ವಿದೇಶದಿಂದ ಭಾರತಕ್ಕೆ ಬರುವವರಿಗೆ ಆಗಸ್ಟ್ 8ರಿಂದ ಹೊಸ ಗೈಡ್ ಲೈನ್ಸ್
ವಿದೇಶದಿಂದ ಭಾರತಕ್ಕೆ ಬರುತ್ತಿದ್ದೀರಾ? ಈ ರೀತಿಯ ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಆ ಹೊಸ ಸೂತ್ರದ ಪ್ರಕಾರ, ಐದು ವಿಭಾಗದ ಅಡಿಯಲ್ಲಿ ಬರುವ ಪ್ರಯಾಣಿಕರಿಗೆ ಏಳು ದಿನಗಳ ಕಡ್ಡಾಯ ಸಾಂಸ್ಥಿಕ (ಇನ್ ಸ್ಟಿಟ್ಯೂಷನ್) ಕ್ವಾರಂಟೇನ್ ನಿಂದ ವಿನಾಯಿತಿ ನೀಡಲಾಗಿದೆ. ಇದು ಆಗಸ್ಟ್ 8ರಿಂದ ಜಾರಿಗೆ ಬಂದಿದೆ.
ಕಳೆದ ವಾರ ಭಾರತವು ಯು.ಎಸ್., ಯುಎಇ, ಫ್ರಾನ್ಸ್, ಜರ್ಮನಿ ಜತೆಗೆ ದ್ವಿಪಕ್ಷೀಯ ವಾಯು ಯಾನ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರ ಅನ್ವಯ, ಪರಸ್ಪರ ದೇಶಗಳು ಕೆಲವು ನಿಬಂಧನೆಗಳೊಂದಿಗೆ ವಿಮಾನ ಹಾರಾಟ ನಡೆಸಬಹುದು. ಆಗಸ್ಟ್ 8ನೇ ತಾರೀಕಿನಿಂದ ಬಂದಿರುವ ಹೊಸ ಮಾರ್ಗದರ್ಶಿ ಸೂತ್ರಗಳು ಹೀಗಿವೆ.
* ಎಲ್ಲ ಪ್ರಯಾಣಿಕರು ತಮ್ಮ ನಿಗದಿತ ಪ್ರಯಾಣದ 72 ಗಂಟೆ ಮುಂಚೆ ಆನ್ ಲೈನ್ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ಸ್ವಘೋಷಿತ ಪತ್ರವೊಂದನ್ನು ಸಲ್ಲಿಸಬೇಕು.
* ಕಡ್ಡಾಯವಾದ ಏಳು ದಿನಗಳ ಸಾಂಸ್ಥಿಕ ಕ್ವಾರಂಟೇನ್ ಅನ್ನು ತಮ್ಮದೇ ಖರ್ಚಿನಲ್ಲಿ ಭರಿಸುವುದಾಗಿ ಪೋರ್ಟಲ್ ನಲ್ಲಿ ಒಪ್ಪಿಗೆ ನೀಡಬೇಕು. ಜತೆಗೆ ಆ ನಂತರ ಏಳು ದಿನಗಳ ಹೋಮ್ ಕ್ವಾರಂಟೇನ್ ಇರಬೇಕು. ಆ ಸಂದರ್ಭದಲ್ಲಿ ಆರೋಗ್ಯದ ನಿಗಾ ಅವರೇ ತೆಗೆದುಕೊಳ್ಳಬೇಕು.
* 1. ಗರ್ಭಿಣಿಯರು, 2. ಕುಟುಂಬದಲ್ಲಿ ಸಾವು ಸಂಭವಿಸಿದ್ದಲ್ಲಿ, 3. ಗಂಭೀರವಾದ ಕಾಯಿಲೆ ಇರುವವರು, 4. ಹತ್ತು ವರ್ಷದ ಒಳಗಿನ ಮಕ್ಕಳ ಜತೆಗೆ ಬಂದವರು, 5. ಪ್ರಯಾಣಕ್ಕೆ ಹೊರಡುವ 96 ಗಂಟೆ ಮೊದಲು ಪರೀಕ್ಷೆ ಮಾಡಿಸಿ, ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಇದ್ದಲ್ಲಿ - ಹೀಗೆ ಐದು ವಿಭಾಗದ ಅಡಿಯಲ್ಲಿ ಬರುವ ಪ್ರಯಾಣಿಕರಿಗೆ ಏಳು ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೇನ್ ನಿಂದ ವಿನಾಯಿತಿ ನೀಡಲಾಗಿದೆ.
3000 ಕೋಟಿ ರು. ಟಿಕೆಟ್ ಹಣ ಹಿಂತಿರುಗಿಸಲಾಗದ ಏರ್ ಲೈನ್ಸ್; ಮುಂದೇನು?
* ಒಂದು ವೇಳೆ ವಿನಾಯಿತಿ ಬೇಕು ಎಂದಾದಲ್ಲಿ ಪ್ರಯಾಣದ ಕನಿಷ್ಠ 72 ಗಂಟೆ ಮುಂಚೆ ದೆಹಲಿ ಏರ್ ಪೋರ್ಟ್ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು. ಸರ್ಕಾರ ಈ ಕುರಿತು ತೀರ್ಮಾನ ಮಾಡುತ್ತದೆ. ಅದನ್ನು ಆನ್ ಲೈನ್ ಪೋರ್ಟಲ್ ಮೂಲಕ ತಲುಪಿಸಲಾಗುತ್ತದೆ. ಆ ನಿರ್ಧಾರವೇ ಅಂತಿಮ.
* ಉಳಿದಂತೆ ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರಿಗೂ ಭಾರತದಲ್ಲಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೇನ್ ಮತ್ತು ಆ ನಂತರ ಹೋಮ್ ಕ್ವಾರಂಟೇನ್ ಕಡ್ಡಾಯ.
* ತಮ್ಮ ವಿಮಾನ ಪ್ರಯಾಣಕ್ಕೆ ಮುಂಚಿನ ಮೂರು ವಾರಗಳ ಅವಧಿಯಲ್ಲಿ ಕೊರೊನಾ ಪಾಸಿಟಿವ್ ಎಂಬುದು ಬಂದಿಲ್ಲ ಎಂಬ ಬಗ್ಗೆ ಸ್ವಘೋಷಿತ ಪತ್ರವನ್ನು ಸಲ್ಲಿಸಬೇಕು.
ಅನುಸರಿಸಬೇಕಾದ ನಿಯಮಗಳು
* ಮೊಬೈಲ್ ಫೋನ್ ಗಳಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಪ್ರಯಾಣಿಕರಿಗೆ ತಿಳಿಸಲಾಗುವುದು.
* ವಿಮಾನ ಅಥವಾ ಹಡಗು ಏರುವ ಮುನ್ನ ಟಿಕೆಟ್ ಜತೆಗೆ ಪ್ರಯಾಣಿಕರಿಗೆ ಅನುಸರಿಸಬೇಕಾದ ನಿಯಮಗಳ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗುವುದು.
* ವಿಮಾನ ಅಥವಾ ಹಡಗು ಏರುವ ಮುನ್ನ ಧರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಯಾರಿಗೆ ಕೊರೊನಾ ಲಕ್ಷಣಗಳು ಇರುವುದಿಲ್ಲವೋ ಅಂಥವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.