ನೋಟಿನ ಮೇಲೆ ಲಕ್ಷ್ಮೀ ಚಿತ್ರ ಮುದ್ರಿಸಿದರೆ ರುಪಾಯಿ ಮೌಲ್ಯ ಹೆಚ್ಚಬಹುದು: ಸುಬ್ರಹ್ಮಣಿಯನ್ ಸ್ವಾಮಿ
ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಎಲ್ಲರೂ ಹುಬ್ಬೇರಿಸುವಂತಹ ಸಲಹೆಯೊಂದನ್ನು ನೀಡಿದ್ದಾರೆ. ಅದೇನಂದರೆ ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಿಸಲು ನೋಟಿನ ಮೇಲೆ ಲಕ್ಷ್ಮೀ ಚಿತ್ರ ಮುದ್ರಿಸಿದರೆ ಉತ್ತಮ ಎಂದಿದ್ದಾರೆ.
ಮಧ್ಯಪ್ರದೇಶದ ಕಂದ್ವಾದಲ್ಲಿ ನಡೆದ ವಿವೇಕಾನಂದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ರಹ್ಮಣಿಯನ್ ಸ್ವಾಮಿ ಭಾರತೀಯ ನೋಟುಗಳ ಮೇಲೆ ಐಶ್ವರ್ಯ ದೇವತೆಯಾದ ಲಕ್ಷ್ಮೀ ಚಿತ್ರ ಮುದ್ರಿಸಿದರೆ ರುಪಾಯಿ ಮೌಲ್ಯ ಹೆಚ್ಚಬಹುದು ಎಂದು ಸಲಹೆ ನೀಡಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿ ಈ ಸಲಹೆ ನೀಡಲು ಕಾರಣ, ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಇಂಡೋನೇಶಿಯಾದ ಕರೆನ್ಸಿ ಮೇಲೆ ಗಣೇಶನ ಚಿತ್ರ ಮುದ್ರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ಮೇಲಿನ ರೀತಿಯಲ್ಲಿ ಉತ್ತರ ನೀಡಿದ್ದಾರೆ. ವಿಘ್ನ ವಿನಾಶಕ ಗಣೇಶನ ಚಿತ್ರ ಮುದ್ರಿಸಲು ನನ್ನ ಅಭ್ಯಂತರವಿಲ್ಲ. ಆದರೆ ಲಕ್ಷ್ಮೀ ಚಿತ್ರ ಮುದ್ರಿಸಿದರೆ ರುಪಾಯಿ ಮೌಲ್ಯ ಹೆಚ್ಚಾಗಬಹುದು ಎಂದು ನನ್ನ ಅಭಿಪ್ರಾಯ ಎಂದಿದ್ದಾರೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರೇ ಇದಕ್ಕೆ ಉತ್ತರಿಸಬೇಕು. ದೇವ ಗಣೇಶ ವಿಘ್ನಗಳನ್ನು ನಿವಾರಿಸುತ್ತಾನೆ. ಭಾರತೀಯ ನೋಟುಗಳ ಮೇಲೆ ಲಕ್ಷ್ಮೀ ದೇವಿಯ ಚಿತ್ರವನ್ನು ಮುದ್ರಿಸಿದರೆ ಇನ್ನೂ ಚೆನ್ನಾಗಿರುತ್ತದೆ. ಹಣಕಾಸು ಸ್ಥಿತಿಯೂ ಸುಧಾರಣೆಯಾಗುತ್ತದೆ. ಹಾಗೊಮ್ಮೆ ನಿರ್ಧಾರ ಮಾಡಿದರೆ ನನ್ನ ಸಹಮತವಂತೂ ಖಂಡಿತ ಇದೆ ಎಂದು ಹೇಳಿದರು. ಅಲ್ಲದೆ ತಮ್ಮ ಮಾತುಗಳ ಬಗ್ಗೆ ಯಾರೂ ತಪ್ಪು ತಿಳಿದುಕೊಳ್ಳಬೇಡಿ, ಕೆಟ್ಟದಾಗಿ ಭಾವಿಸಬೇಡಿ ಎಂದೂ ತಿಳಿಸಿದರು.
ಸುಬ್ರಹ್ಮಣಿಯನ್ ಸ್ವಾಮಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಬೆಂಬಲ ವ್ಯಕ್ತವಾಗುತ್ತಿದೆ.