ಬೆಂಗಳೂರು, ನವೆಂಬರ್ 24: ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನ ಮೊದಲ ಎಟಿಎಂ ಕೇಂದ್ರ ಇಂದು ಉದ್ಘಾಟನೆಯಾಗಿದೆ. ಉದ್ಘಾಟನೆ ನಂತರ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಡಾ. ಪಿ ಎಲ್ ವೆಂಕಟರಾಮ ರೆಡ್ಡಿ, ''ನಮ್ಮ ಗ್ರಾಹಕರಿಗೆ ಅತಿ ಉತ್ತಮ ಹಾಗೂ ಹೆಚ್ಚು ಸೇವೆಗಳನ್ನು ನೀಡುವ ಗುರಿಯನ್ನು ಸ್ವರ್ಣ ಭಾರತಿ ಸಹಕಾರ ಬ್ಯಾಂಕು ಹೊಂದಿದೆ," ಎಂದು ತಿಳಿಸಿದರು.
ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ಮೊದಲ ಎಟಿಎಂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸ್ಥಾಪನಾ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಟಿ ಎನ್ ಚೌಡಪ್ಪ, ಇಂದು ನಮ್ಮ ಸಹಕಾರಿ ಬ್ಯಾಂಕಿನ ಮೊದಲ ಎಟಿಎಂಗೆ ಚಾಲನೆ ನೀಡಲಾಗಿದೆ. ಇತರೆ ಸಹಕಾರ ಬ್ಯಾಂಕುಗಳಿಗಿಂತಲೂ ಅತಿ ಹೆಚ್ಚು ಹಾಗೂ ಅತ್ಯುತ್ತಮ ಸೇವೆಗಳನ್ನು ನಮ್ಮ ಗ್ರಾಹಕರುಗಳಿಗೆ ನೀಡುವ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದೇವೆ. ಇದರ ಮೊದಲ ಹೆಜ್ಜೆಯಾಗಿ ಎಟಿಎಂ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದರು.
ಸ್ವರ್ಣಭಾರತಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಪಿ ಎಲ್ ವೆಂಕಟರಾಮ ರೆಡ್ಡಿ ಅವರು ಮಾತನಾಡಿ, 'ಠೇವಣಿಗಳಿಗೆ ಹೆಚ್ಚು ಬಡ್ಡಿಯನ್ನು ನೀಡುವ ಮೂಲಕ ಗ್ರಾಹಕ ಸ್ನೇಹಿ ವಾತಾವರಣವನ್ನು ನಾವುಗಳು ನೀಡುತ್ತಿದ್ದೇವೆ. ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ ನಾವುಗಳ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಹಕ ಸ್ನೇಹೀ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಾಗಿ,'' ತಿಳಿಸಿದರು.

ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ಬನಶಂಕರಿ ಶಾಖೆಯಲ್ಲಿ ಇಂದು ಮೊದಲ ಏಟಿಎಂ ಕೇಂದ್ರವನ್ನು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಟಿ ಎನ್ ಚೌಡಪ್ಪ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಪಿ.ಎಲ್ ವೆಂಕಟರಾಮ ರೆಡ್ಡಿ, ಸಿಇಒ ಕೃಷ್ಣಮೂರ್ತಿ, ನಿರ್ದೇಶಕರುಗಳಾದ ಕೆ. ನರಸಿಂಹ ಮೂರ್ತಿ, ಟಿ ಸತೀಶ್ ಬಾಬು, ಆರ್ ಹರೀಶ್, ಶ್ರೀಮತಿ ಡಾ. ಲತಾ ನಾರಾಯಣ್, ಕೆ ನಾರಾಯಣಸ್ವಾಮಿ, ಬಿ ನಾಗರಾಜ, ಜಿ.ಎಂ ರವೀಂದ್ರ, ಡಿ.ಬಿ ಶರತ್ ಕುಮಾರ್, ಸಿ ವೆಂಕಟೇಶ್, ಎನ್. ನಾಗರಾಜ್, ಜೆ.ಕೆ ರಾಮಕೃಷ್ಣ ಉಪಸ್ಥಿತರಿದ್ದರು.
ಬ್ಯಾಂಕಿನ ಅಧ್ಯಕ್ಷರು ಮಾತು ಮುಂದುವರೆಸಿ, ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಸ್ತುತ 8000 ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬ್ಯಾಂಕ್ ಬೆಂಗಳೂರು ನಗರದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆ ಹೊಂದಿರುವುದು ನಮಗೆ ಸಂತಸ ತಂದಿದೆ ಎಂದರು.

ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಇದಕ್ಕೆ ಬ್ಯಾಂಕಿನ ಎಲ್ಲಾ ಸಿಬ್ಬಂದಿ ಮತ್ತು ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ನಿಸ್ವಾರ್ಥ ಸೇವೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಬ್ಯಾಂಕನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇವೆ ಎಂದು ಡಾ. ಪಿ ಎಲ್ ವೆಂಕಟರಾಮ ರೆಡ್ಡಿ ತಿಳಿಸಿದರು.


Click it and Unblock the Notifications