ಮುಂದಿನ ವಾರ ಈರುಳ್ಳಿ ತುಂಬಿದ ಹಡಗುಗಳು ಭಾರತಕ್ಕೆ ಬರಲಿವೆ: ಅಮಿತ್ ಶಾ
ದೇಶದಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ವಿದೇಶದಿಂದ ಈರುಳ್ಳಿ ಆಮದಿಗೆ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಈರುಳ್ಳಿಯು ಹಡಗುಗಳ ಮೂಲಕ ಮುಂದಿನ ವಾರ ಭಾರತಕ್ಕೆ ಬರಲಿದೆ ಎಂದು ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಿಂದ ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ಹಲವಾರು ಸ್ಥಳಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 150 ರುಪಾಯಿ ಗಡಿ ದಾಟಿದ ದಿನ ಗುರುವಾರದಂದು ಗೃಹ ಸಚಿವ ಅಮಿತ್ ಶಾ, ಈರುಳ್ಳಿ ಬೆಲೆ ಕುರಿತಾಗಿ ಸಚಿವರೊಂದಿಗೆ ಸಭೆ ನಡೆಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ತೋಮರ್ , ಹಾಗೂ ಗೃಹ ಸಚಿವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್ ಶ್ರೀವಾಸ್ತವ್ ವಿವರಿಸಿದರು.
'ಈಗಾಗಲೇ ಕ್ಯಾಬಿನೆಟ್ ಅನುಮೋದಿಸಿದ 1.2 ಲಕ್ಷ ಟನ್ ಈರುಳ್ಳಿ ಆಮದಿನಲ್ಲಿ 21,000 ಟನ್ಗಳಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಇದುವರೆಗೂ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇದು ಇನ್ನೂ 15,000 ಟನ್ಗಳಿಗೆ ಟೆಂಡರ್ ತಲುಪುವ ಪ್ರಕ್ರಿಯೆಯಲ್ಲಿದೆ. ಡಿಸೆಂಬರ್ 2ನೇ ವಾರದಲ್ಲಿ ಈರುಳ್ಳಿಯು ಭಾರತಕ್ಕೆ ರವಾನೆಯಾಗಲಿದೆ' ಎಂದು ಗ್ರಾಹಕ ವ್ಯವಹಾರಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮಿತ್ ಶಾ ಅಧ್ಯಕ್ಷತೆಯ ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಪ್ರಧಾನಿ ಮಂತ್ರಿ ಸಲಹೆಗಾರ ಪಿ.ಕೆ. ಸಿನ್ಹಾ ಕೂಡ ಉಪಸ್ಥಿತರಿದ್ದರು. ಈ ಹಿಂದೆ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಮತ್ತು ಈರುಳ್ಳಿ ಸಂಗ್ರಹಕ್ಕಾಗಿ ತಂತ್ರಜ್ಞಾನ ಸುಧಾರಿಸುವ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದ್ದರು.