ಮುದ್ರಾಂಕ ಶುಲ್ಕ ಇಳಿಕೆಯಾದ್ರೆ ಮಾತ್ರ ಮನೆ ಖರೀದಿ ಏರಿಕೆ!
ನೋಯ್ಡಾ, ಜೂನ್ 21: ಮುದ್ರಾಂಕ ಶುಲ್ಕ ಇಳಿಸುವಂಥ ಸರ್ಕಾರಿ ಉಪಕ್ರಮಗಳು ಮನೆ ಖರೀದಿಗೆ ಉತ್ತೇಜನ ನೀಡಬಲ್ಲವು ಎನ್ನುವ ಅಂಶ ಮ್ಯಾಜಿಕ್ಬ್ರಿಕ್ಸ್ ನಡೆಸಿದ ಗ್ರಾಹಕ ಸಮೀಕ್ಷೆಯಿಂದ ವ್ಯಕ್ತವಾಗಿದೆ. ಆಯಾ ರಾಜ್ಯಗಳಲ್ಲಿ ಮುದ್ರಾಂಕ ಶುಲ್ಕ ಕಡಿಮೆಯಾದಲ್ಲಿ, ಮನೆ ಖರೀದಿ ಮಾಡುವ ತಮ್ಮ ನಿರ್ಧಾರದ ಮೇಲೆ ಅದು ಪರಿಣಾಮ ಬೀರಬಲ್ಲದು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 80ರಷ್ಟು ಸಂಭಾವ್ಯ ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಸರಾಸರಿ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ 5%ದಿಂದ 9%ವರೆಗೆ ಇದೆ. ಇದು ಆಸ್ತಿಯ ಒಟ್ಟಾರೆ ವೆಚ್ಚಕ್ಕೆ ಹೋಲಿಸಿದರೆ ದೊಡ್ಡ ಪಾಲಾಗುತ್ತದೆ ಹಾಗೂ ಹಲವು ಮಂದಿ ಮೊದಲ ಬಾರಿ ಮನೆ ಖರೀದಿಸುವ ಗ್ರಾಹಕರಿಗೆ ತಡೆಯಾಗಿ ಪರಿಣಮಿಸುತ್ತಿದೆ.
ಆದರೆ 2020ರಲ್ಲಿ ಸಮೂಹ ಸಾಂಕ್ರಾಮಿಕ ಆರಂಭವಾದಾಗಿನಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದಂಥ ಸರ್ಕಾರಗಳು ಈಗಾಗಲೇ ಮುದ್ರಾಂಕ ಶುಲ್ಕವನ್ನು ಉಳಿಸುವ ಕ್ರಮ ಕೈಗೊಂಡಿವೆ. ಗೃಹ ನಿರ್ಮಾಣ ಸಚಿವಾಲಯ, ಮುದ್ರಾಂಕ ಶುಲ್ಕ ಇಳಿಸುವಂತೆ ಇತರ ರಾಜ್ಯಗಳಿಗೂ ಮನವಿ ಮಾಡಿದೆ. ಇಂಥ ಇಳಿಕೆ ಮನೆ ಖರೀದಿದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
ಭಾರತದ ನಂ. 1 ಆಸ್ತಿ ಸೈಟ್ ಆಗಿರುವ ಮ್ಯಾಜಿಕ್ಬ್ರಿಕ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಶೇಕಡ 83ರಷ್ಟು ಮಂದಿ ಮುದ್ರಾಂಕ ಶುಲ್ಕ ಕಡಿಮೆಯಾದಲ್ಲಿ, ಮನೆ ಖರೀದಿ ಮಾಡುವ ತಮ್ಮ ನಿರ್ಧಾರದ ಮೇಲೆ ಅದು ಪರಿಣಾಮ ಬೀರಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಶೇಕಡ 17ರಷ್ಟು ಮಂದಿ ಇದು ನಮ್ಮ ಖರೀದಿ ನಿರ್ಧಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಗ್ರಾಹಕರ ಭಾವನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಮ್ಯಾಜಿಕ್ಬ್ರಿಕ್ಸ್ ಸಿಇಓ ಸುಧೀರ್ ಪೈ, "ಮಹಾರಾಷ್ಟ್ರದಲ್ಲಿ ಮುದ್ರಾಂಕ ಶುಲ್ಕ ಕಡಿತಗೊಳಿಸಿದ್ದ ಸಂದರ್ಭದಲ್ಲಿ ಅಂದರೆ 2020 ಸೆಪ್ಟೆಂಬರ್ನಿಂದ 2021ರ ಮಾರ್ಚ್ ತಿಂಗಳ ಅವಧಿಯಲ್ಲಿ ಮನೆಗಳ ಮಾರಾಟದಲ್ಲಿ ಶೇಕಡ 114ರಷ್ಟು ಹೆಚ್ಚಳವಾಗಿರುವುದನ್ನು ನಾವು ಕಂಡಿದ್ದೇವೆ. ಆದರೆ ಮುದ್ರಾಂಕ ಶುಲ್ಕದ ಕಡಿತ ಅವಧಿ ಮುಗಿದ ಬಳಿಕ ಮಾರಾಟದಲ್ಲಿ ಇಳಿಕೆಯಾಗಿರುವುದನ್ನು ಕಾಣುತ್ತಿದ್ದೇವೆ.
ಗೃಹಸಾಲಕ್ಕೆ ನಿರಂತರವಾಗಿ ಬೇಡಿಕೆ:
ಮನೆ ಮತ್ತು ಗೃಹಸಾಲಕ್ಕೆ ನಿರಂತರವಾಗಿ ಬೇಡಿಕೆ ಹೆಚ್ಚುತ್ತಿರುವ ಪ್ರವೃತ್ತಿ ನಮ್ಮ ಪ್ಲಾಟ್ಫಾರಂನಲ್ಲಿ ಕಂಡುಬಂದಿದ್ದರೆ ಈ ಇಳಿಕೆ ಪ್ರವೃತ್ತಿ ಇದಕ್ಕೆ ತದ್ವಿರುದ್ಧವಾದದ್ದು. ಕೆಲಸಕ್ಕಾಗಿ ಮನೆ ಎಂಬ ಪ್ರವೃತ್ತಿ ವಿಕಾಸಗೊಂಡು ಇದು ಹೊಸ ಸಹಜ ಸ್ಥಿತಿಯಾಗುತ್ತಿದ್ದು, ಜನರು ಹೆಚ್ಚುವರಿ ಕೊಠಡಿ ಇರುವ ದೊಡ್ಡ ಗಾತ್ರದ ಮನೆಗಳನ್ನು ಎದುರು ನೋಡುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರಗಳು, ಜನರ ಮೇಲಿನ ಹೊರೆ ಕಡಿಮೆ ಮಾಡಬಲ್ಲ ಮುದ್ರಾಂಕ ಶುಲ್ಕ ರಜಾ ಸೌಲಭ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕು" ಎಂದು ಹೇಳಿದರು.
ಕಳೆದ ವರ್ಷ ಮಹಾರಾಷ್ಟ್ರ ರಾಜ್ಯ ಸರ್ಕಾರ, ಮೊದಲ ಮಾರಾಟದ ವಹಿವಾಟುಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಆ ಬಳಿಕ ಎರಡು ಹಂತಗಳಲ್ಲಿ ಮುದ್ರಾಂಕ ಶುಲ್ಕವನ್ನು ಇಳಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಇದು ರಾಜ್ಯದಲ್ಲಿ ಆಸ್ತಿ ವಹಿವಾಟುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಿತ್ತು.ಹಲವು ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ಗುಂಪುಗಳು ಮುದ್ರಾಂಕ ಶುಲ್ಕ ರಿಯಾಯ್ತಿಗಾಗಿ ಪ್ರತಿಪಾದನೆ ಮಾಡುತ್ತಿವೆ ಹಾಗೂ ಹಲವು ರಾಜ್ಯಗಳು ಮಹಾರಾಷ್ಟ್ರ ಮಾದರಿಯಲ್ಲಿ ಮುದ್ರಾಂಕ ಶುಲ್ಕವನ್ನು ಕಡಿತಗೊಳಿಸುವ ನಿರೀಕ್ಷೆ ಇದೆ.
ರಿಯಲ್ ಎಸ್ಟೇಟ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 3 ಲಕ್ಷದಿಂದ 45 ಲಕ್ಷ ರೂಪಾಯಿ ಮೌಲ್ಯದವರೆಗಿನ ಆಸ್ತಿಗಳ ಮುದ್ರಾಂಕ ಶುಲ್ಕವನ್ನು 5%ದಿಂದ 3%ಗೆ ಇಳಿಸಿತ್ತು. ಆ ಬಳಿಕ ದೆಹಲಿ ಸರ್ಕಾರ ವೃತ್ತ ದರವನ್ನು 20% ಇಳಿಕೆ ಮಾಡಿ ಹಣಕಾಸು ಹೊರೆ ಕಡಿಮೆ ಮಾಡಲು ನೆರವಾಯಿತು. ಇವೆಲ್ಲದಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳು ಹಲವು ಸಂವಾದಗಳಲ್ಲಿ, ರಿಯಲ್ ಎಸ್ಟೇಟ್ ಭಾವನೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮುದ್ರಾಂಕ ಶುಲ್ಕವನ್ನು ಇಳಿಕೆ ಮಾಡಬೇಕು ಹಾಗೂ ಈ ಮೂಲಕ ತಮ್ಮ ರಾಜ್ಯಗಳಲ್ಲಿ ರಿಯಾಲ್ಟಿ ಮಾರಾಟವನ್ನು ಹೆಚ್ಚಿಸಬೇಕು ಎಂದು ಸಲಹೆ ಮಾಡಿದ್ದಾರೆ.