ಉದ್ಯಮಿ ಆನಂದ್ ಮಹೀಂದ್ರಾ, ವೇಣು ಶ್ರೀನಿವಾಸನ್ ಗೆ ಪದ್ಮಭೂಷಣ
71ನೇ ಗಣರಾಜ್ಯೋತ್ಸವದ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರವು ಉದ್ಯಮಿಗಳಾದ ಆನಂದ್ ಮಹೀಂದ್ರಾ ಮತ್ತು ವೇಣು ಶ್ರೀನಿವಾಸನ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಘೋಷಣೆ ಮಾಡಿದೆ. ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ, ಈ ಗೌರವ ನೀಡಲಾಗಿದೆ.
ಮಹೀಂದ್ರಾ ಗ್ರೂಪ್ ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರಿಗೆ ಟ್ವಿಟ್ಟರ್ ನಲ್ಲಿ ಎಪ್ಪತ್ನಾಲ್ಕು ಲಕ್ಷ ಫಾಲೋವರ್ಸ್ ಗಳಿದ್ದಾರೆ. ಅವರ ದಾನ ಕಾರ್ಯಗಳಿಂದಲೂ ಹೆಸರು ಪಡೆದಿದ್ದಾರೆ. ಅರವತ್ನಾಲ್ಕು ವರ್ಷದ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲಿದ್ದಾರೆ ಆನಂದ್ ಮಹೀಂದ್ರಾ
ಟಿವಿಎಸ್ ಮೋಟಾರ್ ಕಂಪೆನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರು ಐಐಟಿ ಮದ್ರಾಸ್ ನಲ್ಲಿ ಗೌರವ ಪ್ರೊಫೆಸರ್ ಆಗಿದ್ದಾರೆ. ಅವರಿಗೂ ಪದ್ಮಭೂಷಣ ಗೌರವ ಸಿಕ್ಕಿದೆ. ಐಐಟಿ ಮದ್ರಾಸ್ ನಿಂದ ಅವರನ್ನು ಅಭಿನಂದಿಸಲಾಗಿದೆ.
ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿನ ಸಾಧನೆಗಾಗಿಯೇ ನೌಕರಿ.ಕಾಮ್ ನ ಸಂಸ್ಥಾಪಕ ಮತ್ತು ಉಪಾಧ್ಯಕ್ಷ ಸಂಜೀವ್ ಬಿಕ್ ಚಂದಾನಿ ಅವರಿಗೆ ಪದ್ಮಶ್ರೀ ಗೌರವ ದೊರೆತಿದೆ. ಅವರ ಕಂಪೆನಿಯಿಂದ ಜೀವನ್ ಸಾಥಿ.ಕಾಮ್, ಶಿಕ್ಷಾ.ಕಾಮ್ ಮತ್ತಿತರ ಕಂಪೆನಿಗಳನ್ನು ನಡೆಸುತ್ತಿದೆ. ಸಂಜೀವ್ ಅವರು ಐಐಎಂ ಅಹ್ಮದಾಬಾದ್ ನಿಂದ ಪದವಿ ಪಡೆದಿದ್ದಾರೆ.
ಭರತ್ ಗೋಯೆಂಕಾ, ನೇಮ್ ನಾಥ್ ಜೈನ್, ಪ್ರೇಮ್ ವತ್ಸಾ ಮತ್ತು ವಿಜಯ ಸಂಕೇಶ್ವರ ಅವರಿಗೆ ಕೂಡ ಪದ್ಮಶ್ರೀ ಗೌರವ ಲಭಿಸಿದೆ.