ ಧ್ವನಿ ಎತ್ತುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಯುವಜನ ವಿರೋಧಿ ನೀತಿಗಳ ಬಗ್ಗೆ ಯುವಕ- ಯುವತಿಯರಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಮಾಧ್ಯಮಗಳ ಮೂಲಕ ಗಮನ ಸೆಳೆಯಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾಗಿ 2014ರಲ್ಲಿ ಅಧಿಕಾರ ಸ್ವೀಕರಿಸಿದಾಗ ನಿರುದ್ಯೋಗ ದರ 4.9 ಪರ್ಸೆಂಟ್ ಇತ್ತು. 2020ರಲ್ಲಿ ಅದು 29 ಪರ್ಸೆಂಟ್ ಆಗಿದೆ. ಇನ್ನು ಜಿಡಿಪಿ ಅಂದಾಜು -4ರಿಂದ -7.5 ಪರ್ಸೆಂಟ್ ಆಗಬಹುದು ಎಂಬ ಅಂದಾಜಿದೆ. ತೆರಿಗೆ ಸಂಗ್ರಹದಲ್ಲಿ 46 ಪರ್ಸೆಂಟ್ ಇಳಿಕೆ ಆಗಿದೆ ಹಾಗೂ 12 ಕೋಟಿ ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.