ಭಾರತದ ನಿಯತಕಾಲಿಕೆಗಳ ಪಾಲಿಗೆ ಕೊರೊನಾ ಮರಣ ಮೃದಂಗವಾಗಿದೆ. ಈಗಾಗಲೇ 4 ಸಾವಿರ ಕೋಟಿ ರುಪಾಯಿ ನಷ್ಟವನ್ನು ಈ ವಲಯ ಅನುಭವಿಸಿದೆಯಂತೆ. ಸರ್ಕಾರದಿಂದ ಆರ್ಥಿಕ ಉತ್ತೇಜನದ ಪ್ಯಾಕೇಜ್ ದೊರೆಯದಿದ್ದಲ್ಲಿ ಮುಂದಿನ ಆರೇಳು ತಿಂಗಳಲ್ಲಿ 15 ಸಾವಿರ ಕೋಟಿ ರುಪಾಯಿ ತನಕ ನಷ್ಟವಾಗಬಹುದು ಎಂದು ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್ ಎಸ್) ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ.
ಮಾಹಿತಿ ಹಾಗೂ ಪ್ರಸಾರ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಐಎನ್ ಎಸ್ ಹೇಳಿರುವ ಪ್ರಕಾರ, ಕೊರೊನಾದಿಂದ ಭಾರತದಲ್ಲಿ ಭಾರೀ ಪೆಟ್ಟು ಬಿದ್ದಿರುವುದರಲ್ಲಿ ನಿಯತಕಾಲಿಕೆಗಳ ಕ್ಷೇತ್ರ ಕೂಡ ಒಂದು. ದೇಶದಾದ್ಯಂತ ಲಾಕ್ ಡೌನ್ ಇರುವ ಕಾರಣಕ್ಕೆ ಜಾಹೀರಾತಿನಿಂದಲೂ ಆದಾಯ ಬರ್ತಿಲ್ಲ, ಪ್ರಸಾರದಿಂದಲೂ ಹಣ ಬರ್ತಿಲ್ಲ.
ಎರಡು ತಿಂಗಳಲ್ಲಿ 4000- 4500 ಕೋಟಿ ರುಪಾಯಿ ನಷ್ಟ
ನಿಯತಕಾಲಿಕೆಗಳ ವಲಯಕ್ಕೆ ಈಗಾಗಲೇ ಎರಡು ತಿಂಗಳಲ್ಲಿ 4000- 4500 ಕೋಟಿ ರುಪಾಯಿ ನಷ್ಟವಾಗಿದೆ. ಆರ್ಥಿಕ ಚಟುವಟಿಕೆಗಳು ನಿಂತುಹೋಗಿದ್ದು, ಖಾಸಗಿ ವಲಯಗಳಿಂದ ಜಾಹೀರಾತು ಬರುತ್ತಿಲ್ಲ. ಮುಂದಿನ 6- 7 ತಿಂಗಳು ಇದೇ ಪ್ರಮಾಣದಲ್ಲಿ ನಷ್ಟ ಮುಂದುವರಿದರೆ 12ರಿಂದ 15 ಸಾವಿರ ಕೊಟಿ ನಷ್ಟವಾಗಬಹುದು. ಆದ್ದರಿಂದ ಸರ್ಕಾರವು ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡಬೇಕು ಎನ್ನಲಾಗಿದೆ. ಇದೇ ವೇಳೆ, ನ್ಯೂಸ್ ಪ್ರಿಂಟ್ ಮೇಲೆ ಹಾಕುತ್ತಿರುವ 5 ಪರ್ಸೆಂಟ್ ಕಸ್ಟಮ್ಸ್ ಸುಂಕವನ್ನು ತೆಗೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಈಗಾಗಲೇ ಅನುಭವಿಸಿರುವ ನಷ್ಟವು ಈ ವಲಯದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು, ಮುದ್ರಕರು, ವಿತರಕರು ಮತ್ತಿತರ ನೇರ ಹಾಗೂ ಪರೋಕ್ಷವಾಗಿ ಇದರ ಮೇಲೆ ಅವಲಂಬಿಸಿರುವ 30 ಲಕ್ಷ ಸಿಬ್ಬಂದಿ, ಕಾರ್ಮಿಕರ ಮೇಲೆ ಆಗಿದೆ ಎಂದು ಐಎನ್ ಎಸ್ ತಿಳಿಸಿದೆ.
ನ್ಯೂಸ್ ಪ್ರಿಂಟ್ ಮೇಲಿನ ಕಸ್ಟಮ್ಸ್ ಡ್ಯೂಟಿ ತೆಗೆಯಿರಿ
ಅಂದ ಹಾಗೆ ಈ ಐಎನ್ ಎಸ್ 800ಕ್ಕೂ ಹೆಚ್ಚು ಪತ್ರಿಕೆಗಳನ್ನು ಪ್ರತಿನಿಧಿಸುತ್ತದೆ. ಐಎನ್ ಎಸ್ ಅಂದಾಜಿಸಿರುವಂತೆ, ಪತ್ರಿಕೆಗಳು ಪ್ರತ್ಯಕ್ಷವಾಗಿ 9ರಿಂದ 10 ಲಕ್ಷ ಮಂದಿಗೆ ಹಾಗೂ ಪರೋಕ್ಷವಾಗಿ 18ರಿಂದ 20 ಲಕ್ಷ ಮಂದಿಗೆ ಉದ್ಯೋಗವನ್ನು ನೀಡುತ್ತಿದೆ. ಇದೀಗ ಅವರ ಸ್ಥಿತಿ ಕಷ್ಟವಾಗಿದೆ. ಕಳೆದ ಕೆಲವು ವಾರದಿಂದ ಗಂಭೀರ ಪ್ರಮಾಣದ ನಷ್ಟವಾಗುತ್ತಿದ್ದು, ನಗದು ಹರಿವಿಗೆ ತಡೆಯಾಗಿದೆ. ಪತ್ರಿಕೆಗಳು ಸಿಬ್ಬಂದಿಗೆ ವೇತನ ನೀಡಲು, ಅಗತ್ಯ ವಸ್ತುಗಳ ಸರಬರಾಜುದಾರರಿಗೆ ಬಾಕಿ ಪಾವತಿಸಲು ಕಷ್ಟಪಡುತ್ತಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನ್ಯೂಸ್ ಪ್ರಿಂಟ್ ಮೇಲೆ ಹಾಕುವ ಕಸ್ಟಮ್ಸ್ ಸುಂಕವನ್ನು ತೆಗೆಯುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಈ ನ್ಯೂಸ್ ಪ್ರಿಂಟ್ ವೆಚ್ಚವೇ ಮುದ್ರಕರ ಖರ್ಚಿನ 40 ರಿಂದ 60 ಪರ್ಸೆಂಟ್ ಆಗುತ್ತದೆ. ಇನ್ನು ಈ ಕಸ್ಟಮ್ಸ್ ಸುಂಕ ತೆಗೆಯುವುದರಿಂದ ಸ್ಥಳೀಯ ಉತ್ಪಾದಕರ ಮೇಲಾಗಲೀ ಅಥವಾ ಮೇಕ್ ಇನ್ ಇಂಡಿಯಾ ಪ್ರಯತ್ನಕ್ಕಾಗಲೀ ಯಾವ ಧಕ್ಕೆಯನ್ನೂ ಮಾಡಲ್ಲ ಎಂದು ಹೇಳಲಾಗಿದೆ.
ಟ್ಯಾಕ್ಸ್ ಹಾಲಿಡೇ ನೀಡಬೇಕು
ಪತ್ರಿಕಾ ಸಂಸ್ಥೆಗಳಿಗೆ ಎರಡು ವರ್ಷಗಳ ಟ್ಯಾಕ್ಸ್ ಹಾಲಿಡೇ ನೀಡಬೇಕು ಎಂದು ಸರ್ಕಾರವನ್ನು ಐಎನ್ ಎಸ್ ಕೇಳಿಕೊಂಡಿದೆ. ಇದರ ಜತೆಗೆ ಬ್ಯೂರೋ ಆಫ್ ಔಟ್ ರೀಚ್ ಅಂಡ್ ಕಮ್ಯೂನಿಕೇಷನ್ ನ ಜಾಹೀರಾತು ದರದಲ್ಲಿ 50 ಪರ್ಸೆಂಟ್ ಏರಿಕೆ, ಮುದ್ರಣ ಮಾಧ್ಯಮಕ್ಕೆ ಬಜೆಟ್ ವೆಚ್ಚದಲ್ಲಿ 100 ಪರ್ಸೆಂಟ್ ಏರಿಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಡೈರೆಕ್ಟೊರೇಟ್ ಆಫ್ ಅಡ್ವರ್ಟೈಸಿಂಗ್ ಅಂಡ್ ವಿಶುಯಲ್ ಪಬ್ಲಿಸಿಟಿ (ಬಿಒಸಿ) ಕಡೆಯಿಂದ ಬಾಕಿಯಿರುವ ಜಾಹೀರಾತು ಹಣ ಮತ್ತು ರಾಜ್ಯ ಸರ್ಕಾರದಿಂದ ಬಾಕಿ ಇರಿಸಿಕೊಂಡಿರುವುದನ್ನು ತಕ್ಷಣವೇ ಪಾವತಿಸುವಂತೆ ಕೂಡ ಕೇಳಿಕೊಳ್ಳಲಾಗಿದೆ.


Click it and Unblock the Notifications