ರಿಕ್ಷಾ ಎಳೆಯುವ ಕಾರ್ಮಿಕನಿಗೆ 3 ಕೋಟಿ ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯ ನೋಟಿಸ್!
ಮಥುರಾ, ಅಕ್ಟೋಬರ್ 25: ಭಾರತದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಶ್ರೀಮಂತ ವಲಯದಲ್ಲಿ ಗುರುತಿಸಿಕೊಂಡವವರೇ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ಕಟ್ಟುವುದು ಅನುಮಾನ. ಪರಿಸ್ಥಿತಿ ಹೀಗಿರುವಾಗ ಹಸಿವಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ಆತ ದಿನನಿತ್ಯ ಆಟೋ ಎಳೆಯುವ ಕಾಯಕ ಮಾಡುವ ವ್ಯಕ್ತಿ. ಕೂಲಿ ಕೆಲಸದಲ್ಲಿ ಸಂಪಾದಿಸುವ 100 ರಿಂದ 200 ರೂಪಾಯಿ ಹಣದಲ್ಲೇ ಜೀವನದ ಬಂಡಿ ಎಳೆಯುತ್ತಿದ್ದ ಕುಟುಂಬವದು.
ಇಂಥ ಬಡ ಕುಟುಂಬ ಕಾರ್ಮಿಕನೊಬ್ಬನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ನೋಟಿಸ್ ಬಡಸಿಡಿಲು ಬಂದು ಅಪ್ಪಳಿಸಿದಂತೆ ಆಗಿದೆ. ಒಬ್ಬ ಆಟೋ ಎಳೆಯುವ ಕಾರ್ಮಿಕನಿಗೆ 3 ಕೋಟಿ ಆದಾಯ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿರುವ ಘಟನೆಯೊಂದು ಉತ್ತರ ಪ್ರದೇಶದ ಮಥುರಾದಲ್ಲಿ ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ 3 ಕೋಟಿ ರೂಪಾಯಿ ಪಾವತಿ ನೋಟಿಸ್ ಕಂಡು ಕಾರ್ಮಿಕ ಗಾಬರಿಗೊಂಡಿದ್ದಾನೆ. ಬಕಲ್ಪುರ್ ಪ್ರದೇಶದ ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಐಟಿ ಇಲಾಖೆ ನೀಡಿರುವ ನೋಟಿಸ್ ವಿರುದ್ಧ ಹೈವೇ ಪೊಲೀಸ್ ಠಾಣೆಯಲ್ಲಿ ವಂಚನೆಯ ದೂರು ನೀಡಿದ್ದಾರೆ.
ರಿಕ್ಷಾ ಎಳೆಯುವ ಕಾರ್ಮಿಕ ಪ್ರತಾಪ್ ಸಿಂಗ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ 3 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೀಡಲಾದ ನೋಟಿಸ್ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಈ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಹೈವೇ ಪೊಲೀಸ್ ಠಾಣೆಯ ಎಸ್ಎಚ್ಓ ಅನುಜ್ ಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ:
ಉತ್ತರ ಪ್ರದೇಶದಲ್ಲಿ 3 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದ ರಿಕ್ಷಾ ಎಳೆಯುವ ಕಾರ್ಮಿಕ ಪ್ರತಾಪ್ ಸಿಂಗ್ ಈ ಘಟನೆಯ ಕುರಿತು ವಿಡಿಯೋವೊಂದರಲ್ಲಿ ವಿವರಣೆ ನೀಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
"ಕಳೆದ ಮಾರ್ಚ್ 15 ರಂದು ತೇಜ್ ಪ್ರಕಾಶ್ ಉಪಾಧ್ಯಾಯ ಒಡೆತನದ ಬಕಲ್ಪುರದ ಜನ್ ಸುವಿಧಾ ಕೇಂದ್ರದಲ್ಲಿ ಪ್ಯಾನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದು, ಅದನ್ನು ಸಲ್ಲಿಸುವಂತೆ ಅವರ ಬ್ಯಾಂಕ್ ಕೇಳಿದೆ ಎಂದು ಅವರು ಹೇಳಿದರು. ತದನಂತರ ಅವರು ಬಕಲ್ಪುರದ ಸಂಜಯ್ ಸಿಂಗ್ ಎಂಬುವವರಿಂದ ಪ್ಯಾನ್ ಕಾರ್ಡ್ನ ಬಣ್ಣದ ಫೋಟೊಕಾಪಿಯನ್ನು ಪಡೆದರು. ತಾನು ಅನಕ್ಷರಸ್ಥನಾಗಿರುವುದರಿಂದ, ಮೂಲ ಪ್ಯಾನ್ ಕಾರ್ಡ್ ಮತ್ತು ಅದರ ಬಣ್ಣದ ಫೋಟೊಕಾಪಿ ಯಾವುದು ಎಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ," ಎಂದು ರಿಕ್ಷಾ ಎಳೆಯುವ ಕಾರ್ಮಿಕ ಪ್ರತಾಪ್ ಸಿಂಗ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಪ್ಯಾನ್ ಕಾರ್ಡ್ ನಿರೀಕ್ಷೆಯಲ್ಲಿದ್ದ ಕಾರ್ಮಿಕನಿಗೆ ನೋಟಿಸ್:
ಕಳೆದ ಮೂರು ತಿಂಗಳಿನಿಂದಲೂ ಕಾರ್ಮಿಕ ಪ್ರತಾಪ್ ಸಿಂಗ್ ಪ್ಯಾನ್ ಕಾರ್ಡ್ ಪಡೆಯುವುದಕ್ಕಾಗಿ ಓಡಾಡಿದ್ದಾರೆ. ಇದರ ಮಧ್ಯೆ ಅಕ್ಟೋಬರ್ 19ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಕರೆ ಬಂದಿದ್ದು, 3 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಪಾವತಿಸುವಂತೆ ಸೂಚಿಸಿದರು. ಇದರ ಬೆನ್ನಲ್ಲೇ 3,47,54,896 ರೂಪಾಯಿ ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಕಾರ್ಮಿಕನ ಹೆಸರಿನಲ್ಲಿ ಕೋಟಿ ಕೋಟಿ ವಹಿವಾಟು:
ರಿಕ್ಷಾ ಎಳೆಯುವ ಕಾರ್ಮಿಕನಾಗಿರುವ ಪ್ರತಾಪ್ ಸಿಂಗ್ ಅವರನ್ನು ಅಪರಿಚಿತರು ಯಾಮಾರಿಸಿದ್ದಾರೆ. "ನನ್ನ ಹೆಸರಿನಲ್ಲಿ ಜಿಎಸ್ ಟಿ ಸಂಖ್ಯೆಯನ್ನು ಪಡೆದುಕೊಂಡು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾರೆ. ಕಳೆದ 2018-19ನೇ ಸಾಲಿನಲ್ಲಿ 43,44,36,201 ರೂಪಾಯಿ ವಹಿವಾಟು ನಡೆಸಲಾಗಿದೆ. ಈ ಸಂಬಂಧ ವಂಚನೆ ಮಾಡಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಆದಾಯ ತೆರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ," ಎಂದು ಕಾರ್ಮಿಕ ಪ್ರತಾಪ್ ಸಿಂಗ್ ಹೇಳಿದ್ದಾರೆ.