PM CARES ಫಂಡ್ ಗೆ 10 ಕೋಟಿ ರುಪಾಯಿ ದೇಣಿಗೆ ನೀಡಿದ 'ಅಮ್ಮ'
ಕೊರೊನಾ ವೈರಾಣು ವಿರುದ್ಧ ಹೋರಾಟಕ್ಕಾಗಿ ಸ್ಥಾಪಿಸಿರುವ PM CARES ಫಂಡ್ ಗೆ ಮಾತಾ ಅಮೃತಾನಂದಮಯಿ ದೇವಿ ಅವರು 10 ಕೋಟಿ ರುಪಾಯಿ ದೇಣಿಗೆಯನ್ನು ಸೋಮವಾರ ಘೋಷಣೆ ಮಾಡಿದ್ದು, ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ಕೋಟಿ ದೇಣಿಗೆ ನೀಡಲಿದ್ದಾರೆ. ಭವಿಷ್ಯದಲ್ಲಿನ ಅನಾಹುತವನ್ನು ತಡೆಗಟ್ಟಬೇಕು ಅಂದರೆ ಮಾನವ ಸಂಕುಲ ಪರಸ್ಪರ ಸೌಹಾರ್ದಯುತವಾಗಿ ಬದುಕಬೇಕು ಎಂದು ಮಾತಾ ಅಮೃತಾನಂದಮಯಿ ಹೇಳಿದ್ದಾರೆ.
ಇನ್ನು ಕೊರೊನಾ ಕಾರಣಕ್ಕೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗಾಗಿ ಅಮೃತಾ ವಿ.ವಿ. ಮತ್ತು ಅಮೃತಾ ಆಸ್ಪತ್ರೆ ಸೇರಿ ಮಾನಸಿಕ ಆರೋಗ್ಯ ಹಾಟ್ ಲೈನ್ ಆರಂಭಿಸಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿ ಉಚಿತವಾಗಿ ಸಲಹೆಗಳನ್ನು ಪಡೆಯಬಹುದು. ಇನ್ನು ಅಮೃತ ವಿಶ್ವ ವಿದ್ಯಾಪೀಠಂನಿಂದ ತಜ್ಞರ ತಂಡವೊಂದು ಕಡಿಮೆ ವೆಚ್ಚದ ವೈದ್ಯಕೀಯ ಮಾಸ್ಕ್, ಗೌನ್ ಮತ್ತಿತರ ಅಗತ್ಯಗಳನ್ನು ಉತ್ಪಾದಿಸಲು ಪ್ರಯತ್ನಿಸಲಾಗುತ್ತಿದೆ.
PM- CARES ಫಂಡ್ ಗೆ 26 ಕೋಟಿ ರುಪಾಯಿ ದೇಣಿಗೆ ನೀಡಿದ NSE
2005ರಿಂದ ಈಚೆಗೆ ಮಾತಾ ಅಮೃತಾನಂದಮಯಿ ಮಠದಿಂದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗಳಿಗಾಗಿಯೇ 500 ಕೋಟಿ ರುಪಾಯಿಗೂ ಹೆಚ್ಚು ಮೊತ್ತ ನೀಡಲಾಗಿದೆ. ಇದರಲ್ಲಿ ಆರ್ಥಿಕ ನೆರವು, ಕುಟುಂಬಕ್ಕೆ ಅಗತ್ಯ ಇರುವ ವಸ್ತುಗಳು, ಉಚಿತ ಆರೋಗ್ಯ ತಪಾಸಣೆ, ಹೊಸ ಮನೆಗಳ ನಿರ್ಮಾಣ ಇನ್ನೂ ಅನೇಕ ಬಗೆಯ ನೆರವುಗಳು ಒಳಗೊಂಡಿವೆ.
ಮಾತಾ ಅಮೃತಾನಂದಮಯಿ ದೇವಿ ಅವರನ್ನು ಅಮ್ಮ ಅಂತಲೂ ಕರೆಯಲಾಗುತ್ತದೆ. ಅವರಿಂದ ಹಲವು ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಅದರ ಜತೆಗೆ ಶೈಕ್ಷಣಿಕ, ದಾನ- ದತ್ತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಈ ಹಿಂದಿನ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಅವರು ತಮ್ಮ ಮಠದ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.