ಸಾಲದ ಮೇಲಿನ ಬಡ್ಡಿ ಮನ್ನಾ ಆದರೆ, ಆಗುವ ಪರಿಣಾಮದ ಕುರಿತು ಅಧ್ಯಯನ: ತಜ್ಞರ ಸಮಿತಿ ರಚನೆ
ಕೊರೊನಾ ಸಾಂಕ್ರಾಮಿಕದಿಂದಾಗಿ ಆರ್ಬಿಐ ಘೋಷಿಸಿದ್ದ ಸಾಲದ ಮೇಲಿನ ನಿಷೇಧದ ಅಡಿಯಲ್ಲಿ, ಸಾಲಗಳ ಮೇಲಿನ ಬಡ್ಡಿ ಪಾವತಿಗಳನ್ನು ಮನ್ನಾ ಮಾಡುವುದರಿಂದ ಆಗುವ ಪರಿಣಾಮವನ್ನು ನಿರ್ಣಯಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಇದರ ಜೊತೆಗೆ ಸಾಲಗಾರರಿಗೆ ಪರಿಹಾರ ನೀಡುವ ಕ್ರಮಗಳನ್ನು ಸೂಚಿಸುತ್ತದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ಮಾಜಿ ಆಡಿಟರ್ ಜನರಲ್ ರಾಜೀವ್ ಮೆಹರಿಷಿ ನೇತೃತ್ವದ ಸಮಿತಿಯಲ್ಲಿ ಮಾಜಿ ಹಣಕಾಸು ನೀತಿ ಸಮಿತಿ ಸದಸ್ಯ ರವೀಂದ್ರ ಹೆಚ್. ಧೋಲಾಕಿಯಾ, ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಐಡಿಬಿಐ ಬ್ಯಾಂಕ್ ಬಿ.ಶ್ರೀರಾಮ್ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ.
ಈ ಸಮಿತಿ ರಚನೆಯು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಆರ್ಬಿಐಗೆ ಕೊನೆಯ ಅವಕಾಶ ನೀಡಿದ ಮೇಲೆ ಹೊರಬಂದಿದೆ. ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಲ ಮರುಪಾವತಿಸಲಾಗದ ಗ್ರಾಹಕರ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಸುಪ್ರೀಂ ಕೋರ್ಟ್ 2 ವಾರಗಳ ಅಂತಿಮ ಗಡುವು ನೀಡಿದೆ.
ಸಾಲದ ಮೇಲಿನ ನಿಷೇಧ: ಕೇಂದ್ರಕ್ಕೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದ ಮೊರಟೋರಿಯಂ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿ ಮನ್ನಾ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಈ ಕುರಿತು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವ ಮೊದಲು, ಬಡ್ಡಿ ಮನ್ನಾ ಆದರೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಲೆಂದು ತಜ್ಞರ ಸಮಿತಿಯನ್ನು ರಚಿಸಲಾಗಿದೆ.