ರಾಜ್ಯಗಳಿಗೆ ಓವರ್ಡ್ರಾಫ್ಟ್ ಸೌಲಭ್ಯದ ಅವಧಿ 50 ದಿನಗಳಿಗೆ ಹೆಚ್ಚಳ: ಆರ್ಬಿಐ
ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರಾಜ್ಯಗಳಿಗೆ ಓವರ್ಡ್ರಾಫ್ಟ್ ಸೌಲಭ್ಯದಲ್ಲಿಯೂ ಪರಿಹಾರ ನೀಡಲು ಮುಂದಾಗಿದೆ. ರಾಜ್ಯಗಳ ಓವರ್ಡ್ರಾಫ್ಟ್ ಸೌಲಭ್ಯದ ಅವಧಿಯನ್ನು 50 ದಿನಗಳಿಗೆ ಹೆಚ್ಚಿಸಲಾಗಿದೆ.
ಇಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಮೂಲಕ ಆರೋಗ್ಯ ಭದ್ರತೆಗಾಗಿ 50,000 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದರು. ಜೊತೆಗೆ ಆಹಾರ ಉತ್ಪಾದನೆಯ ಕುರಿತು ಮಾತನಾಡುತ್ತಾ ಈ ವರ್ಷ ಮಾನ್ಸೂನ್ ಸಾಮಾನ್ಯವಾಗಲಿದೆ, ಇದು ಹಣದುಬ್ಬರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕಳೆದ ವರ್ಷ ಆಹಾರ ಉತ್ಪಾದನೆಯೂ ಉತ್ತಮವಾಗಿತ್ತು ಎಂದರು.
ಕೋವಿಡ್-19 ಗೆ ಸಂಬಂಧಿಸಿದ ಉದಯೋನ್ಮುಖ ಸನ್ನಿವೇಶಗಳ ಬಗ್ಗೆ ರಿಸರ್ವ್ ಬ್ಯಾಂಕ್ ಕಣ್ಣಿಡಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಕೊರೊನಾ ಎರಡನೇ ತರಂಗದಿಂದ ಪೀಡಿತ ದೇಶದ ನಾಗರಿಕರು, ವ್ಯಾಪಾರ ಘಟಕಗಳು ಮತ್ತು ಸಂಸ್ಥೆಗಳಿಗೆ ಕೇಂದ್ರ ಬ್ಯಾಂಕ್ ಸಾಧ್ಯವಾದಷ್ಟು ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.
ಏಪ್ರಿಲ್ನಲ್ಲಿ ವಿದ್ಯುತ್ ಬಳಕೆ ಕೂಡ ಹೆಚ್ಚಾಗಿದ್ದು, ರೈಲ್ವೆಯ ಸರಕು ಸಾಗಣೆಯಲ್ಲಿ ಹೆಚ್ಚಳ ಕಂಡುಬಂದಿದೆ. ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಇತರ ಅಗತ್ಯ ವಸ್ತುಗಳ ದರಗಳು ಹೆಚ್ಚಳವನ್ನು ದಾಖಲಿಸಿದೆ. ಕೋವಿಡ್ನಿಂದಾಗಿ ಸರಬರಾಜು ಸ್ಥಗಿತಗೊಂಡ ಪರಿಣಾಮ ವಸ್ತುಗಳ ಬೆಲೆ ಏರಿಕೆ ಸಂಭವಿಸಿದೆ. ಮಾರ್ಚ್ನಲ್ಲಿ ಭಾರತದ ರಫ್ತು ಗಮನಾರ್ಹವಾಗಿ ಹೆಚ್ಚಾಗಿದ್ದು, ಏಪ್ರಿಲ್ನಲ್ಲಿಯೂ ಮುಂದುವರಿದಿದೆ.