ಸಾಲ ಹಿಂತಿರುಗಿಸದ ಮಂತ್ರಿ ಡೆವಲಪರ್ಸ್ ಕಾರ್ಪೊರೇಟ್ ಕಚೇರಿ ಐಸಿಐಸಿಐ ಬ್ಯಾಂಕ್ ಸ್ವಾಧೀನಕ್ಕೆ
ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿ ಇರುವ ಮಂತ್ರಿ ಡೆವಲಪರ್ಸ್ ಕಾರ್ಪೊರೇಟ್ ಕಚೇರಿಯನ್ನು ಐಸಿಐಸಿಐ ಬ್ಯಾಂಕ್ ಸ್ವಾಧೀನಕ್ಕೆ ಪಡೆದಿದೆ. ಬ್ಯಾಂಕ್ ಗೆ ಬಾಕಿ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಜಾಹೀರಾತು ನೀಡಿದ್ದು, 30,268 ಚದರಡಿ ವ್ಯಾಪ್ತಿಯಲ್ಲಿ ಇರುವ ಮಂತ್ರಿ ಹೌಸ್ ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ನೋಟಿಸ್ ನಲ್ಲಿ ಇರುವ ಮಾಹಿತಿಯಂತೆ, ಕಳೆದ ನವೆಂಬರ್ ನಲ್ಲೇ ಸಾಲಗಾರ ಸಂಸ್ಥೆ ಶೋರ್ ಡ್ವೆಲಿಂಗ್ಸ್ ಪ್ರೈ ಲಿ.ಗೆ (ಈ ಹಿಂದೆ ಮಂತ್ರಿ ಡ್ವೆಲಿಂಗ್ಸ್ ಪ್ರೈ ಲಿ.) ಅರವತ್ತು ದಿನದೊಳಗೆ 53.62 ಕೋಟಿ ರುಪಾಯಿ ಬಾಕಿ ಮರುಪಾವತಿಸುವಂತೆ ತಿಳಿಸಲಾಗಿತ್ತು. ಆ ಮೊತ್ತವನ್ನು ಹಿಂತಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್ ನಿಂದ ಆಸ್ತಿಯನ್ನು ಆಗಸ್ಟ್ 4ರಂದು ಸ್ವಾಧೀನಕ್ಕೆ ಪಡೆಯಲಾಗಿದೆ.
ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಕಚೇರಿ ಯೆಸ್ ಬ್ಯಾಂಕ್ ಸುಪರ್ದಿಗೆ
ಮಂತ್ರಿ ವಕ್ತಾರ ಮಾತನಾಡಿ, ಐಸಿಐಸಿಐ ಬ್ಯಾಂಕ್ ನಿಂದ ಸಾಲ ಒದಗಿಸಿದ್ದ ಪ್ರಾಜೆಕ್ಟ್ ಗೆ ಸಾಲ ಹಿಂತಿರುಗಿಸುವಷ್ಟು ನಗದು ಹರಿವು ಇತ್ತು. ಆದರೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಈಗ ಆರ್ಥಿಕ ಹಿಂಜರಿತವಾಗಿದೆ. ಸಾಲ ಮಂಜೂರಾದ ಅವಧಿಯಲ್ಲಿ ನಿರೀಕ್ಷೆ ಮಾಡಿದಂತೆ ಮಾರಾಟ ಆಗಲಿಲ್ಲ. ಆದ್ದರಿಂದ ಇನ್ನೂ ಡ್ರಾ ಮಾಡದೇ ಉಳಿದಿದ್ದ ಎಪ್ಪತ್ತು ಕೋಟಿ ಪಾವತಿಸಿಲ್ಲ ಸಾಧ್ಯವಿಲ್ಲ ಎಂದು ಬ್ಯಾಂಕ್ ಹೇಳಿದ್ದು, ಎನ್ ಪಿಎ ಎಂದು ಪರಿಗಣಿಸಿದೆ. ಸ್ವಾಧೀನದ ನೋಟಿಸ್ ಕಳಿಸಿದೆ ಎಂದಿದ್ದಾರೆ.
ಈ ಕಾರಣಕ್ಕೆ ಸಾಲ ಪಾವತಿಗೆ ಮತ್ತೆ ಅವಕಾಶ ನೀಡಲು ಐಸಿಐಸಿಐ ಬ್ಯಾಂಕ್ ಜತೆಗೆ ಕಂಪೆನಿಯಿಂದ ಮಾತುಕತೆ ನಡೆಯುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದೇ ರೀತಿಯ ನಡೆಯಲ್ಲಿ ಯೆಸ್ ಬ್ಯಾಂಕ್ ನಿಂದ ಮುಂಬೈನಲ್ಲಿ ಇರುವ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಕೇಂದ್ರ ಕಚೇರಿಯ ಸ್ವಾಧೀನಕ್ಕೆ ಪಡೆಯುವ ನೋಟಿಸ್ ನೀಡಲಾಗಿತ್ತು. ಅನಿಲ್ ಅಂಬಾನಿ ಸಮೂಹವು ಯೆಸ್ ಬ್ಯಾಂಕ್ ಗೆ ಪಾವತಿ ಮಾಡಬೇಕಿದ್ದ 2892 ಕೋಟಿ ರುಪಾಯಿ ಮೊತ್ತ ಹಿಂತಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿತ್ತು.
ಸುಶೀಲ್ ಮಂತ್ರಿ ನೇತೃತ್ವದ ಮಂತ್ರಿ ಡೆವಲಪರ್ಸ್ ಬೆಂಗಳೂರಿನಲ್ಲಿ ಹಲವು ಪ್ರಾಜೆಕ್ಟ್ ಹೊಂದಿದೆ. ನಿರ್ಮಾಣದಲ್ಲಿ ವಿಳಂಬ ಹಾಗೂ ಖರೀದಿದಾರರಿಗೆ ನೀಡುವುದರಲ್ಲಿ ತಡವಾಗುತ್ತಿರುವುದರಿಂದ ಕಳೆದ ಎರಡು ವರ್ಷಗಳಿಂದ ಅದರ ಕೆಲವು ಪ್ರಾಜೆಕ್ಟ್ ಗಳು ಸಮಸ್ಯೆಯಲ್ಲಿ ಸಿಲುಕಿದೆ. ಹಸಿರು ನ್ಯಾಯಾಧೀಕರಣದ (ಎನ್ ಜಿಟಿ) ಆದೇಶ ಸೇರಿದಂತೆ ಇತರ ಕಾರಣಗಳಿಗಾಗಿ ಹೀಗೆ ಪ್ರಾಜೆಕ್ಟ್ ತಡವಾಗುತ್ತಿದೆ.
ಇದಕ್ಕೂ ಮುನ್ನ ಪ್ರೆಸ್ಟೀಜ್ ಎಸ್ಟೇಟ್ಸ್ ಮತ್ತು ಆರ್ ಎಂಜೆಡ್ ಕಾರ್ಪೊರೇಷನ್ ಸೇರಿ ಬೆಂಗಳೂರಿನ ಮಂತ್ರಿ ಪ್ರಾಜೆಕ್ಟ್ ಗಳಲ್ಲಿ 1500 ಕೋಟಿ ರುಪಾಯಿ ಪಾವತಿಸಿ, ಖರೀದಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಕೆರೆ ಸಮೀಪದ ಜಾಗವನ್ನು ಒತ್ತುವರಿ ಮಾಡಿಕೊಂಡ ಆರೋಪದಲ್ಲಿ ಎನ್ ಜಿಟಿ 117 ಕೋಟಿ ರುಪಾಯಿ ದಂಡ ಪಾವತಿಸುವಂತೆ ಮಂತ್ರಿ ಡೆವಲಪರ್ಸ್ ಗೆ ಆದೇಶ ನೀಡಿದ್ದರಿಂದ ಪ್ರಾಜೆಕ್ಟ್ ಗಳು ನಿಂತುಹೋದವು.