"ಹಣ ವಾಪಸ್ ಕೊಡ್ತೀನಿ, ಪ್ಲೀಸ್ ತೆಗೆದುಕೊಳ್ಳಿ"
ಭಾರತದ ಬ್ಯಾಂಕ್ ಗಳ ಒಕ್ಕೂಟಕ್ಕೆ ಬಾಕಿ ಉಳಿಸಿಕೊಂಡಿರುವ ಸಾಲವನ್ನು ಹಿಂತಿರುಗಿಸುವುದಾಗಿ ಮಂಗಳವಾರ ವಿಜಯ್ ಮಲ್ಯ ಮತ್ತೊಮ್ಮೆ ಹೇಳಿದ್ದಾರೆ. ಇದೇ ವೇಳೆ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವ ಸಂದರ್ಭದಲ್ಲಿ ಉದ್ಯಮಗಳಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
"ಭಾರತ ಲಾಕ್ ಡೌನ್ ಮಾಡಲಾಗಿದೆ. ನಾವು ಇದನ್ನು ಗೌರವಿಸುತ್ತೇವೆ. ಲಾಕ್ ಡೌನ್ ಕಾರಣಕ್ಕೆ ನನ್ನ ಕಂಪೆನಿಗಳ ಕಾರ್ಯಚಟುವಟಿಕೆ ನಿಂತಿದೆ. ಎಲ್ಲ ಉತ್ಪಾದನೆ ನಿಂತಿದೆ. ಆದರೂ ನಮ್ಮ ಸಿಬ್ಬಂದಿಯನ್ನು ವಾಪಸ್ ಕಳಿಸಿಲ್ಲ ಮತ್ತು ಅದಕ್ಕಾಗಿ ಹಣ ಪಾವತಿಸುತ್ತಿದ್ದೇವೆ. ಸರ್ಕಾರ ನಮಗೆ ಸಹಾಯ ಮಾಡಬೇಕು" ಎಂದಿದ್ದಾರೆ ಮಲ್ಯ.
ಭಾರತ ಬಿಟ್ಟು ಪರಾರಿ ಆಗಿರುವ ವಿಜಯ್ ಮಲ್ಯ, ಸದ್ಯಕ್ಕೆ ಲಂಡನ್ ನಲ್ಲಿ ಇದ್ದಾರೆ. ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ಬಾಕಿ ಇರುವ ಹಣ ವಾಪಸ್ ಮಾಡುವುದಾಗಿ ಹಲವು ಬಾರಿ ಹೇಳಿದರೂ ತನಿಖಾ ಸಂಸ್ಥೆಗಳಾಗಲೀ ಅಥವಾ ಬ್ಯಾಂಕ್ ಗಳಾಗಲೀ ಸಹಕಾರ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಾದರೂ ತನ್ನ ಮಾತನ್ನು ಕೇಳಿಸಿಕೊಳ್ಳಬಹುದು ಎಂಬ ಭರವಸೆಯನ್ನು ವಿಜಯ್ ಮಲ್ಯ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಮಲ್ಯ ವಿದೇಶದಲ್ಲೇ ನೆಲೆಸಿದ್ದಾರೆ. ಭಾರತದಲ್ಲಿ ಅವರ ವಿರುದ್ಧ ದೋಷಾರೋಪ ಇರುವುದರಿಂದ ವಾಪಸ್ ಬರಲು ಆಗುತ್ತಿಲ್ಲ. 13 ಭಾರತೀಯ ಬ್ಯಾಂಕ್ ಗಳಿಗೆ ವಿಜಯ್ ಮಲ್ಯ 9 ಸಾವಿರ ಕೋಟಿಗೂ ಹೆಚ್ಚು ಮೊತ್ತ ಬಾಕಿ ಇದ್ದಾರೆ.