ಕೋಟಿಗಟ್ಟಲೆ ವೇತನ ಪಡೆಯುತ್ತಿದ್ದ ಈ ಸಿಇಒ ಇನ್ನೊಂದು ವರ್ಷದ ಸಂಬಳ ಕೇವಲ 1 ರು.
ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಂಸ್ಥೆಗಳ ನೆರವಿಗೆ ಈಗ ಆಡಳಿತ ಮಂಡಳಿಯಲ್ಲಿನ ಮೇಲ್ ಸ್ತರದ ಅಧಿಕಾರಿಗಳು ಮುಂದಾಗಿದ್ದಾರೆ. ಕೊಟಕ್ ಮಹೀಂದ್ರಾ ಗ್ರೂಪ್ ನ ಲೀಡರ್ ಷಿಪ್ ತಂಡವು ಸ್ವಯಂಪ್ರೇರಣೆಯಿಂದ 15% ವೇತನ ಕಡಿತಕ್ಕೆ ಒಪ್ಪಿಗೆ ಸೂಚಿಸಿದೆ. 2020-21ರ ಆರ್ಥಿಕ ವರ್ಷಕ್ಕೆ ಇದು ಅನ್ವಯ ಆಗುತ್ತದೆ ಎಂದು ಫೈನಾನ್ಷಿಯಲ್ ಸರ್ವೀಸಸ್ ಗ್ರೂಪ್ ತಿಳಿಸಿದೆ.
ಇನ್ನು ಈ ಗ್ರೂಪ್ ನ ಪ್ರವರ್ತಕ ಹಾಗೂ ಸಿಇಒ ಉದಯ್ ಕೊಟಕ್ ವೈಯಕ್ತಿಕವಾಗಿ ತಮ್ಮ ವೇತನವನ್ನು ಬಿಟ್ಟುಕೊಡುವುದಾಗಿ ಮತ್ತು ಇಡೀ ವರ್ಷಕ್ಕೆ 1 ರುಪಾಯಿ ಮಾತ್ರ ಪಡೆಯುವುದಾಗಿ ತಿಳಿಸಿದ್ದಾರೆ ಎಂದು ಬ್ಯಾಂಕ್ ಹೇಳಿದೆ.
ಶತಮಾನದಲ್ಲೇ ಕಂಡರಿಯದ ಆರ್ಥಿಕ ಬಿಕ್ಕಟ್ಟಲ್ಲಿ ಜಗತ್ತು, ಕೊರೊನಾ ಆಪತ್ತು
"ನಾವೀಗ ಜೀವ ಹಾಗೂ ಜೀವನಗಳನ್ನು ಉಳಿಸಬೇಕಾದ ನಿರ್ಣಾಯಕ ಹೋರಾಟದಲ್ಲಿ ಇದ್ದೇವೆ. ಆರ್ಥಿಕತೆಯ ಪುನಶ್ಚೇತನವು ಆರೋಗ್ಯಕರ ಮತ್ತು ಚೈತನ್ಯದಿಂದ ಕೂಡಿದ ಆರ್ಥಿಕ ವಲಯದ ಮೇಲೆ ಅವಲಂಬಿಸಿದೆ. ಸರ್ಕಾರ, ಖಾಸಗಿ ಸಂಸ್ಥೆಗಳು, ನಾಗರಿಕ ಸಮಾಜ ಹಾಗೂ ವೈಯಕ್ತಿಕವಾಗಿ ನಡೆಸುತ್ತಿರುವ ಕೈಂಕರ್ಯದಲ್ಲಿ ಭಾಗಿಯಾಗಲು ಬ್ಯಾಂಕ್ ಬದ್ಧವಾಗಿದೆ" ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ.
ಕೊಟಕ್ ಮಹೀಂದ್ರಾ ಬ್ಯಾಂಕ್ ನಿಂದ PM CARES ಫಂಡ್ ಗೆ 25 ಕೋಟಿ ರುಪಾಯಿ ದೇಣಿಗೆ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ 10 ಕೋಟಿ ನೀಡಿದ್ದು, ಕೊಟಕ್ ವೈಯಕ್ತಿಕವಾಗಿ PM- CARES ಫಂಡ್ ಗೆ 25 ಕೋಟಿ ರುಪಾಯಿ ನೀಡಿದ್ದಾರೆ.