ಮಿಡತೆಗಳ ರಕ್ಕಸ ದಾಳಿಗೆ ಭಾರತ ಕೃಷಿ ವಲಯ ತಲ್ಲಣ; ಕೊರೊನಾ ಜತೆ ಇದೇನು?
ಕೊರೊನಾ ಸಂಕಷ್ಟದ ಕಾಲದಲ್ಲೂ ಬೆಳ್ಳಿ ಗೆರೆಯಂತೆ ಇದ್ದ ಕೃಷಿ ವಲಯಕ್ಕೆ ಈಗ ರಕ್ಕಸ ಮಿಡತೆಗಳು ಅಟಕಾಯಿಸಿಕೊಂಡಿವೆ. ಇನ್ನೇನು ಖಾರಿಫ್ ಮುಂಚಿನ ಬೆಳೆ ಆಗಬೇಕು, ರಾಬಿ ಗೋಧಿ ಕೈ ಸೇರಬೇಕು ಅನ್ನೋ ಅಷ್ಟರಲ್ಲಿ ದಶಕದಲ್ಲೇ ಕಂಡರಿಯದ ಮಿಡತೆಗಳ ದಾಳಿ ಆಗಿದೆ. ರಾಜಸ್ಥಾನ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಈಗ "ವಲಸಿಗ ಸಮಸ್ಯೆ"ಗಳ ಆರ್ಭಟ.
ಏಕೆಂದರೆ, ಈ ಮಿಡತೆಗಳು ಸಹ ಕೊರೊನಾ ಥರ ಹೊರಗಿನಿಂದ ಬಂದಿವೆ. ಬುಧವಾರದ ದಿನ ಈ ಮಿಡತೆಗಳು ಉತ್ತರಪ್ರದೇಶದ ಪೂರ್ವ ಭಾಗವನ್ನು ಪ್ರವೇಶಿಸಿವೆ. ತೆಲಂಗಾಣ, ಪೂರ್ವ ಭಾರತದ ರಾಜ್ಯಗಳು ಹಾಗೂ ದೆಹಲಿಯಲ್ಲಿ ಹೈ ಅಲರ್ಟ್ ನಲ್ಲಿ ಇದ್ದು, ವೇಗವಾಗಿ ಚಲಿಸುತ್ತಿರುವ ಈ ಕೀಟ ಯಾವುದೇ ಸಮಯಕ್ಕೆ ಈ ಸ್ಥಳಗಳನ್ನು ತಲುಪಬಹುದು.
ಹಣ್ಣು, ತರಕಾರಿಗಳ ಮೇಲೆ ದಾಳಿ ಆಗಿದೆ
ದೇಶದ ಹಲವು ಭಾಗದಲ್ಲಿ ಅಧಿಕಾರಿಗಳು ಈ ಅನಿರೀಕ್ಷಿತ ಆಘಾತಕ್ಕೆ ಸಿದ್ಧರಿರಲಿಲ್ಲ. ಮುಂಗಾರಿಗೂ ಮುನ್ನ ಇವುಗಳನ್ನು ನಿಯಂತ್ರಿಸದಿದ್ದಲ್ಲಿ (ಇವುಗಳ ಸಂತಾನೋತ್ಪತ್ತಿ ಆಗುವುದು ತೇವಾಂಶದ ಸನ್ನಿವೇಶದಲ್ಲಿ) ಖಾರಿಫ್ ಬಿತ್ತನೆ ಭಾರತದ ಉತ್ತರ, ಪಶ್ಚಿಮ ಹಾಗೂ ಕೇಂದ್ರ ಭಾಗದಲ್ಲಿ ಪ್ರತಿಕೂಲ ಪರಿಣಾಮ ಬೀರಲಿದೆ. ಒಟ್ಟಾರೆ ಆಹಾರ ಉತ್ಪಾದನೆಯೇ ಕಡಿಮೆ ಆಗಲಿದೆ. ಅದರಲ್ಲೂ ಆಹಾರ ಧಾನ್ಯ, ಎಣ್ಣೆ ಕಾಳುಗಳು, ಹತ್ತಿ ಉತ್ಪಾದನೆ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಮಿಡತೆಗಳ ದಾಳಿಯಿಂದ ಹಣ್ಣು, ತರಕಾರಿಗಳ ಬೆಳೆಗಳು ದೇಶದ ಹಲವು ಭಾಗಗಳಲ್ಲಿ ನಾಶವಾಗಿವೆ. ದೇಶದ ಗಡಿ ಜಿಲ್ಲೆಗಳಲ್ಲಿ ಹತ್ತು ಕಚೇರಿಗಳನ್ನು ಹೊಂದಿರುವ ಕೇಂದ್ರ ಸರ್ಕಾರ ಸಂಸ್ಥೆಯೊಂದು ಇದೆ. ಅದು ಹೇಳುವ ಪ್ರಕಾರ, ಪಾಕಿಸ್ತಾನದ ಕಡೆಯಿಂದ ಹೊಸದಾಗಿ ಮಿಡತೆಗಳು ದೇಶದ ಗಡಿಯೊಳಗೆ ಪ್ರವೇಶ ಮಾಡದಿದ್ದಲ್ಲಿ ಇನ್ನೊಂದು ವಾರದಲ್ಲಿ ಇದನ್ನು ನಿಯಂತ್ರಿಸಬಹುದು.
ಪಾಕಿಸ್ತಾನದಿಂದ ಮತ್ತೊಂದು ಸುತ್ತು ಬರುವ ಸಾಧ್ಯತೆ
ಆದರೆ, ಜೂನ್ ತಿಂಗಳ ಎರಡನೇ ವಾರದಲ್ಲಿ ಪಾಕಿಸ್ತಾನದಿಂದ ಹೊಸದಾಗಿ ಮಿಡತೆಗಳು ಬರುವ ಎಲ್ಲ ಸಾಧ್ಯತೆಗಳು ಇವೆ. 1993ರಲ್ಲಿ ಮಿಡತೆಗಳಿಂದ ಭಾರತ ದೊಡ್ಡ ಮಟ್ಟದ ಸಂಕಷ್ಟ ಎದುರಿಸಿತ್ತು. ಈ ಸಲ ಅದಕ್ಕಿಂತಲೂ ಬೃಹತ್ ಸಮಸ್ಯೆ ಆಗಬಹುದು ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಏಳು ನೂರು ಟ್ರ್ಯಾಕ್ಟರ್ ಗಳು, ಎಪ್ಪತ್ತೈದು ಅಗ್ನಿಶಾಮಕ ದಳ ವಾಹನ, ಐವತ್ತು ಇತರ ವಾಹನಗಳು ಕೀಟನಾಶಕ ಸಿಂಪಡಣೆಯಲ್ಲಿ ತೊಡಗಿವೆ. ಇದೇ ವೇಳೆ ಡ್ರೋಣ್ ಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ.ಸರಿಯಾದ ಸಮಯಕ್ಕೆ ಅಗತ್ಯ ವಸ್ತುಗಳು ಹಾಗೂ ಮೂಲಸೌಕರ್ಯ ದೊರೆಯದಿದ್ದರೂ ಏಪ್ರಿಲ್ ಮಧ್ಯ ಭಾಗದಿಂದಲೇ ಜಿಲ್ಲಾ ಮಟ್ಟದ ಫೀಲ್ಡ್ ಸಿಬ್ಬಂದಿ ಭಾರತ- ಪಾಕ್ ಗಡಿಯಲ್ಲಿ ಮಿಡತೆಗಳ ನಿಯಂತ್ರಣಕ್ಕಾಗಿ ಶ್ರಮಿಸುತ್ತಲ್ಕೇ ಇದ್ದಾರೆ. ಬುಧವಾರದಂದು ರಾಜಸ್ಥಾನದಲ್ಲಿ ಮೊದಲ ಬಾರಿಗೆ ಒಂದು ಡ್ರೋಣ್ ಕಾರ್ಯನಿರತವಾಗಿತ್ತು. ಗುರುವಾರದಂದು ಇನ್ನೆರಡು ಡ್ರೋಣ್ ಗಳನ್ನು ಮಧ್ಯಪ್ರದೇಶದಲ್ಲಿ ಬಳಸುವುದಾಗಿ ಮೂಲಗಳು ತಿಳಿಸಿವೆ.
ಕೊರೊನಾ ಸಂದರ್ಭದಲ್ಲಿ ಗಾಯದ ಮೇಲೆ ಬರೆ
ಆಯಾ ರಾಜ್ಯ ಸರ್ಕಾರಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ರಕ್ಕಸ ಮಿಡತೆ ದಾಳಿಗೆ ಸಿದ್ಧತೆ ನಡೆಸುವಂತೆ ತಿಳಿಸಿವೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗವು ಮಿಡತೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆಯೇ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ. ಮತ್ತೊಂದು ಎಚ್ಚರಿಕೆಯನ್ನು ಉದಾಹರಿಸಿ ಹೇಳಬೇಕು ಅಂದರೆ, ಈ ಮಿಡತೆಗಳು ಪೂರ್ವ ಆಫ್ರಿಕಾದಿಂದ ಭಾರತ- ಪಾಕಿಸ್ತಾನ ಗಡಿಗೆ ಬಂದಿವೆ. ಇವುಗಳಿಗೆ ಬೇಸಿಗೆಯ ಸಂತಾನೋತ್ಪತ್ತಿ ಸಮಯ ಇದು. ದೊಡ್ಡ ಗುಂಪುಗಳಾಗಿ ಇವು ಬೇಸಿಗೆಯ ಸಂತಾನೋತ್ಪತ್ತಿ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ಕೊರೊನಾದಿಂದ ಹಲವು ವಲಯಗಳ ಆರ್ಥಿಕತೆಗೆ ಪೆಟ್ಟು ಬಿದ್ದಿತ್ತು. ಭರವಸೆ ಇದ್ದಿದ್ದು ಕೃಷಿ ವಲಯದ ಮೇಲೆ. ಆದರೆ ಈಗ ಈ ಮಿಡತೆಗಳ ದಾಳಿಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯದ ಸ್ಥಿತಿಯಲ್ಲೇನೋ ಈ ಮಿಡತೆಗಳನ್ನು ನಿಯಂತ್ರಿಸಬಹುದು. ಆದರೆ ಇನ್ನೂ ಮುಂದುವರಿದರೆ ಖಾರಿಫ್ ಬೆಳೆಗೆ ಕಷ್ಟ ಎನ್ನಲಾಗುತ್ತಿದೆ.
ಹತ್ತು ಲಕ್ಷ ಎಕರೆ ಪ್ರದೇಶದಲ್ಲಿ ಕೀಟನಾಶಕ
ಸಾಮಾನ್ಯವಾಗಿ ಮುಂಗಾರು ಪ್ರವೇಶದ ನಂತರ ಮಿಡತೆಗಳು ಪಾಕಿಸ್ತಾನದ ಮೂಲಕ ಭಾರತದ ಮರುಭೂಮಿಯನ್ನು ಪ್ರವೇಶಿಸಿ, ಜೂನ್ - ಜುಲೈನಲ್ಲಿ ಸಂತಾನೋತ್ಪತ್ತಿ ಆರಂಭಿಸುತ್ತವೆ. ಆದರೆ ಈ ವರ್ಷ ಏಪ್ರಿಲ್ 11ನೇ ತಾರೀಕಿನಂದೇ ಕಾಣಿಸಿಕೊಂಡಿವೆ. ಏಕೆಂದರೆ, ಕಳೆದ ಋತುವಿನಲ್ಲಿ ಪಾಕಿಸ್ತಾನದಲ್ಲಿ ಯಾವ ನಿಯಂತ್ರಣವೂ ಇಲ್ಲದೆ ಈ ಮಿಡತೆಗಳ ಸಂತಾನೋತ್ಪತ್ತಿ ಆಗಿದೆ. 2019-20ರಲ್ಲೂ ಭಾರತದಲ್ಲೂ ಭಾರೀ ಪ್ರಮಾಣದಲ್ಲಿ ಮಿಡತೆಗಳ ದಾಳಿಯಾಗಿತ್ತು. ಮೇ 2019ರಿಂದ ಫೆಬ್ರವರಿ 2020ರ ತನಕ ನಿರಂತರವಾಗಿ ಕಾರ್ಯಾಚರಣೆ ನಡೆಸಿ, ಮಿಡತೆಗಳನ್ನು ನಿಯಂತ್ರಣಕ್ಕೆ ತರಲಾಗಿತ್ತು. ಈ ಅವಧಿಯಲ್ಲಿ 4.03 ಲಕ್ಷ ಹೆಕ್ಟೇರ್ ಅಥವಾ ಹತ್ತು ಲಕ್ಷ ಎಕರೆಯಷ್ಟು ಪ್ರದೇಶದಲ್ಲಿ ಕೀಟನಾಶಕ ಹಾಗೂ ರಾಸಾಯನಿಕಗಳನ್ನು ಬಳಸಿ, ಸತತ ಪರಿಶ್ರಮದಿಂದ ಮಿಡತೆಗಳ ದಾಳಿಯಿಂದ ತಪ್ಪಿಸಿಕೊಳ್ಳಲಾಗಿತ್ತು. ಆದರೆ ಈ ಬಾರಿ ಬಹಳ ಕಷ್ಟ ಇದೆ ಎನ್ನುತ್ತಾರೆ ತಜ್ಞರು.