ಒಂದೇ ಒಂದು ಕೊರೊನಾ ಪ್ರಕರಣ ಇಲ್ಲದ ಭಾರತದ ರಾಜ್ಯ ಇದು... ಕಾರಣ ಗೊತ್ತೆ?
ಭಾರತವೂ ಸೇರಿದಂತೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿರುವ ಕೊರೊನಾ, ಭಾರತದ ಈ ಒಂದು ರಾಜ್ಯದಲ್ಲಿ ಈ ತನಕ (24-5-2020) ಕಾಲಿಟ್ಟಿಲ್ಲ. ಯಾವುದು ಆ ರಾಜ್ಯ ಗೊತ್ತಾ? ಈಶಾನ್ಯದ ನಾಗಾಲ್ಯಾಂಡ್. ಹಾಗಂತ ನಾಗಾಲ್ಯಾಂಡ್ ಏನೂ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಿಲ್ಲ. ಅಸ್ಸಾಂ ಜತೆಗಿನ ಗಡಿಯನ್ನು ಮುಚ್ಚಿದೆ. ಇತರ ರಾಜ್ಯಗಳಿಂದ ವಾಪಸಾದವರಿಗೆ ನಗದು ಪ್ರೋತ್ಸಾಹ ಧನ ಘೋಷಿಸಿದೆ.
ಅಂದ ಹಾಗೆ, ಕಳೆದ ವಾರದ ತನಕ ಈ ರಾಜ್ಯದಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಕೂಡ ಇರಲಿಲ್ಲ. ನಾಗಾಲ್ಯಾಂಡ್ ನ ಅತಿ ದೊಡ್ಡ ನಗರ ದಿಮಪುರ್ ನಲ್ಲಿ ಏಪ್ರಿಲ್ ತಿಂಗಳಲ್ಲಿ ಒಬ್ಬ ವ್ಯಕ್ತಿ ಅಸ್ವಸ್ಥರಾಗಿದ್ದು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣವಾಗಿತ್ತು. ಆ ಕಾಯಿಲೆ ಕೊರೊನಾದೊಂದಿಗೆ ತಾಳೆಯಾಗುತ್ತಿತ್ತು. ಆ ಕೂಡಲೇ ಅವರನ್ನು ದಿಮಪುರದಿಂದ 280 ಕಿ.ಮೀ. ದೂರದಲ್ಲಿ ಇರುವ ಗುವಾಹತಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು
ತಲಾ 10 ಸಾವಿರ ರುಪಾಯಿ ನಗದು
ಆ ರೋಗಿಗೆ ಅಸ್ಸಾಂನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಈಗಲೂ ನಾಗಾಲ್ಯಾಂಡ್ ರಾಜ್ಯ ಕೊರೊನಾದಿಂದ ಸಂಪೂರ್ಣ ಮುಕ್ತವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಈ ತನಕ ನಾಗಾಲ್ಯಾಂಡ್ ನಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಂಡುಬಂದಿಲ್ಲ. ಯಾರ್ಯಾರು ರಾಜ್ಯದಿಂದ ಹೊರಗೆ ಕಾರ್ಯ ನಿರ್ವಹಿಸುತ್ತಿದ್ದರೋ ಅಂಥವರು ನಾಗಾಲ್ಯಾಂಡ್ ಗೆ ಹಿಂತಿರುಗುವುದನ್ನು ತಡೆಯಲು ಸರ್ಕಾರ ಒಂದು ಸೂಪರ್ ಐಡಿಯಾ ಮಾಡಿತು. ಕೊರೊನಾ ವೇಳೆ ಯಾರು ತವರು ರಾಜ್ಯಗಳಿಗೆ ಹಿಂತಿರುಗುವುದಿಲ್ಲವೋ ಅಂಥವರಿಗೆ ಒಂದು ಸಲಕ್ಕೆ ತಲಾ 10 ಸಾವಿರ ರುಪಾಯಿ ಘೋಷಿಸಿತು. ಆದರೂ 19 ಸಾವಿರ ಮಂದಿ ನಾಗಾಲ್ಯಾಂಡ್ ಗೆ ಹಿಂತಿರುಗುವುದಕ್ಕೆ ಹೆಸರು ನೋಂದಣಿ ಮಾಡಿದ್ದಾರೆ.
ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುವುದು
ಕಳೆದ ವಾರವಷ್ಟೇ ನಾಗಾಲ್ಯಾಂಡ್ ನ ರಾಜಧಾನಿ ಕೊಹಿಮಾದಲ್ಲಿ ಕೊರೊನಾ ಪರೀಕ್ಷೆ ಲ್ಯಾಬ್ ಆರಂಭಿಸಲಾಗಿದೆ. ರೈಲು, ವಿಮಾನ ಸೇವೆ ಆರಂಭವಾದ ಮೇಲೆ ಹಿಂತಿರುಗುವವರಿಗೆ ಕ್ವಾರಂಟೈನ್ ಕೇಂದ್ರ ತೆರೆಯಲು ಈಗ ಸರ್ಕಾರ ಶ್ರಮಿಸುತ್ತಿದೆ. ರೆಡ್ ಝೋನ್ ನಿಂದ ಹಿಂತಿರುಗುವವರಿಗೆ ದಿಮಪುರ್ ಅಥವಾ ಕೊಹಿಮಾದಲ್ಲಿ ಸ್ಕ್ರೀನ್ ಮಾಡಿ, ಹದಿನಾಲ್ಕು ದಿನ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇಡಲಾಗುವುದು. ನಾಗಾಲ್ಯಾಂಡ್ ಹೊರತುಪಡಿಸಿದರೆ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಕೂಡ ಕೊರೊನಾದಿಂದ ಮುಕ್ತವಾಗಿದೆ. ಅದಕ್ಕೆ ಕಾರಣವಾಗಿರುವುದು, ಭೌಗೋಳಿಕವಾಗಿ ಅದು ಪ್ರತ್ಯೇಕವಾಗಿರುವುದು. ಇನ್ನು ಸಿಕ್ಕಿಂನಲ್ಲಿ ಶನಿವಾರದ (ಮೇ 23, 2020) ಕೊರೊನಾ ಪ್ರಕರಣ ಇರಲಿಲ್ಲ. ಆದರೆ ಶನಿವಾರದಂದು ದೆಹಲಿಯಿಂದ ವಾಪಸಾದ ವಿದ್ಯಾರ್ಥಿಗೆ ಕಾಣಿಸಿಕೊಂಡಿದೆ.
ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಕಡಿಮೆ
ಆ ವಿದ್ಯಾರ್ಥಿ ದೆಹಲಿಯಿಂದ ವಾಪಸಾಗುವಾಗ ಬಸ್ ನಲ್ಲಿ ಆತನ ಜತೆಗೆ ಹನ್ನೆರಡು ಇತರ ಪ್ರಯಾಣಿಕರಿದ್ದರು. ಅವರೆಲ್ಲರನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಸಿಕ್ಕಿಂ ಸರ್ಕಾರವು ಶಾಲೆ- ಕಾಲೇಜುಗಳನ್ನು ಜೂನ್ 15ರಿಂದ ಪುನರಾರಂಭ ಮಾಡಲು ಯೋಜನೆ ರೂಪಿಸಿತ್ತು. ಇದೀಗ ಅಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದೆ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಸಮಸ್ಯೆ ಅಷ್ಟಾಗಿ ಇಲ್ಲ. ಮಿಜೋರಾಂ, ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿತ್ತು. ಆದರೆ ಸದ್ಯಕ್ಕೆ ಅಲ್ಲಿ ಯಾವುದೇ ಸಕ್ರಿಯ ಕೊರೊನಾ ಪ್ರಕರಣಗಳು ಇಲ್ಲ. ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ 329 ಪ್ರಕರಣಗಳು ವರದಿಯಾಗಿದ್ದರೆ, ತ್ರಿಪುರಾದಲ್ಲಿ 189 ಕೇಸ್, ಮಣಿಪುರ 29 ಮತ್ತು ಮೇಘಾಲಯದಲ್ಲಿ 14 ಪ್ರಕರಣ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯದಿಂದ ಒದಗಿಸಿರುವ ಮಾಹಿತಿಯಲ್ಲಿ ಗೊತ್ತಾಗಿದೆ.