ಕ್ಷಿಪ್ರಗತಿಯಲ್ಲಿ ಆರ್ಥಿಕ ಚೇತರಿಕೆ ಕಷ್ಟಸಾಧ್ಯ: ನಿರ್ಮಲಾ ಸೀತಾರಾಮನ್
ದೇಶದ ಆರ್ಥಿಕತೆಯು ಬಹಳ ಹಿಂದಿನಿಂದಲೂ ಮಂದಗತಿಯಲ್ಲಿದ್ದು, ಕ್ಷಿಪ್ರಗತಿಯಲ್ಲಿ ಆರ್ಥಿಕ ಚೇತರಿಕೆ ಕಷ್ಟಸಾಧ್ಯವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಾರ್ಪೋರೇಟ್ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ಈ ತೆರಿಗೆ ಕಡಿತದ ನಂತರ ಕಂಪನಿಗಳು ಹೊಸ ಹೂಡಿಕೆಯನ್ನು ಯೋಚಿಸುತ್ತಿವೆ. ಆದರೆ ಹೂಡಿಕೆಗಳು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2013ರಿಂದಲೂ ಮಂದಗತಿಯಲ್ಲಿರುವ ಆರ್ಥಿಕತೆಯನ್ನು ಚೇತರಿಸಲು ನಾನಾ ಕ್ರಮಗಳನ್ನು ಕೈಗೊಂಡಿದೆ. ನಿಧಾನಗತಿಯ ಆರ್ಥಿಕತೆ ಮತ್ತು ಆದಾಯದ ನಡುವೆ ಕಳೆದ ವಾರವಷ್ಟೇ ಮೂಡಿಸ್ ಸಂಸ್ಥೆ ದೇಶದ ಸಾಲದ ದೃಷ್ಟಿಕೋನವನ್ನು 'ಸ್ಥಿರ' ದಿಂದ ನಕಾರಾತ್ಮಕಕ್ಕೆ ಬದಲಾಯಿಸಿರುವುದರಿಂದ ಆರ್ಥಿಕ ಶಿಸ್ತಿಗಾಗಿ ಕಾರ್ಪೋರೇಟ್ ತೆರಿಗೆ ಕಡಿತದಂತಹ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಭಾರತದ ಜಿಡಿಪಿ ಸೂಚ್ಯಂಕವನ್ನು ಶೇಕಡಾ 5.6ಕ್ಕೆ ಇಳಿಸಿದ ಮೂಡಿಸ್
ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆಯಾಗಿರುವ ಭಾರತ ತನ್ನ ಹಣಕಾಸಿನ ಕೊರತೆ ಸಮಸ್ಯೆಗಳನ್ನು ಬೇಗನೆ ಸುಧಾರಿಸಿಕೊಳ್ಳಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಸರ್ಕಾರದ ಆಸ್ತಿ ಮಾರಾಟ ಕಾರ್ಯಕ್ರಮಗಳಿಂದ ಬಜೆಟ್ ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಯಾವುದೇ ತೊಂದರೆ ಆಗಲ್ಲ ಎಂದು ತಿಳಿಸಿದರು.
ದೇಶದ ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕ್ ಅಡಿಯಲ್ಲಿ ತರುವ ಉದ್ದೇಶವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.