ದೇಶದಲ್ಲಿನ ಬೇಡಿಕೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಂದೆ ಘೋಷಣೆ ಮಾಡುವ ಪ್ಯಾಕೇಜ್ ಮೊತ್ತ ಈ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ 1.70 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತದಾಗಿರುತ್ತದೆ. ಕಳೆದ ಬಾರಿ ಪ್ಯಾಕೇಜ್ ಘೋಷಿಸಿದಾಗ ಗಮನ ಇದ್ದದ್ದು ಬಡವರ ಆಹಾರ ಭದ್ರತೆ ಹಾಗೂ ಸಣ್ಣ ಮೊತ್ತವು ಅವರ ಬಳಿ ಇರಬೇಕು ಎಂಬುದರ ಕಡೆಗೆ. ಕೊರೊನಾ ವೈರಾಣು ವಿರುದ್ಧದ ಹೋರಾಟದ ಸಂದರ್ಭದಲ್ಲಿ ಇದು ಅಗತ್ಯ ಎಂದು ಕ್ರಮ ಕೈಗೊಳ್ಳಲಾಗಿತ್ತು.
ಕೇಂದ್ರ ಹಣಕಾಸು ಸಚಿವಾಲಯದಿಂದ ವಿವಿಧ ಆರ್ಥಿಕ ಸಚಿವಾಲಯದಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಇಂಥ ಕಷ್ಟದ ಸನ್ನಿವೇಶದಲ್ಲಿ ಆರ್ಥಿಕ ಉತ್ತೇಜನಕ್ಕಾಗಿ ಏನು ಮಾಡಬಹುದು ಎಂಬ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಂತಿಮ ರೂಪು-ರೇಷೆ ಸಿದ್ಧಗೊಳ್ಳಬೇಕಿದೆ.

ಭಾರತದ ಕಂಪೆನಿಗಳು, ಸಣ್ಣ- ಮಧ್ಯಮ ಕೈಗಾರಿಕೆಗಳು, ಪ್ರವಾಸೋದ್ಯಮ ಹಾಗೂ ವಿಮಾನ ಯಾನಕ್ಕೆ ಜೀವ ತುಂಬುವುದಕ್ಕೆ ಈ ಬಾರಿ ವಿವಿಧ ಆರ್ಥಿಕ ಉತ್ತೇಜನ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದೇ ವೇಳೆ ಬಂಡವಾಳ ಮಾರ್ಕೆಟ್ ಗೆ ಬಲ ತುಂಬಲು ಸರ್ಕಾರ ಪ್ರಯತ್ನಿಸಲಿದೆ ಎಂದು ತಿಳಿದುಬಂದಿದೆ.
ಎಲ್ ಟಿಸಿಜಿ ವಿಥ್ ಡ್ರಾಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕು, ಕಾರ್ಪೊರೇಟ್ ತೆರಿಗೆ ಪಾವತಿಯನ್ನು ಮುಂದಕ್ಕೆ ಹಾಕಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳು ಇದ್ದು, ಅವುಗಳ ಪೈಕಿ ಕೆಲವನ್ನು ಸರ್ಕಾರ ಒಪ್ಪಬಹುದು ಎಂಬ ನಿರೀಕ್ಷೆ ಇದೆ.


Click it and Unblock the Notifications