5ನೇ ಕ್ಲಾಸ್ ಗೆ ಶಾಲೆ ಬಿಟ್ಟ ಹುಡುಗನ ಪದ್ಮಭೂಷಣ; MDH ಧರಂಪಾಲ್ ನಿಧನ
MDH ಎಂಬ ಮಸಾಲ- ಸಂಬಾರ ಪದಾರ್ಥಗಳ ಬ್ರ್ಯಾಂಡ್ ಬಹಳ ಜನಪ್ರಿಯ. ಅದರ ಜನಪ್ರಿಯ ಮುಖ "ಮಹಾಶಯ್" ಧರಂ ಪಾಲ್ ಗುಲಾಟಿ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಗುಲಾಟಿ ಅವರು ಕಳೆದ ಕೆಲವು ವಾರಗಳಿಂದ ದೆಹಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿರಂತರವಾಗಿ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿತ್ತು. "ಸಂಬಾರ ಪದಾರ್ಥಗಳ ಮಹಾರಾಜ" ಎನಿಸಿದ್ದ ಧರಂ ಪಾಲ್ ಕೊನೆ ಉಸಿರೆಳೆದಿದ್ದಾರೆ.
ಸಂಬಾರ ಪದಾರ್ಥಗಳ ಬ್ರ್ಯಾಂಡ್ MDH (Mashian Di Hatti) ಮಾಲೀಕರಾದ ಧರಂಪಾಲ್ ಅವರು ವಿವಿಧ ಟಿವಿ ಜಾಹೀರಾತುಗಳ ಮೂಲಕ ಪರಿಚಿತ ಮುಖವಾಗಿದ್ದರು. ಈಗಿನ ಪಾಕಿಸ್ತಾನದಲ್ಲಿನ ಸಿಯಾಲ್ ಕೋಟ್ ನಲ್ಲಿ 1923ರಲ್ಲಿ ಜನಿಸಿದ ಧರಂಪಾಲ್ ಗುಲಾಟಿ ಅದ್ಭುತವಾದ ಜೀವನ ನಡೆಸಿದವರು. ದೇಶ ವಿಭಜನೆ ದಿನಗಳಿಂದಲೂ ಯಶೋಗಾಥೆ ಕಾಣಸಿಗುತ್ತದೆ.
1947ರ ಸೆಪ್ಟೆಂಬರ್ ನಲ್ಲಿ ದೆಹಲಿಗೆ
ಐದನೇ ತರಗತಿ ಕೂಡ ಉತ್ತೀರ್ಣ ಆಗದೆ ಶಾಲೆ ಬಿಟ್ಟ ಗುಲಾಟಿ, Mashian Di Hatti ಹೆಸರಲ್ಲಿ ಬರುತ್ತಿದ್ದ ತಮ್ಮ ಕೌಟುಂಬಿಕ ವ್ಯಾಪಾರವನ್ನು ಸೇರುವ ಮುನ್ನ ಹಲವು ವ್ಯವಹಾರಗಳನ್ನು ಮಾಡಿದ್ದರು. ದೇಶ ವಿಭಜನೆಯ ವೇಳೆ 1947ರ ಸೆಪ್ಟೆಂಬರ್ ನಲ್ಲಿ ಧರಂಪಾಲ್ ಗುಲಾಟಿ ಮತ್ತು ಅವರ ಕುಟುಂಬ ದೆಹಲಿಯನ್ನು ತಲುಪಿದೆ. ಭಾರತದಲ್ಲಿ ಜೀವನ ಮುಂದುವರಿಸಲು ದೆಹಲಿಯಲ್ಲಿ "ಟಾಂಗಾ"ವನ್ನು 650 ರುಪಾಯಿಗೆ ಖರೀದಿಸಿ, ನವದೆಹಲಿ ರೈಲು ನಿಲ್ದಾಣ, ಕುತುಬ್ ರಸ್ತೆ, ಕರೋಲ್ ಬಾಗ್ ಮತ್ತು ಬಾರಾ ಹಿಂದೂ ರಾವ್ ರಸ್ತೆಯಲ್ಲಿ ಕೆಲ ಕಾಲ ಎರಡು ಆಣೆಗೆ ಸವಾರಿ ಹೊಡೆಯುತ್ತಿದ್ದರು.
ಮನಸ್ಸು ಮಾತ್ರ ಮಸಾಲೆ ಪದಾರ್ಥಗಳ ಕಡೆಗೆ
ಆದರೆ, ಮನಸ್ಸು ಮಾತ್ರ ಮಸಾಲೆ ಪದಾರ್ಥಗಳ ವ್ಯವಹಾರದ ಕಡೆಗೆ ಸೆಳೆಯುತ್ತಿತ್ತು. ದೆಹಲಿಯ ಆರಂಭದ ಕೆಲ ದಿನ ಕಳೆದ ಮೇಲೆ, ಕರೋಲ್ ಬಾಗ್ ನಲ್ಲಿ ಸಣ್ಣದೊಂದು ಮಳಿಗೆ ಖರೀದಿಸಿದರು. "ಮಾಶಿಯನ್ ಡಿ ಹಟ್ಟಿ" ಬ್ರ್ಯಾಂಡ್ ನಲ್ಲಿ ಕುಟುಂಬದ ವ್ಯವಹಾರವಾದ ಸಂಬಾರ ಪದಾರ್ಥಗಳನ್ನು ಮಾರಾಟ ಶುರು ಮಾಡಿದರು. ದೆಹಲಿಯ ಕೀರ್ತಿ ನಗರದಲ್ಲಿ 1959ರಲ್ಲಿ ಉತ್ಪಾದನಾ ಘಟಕ ಶುರು ಮಾಡಿದ ಧರಂಪಾಲ್ ಗುಲಾಟಿ, ಅಧಿಕೃತವಾಗಿ ಕಂಪೆನಿಯನ್ನು ಆರಂಭಿಸಿದರು. ಈಗ ಎಂಡಿಎಚ್ ಬ್ರ್ಯಾಂಡ್ 62 ಉತ್ಪನ್ನಗಳ ಮೂಲಕ ಜಾಗತಿಕವಾಗಿ ಪ್ರಖ್ಯಾತಿ ಗಳಿಸಿದೆ. 2017ನೇ ಇಸವಿಯಲ್ಲಿ ಎಫ್ ಎಂಸಿಜಿ ಸಂಸ್ಥೆಯೊಂದರಲ್ಲಿ ಅತಿ ಹೆಚ್ಚು ವೇತನ ಪಡೆಯುವ ಭಾರತದ ಸಿಇಒಗಳಲ್ಲಿ ಒಬ್ಬರಾಗಿದ್ದರು.
ದಾನ ಕಾರ್ಯಗಳಿಂದಲೂ ಹೆಸರು ಪಡೆದಿದ್ದರು
ಧರಂಪಾಲ್ ಗುಲಾಟಿ ಅವರು ಮಸಾಲ ಪದಾರ್ಥಗಳ ವ್ಯವಹಾರಕ್ಕೆ ಮಾತ್ರ ಅಲ್ಲದೆ ದಾನ ಕಾರ್ಯಗಳಿಂದಲೂ ಹೆಸರಾಗಿದ್ದರು. 1975ನೇ ಇಸವಿಯಲ್ಲಿ ದೆಹಲಿಯ ಸುಭಾಷ್ ನಗರದಲ್ಲಿ ಹತ್ತು ಹಾಸಿಗೆಯ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಿದ್ದರು. 1984ರಲ್ಲಿ ತಮ್ಮ ತಾಯಿ ಚನನ್ ದೇವಿ ಸ್ಮರಣೆಯಲ್ಲಿ 20 ಹಾಸಿಗೆ ಆಸ್ಪತ್ರೆಯನ್ನು ಶುರು ಮಾಡಿದರು. ಎಂಡಿಎಚ್ ಸಾಮ್ರಾಜ್ಯ ಬೆಳೆದಂತೆಲ್ಲ ಆಸ್ಪತ್ರೆ ಕೂಡ ವಿಸ್ತರಣೆ ಆಗುತ್ತಾ ಸಾಗಿತು. ಇದರ ಹೊರತಾಗಿ ದೇಶದಾದ್ಯಂತ ಹನ್ನೆರಡಕ್ಕೂ ಹೆಚ್ಚು ಶಾಲೆಗಳನ್ನು ತೆರೆದಿದ್ದರು. ವಿವಿಧ ಕ್ಷೇತ್ರಗಳಲ್ಲಿನ ಅವರ ಸೇವೆಯನ್ನು ಪರಿಗಣಿಸಿದ ಭಾರತ ಸರ್ಕಾರವು ಮೂರನೇ ಅತ್ಯುನ್ನತ ಗೌರವವಾದ ಪದ್ಮಭೂಷಣವನ್ನು 2019ರಲ್ಲಿ ನೀಡಿತು. ಈ ವರ್ಷದ ಏಪ್ರಿಲ್ ನಲ್ಲಿ ಕೂಡ ಧರಂಪಾಲ್ ಗುಲಾಟಿ 7500 ಪಿಪಿಇ ಕಿಟ್ ಗಳನ್ನು ದೆಹಲಿಯ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು.