ಕರ್ನಾಟಕದಲ್ಲಿ ಈರುಳ್ಳಿ ಬೆಳೆ ಬಾರದಿದ್ದಕ್ಕೆ ಉತ್ತರ ಭಾರತದಲ್ಲಿ ಬೆಲೆಗೆ ಬೆಂಕಿ
ಅಡುಗೆ ಮಾಡುವ ಮುನ್ನ ಈರುಳ್ಳಿಯನ್ನು ಹೆಚ್ಚುವಾಗ ಕಣ್ಣೀರು ಬರುವುದಲ್ಲ, ಅಂಗಡಿಯಲ್ಲಿ ಖರೀದಿಸುವಾಗಲೂ ಕಣ್ಣಲ್ಲಿ ನೀರು ಬರುವ ಸನ್ನಿವೇಶ ಇದು. ಯಾಕೆಂದರೆ ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ಅಕ್ಷರಶಃ ನೀರು ತರಿಸುತ್ತಿದೆ.
ದೇಶದ ಹಲವು ನಗರಗಳಲ್ಲಿ ಒಂದು ತಿಂಗಳ ಹಿಂದೆ 1 ಕೆ.ಜಿ.ಗೆ 20 ರಿಂದ 30 ರೂಪಾಯಿ ಒಳಗೆ ಇದ್ದ ಈರುಳ್ಳಿ ದರ ಈಗ 100ರ ಗಡಿ ಸಮೀಪಿಸಿದೆ. ದೇಶದ ಹಲವಾರು ನಗರಗಳಲ್ಲಿ ಶೇಕಡಾ 40ರಷ್ಟು ದರ ಹೆಚ್ಚಾಗಿದ್ದು, ರಾಜಧಾನಿ ದೆಹಲಿಯಲ್ಲಿ 80 ರುಪಾಯಿ, ಚೆನ್ನೈನಲ್ಲಿ 90 ರುಪಾಯಿಗೆ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈರುಳ್ಳಿ ದರ ಸ್ವಲ್ಪ ಸುಧಾರಿಸಿದೆ.
ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನೆರೆಯಿಂದಾಗಿ ಉಂಟಾದ ಬೆಳೆ ನಷ್ಟ ಹಾಗೂ ಪೂರೈಕೆ ವ್ಯತ್ಯಯವು ಬೆಲೆ ಏರಿಕೆಗೆ ಕಾರಣವಾಗಿದೆ. ಬಹುತೇಕ ರಾಜ್ಯಗಳಲ್ಲಿ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ಫಸಲು ಬರುವುದು ವಿಳಂಬವಾಗಿದ್ದು, ನವೆಂಬರ್ ಅಂತ್ಯದೊಳಗೆ ಮಾರುಕಟ್ಟೆ ತಲುಪಲಿದೆ. ಅಲ್ಲಿಯವರೆಗೂ ಪರಿಸ್ಥಿತಿ ಬಹುತೇಕ ಹೀಗೆ ಇರಬಹುದು ಎಂದು ವರ್ತಕರು ಅಂದಾಜಿಸಿದ್ದಾರೆ.
ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ ಏರಿಕೆ ಕಂಡಿದೆ. ಅಕ್ಟೋಬರ್ 31ರಂದು ದೆಹಲಿಯಲ್ಲಿ ಪ್ರತಿ ಕೆ.ಜಿ ಈರುಳ್ಳಿಗೆ 55 ರುಪಾಯಿ ದರವಿತ್ತು. ಆದರೆ ಇಂದು 80 ರುಪಾಯಿಗೆ ತಲುಪಿದೆ. ತಮಿಳುನಾಡಿನಲ್ಲೂ ಈರುಳ್ಳಿ ದರ ಹೆಚ್ಚಿದ್ದು, ಚೆನ್ನೈನಲ್ಲಿ 60 ರುಪಾಯಿ ಇದ್ದ ಈರುಳ್ಳಿ ದರ 90 ರುಪಾಯಿಗೆ ಏರಿಕೆಯಾಗಿದೆ.
ನಿಟ್ಟುಸಿರು ಬಿಟ್ಟ ಬೆಂಗಳೂರು ಜನತೆ
ಕರ್ನಾಟಕದಲ್ಲೂ ಇಲ್ಲಿಯವರೆಗೂ ಈರುಳ್ಳಿ ದರ ಹೆಚ್ಚೇ ಇತ್ತು. ಈರುಳ್ಳಿ ಹೆಚ್ಚಾಗಿ ಬೆಳೆಯುವ ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ನೆರೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿ ಆಗಿದ್ದಲ್ಲದೆ ಪೂರೈಕೆಯಲ್ಲಿ ವ್ಯತ್ಯಾಸವಾಗಿತ್ತು. ಹೀಗಾಗಿ ಈರುಳ್ಳಿ ದರ 80 ರುಪಾಯಿ ತಲುಪಿತು. ಆದರೆ ಈಗ ಇತ್ತೀಚಿನ ಮಾರುಕಟ್ಟೆ ದರ ಗಮನಿಸಿದಾಗ ಬೆಂಗಳೂರಿನಲ್ಲಿ ಈರುಳ್ಳಿ 30 ರಿಂದ 40 ರುಪಾಯಿಗೆ ತಲುಪಿದೆ. ಹೀಗಾಗಿ ಬೆಂಗಳೂರು ಜನತೆ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೊಂದು ತಿಂಗಳವರೆಗೂ ಬೆಲೆ ಏರಿಳಿತ
ಈಗಾಗಲೇ ಸರ್ಕಾರವು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಸದ್ಯದಲ್ಲೇ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದೆ. ಆದರೆ ವರ್ತಕರು ಹಾಗೂ ಮಾರುಕಟ್ಟೆ ತಜ್ಙರ ಪ್ರಕಾರ ಈರುಳ್ಳಿ ಬೆಲೆ ಏರಿಳಿತವು ಇನ್ನೊಂದು ತಿಂಗಳವರೆಗೂ ಹೀಗೆಯೇ ಮುಂದುವರಿಯದ್ದು, ವಿಳಂಬವಾಗಿರುವ ಬೆಳೆಯು ಸಗಟು ಮಾರುಕಟ್ಟೆ ತಲುಪುವವರೆಗೂ ಈರುಳ್ಳಿ ಬೆಲೆ ಏರಿಳಿತ ಕಾಣಲಿದೆ ಎಂದು ಹೇಳಲಾಗುತ್ತಿದೆ.
ಈರುಳ್ಳಿ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ ಈರುಳ್ಳಿ ಬಳಕೆ ಮಾತ್ರವಲ್ಲ, ಈರುಳ್ಳಿ ಕೃಷಿಯಲ್ಲೂ ಭಾರತವು ಚೀನಾದ ನಂತರ 2ನೇ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿವರ್ಷ 15,118 ಮೆಟ್ರಿಕ್ ಟನ್ನಷ್ಟು ಈರುಳ್ಳಿ ಬೆಳೆಯಲಾಗುತ್ತದೆ. ಅಂದರೆ ವಿಶ್ವದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ 19.90 ರಷ್ಟು. ಈ ಪೈಕಿ ಭಾರತದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲಿ ವರ್ಷಕ್ಕೆ 4,905 ಟನ್ ನಷ್ಟು ಬೆಳೆದರೆ, 2ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 2,592.2 ಟನ್ ಬೆಳೆಯಲಾಗುತ್ತದೆ.
ಶೇ. 70ರಷ್ಟು ಕುಸಿತಗೊಂಡಿದ್ದ ಈರುಳ್ಳಿ ಉತ್ಪಾದನೆ
ಆದರೆ, ಕಳೆದೆರಡು ತಿಂಗಳಿನಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಅತಿವೃಷ್ಟಿಗೆ ಸಿಲುಕಿವೆ. 2010ರಲ್ಲೂ ರಣಭೀಕರ ಮಳೆಯಿಂದಾಗಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ತತ್ತರಿಸಿದ್ದವು. ಈರುಳ್ಳಿ ಕಟಾವಿಗೆ ಬರುವ ಸಂದರ್ಭದಲ್ಲಿ ಎಡೆಬಿಡದೆ ಮಳೆ ಸುರಿದ ಪರಿಣಾಮ ಉತ್ಪಾದನೆ ಶೇಕಡಾ 70ರಷ್ಟು ಕುಸಿತ ಕಂಡಿತ್ತು. ಪರಿಣಾಮ ಈರುಳ್ಳಿ ಬೆಲೆ 88 ರಿಂದ 90 ರುಪಾಯಿ ದಾಟಿತ್ತು. ಇದೀಗ ಅದೇ ರೀತಿಯ ಪರಿಸ್ಥಿತಿ ಮರುಕಳಿಸಿದ್ದು, ಈರುಳ್ಳಿ ದರ ಏರಿಕೆ ಜನರನ್ನು ಕಂಗಾಲಾಗಿಸಿದೆ.