ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ಗೆ ಮರು ನೇಮಕ ಮಾಡುವಂತೆ ನ್ಯಾಷನಲ್ ಕಂಪೆನಿ ಅಪಿಲೇಟ್ ಟ್ರಿಬ್ಯುನಲ್ (ಎನ್ ಸಿಎಲ್ ಎಟಿ) ಕಳೆದ ಡಿಸೆಂಬರ್ ನಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ, ಗುರುವಾರದಂದು ಟಾಟಾ ಸನ್ಸ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಇಂಡಸ್ಟ್ರೀಸ್ ಮತ್ತು ಟಾಟಾ ಟೆಲಿಸರ್ವೀಸಸ್ (ಮಹಾರಾಷ್ಟ್ರ) ಮತ್ತು ಟಾಟಾ ಸನ್ಸ್ ಗೆ ಮಿಸ್ತ್ರಿ ಅವರನ್ನು ನಿರ್ದೇಶಕರಾಗಿ ಮರು ನೇಮಕ ಮಾಡಬೇಕೆಂಬ ಎನ್ ಸಿಎಲ್ ಎಟಿ ಆದೇಶಕ್ಕೆ ಟಾಟಾ ಸನ್ಸ್ ನಿಂದ ತಡೆ ಕೋರಲಾಗಿತ್ತು. ಜನವರಿ ಆರನೇ ತಾರೀಕು ಅರ್ಜಿಯ ಅಹವಾಲು ಆಲಿಸಲಾಗುತ್ತದೆ. ಚಳಿಗಾಲದ ರಜೆ ಮುಗಿದ ಮೇಲೆ ಸುಪ್ರೀಂ ಕೋರ್ಟ್ ಮತ್ತೆ ಕಾರ್ಯಾರಂಭ ಮಾಡಿದ ಮೇಲೆ ಈ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಕಳೆದ ತಿಂಗಳು ಇಬ್ಬರು ನ್ಯಾಯಾಧೀಶರ ಒಳಗೊಂಡ ಸಮಿತಿಯ ಎನ್ ಸಿಎಲ್ ಎಟಿಯಿಂದ ಮಿಸ್ತ್ರಿ ಮರು ನೇಮಕ ಮಾಡುವಂತೆ ಹಾಗೂ ಎನ್. ಚಂದ್ರಶೇಖರನ್ ಅವರ ನೇಮಕ ಕಾನೂನುಬಾಹಿರ ಎಂಬ ತೀರ್ಪು ಬಂದಿತ್ತು.

ಮಿಸ್ತ್ರಿ ಅವರು ಶಾಪೂರ್ ಜೀ ಪಲೋಂಜಿ ಕುಟುಂಬಕ್ಕೆ ಸೇರಿದವರು. ಟಾಟಾ ಸನ್ಸ್ ನಲ್ಲಿ ಆ ಕುಟುಂಬಕ್ಕೆ ಕಡಿಮೆ ಪ್ರಮಾಣದ ಷೇರು ಇದೆ. ಮಿಸ್ತ್ರಿ ಅವರನ್ನು ಮೂರು ವರ್ಷದ ಹಿಂದೆ ಹುದ್ದೆಯಿಂದ ತೆಗೆದ ನಂತರ ಟಾಟಾ ಸನ್ಸ್- ರತನ್ ಟಾಟಾ ಮತ್ತು ಪಲೋಂಜಿ ಕುಟುಂಬದ ಮಧ್ಯೆ ಕಾನೂನು ಸಮರ ನಡೆಯುತ್ತಿದೆ.
ಟಾಟಾ ಸನ್ಸ್ ವಿರುದ್ಧ ಮಿಸ್ತ್ರಿ ಅವರು ಕೆಲ ಆರೋಪ ಮಾಡಿದ್ದರು. ತಮ್ಮನ್ನು ಹುದ್ದೆಯಿಂದ ತೆಗೆದದ್ದು ಸಹ ಕಂಪೆನಿ ಕಾಯ್ದೆ ಪ್ರಕಾರ ಇಲ್ಲ ಎಂದಿದ್ದರು. ಆದರೆ ಟಾಟಾ ಸನ್ಸ್ ಈ ಆರೋಪವನ್ನು ನಿರಾಕರಿಸಿತ್ತು.
ಇನ್ನು ಎನ್ ಸಿಎಲ್ ಎಟಿ ಆದೇಶ ನೀಡಿದ ನಂತರ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ನಾಲ್ಕು ವಾರಗಳ ಕಾಲ ಅವಕಾಶ ನೀಡಿತ್ತು. ಜನವರಿ ಒಂಬತ್ತನೇ ತಾರೀಕು ಟಿಸಿಎಸ್ ಆಡಳಿತ ಮಂಡಳಿ ಸಭೆ ಇದ್ದು, ಇದೀಗ ಎನ್ ಸಿಎಲ್ ಎಟಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಅಲ್ಲಿ ಮೂರನೇ ತ್ರೈಮಾಸಿಕದ ಗಳಿಕೆ ಜತೆಗೆ ಮಿಸ್ತ್ರಿ ಅವರನ್ನು ನಿರ್ದೇಶಕರಾಗಿ ಮರುನೇಮಕ ಮಾಡಿರುವ ಬಗ್ಗೆಯೂ ಚರ್ಚಿಸಲಾಗುವುದು.


Click it and Unblock the Notifications