ಚೀನಾದಲ್ಲಿರುವ ತೈಲ ಕಂಪೆನಿಗಳಿಗೆ ಭಾರತದ ಗಾಳ: ಬಿಪಿಸಿಎಲ್ ಸೇರಿ ಇತರ ಕಂಪೆನಿ ಸೇಲ್
ಚೀನಾಗೆ ನಸೀಬು ಕೆಟ್ಟಂತಿದೆ. ಅಲ್ಲಿನ ತೈಲ ಕ್ಷೇತ್ರದ ಹೂಡಿಕೆದಾರರು ಭಾರತದತ್ತ ಮುಖ ಮಾಡುತ್ತಿದೆ ಎಂದು ಪ್ರಮುಖ ತೈಲ ರಿಫೈನರಿ ಕಂಪೆನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. "ತೈಲ ವಲಯದಲ್ಲಿನ ಹೂಡಿಕೆ ಆಯ್ಕೆಗಳು ಬಹಳ ಸೀಮಿತವಾಗಿ ಇರಲಿವೆ. ಕೊರೊನಾ ಬಿಕ್ಕಟ್ಟು ಮುಗಿದು, ಇಡೀ ಜಗತ್ತು ಮೊದಲಿನಂತೆ ಆದ ಮೇಲೆ ಇರುವ ಏಕೈಕ ಪರ್ಯಾಯ ಆಯ್ಕೆ ಭಾರತ ಆಗಿರಲಿದೆ" ಎಂದು ಬಿಪಿಸಿಎಲ್ ಹಣಕಾಸು ನಿರ್ದೇಶಕ ಎನ್. ವಿಜಯ್ ಗೋಪಾಲ್ ಹೇಳಿದ್ದಾರೆ.
ಪಾಶ್ಚಾತ್ಯ ದೇಶಗಳು ಚೀನಾದಲ್ಲಿ ಕಾಲಿಡುವುದಕ್ಕೆ ಸಹ ಹೆದರುತ್ತಿವೆ. ಹಾಗಿದ್ದ ಮೇಲೆ ಅವರು ಎಲ್ಲಿಗೆ ಹೋಗಬೇಕು? ಎಂದು ಮುಂಬೈನಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಶ್ನಿಸಿದ್ದಾರೆ. ಯು.ಎಸ್. ಸೇರಿದಂತೆ ಹಲವು ದೇಶಗಳ ಧ್ವನಿ ಒಂಥ ಥರ ಇದೆ. ಜಾಗತಿಕ ವ್ಯಾಪಾರ, ಭದ್ರತೆ ಹಾಗೂ ಮಾನವ ಹಕ್ಕುಗಳಿಗೆ ಚೀನಾ ಅಪಾಯಕಾರಿ ಎಂಬುದು ಅವುಗಳ ನಿಲುವು.
#BoycottChinesProducts ಧ್ವನಿ ಸೇರಿಸಿದ ಸೋನಂ ವಾಂಗ್ ಚುಕ್
ಇಂಥ ಸನ್ನಿವೇಶದಲ್ಲಿ ಬಂಡವಾಳ ಆಕರ್ಷಣೆಗೆ ಭಾರತಕ್ಕೆ ಸೂಕ್ತ ವೇದಿಕೆ ಒದಗಿ ಬಂದಿದೆ. ಕೊರೊನಾ ತೊಲಗಿ, ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಮೇಲೆ ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಸೇರಿದಂತೆ ಸರ್ಕಾರಿ ಸ್ವಾಮ್ಯದ ಆಸ್ತಿಗಳಲ್ಲಿ ಜಾಗತಿಕ ಹೂಡಿಕೆದಾರರಿಗೆ ಬಂಡವಾಳ ಹೂಡುವುದಕ್ಕೆ ಅವಕಾಶ ನೀಡಬೇಕಿದೆ.
ಬೇಡಿಕೆ ಕುದುರಿದ ಮೇಲೆ ಹೂಡಿಕೆಗೆ ಮುಂದಾಗುತ್ತವೆ
ಜಾಗತಿಕ ಮಟ್ಟದ ಕಂಪೆನಿಗಳು ಬಂಡವಾಳದ ಕಡಿತ ಮಾಡಿ, ನಗದು ಸಂಗ್ರಹದಲ್ಲಿ ತೊಡಗಿವೆ. ಎಕ್ಸಾನ್ ಮೊಬಿಲ್, ಶೆಲ್, ಬ್ರಿಟಿಷ್ ಪೆಟ್ರೋಲಿಯಂ ಅಥವಾ ಸೌದಿ ಅರಾಮ್ಕೋ ನಾಶವಾಗಲು ಸಾಧ್ಯವಿಲ್ಲ. ಬೇಡಿಕೆ ಕುದುರಿದ ಮೇಲೆ ಅವರು ವಾಪಸ್ ಬರುತ್ತಾರೆ. ಅವರ ಬಳಿ ಹೂಡಿಕೆ ಮಾಡುವುದಕ್ಕೆ ನಗದು ಇರುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. 130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತ, ತೈಲ ಬಳಕೆಯಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ದೇಶ. ಸ್ಥಿರವಾಗಿ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ದೊಡ್ಡ ತೈಲ ಕಂಪೆನಿಗಳ ಪಾಲಿಗೆ ಚೀನಾ ದೇಶಕ್ಕೆ ಪರ್ಯಾಯವಾಗಿ ಕಾಣಿಸುತ್ತದೆ. ಕೆಲವು ಕಂಪೆನಿಗಳು ಈಗಾಗಲೇ ಬಿಪಿಸಿಎಲ್ ನಲ್ಲಿ ಆಸಕ್ತಿ ತೋರಿವೆ.
ಅತ್ಯಲ್ಪ ಆವಧಿಯಲ್ಲಿ ಬೇಡಿಕೆಯಲ್ಲಿ ಚೇತರಿಕೆ
ಈಗಲೂ ವಿಶ್ವದ ಅತಿ ದೊಡ್ಡ ತೈಲ ಕಂಪೆನಿಗಳಾದ ಎಕ್ಸಾನ್ ಮೊಬಿಲ್ ಕಾರ್ಪೊರೇಷನ್ ನಿಂದ ರಾಯಲ್ ಡಚ್ ಶೆಲ್ ತನಕ ಚೀನಾದಲ್ಲಿ ಬಂಡವಾಳ ಹೂಡಿವೆ. ಇನ್ನು ಸೌದಿ ಅರಾಮ್ಕೋ ಹೂಡಿಕೆ ಮಾಡಬೇಕು ಎಂದಿದೆ. ಇಂಧನ ಬಳಕೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇರುವ ಚೀನಾ ಬಗ್ಗೆ ಈ ರೀತಿಯ ಆಸಕ್ತಿ ತೋರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇತ್ತ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಮಾರ್ಚ್ ನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಆಯಿತ್ತಲ್ಲಾ, ಆಗಿನಿಂದ ಬೇಡಿಕೆಯಲ್ಲಿ ಭಾರೀ ಕುಸಿತ ಆಗಿತ್ತು. ಆದರೆ ಯಾವಾಗ ಲಾಕ್ ಡೌನ್ ನಿರ್ಬಂಧವನ್ನು ಹಂತಹಂತವಾಗಿ ತೆರವು ಮಾಡಲಾಯಿತೋ ಆಗಿನಿಂದ ಅತ್ಯಲ್ಪ ಅವಧಿಯಲ್ಲೇ ಕಳೆದುಕೊಂಡಿದ್ದ ಬೇಡಿಕೆ ಮರುಕಳಿಸಿದೆ. ಆದರೆ ಬೆಳವಣಿಗೆ ಸಾಧಿಸಬೇಕು ಎಂದರೆ ದೂರದ ಹಾದಿ ಸವೆಸಬೇಕಿದೆ.
ಬಿಪಿಸಿಎಲ್ ಮೌಲ್ಯದಲ್ಲಿ ಕುಸಿತ
ಬಿಪಿಸಿಎಲ್ ಸೇರಿದಂತೆ ಯಾವುದೆಲ್ಲ ಪ್ರೊಸೆಸಿಂಗ್ ಕಡಿಮೆ ಮಾಡಿದ್ದವೋ ಅವೆಲ್ಲ ಈಗ ಸಾಮರ್ಥ್ಯ ಹೆಚ್ಚಿಸಿಕೊಂಡಿವೆ. ಬಿಪಿಸಿಎಲ್ ರೀಫೈನರಿ ಈಗ ಮಾಮೂಲಿ ಸಾಮರ್ಥ್ಯದ 83 ಪರ್ಸೆಂಟ್ ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದರೆ, ಮೇ ತಿಂಗಳಲ್ಲಿ ಮಾಮೂಲಿಗಿಂತ 76 ಪರ್ಸೆಂಟ್ ನಷ್ಟು ಮಾರಾಟ ಆಗಿದೆ. ಆದ್ದರಿಂದ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವ ಅಗತ್ಯ ಇಲ್ಲ. ಶೀಘ್ರವೇ ಸಹಜ ಸ್ಥಿತಿಗೆ ಮರಳಲಿದೆ ಎಂದು ಬಿಪಿಸಿಎಲ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಭಾರತ ತೈಲ ರೀಫೈನರಿಗಳಿಗೆ ಒಟ್ಟಿಗೆ ಎರಡು ಹೊಡೆತ ಬಿತ್ತು. ತೈಲ ಬೆಲೆಯಲ್ಲಿನ ಇಳಿಕೆಯಿಂದ ಬಿದ್ದ ಹೊಡೆತ ಒಂದು ಕಡೆ, ಕೊರೊನಾದಿಂದ ಆದ ಬೇಡಿಕೆ ಕುಸಿತ ಮತ್ತೊಂದು ಕಡೆ. ಫೆಬ್ರವರಿ ಆರಂಭದಲ್ಲಿ ಬಿಪಿಸಿಎಲ್ ಮೌಲ್ಯ 7.4 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಅದೀಗ 5.7 ಬಿಲಿಯನ್ ಅಮೆರಿಕನ್ ಡಾಲರ್ ಗೆ ಕುಸಿದಿದೆ.
ಕಂಪೆನಿ ಆಸ್ತಿಯನ್ನು ಗಮನಿಸಲಾಗುತ್ತದೆ
ಆದರೆ, ವಿಜಯ್ ಗೋಪಾಲ್ ಅವರು ಹೇಳುವಂತೆ ಇದು ಸಮಸ್ಯೆ ಅಲ್ಲ. ಹೂಡಿಕೆ ಮಾಡುವವರು ಗಮನಿಸುವುದು ಕಂಪೆನಿಯ ಆಸ್ತಿ ಹಾಗೂ ಬಿಕ್ಕಟ್ಟಿನಿಂದ ಅದು ಪುಟಿದೆದ್ದು ನಿಲ್ಲಬಹುದಾದ ಸಾಮರ್ಥ್ಯವನ್ನು. ಬಿಪಿಸಿಎಲ್ ಖರೀದಿಗೆ ಬಿಡ್ ಮಾಡಬಹುದಾದ ಅವಧಿಯನ್ನು ಎರಡು ಸಲ ಮುಂದಕ್ಕೆ ಹಾಕಿ, ಇದೀಗ ಜುಲೈ 31, 2020ಕ್ಕೆ ತಂದು ನಿಲ್ಲಿಸಿದೆ. ಭಾರತದಲ್ಲೇ ಮೂರನೇ ಅತಿದೊಡ್ಡ ರೀಫೈನರ್ ಬಿಪಿಸಿಎಲ್, ಎರಡನೇ ಅತಿದೊಡ್ಡ ತೈಲ ಚಿಲ್ಲರೆ ಮಾರಾಟಗಾರ ಕಂಪೆನಿ. ಕೊನೆಯಾದ ಆರ್ಥಿಕ ವರ್ಷಕ್ಕೆ ಇದರ ಮಾರುಕಟ್ಟೆ ಪಾಲು 21 ಪರ್ಸೆಂಟ್ ಇತ್ತು. ಯಾರಾದರೂ ಬೆಲೆ ನೀಡಬೇಕು ಅಂದರೆ, ಕಂಪೆನಿಯ ಆರು ತಿಂಗಳ ಮೌಲ್ಯವನ್ನು ನೀಡಲ್ಲ. ನಮಗೆ ನೂರು ವರ್ಷದ ಇತಿಹಾಸ ಇದೆ. ಪೆಟ್ರೋಲ್- ಡೀಸೆಲ್ ಇಲ್ಲದೇ ಹೋದರೂ ಇಂಧನ ಕಂಪೆನಿಯಾಗಿ ಇನ್ನೂ ನೂರು ವರ್ಷ ನಾವು ಇರುತ್ತೇವೆ ಎಂದು ವಿಜಯ್ ಗೋಪಾಲ್ ಹೇಳುತ್ತಾರೆ.