ಸ್ವಾತಂತ್ರ್ಯ ನಂತರ ಭಾರತದ ಪಾಲಿಗೆ ಭೀಕರ ಆರ್ಥಿಕ ಕುಸಿತ: ಕ್ರಿಸಿಲ್
ಭಾರತ ಸ್ವಾತಂತ್ರ್ಯ ಪಡೆದ ನಂತರದ ನಾಲ್ಕನೇ ಆರ್ಥಿಕ ಕುಸಿತ, ಉದಾರೀಕರಣದ ನಂತರ ಮೊದಲನೆಯದು ಮತ್ತು ಈ ವರೆಗಿನ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿ ಇದು ಎಂದು ಕ್ರಿಸಿಲ್ ವರದಿ ನೀಡಿದೆ. 2021ರ ಆರ್ಥಿಕ ವರ್ಷಕ್ಕೆ ಭಾರತದ ಆರ್ಥಿಕತೆ 5 ಪರ್ಸೆಂಟ್ ಕುಸಿಯಲಿದೆ (ವರ್ಷದಿಂದ ವರ್ಷಕ್ಕೆ). ಇದು ಕೊರೊನಾದ ಪರಿಣಾಮ ಎಂದು ಹೇಳಿದೆ.
ಪ್ರಮುಖ ಏಜೆನ್ಸಿಯೊಂದು ನುಡಿದಿರುವ ಬಹಳ ಕೆಟ್ಟ ಸ್ಥಿತಿ ಬಗೆಗಿನ ಮೊದಲ ಅಂದಾಜು ಇದು. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಇಪ್ಪತ್ತೈದು ಪರ್ಸೆಂಟ್ ನಷ್ಟು ಶಾಶ್ವತವಾಗಿ ನಷ್ಟವಾಗುತ್ತದೆ. ಕೊರೊನಾಗೂ ಮುಂಚಿನ ಆರ್ಥಿಕ ಸ್ಥಿತಿ ತಲುಪುವುದು ಮುಂದಿನ ಮೂರು ಆರ್ಥಿಕ ವರ್ಷದಲ್ಲಿ ಕಷ್ಟವಿದೆ. ಕೊರೊನಾ ವಕ್ಕರಿಸಿರುವ ಕಾಲಘಟ್ಟದಲ್ಲಿ ಈ ವಿಶ್ವಕ್ಕೆ ಒಂದು ತಿಂಗಳು ಎಂಬುದು ದೀರ್ಘಾವಧಿ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದ ಕಾಲು ಭಾಗದಷ್ಟು ಉದ್ಯೋಗಿಗಳಿಗೆ ನಿರುದ್ಯೋಗ ಬಿಕ್ಕಟ್ಟು ಸೃಷ್ಟಿ
ಕೃಷಿಯೇತರ ಜಿಡಿಪಿ 6 ಪರ್ಸೆಂಟ್ ಕುಸಿಯಬಹುದು ಎಂಬ ಅಂದಾಜಿದ್ದರೆ, ಕೃಷಿ ವಲಯ 2.5 ಕುಸಿಯುವ ಲೆಕ್ಕಾಚಾರ ಇದೆ. ಭಾರತವು ಈ ಹಿಂದೆ 1958, 1966 ಹಾಗೂ 1980ರಲ್ಲಿ ಆರ್ಥಿಕ ಕುಸಿತ ಕಂಡಿದೆ. ಎಲ್ಲ ಸಲವೂ ಮುಂಗಾರು ಕೈಕೊಟ್ಟು, ಕೃಷಿ ವಲಯದ ಮೇಲೆ ಆಗಿರುವ ಪರಿಣಾಮದಿಂದ ಅನುಭವಿಸಿರುವುದು. ಅದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ.
ಆದರೆ, ಈ ಸಲ ಎದುರಿಸುತ್ತಿರುವ ಆರ್ಥಿಕ ಕುಸಿತ ಬೇರೆ. ಈ ಸಲ ಮಾಮೂಲಿನಂತೆ ಮುಂಗಾರು ಬರುವ ಅಂದಾಜಿದೆ. ಆದ್ದರಿಂದ ಕೃಷಿಗೆ ಹೊಡೆತ ಬೀಳಲಿಕ್ಕಿಲ್ಲ. ಆದರೆ ಲಾಕ್ ಡೌನ್ ನಿಂದಾಗಿ ಕೃಷಿಯೇತರ ವಲಯಗಳಿಗೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಇನ್ನು ಭಾರತಕ್ಕೆ ರಫ್ತು ವಲಯದಲ್ಲೂ ಅವಕಾಶ ಇಲ್ಲದಂತಾಗಿದೆ ಎಂದು ಕ್ರಿಸಿಲ್ ಹೇಳಿದೆ.