ಕೊರೊನಾ ವೈರಾಣು ಕಾರಣಕ್ಕೆ ಆರ್ಥಿಕ ಬಿಕ್ಕಟ್ಟಿರುವಾಗ ಭಾರತದ ಇತರ ಸಮಸ್ಯೆಗಳನ್ನು ಗುಡಿಸಿ ಹಾಕಿ, ಎಲ್ಲ ವಲಯಗಳಲ್ಲೂ ಸುಧಾರಣೆ ತರಬೇಕು. ಜತೆಗೆ ಹೆಚ್ಚೆಚ್ಚು ವಿದೇಶಿ ಬಂಡವಾಳ ದೇಶದೊಳಗೆ ಬರುವಂತೆ ಮಾಡಬೇಕು. - ಹೀಗೆ ಸಲಹೆ ನೀಡಿದ್ದಾರೆ ಆರ್ ಬಿಐ ಮಾಜಿ ಗವರ್ನರ್ ರಘುರಾಂ ರಾಜನ್. ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬಹಳ ಆಸಕ್ತಿಕರವಾದ ಸಂಗತಿಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ರಘುರಾಂ ಹೇಳಿದ್ದೇನು ಎಂಬುದರ ವಿವರ ಇಲ್ಲಿದೆ.
ಬ್ಯಾಂಕಿಂಗ್, ಕೃಷಿ ವಲಯದ ಸಮಸ್ಯೆಗಳನ್ನು ನಿವಾರಿಸಲು ದೊಡ್ಡ ಹೆಜ್ಜೆಗಳನ್ನೇ ಇಡಬೇಕು. ಫೈನಾನ್ಷಿಯನ್ ಮಾರ್ಕೆಟ್ ಮತ್ತಷ್ಟು ಉದಾರೀಕರಣಗೊಂಡು, ಹೆಚ್ಚು ಗಟ್ಟಿಯಾಗಿ, ವಿಸ್ತರಣೆ ಕೂಡ ಆಗಬೇಕು. ಈಗ ಹೇಳಲು ಹೊರಟಿರುವ ಆರಂಭಿಕ ಸೂಚನೆಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ಹೂಡಿಕೆದಾರರಿಗೆ ಈಗಾಗಲೇ ನೀಡಿದೆ. ಸವರನ್ ಬಾಂಡ್ ಮೇಲೆ ಹೂಡಿಕೆ ಮಾಡುವುದು ಸಲೀಸಾಗಿದೆ. ಇನ್ನಷ್ಟು ಕ್ರಮ ಕೈಗೊಳ್ಳಲಾಗಿದೆ.
ಹತ್ತಾರು ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ
ಕಳೆದ ಕೆಲ ದಶಕಗಳಲ್ಲೇ ಭಾರತ ಈಗಿನಂಥ ಬಿಕ್ಕಟ್ಟನ್ನು ಕಂಡಿಲ್ಲ. 130 ಕೋಟಿ ಜನಸಂಖ್ಯೆ ಇರುವ ದೇಶದ ಮೂರು ವಾರಗಳ ಲಾಕ್ ಡೌನ್ ನ ಫಲಿತಾಂಶ ಆರ್ಥಿಕ ಕುಸಿತವೇ ಆಗಿರುತ್ತದೆ. ಹತ್ತಾರು ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ, ಬಡವರು ಉಪವಾಸದಲ್ಲಿ ಬೀಳುತ್ತಾರೆ. ಬಿಕ್ಕಟ್ಟಿನಲ್ಲೇ ಭಾರತ ಪುನಶ್ಚೇತನಗೊಳ್ಳುತ್ತದೆ ಎಂಬ ಮಾತಿದೆ. ಈ ದುರಂತ ಸನ್ನಿವೇಶವು ನಮ್ಮ ವ್ಯವಸ್ಥೆಯೊಳಗಿನ ಹುಳುಕನ್ನು ಬಯಲು ಮಾಡಲಿದೆ. ಒಂದು ಸಮಾಜವಾಗಿ ನಾವೆಲ್ಲ ಎಷ್ಟು ದುರ್ಬಲರು ಎಂಬುದನ್ನು ತಿಳಿಸಿಕೊಟ್ಟಿದೆ. ಈಗ ನಮ್ಮ ರಾಜಕೀಯ ವ್ಯವಸ್ಥೆಯನ್ನು ಆರ್ಥಿಕ ಸ್ಥಿತಿ ಹಾಗೂ ಆರೋಗ್ಯ ರಕ್ಷಣೆ ವ್ಯವಸ್ಥೆ ಸುಧಾರಣೆ ಕಡೆಗೆ ಕೇಂದ್ರೀಕರಿಸಬೇಕಿದೆ.
ಬಿಕ್ಕಟ್ಟಿನ ಸನ್ನಿವೇಶದಲ್ಲಿ ಪುನಶ್ಚೇತನದ ಹೆಜ್ಜೆಗಳು
ಬಿಕ್ಕಟ್ಟಿನ ಸಂದರ್ಭದಲ್ಲೆಲ್ಲ ಪುನಶ್ಚೇತನಕ್ಕೆ ಹೆಜ್ಜೆಗಳನ್ನು ಇಟ್ಟಿರುವುದು ಭಾರತದಲ್ಲಿ ಕಂಡುಬರುತ್ತದೆ. ಉದಾಹರಣೆಗೆ: 1991- 92. ಆಗ ಸರ್ಕಾರದ ಹಿಡಿತದಿಂದ ಖಾಸಗಿ ವಲಯಕ್ಕೆ ಮುಕ್ತಿ ಸಿಕ್ಕಿತು. ನಿಯಂತ್ರಣ ಇಲ್ಲದಿದ್ದ ಫೈನಾನ್ಷಿಯಲ್ ಮಾರ್ಕೆಟ್ ಗೆ ಮುಕ್ತಿ ದೊರೆಯಿತು. ಆಮದು ಸುಂಕ ಇಳಿಯಿತು. ವಿತ್ತೀಯ ಕೊರತೆ ಸರಿದೂಗಿಸಲು ವಿದೇಶಿ ಹೂಡಿಕೆ ದೇಶದೊಳಗೆ ಬರಲು ಸಾಧ್ಯವಾಯಿತು. 1997- 98ರಲ್ಲಿ ಅಣ್ವಸ್ತ್ರ ಪರೀಕ್ಷೆ ನಂತರ ಆರ್ಥಿಕ ದಿಗ್ಬಂಧನ ಹೇರಿದಾಗ ಏಷ್ಯಾದಲ್ಲೇ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿತು. ಆ ವೇಳೆ ಸರ್ಕಾರಿ ಸ್ವಾಮ್ಯದ ಕಂಪೆನಿಯಿಂದ ದೊಡ್ಡ ಮಟ್ಟದಲ್ಲಿ ಬಂಡವಾಳ ಹಿಂತೆಗೆತ ಮಾಡಲಾಯಿತು. 2014ರಲ್ಲಿ ಭಾರತದ ಬ್ಯಾಂಕ್ ವ್ಯವಸ್ಥೆಯಲ್ಲಿ ಬ್ಯಾಡ್ ಲೋನ್ ಗೆ ಸಂಬಂಧಿಸಿದಂತೆ ಪಾರದರ್ಶಕತೆ ತರಲಾಯಿತು.
ಸುಧಾರಣೆಗಳ ಚಾಂಪಿಯನ್ ನರೇಂದ್ರ ಮೋದಿ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂಥ ಹಲವು ಸುಧಾರಣೆಗಳನ್ನು ಮಾಡಿದ ಚಾಂಪಿಯನ್. ಏಕರೂಪದ ತೆರಿಗೆ ಜಿಎಸ್ ಟಿ ಜಾರಿ, ಇನ್ ಸಾಲ್ವೆನ್ಸಿ ಕಾನೂನು, ಕಾರ್ಪೊರೇಟ್ ತೆರಿಗೆಗಳ ಕಡಿತ ಮಾಡಿದರು. ಅದರ ಜತೆಗೆ ದೊಡ್ಡ ಮಟ್ಟದಲ್ಲಿ ಸರ್ಕಾರದ ಆಸ್ತಿಗಳ ಮಾರಾಟ ಆರಂಭಿಸಿದರು. ಇದೇ ವೇಳೆ ಆಮದು ಸುಂಕ ಹೆಚ್ಚಳ ಮಾಡಿದರು, ವ್ಯವಹಾರ ಒಪ್ಪಂದಗಳಿಗೆ ನಾನಾ ಬಣ್ಣ ಬಳಿದರು, ಬೆಳವಣಿಗೆಗೆ ಹಿನ್ನಡೆಯಾಯಿತು. ಸಾರ್ವಜನಿಕ ವೆಚ್ಚದ ಮೊತ್ತ ಹಿಗ್ಗಲಿದೆ ಮತ್ತು ಲಾಕ್ ಡೌನ್ ಘೋಷಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಕಠಿಣ ಮಾಡಲಿದೆ. ಆರ್ಥಿಕ ನೀತಿಗಳು ಗಟ್ಟಿಯಾಗ ರೂಪುಗೊಳ್ಳಬೇಕು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ. ಮಾರ್ಚ್ 2021ಕ್ಕೆ ಜಿಡಿಪಿಗೆ ಬಜೆಟ್ ಕೊರತೆ ಅಂದಾಜು 3.5 ಪರ್ಸೆಂಟ್ ಬರಬಹುದು ಎಂದುಕೊಳ್ಳಲಾಗಿತ್ತು. ಆದರೆ ಕೆಲವರು ಹೇಳುವಂತೆ ಅದು 6.2 ಪರ್ಸೆಂಟ್ ಆಗಬಹುದು.
ಐತಿಹಾಸಿಕ ಬಿಕ್ಕಟ್ಟಿನಲ್ಲಿ ಭಾರತ ಎದ್ದುನಿಂತಿದೆ
ಸಾಧಿಸಲಾಗದ ಗುರಿಯ ಕಡೆಗೆ ಗಮನ ನೆಡಲಾಗುತ್ತಿದೆ. ಬಜೆಟ್ ನಲ್ಲಿ ಪ್ರಸ್ತಾವ ಆಗುವ ಅಂಶಗಳ ಬಗ್ಗೆ ಬದ್ಧವಾಗಿರಬೇಕು. ನಮ್ಮ ದೃಷ್ಟಿಕೋನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಭಾರತದ ಬಾಂಡ್ ಮಾರ್ಕೆಟ್ ಮುಕ್ತವಾಗಿಡುವುದು ಮತ್ತು ಬ್ಯಾಂಕ್ ಗಳು ವಿದೇಶಗಳಲ್ಲಿ ಕರೆನ್ಸಿ ವ್ಯವಹಾರ ನಡೆಸುವುದನ್ನು ಕೆಲ ವರ್ಷಗಳ ಹಿಂದೆ ಆಲೋಚಿಸಲು ಸಹ ಸಾಧ್ಯವಿರಲಿಲ್ಲ. ಈಗ ಅವೆಲ್ಲ ಸಾಧ್ಯವಾಗಿದೆ. ಈ ಹಿಂದೆ ಏಕೆ ಸಾಧ್ಯವಾಗಿರಲಿಲ್ಲ ಅಂದರೆ, ಭಾರತದ ಬಗ್ಗೆ ವಿಶ್ವಾಸದ ಕೊರತೆ ಇತ್ತು. ದೀರ್ಘಾವಧಿ ವಿದೇಶಿ ಬಂಡವಾಳ ಆಕರ್ಷಿಸುವ ಅಗತ್ಯ ಇದೆ. ಆ ಮೂಲಕ ದೇಶೀಯ ಉಳಿತಾಯ- ಹೂಡಿಕೆ ಕೊರತೆಯನ್ನು ಆ ಮೂಲಕ ಸರಿತೂಗಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳ ಕೊರತೆಯನ್ನು ಸಂಭಾಳಿಸುವುದು ಅತಿ ದೊಡ್ಡ ಸವಾಲು. ಆದರೆ ಭಾರತ ಯಾವಾಗೆಲ್ಲ ಐತಿಹಾಸ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆಯೋ ಆಗೆಲ್ಲ ಪುಟಿದೆದ್ದಿದೆ.


Click it and Unblock the Notifications