ಚೆನ್ನೈ, ಮಾರ್ಚ್ 7: ಚುನಾವಣೆ ಎದುರಿಸಲು ಸಜ್ಜಾಗಿರುವ ತಮಿಳುನಾಡಿನಲ್ಲಿ ಅತಿ ದೊಡ್ಡ ಆದಾಯ ತೆರಿಗೆ ದಾಳಿ ನಡೆದಿದೆ. ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮಳಿಗೆ ಮೇಲೆ ಭಾನುವಾರ ಐಟಿ ದಾಳಿ ನಡೆಸಲಾಗಿದೆ.
ಅತಿದೊಡ್ಡ ಚಿನ್ನದ ಮಳಿಗೆ ಜಾಲ ಹೊಂದಿರುವ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 1,000 ಕೋಟಿ ರು ಮೌಲ್ಯದ ಅಕ್ರಮ ಆದಾಯ ಗಳಿಕೆ ಪತ್ತೆಯಾಗಿದೆ, 1.2 ಕೋಟಿ ರು ವಶ ಪಡಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಆದರೆ, ದಾಳಿಗೊಳಗಾದ ವ್ಯಕ್ತಿಗಳ ಬಗ್ಗೆ ಇನ್ನೂ ವಿವರ ಬಹಿರಂಗಪಡಿಸಿಲ್ಲ.
ಚೆನ್ನೈ ಅಲ್ಲದೆ, ಕೊಯಮತ್ತೂರು, ಮದುರೈ, ತಿರುಚನಾಪಲ್ಲಿ, ತ್ರಿಶ್ಶೂರ್, ನೆಲ್ಲೂರ್, ಜೈಪುರ, ಮುಂಬೈ, ಇಂದೋರ್ ನಲ್ಲೂ ಕಳೆದ ಕೆಲ ದಿನಗಳಿಂದ ಐಟಿ ದಾಳಿ ನಡೆದಿದೆ.

ಆಭರಣ ಮಳಿಗೆಗಳಲ್ಲಿ ನಗದು ವಹಿವಾಟು, ಬೋಗಸ್ ನಗದು ಕ್ರೆಡಿಟ್, ಬೋಗಸ್ ಖಾತೆಗಳಿಂದ ಕ್ರೆಡಿಟ್ ಬಳಕೆ ಹೀಗೆ ನಾನಾ ರೀತಿಯಲ್ಲಿ ಅಕ್ರಮವಾಗಿ ಕಲೆ ಹಾಕಿದ ಮೊತ್ತ ಸಾವಿರಾರು ಕೋಟಿ ರು ದಾಟುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರಿಯ ನೇರ ತೆರಿಗೆ ಬೋರ್ಡ್ (ಸಿಬಿಡಿಟಿ) ಪ್ರಕಾರ, ಸ್ಥಳೀಯ ಸಣ್ಣ ಪುಟ್ಟ ಹಣಕಾಸು ಸಂಸ್ಥೆಗಳನ್ನು ಬಳಸಿಕೊಂಡು, ರಿಯಲ್ ಎಸ್ಟೇಟ್ ಬಿಲ್ಡರ್ಸ್ ಗಳಿಗೆ ಈ ಮೊತ್ತ ತಲುಪುತ್ತಿದ್ದು, ಭೂಮಿ ಮೇಲೆ ಹೂಡಿಕೆಯಾಗುತ್ತಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.


Click it and Unblock the Notifications