ಔಷಧಗಳಿಗೆ ಕೊರತೆ ಬರುವ ದಿನ ದೂರ ಇಲ್ಲ, ಏಕೆ ಮತ್ತು ಹೇಗೆ?
ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದು ಹಾಗೂ ಅಂತರರಾಜ್ಯ ಗಡಿಯಲ್ಲಿ ತಡೆಯೊಡ್ಡಿರುವುದರಿಂದ ಭಾರತದ ಫಾರ್ಮಾಸ್ಯುಟಿಕಲ್ ವಲಯದ ಮೇಲೆ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ಮಾಡಿಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ, ಆ ವಿಭಾಗದ ಅಡಿಯಲ್ಲೇ ಫಾರ್ಮಾಸ್ಯುಟಿಕಲ್ ಉತ್ಪನ್ನಗಳು ಬಂದರೂ ಸಮಸ್ಯೆ ಆಗುತ್ತಿರುವುದು ಹೌದು.
ಈಗಿನ ಲಾಕ್ ಡೌನ್ ನಿಂದ ಹಲವು ರಾಜ್ಯಗಳಲ್ಲಿ ಕರ್ಫ್ಯೂ ಇದೆ. ಇದರಿಂದ ಔಷಧ ಪೂರೈಕೆ ಸರಪಳಿಯೇ ತುಂಡಾಗಿದೆ. ಪ್ಯಾಕೇಜಿಂಗ್ ವಸ್ತುಗಳಿಗೆ ಸಮಸ್ಯೆ ಆಗಿರುವುದರಿಂದ ಹಾಗೂ ಪ್ರಿಂಟರ್ಸ್ ಗಳು ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಉತ್ಪಾದನಾ ಚಟುವಟಿಕೆ ನಿಲ್ಲಿಸುವುದು ಅನಿವಾರ್ಯವಾಗಿದೆ ಎಂದು ಫಾರ್ಮಾ ಘಟಕಗಳ ಮಾಲೀಕರು ತಿಳಿಸಿದ್ದಾರೆ.
ಪೊಲೀಸರಿಗೆ ಹೆದರುತ್ತಿರುವ ಕಾರ್ಮಿಕರು
ಚಂಡೀಗಢ ಮೂಲದ ಉದ್ಯಮಿಯೊಬ್ಬರು ಮಾತನಾಡಿ, ಕಾರ್ಖಾನೆ ಕಾರ್ಮಿಕರಲ್ಲಿ ಬಹುತೇಕರು ಮಹಿಳೆಯರು. ಪೊಲೀಸರ ಭಯದಿಂದ ಅವರು ಕೆಲಸಕ್ಕೆ ಬರುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ಪೊಲೀಸರು ಶ್ರಮಿಸುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ನಕಾರಾತ್ಮಕವಾಗಿ ಬಿಂಬಿತಲಾಗಿದೆ ಎಂದಿದ್ದಾರೆ. "ನಮ್ಮ ಅರ್ಧದಷ್ಟು ಕಾರ್ಮಿಕರು ಮಹಿಳೆಯರು. ಸರ್ಕಾರಿ ತಡೆಗಳನ್ನೆಲ್ಲ ದಾಟಿ ಅವರು ಕೆಲಸಕ್ಕೆ ಬರಬೇಕು. ನಮ್ಮ ಕಾರ್ಖಾನೆಗಳು ಚಂಡೀಗಢ, ಮೊಹಾಲಿ ಮತ್ತು ಪಂಚಕುಲದಲ್ಲಿ ಇವೆ. ಕಾರ್ಮಿಕರು ಪಂಜಾಬ್, ಚಂಡೀಗಢ ಹಾಗೂ ಹರ್ಯಾಣದಿಂದ ಬರಬೇಕು. ಸಾರ್ವಜನಿಕ ಸಾರಿಗೆ ಇಲ್ಲ. ಪೊಲೀಸರ ಕ್ರಮಕ್ಕೆ ಹೆದರಿ ಕೆಲಸಕ್ಕೆ ಬರುತ್ತಿಲ್ಲ" ಎಂದು ತಿಳಿಸಿದ್ದಾರೆ.
ಮೆಡಿಕಲ್ ಶಾಪ್ಗಳಲ್ಲಿ ಔಷಧಿಗಳ ಮೇಲಿನ ಲಾಭ ಎಷ್ಟು? ಮಾರ್ಜಿನ್ ಎಷ್ಟಿರುತ್ತೆ?
ವಿಶೇಷ ಅನುಮತಿ ಪಡೆಯಬೇಕು
ಔಷಧ ಉತ್ಪಾದನೆ ಎಂಬುದು ಅಗತ್ಯ. ಆದರೆ ಯಾವುದೇ ಕೈಗಾರಿಕೆ ಘಟಕ ನಡೆಸುವುದಕ್ಕೆ ಆಡಳಿತದ ಅನುಮತಿ ಪಡೆಯಬೇಕು. ಲಾಕ್ ಡೌನ್ ಅವಧಿಯಲ್ಲಿ ಕೆಲಸ ನಿರ್ವಹಿಸಲು ವಿಶೇಷ ಅನುಮತಿ ಪಡೆಯಬೇಕು. ಈ ಕಾರಣಕ್ಕೆ ಹಲವು ಫಾರ್ಮಾ ಘಟಕಗಳನ್ನು ಅನಿವಾರ್ಯವಾಗಿ ಸ್ಥಗಿತ ಮಾಡಬೇಕಿದೆ. "ಆಡಳಿತದಿಂದ ಅನುಮತಿ ಪಡೆಯುವುದು ಸಲೀಸು. ಆದರೆ ಅದಕ್ಕಾಗಿ ಕೆಲವು ಮಾರ್ಗ ಇವೆ. ಅದರ ಸಲುವಾಗಿ ಬಹಳ ಸಮಯವನ್ನು ಕಾಗದ ಪತ್ರಗಳನ್ನು ಒಂದೊಂದು ಹಂತಕ್ಕೆ ಮುಂದಕ್ಕೆ ಒಯ್ಯಲು ಶ್ರಮಿಸಬೇಕು" ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ.
ಪ್ಯಾಕೇಜಿಂಗ್ ವಸ್ತುಗಳು ಸಿಗುತ್ತಿಲ್ಲ
ಈ ಮಧ್ಯೆ ಸರಕು ಸಾಗಾಟ ಸೇವೆಗಳನ್ನು ಅಮಾನತು ಮಾಡಿರುವುದರಿಂದ ಉತ್ಪನ್ನಗಳು ಗೋದಾಮಿನಲ್ಲಿ ಹಾಗೇ ಉಳಿದಿವೆ. ಟ್ರಕ್ ಚಾಲಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಸರಕು ಸ್ವೀಕರಿಸುತ್ತಲೇ ಇಲ್ಲ. ಇದರ ಜತೆಗೆ ಪ್ಯಾಕೇಜಿಂಗ್ ವಸ್ತುಗಳು ಸಹ ದೊರೆಯುತ್ತಿಲ್ಲ. "ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧವನ್ನು ಅಗತ್ಯ ವಸ್ತು ಎಂದು ಘೋಷಿಸಿದ್ದಾರೆ. ಕಾರ್ಖಾನೆ ನಡೆಸಲು ಸಹ ಅನುಮತಿ ಇದೆ. ಆದರೆ ಸಾಗಣೆಯದ್ದೇ ಅತಿ ದೊಡ್ಡ ಸಮಸ್ಯೆ. ಔಷಧಗಳ ಪ್ಯಾಕೇಜಿಂಗ್ ಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿದ್ದ ಘಟಕಗಳು ಬಂದ್ ಆಗಿರುವುದರಿಂದ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ" ಎನ್ನುತ್ತಾರೆ ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಅನುಭವಿ ಅಧಿಕಾರಿ.
ದಕ್ಷಿಣದ ರಾಜ್ಯಗಳಿಗೆ ಬರಲು ಹೆದರುವ ಚಾಲಕರು
ಕೆಲವು ಕಡೆ ಪ್ಯಾಕೇಜಿಂಗ್ ವಸ್ತುಗಳನ್ನು ಹೇಗೋ ನಿರ್ವಹಿಸುತ್ತಿದ್ದಾರೆ. ಆದರೆ ಸರಕನ್ನು ದೂರದ ಪ್ರದೇಶಗಳಿಗೆ ಒಯ್ಯುವುದು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ದೇಶದ ಹಲವೆಡೆ ಔಷಧದ ಕೊರತೆ ಕಾಣಿಸಿಕೊಂಡಿದೆ. ದಕ್ಷಿಣದ ರಾಜ್ಯಗಳಿಗೆ ಸರಕನ್ನು ಕಳುಹಿಸುವುದು ಅತಿ ದೊಡ್ಡ ಸಮಸ್ಯೆಯಾಗಿದೆ. ಕೇರಳ, ಮುಂಬೈ, ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಲಕ್ಕೆ ಸರಕು ಸಾಗಣೆ ಮಾಡುವುದಕ್ಕೆ ಚಾಲಕರು ಹೆದರುತ್ತಿದ್ದಾರೆ. ರಸ್ತೆ ಬದಿಯ ಡಾಬಾಗಳು ಮುಚ್ಚಿರುವುದರಿಂದ ಊಟ- ತಿಂಡಿಗೆ ಸಮಸ್ಯೆಯಾಗುತ್ತದೆ. ದೂರ ಪ್ರಯಾಣ ಬಹಳ ಕಷ್ಟ ಎಂದು ಹೆದರುತ್ತಿದ್ದಾರೆ. ಆದ್ದರಿಂದ ಎಲ್ಲಿಗೂ ತೆರಳುತ್ತಿಲ್ಲ. ಸರಕು ಸಾಗಾಟ ವ್ಯವಸ್ಥೆ ಸುಗಮಗೊಳ್ಳಲು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ದೇಶದಲ್ಲಿ ಔಷಧ ಕೊರತೆ ಕಾಣಿಸಿಕೊಳ್ಳಲಿದೆ. ಅದು ಕೂಡ ತೀರಾ ದೊಡ್ಡ ಮಟ್ಟದಲ್ಲೇ ಕಾಣಿಸಿಕೊಳ್ಳಲಿದೆ.