ಫೆಬ್ರವರಿ 1ರಂದು ಕೇಂದ್ರ ಬಜೆಟ್: ರೈತರ ಆದಾಯ ಹೆಚ್ಚಿಸಲು ಕೇಂದ್ರದ ಚಿತ್ತ
ಫೆಬ್ರವರಿ 1ರ ಕೇಂದ್ರ ಬಜೆಟ್ಗಾಗಿ ದೇಶವೇ ಎದುರು ನೋಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ರೈತರ ಆದಾಯದಲ್ಲಿ ವೃದ್ದಿಯನ್ನು ತರುವುದೇ ಈ ಬಾರಿ ಬಜೆಟ್ನ ಮೂಲಮಂತ್ರವನ್ನಾಗಿಸುವ ಸಾಧ್ಯತೆ ಇದೆ.
ರೈತರ ಆದಾಯ ದ್ವಿಗುಣಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಗತ್ಯ ವಸ್ತುಗಳ ಕಾಯ್ದೆಯಲ್ಲಿನ ಹಲವಾರು ನಿರ್ಬಂಧಗಳನ್ನು ಕೈಬಿಟ್ಟು ಸಮಗ್ರ ಸುಧಾರಣೆಗೆ ಆಧ್ಯತೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ಹಲವು ರಾಜ್ಯಗಳು ಸಮ್ಮತಿಸಿವೆ. ರೈತರು ಬೆಳೆದ ಉತ್ಪನ್ನಗಳ ಮಾರಾಟ ಮತ್ತು ವರ್ತಕರು ಖರೀದಿಸಲು ಕಾಯ್ದೆಯಲ್ಲಿನ ನಿರ್ಬಂಧಗಳನ್ನು ಸಡಿಲಿಸಿ ಮುಕ್ತ ಮಾರುಕಟ್ಟೆ ಕಲ್ಪಿಸಲು ಬಜೆಟ್ನಲ್ಲಿ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ಇದರಿಂದ ರೈತರ ಆದಾಯ ಹೆಚ್ಚಲಿದೆ ಎಂಬುದು ಪ್ರಮುಖ ಉದ್ದೇಶ.
ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ, ವ್ಯವಸಾಯ ವಲಯದ ಸಮಗ್ರ ಅಭಿವೃದ್ಧಿಗೆ ಬಂಡವಾಳ ಹೂಡಿಕೆಗೆ ಉತ್ತೇಜನ, ಕೃಷಿಕರ ಉತ್ಪನ್ನಗಳನ್ನು ಸರ್ಕಾರವೇ ನೇರವಾಗಿ ಖರೀದಿಸುವ ವ್ಯವಸ್ಥೆ ಇತ್ಯಾದಿ ಪ್ರಮುಖ ಅಂಶಗಳು ಈ ಬಾರಿ ಬಜೆಟ್ನಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.
ಇನ್ನು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದ್ದರು ಹೆಚ್ಚು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸರ್ಕಾರವೇ ನೇರವಾಗಿ ಕೃಷಿಕರ ಉತ್ಪನ್ನಗಳನ್ನು ಖರೀದಿಸುವ ಅತ್ಯಂತ ಸರಳ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ.