''ಇಎಂಐ ಕಟ್ಟಿದ ಮೇಲೆ ಶೇ 70ರಷ್ಟು ಮಂದಿ ಕಾರ್ಮಿಕರ ಹಣವೇ ಉಳಿಯುತ್ತಿರಲಿಲ್ಲ''
ಮೇ ತಿಂಗಳಿಂದ ಈಚೆಗೆ ಭಾರತದಲ್ಲಿ ಕೊರೊನಾ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಆಗುತ್ತಾ ಬಂದಿದೆ. ಆದರೆ ಸಾರಿಗೆ ವಲಯ ಹಾಗೂ ದಿನಗೂಲಿ ಕಾರ್ಮಿಕರ ಪೈಕಿ ಶೇಕಡಾ 70ರಷ್ಟು ಮಂದಿ ನಿವ್ವಳ ಆದಾಯ, ಅಂದರೆ ನೆಟ್ ಇನ್ ಕಮ್ ಶೂನ್ಯ. ಇನ್ನು 20ರಷ್ಟು ಮಂದಿ 500ರಿಂದ 1500 ರುಪಾಯಿಯನ್ನು ಒಂದು ವಾರಕ್ಕೆ ದುಡಿಯುತ್ತಿದ್ದಾರೆ ಎಂದು ಇಂಡಿಯನ್ ಫೆಡರೇಷನ್ ಆಪ್ ಬೇಸ್ಡ್ ಟ್ರಾನ್ಸ್ ಪೋರ್ಟ್ ವರ್ಕರ್ಸ್ (IFAT) ಬಹಿರಂಗ ಮಾಡಿದೆ.
ಅಬ್ಬರಿಸಿ ಬಂದ ಕೊರೊನಾ; ತಂದಿತು ಗೂಗಲ್ ಪೇ, ಪೇಟಿಎಂ, ಫೋನ್ ಪೇ ಹವಾನ
ಇಎಂಐ, ತೈಲದ ವೆಚ್ಚ ಹಾಗೂ ವಾರದ ಕಮಿಷನ್ ಕೂಡ ಪಾವತಿಸಿದ ನಂತರ ಚಾಲಕರು ಹಾಗೂ ಡೆಲಿವರಿ ಕಾರ್ಮಿಕರಿಗೆ ಉಳಿಯುವ ಮೊತ್ತ ಇದು. ಸಾರಿಗೆ ಕಾರ್ಮಿಕರು ಅಂದರೆ ಓಲಾ, ಉಬರ್ ಚಾಲಕರು. ಇನ್ನು ಡೆಲಿವರಿ ಕಾರ್ಮಿಕರು ಅಂದರೆ ಸ್ವಿಗ್ಗಿ, ಝೊಮ್ಯಾಟೋ, ಡುಂಜೋ ಮೊದಲಾದವುಗಳಲ್ಲಿ ಕಾರ್ಯ ನಿರ್ವಹಿಸುವವರು.
ಶೇಕಡಾ 85ರಷ್ಟು ಮಂದಿಗೆ ಹಣಕಾಸಿನ ನೆರವು ಸಿಕ್ಕಿಲ್ಲ
ಸಮೀಕ್ಷೆಯಿಂದ ಮತ್ತೂ ಕುತೂಹಲಕರ ಹಾಗೂ ಅಮಾನವೀಯ ಎನಿಸುವ ಸಂಗತಿ ಬಯಲಾಗಿದೆ. ಅದರ ಪ್ರಕಾರ, ಕೊರೊನಾ ಹೊಡೆತಕ್ಕೆ ಸಿಲುಕಿ ಯಾವುದೇ ಆದಾಯ ಇಲ್ಲದೇ ನರಳಿದ ಶೇಕಡಾ 90% ಸಾರಿಗೆ ಹಾಗೂ ಡೆಲಿವರಿ ಸಿಬ್ಬಂದಿಗೆ ಯಾವುದೇ ದಿನಸಿ ಅಥವಾ ಆಹಾರ ನೆರವು ಸಿಕ್ಕಿಲ್ಲವಂತೆ. ಇನ್ನು ಶೇಕಡಾ 85ರಷ್ಟು ಮಂದಿಗೆ ಹಣಕಾಸಿನ ನೆರವು ಸಿಕ್ಕಿಲ್ಲವಂತೆ. ಇದು ಯಾರಿಂದ ಸಿಗಬೇಕಿತ್ತು? ಅವರು ಕೆಲಸ ಮಾಡುವ ಕಂಪೆನಿ ಮತ್ತು ಸರ್ಕಾರದಿಂದ ಯಾವ ನೆರವೂ ಸಿಕ್ಕಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಈ ಚಾಲಕರಿಗೆ ಲಾಕ್ ಡೌನ್ ಅವಧಿಯಲ್ಲಿ ಯಾವ ಆದಾಯವೂ ಇರಲಿಲ್ಲ. ಏಪ್ರಿಲ್ 15, 2020ರಿಂದ ಈಚೆಗೆ ಈ ಕಾರ್ಮಿಕರಿಗೆ ಸರಾಸರಿ ವಾರಕ್ಕೆ 2500 ರುಪಾಯಿಗಿಂತ ಕಡಿಮೆ ಆದಾಯ ಬಂದಿದೆ. ಶೇಕಡಾ 57ರಷ್ಟು ಮಂದಿ ಹೇಳಿರುವ ಪ್ರಕಾರ, ವಾರಕ್ಕೆ 0ಯಿಂದ 2250 ರುಪಾಯಿ ತನಕ ಸಂಪಾದಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಸರಾಸರಿ ಇಎಂಐ 10ರಿಂದ 20 ಸಾವಿರ ರುಪಾಯಿ
ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗುವಂತೆ ಮಾಡಿದ್ದು ಇಎಂಐಗಳು. ಇವರಿಗೆ ಸರಾಸರಿ ಇಎಂಐ 10ರಿಂದ 20 ಸಾವಿರ ರುಪಾಯಿ ತಮ್ಮ ವಾಹನಗಳಿಗೆ ಕಟ್ಟಬೇಕಿತ್ತು. ಈ ಸಮೀಕ್ಷೆಯನ್ನು ಈ ವರ್ಷದ ಮಾರ್ಚ್ ಹಾಗೂ ಜೂನ್ ಮಧ್ಯೆ ನಡೆಸಲಾಗಿದೆ. ಇಂಟರ್ ನ್ಯಾಷನಲ್ ಟ್ರಾನ್ಸ್ ಪೋರ್ಟ್ ವರ್ಕರ್ಸ್ ಫೆಡರೇಷನ್ (ಐಟಿಎಫ್) ಏಷ್ಯಾ ಪೆಸಿಫಿಕ್ ಹಾಗೂ ಸೆಂಟರ್ ಫಾರ್ ಇಂಟರ್ ನೆಟ್ ಅಂಡ್ ಸೊಸೈಟಿ, ಇಂಡಿಯಾ (ಸಿಐಎಸ್) ಸಹಯೋಗದಲ್ಲಿ IFAT ಸಮೀಕ್ಷೆ ನಡೆಸಿದೆ. ಆದಾಯ ಮಟ್ಟ, ಸಾಲ, ಸರ್ಕಾರ ಹಾಗೂ ಕಂಪೆನಿಗಳ ನೆರವು ಹಾಗೂ ಆರ್ಥಿಕ ಚಟುವಟಿಕೆಗಳು ಶುರುವಾದ ಮೇಲೆ ಅವರ ಆದಾಯದ ಮಟ್ಟವನ್ನು ಸಮೀಕ್ಷೆಯಲ್ಲಿ ಗಮನಿಸಲಾಗಿದೆ. ಕಂಪೆನಿಗಳು ಘೋಷಿಸಿದ ಆರ್ಥಿಕ ನೆರವು, ಗ್ರಾಹಕರಿಂದ ಸಂಗ್ರಹಿಸಿದ ದೇಣಿಗೆ ಮೊತ್ತ.. ಇವುಗಳ ವಿತರಣೆ ಬಗ್ಗೆ ಪಾರದರ್ಶಕತೆ ಇಲ್ಲ ಎಂದು ತಿಳಿಸಲಾಗಿದೆ.
ಬಡ್ಡಿಯ ಮೇಲೆ ಬಡ್ಡಿ ಮನ್ನಾ ಮಾಡಬೇಕು
ಕಾರ್ಮಿಕರ ಅತಿಮುಖ್ಯ ಸಮಸ್ಯೆಗಳೆಂದರೆ, ದಿನಸಿ ಮತ್ತು ಬಾಡಿಗೆ, ಇಎಂಐ ಮರುಪಾವತಿ ಎಂದು ಗೊತ್ತಾಗಿದೆ. ಅದರಲ್ಲೂ ಬಡ್ಡಿಯ ಮೇಲಿನ ಬಡ್ಡಿ ಕಟ್ಟುವುದು ಹೇಗೆ ಎಂಬುದೇ ಹಲವರ ಆತಂಕ. ಕಂಪೆನಿಗಳಿಂದ ಆಹಾರ ವಿತರಣೆ ಮಾಡಿದ್ದರಲ್ಲಿ ಅರ್ಹತಾ ಮಾನದಂಡಗಳಲ್ಲೇ ಸಮಸ್ಯೆ ಇತ್ತು ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ. ಓಲಾದಿಂದ ಬಾಡಿಗೆ ಹಣವನ್ನು ಮನ್ನಾ ಮಾಡಿದ್ದನ್ನು ಚಾಲಕರು ಸ್ವಾಗತಿಸಿದ್ದಾರೆ. ಆದರೆ ತಮ್ಮ ವಾಹನಗಳನ್ನು ಹಿಂತಿರುಗಿಸುವಂತೆ ಕೇಳಿದ್ದು, ನಿರ್ಬಂಧ ತೆರವಾದ ಮೇಲೆ ಹೇಗೆ ಮರಳಿ ಪಡೆಯುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ. ಯಾರಿಗೆ ಬಾಡಿಗೆ ಕಟ್ಟಲು ಸಾಧ್ಯವಿರಲಿಲ್ಲವೋ ಅಂಥವರಿಂದ ಓಲಾ ಕಂಪೆನಿಯು ವಾಹನವನ್ನು ಮರಳಿ ಪಡೆದಿತ್ತು. ಮತ್ತೆ ಬೇಡಿಕೆ ಕುದುರಿದ ಮೇಲೆ ವಾಹನ ಹಿಂತಿರುಗಿಸುವುದಾಗಿ ಹೇಳಿದೆ. ಹದಿನೈದು ಸಾವಿರದೊಳಗಿನ ಸಂಬಳ ಪಡೆಯುವ ರೈಡರ್ ಹಾಗೂ ಡ್ರೈವರ್ ಗಳಿಗೆ ದಿನಸಿ ಮತ್ತಿತರ ಪದಾರ್ಥಗಳಿಗೆ ಇನ್ನು ಝೊಮ್ಯಾಟೋದಿಂದ ಹಣವನ್ನು ಮರುಪಾವತಿಸುವ ಬಗ್ಗೆ ಘೋಷಿಸಿದೆ. ತಾವು ಕಳೆದುಕೊಂಡ ಆದಾಯ, ಕಮಿಷನ್ ಮರಳಿ ಪಡೆಯಲು ಅವಕಾಶ ಮಾಡಿಕೊಡಬೇಕು. ಇಎಂಐಗೆ ಬಡ್ಡಿಯ ಮೇಲೆ ಬಡ್ಡಿ ಬಿದ್ದಿರುವುದನ್ನು ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ.