ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸತತ 6 ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಸತತ ಹತ್ತು ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಆರ್ಬಿಐ 2022ರ ಮೇ ತಿಂಗಳಿನಿಂದ ರೆಪೋ ದರವನ್ನು ಹೆಚ್ಚಳ ಮಾಡುತ್ತಲ್ಲಿದೆ. ಕಳೆದ ಬಾರಿ ಫೆಬ್ರವರಿ 8ರಂದು ರೆಪೋ ದರ ಏರಿಸಲಾಗಿದೆ.
ಮೇ ತಿಂಗಳಿನಲ್ಲಿ ಆರ್ಬಿಐ ರೆಪೋ ದರವನ್ನು 40 ಮೂಲಾಂಕ ಹೆಚ್ಚಳ ಮಾಡಿದೆ. ಆ ಬಳಿಕ ಆರ್ಬಿಐ ಜೂನ್ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್ನಲ್ಲಿ ರೆಪೋ ದರವನ್ನು ಆರ್ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ.

ಅದಾದ ಬಳಿಕ ಡಿಸೆಂಬರ್ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರೆಪೋ ದರವನ್ನು ಮತ್ತೆ 35 ಮೂಲಾಂಕ ಹೆಚ್ಚಳ ಮಾಡಿದೆ. ಫೆಬ್ರವರಿಯಲ್ಲಿ ರೆಪೋ ದರವನ್ನು 25 ಮೂಲಾಂಕ ಏರಿಸಲಾಗಿದೆ. ಇದರಿಂದಾಗಿ ರೆಪೋ ದರವು ಶೇಕಡ 6.50ಕ್ಕೆ ತಲುಪಿದೆ. ಈಗ ಮತ್ತೆ ಏಪ್ರಿಲ್ನಲ್ಲಿ ಆರ್ಬಿಐ ರೆಪೋ ದರವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಅದರಲ್ಲೂ ಏಪ್ರಿಲ್ ತಿಂಗಳು ಹೊಸ ಹಣಕಾಸು ವರ್ಷದ ಆರಂಭವಾಗಿದೆ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ತಜ್ಞರು ಹೇಳುವುದು ಏನು?
ಈ ಹಿಂದೆ ತಜ್ಞರ ಅಭಿಪ್ರಾಯದಂತೆಯೇ ಆರ್ಬಿಐ 25 ಬಿಪಿಎಸ್ ರೆಪೋ ದರ ಹೆಚ್ಚಿಸಿದೆ. ಈಗ ಡಿಬಿಎಸ್ ಗ್ರೂಪ್ ರಿಸರ್ಚ್ ಏಪ್ರಿಲ್ನಲ್ಲಿ ಆರ್ಬಿಐ ರೆಪೋ ದರವನ್ನು ಮತ್ತೆ 25 ಮೂಲಾಂಕ ಏರಿಸಬಹುದು ಎಂದು ಅಭಿಪ್ರಾಯಿಸಿದೆ. ಇನ್ನು ಮೇ ತಿಂಗಳಿನಿಂದ ಈವರೆಗೆ ಆರ್ಬಿಐ ಒಟ್ಟು 250 ಬಿಪಿಎಸ್ ದರ ಹೆಚ್ಚಿಸಿದೆ. ಆನ್ಲೈನ್ ಗೋಷ್ಠಿಯೊಂದರಲ್ಲಿ ಮಾತನಾಡಿದ ಡಿಬಿಎಸ್ ಗ್ರೂಪ್ ರಿಸರ್ಚ್ನ ಹಿರಿಯ ಆರ್ಥಿಕ ತಜ್ಞೆ ರಾಧಿಕಾ ರಾವ್ ಆರ್ಬಿಐ ಏಪ್ರಿಲ್ನಲ್ಲಿ 25 ಬಿಪಿಎಸ್ ದರ ಏರಿಸಲಿದೆ ಎಂದಿದ್ದಾರೆ.
ಫೆಬ್ರವರಿಯಲ್ಲಿ ಸಿಪಿಐ ಹಣದುಬ್ಬರವು ಕೊಂಚ ಇಳಿಕೆಯಾಗಿದ್ದು ಶೇಕಡ 6.44ಕ್ಕೆರ ತಲುಪಿದೆ. ಆದರೂ ಆರ್ಬಿಐ ಸಹಿಷ್ಣು ಮಟ್ಟ ಶೇಕಡ 6ಕ್ಕಿಂತ ಅಧಿಕವಾಗಿಯೇ ಉಳಿದಿದೆ. ಇನ್ನು ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6.52 ಆಗಿತ್ತು. ಹಣದುಬ್ಬರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್ಬಿಐ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡುವ ಕ್ರಮ ಕೈಗೊಳ್ಳಲಿದೆ ಎಂದು ರಾಧಿಕಾ ರಾವ್ ಅಭಿಪ್ರಾಯಿಸಿದ್ದಾರೆ.
"ಆದರೆ ಹಣದುಬ್ಬರವನ್ನು ಬರೀ ಪಾಲಿಸಿ ಬದಲಾವಣೆಯಿಂದ ನಿರ್ವಹಣೆ ಮಾಡಲಾಗದು," ಎಂದು ಕೂಡಾ ರಾಧಿಕಾ ರಾವ್ ತಿಳಿಸಿದ್ದಾರೆ. "ಹಣದುಬ್ಬರದ ಮೇಲೆ ಎಲ್ಲ ಅಂಶಗಳು ಪ್ರಭಾವ ಬೀರುತ್ತದೆ. ಮುಂದಿನ 3 ತಿಂಗಳು ವಾತಾವರಣದಲ್ಲಿ ಅಧಿಕ ಉಷ್ಣಾಂಶ ಇರಲಿದೆ. ಜೂನ್-ಜುಲೈ ಮಾನ್ಸೂನ್ ಅವಧಿಯು ಕಷ್ಟಕರವಾಗಿರಲಿದೆ ಎಂದು ಹವಾಮಾನ ವರದಿ ಹೇಳುತ್ತದೆ. ಇದು ಕೃಷಿಗೆ ಪರಿಣಾಮ ಬೀರಿದಾಗ ಹಣದುಬ್ಬರಕ್ಕೂ ಪ್ರಭಾವವಾಗಲಿದೆ," ಎಂದು ತಿಳಿಸಿದ್ದಾರೆ.
"ಆಹಾರ ಪೂರೈಕೆಯಲ್ಲಿ ಆಘಾತಕಾರಿ ಬೆಳವಣಿಗೆ ಕಂಡುಬರುತ್ತಿದೆ. ಹಣದುಬ್ಬರ ಹೆಚ್ಚಾಗಿದೆ. ಈ ನಡುವೆ ಮುಂದಿನ ಎಂಪಿಸಿ ಸಭೆಯಲ್ಲಿ ಆರ್ಬಿಐ 25 ಬಿಪಿಎಸ್ ದರ ಹೆಚ್ಚಿಸಬಹುದು. ಆದರೆ ಆಹಾರ ಪೂರೈಕೆಯಲ್ಲಿ ಸಮಸ್ಯೆಯನ್ನು ವಿತ್ತೀಯ ನೀತಿಯಿಂದ ಮಾತ್ರ ಸರಿಪಡಿಸಲಾಗದು. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲ ಕೂಡಾ ಅತೀ ಮುಖ್ಯವಾಗುತ್ತದೆ," ಎಂದು ಡಿಬಿಎಸ್ ಗ್ರೂಪ್ ರಿಸರ್ಚ್ನ ಹಿರಿಯ ಆರ್ಥಿಕ ತಜ್ಞೆ ರಾಧಿಕಾ ರಾವ್ ಹೇಳಿದ್ದಾರೆ. ಮುಂದಿನ ಸಭೆಯು ಏಪ್ರಿಲ್ 3-6ರವೆಗೆ ನಡೆಯಲಿದೆ.


Click it and Unblock the Notifications