ಪಿಎಂಸಿ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ರೀತಿಯಲ್ಲೇ ಲಕ್ಷ್ಮೀವಿಲಾಸ್ ಬ್ಯಾಂಕ್ ಮೇಲೂ ವಿಥ್ ಡ್ರಾ ನಿರ್ಬಂಧ ಹೇರಲಾಗಿದೆ. ಭಾರತ ಸರ್ಕಾರದಿಂದ ಒಂದು ತಿಂಗಳ ನಿರ್ಬಂಧವನ್ನು ಮಂಗಳವಾರ ಘೋಷಣೆ ಮಾಡಲಾಗಿದೆ. ಠೇವಣಿದಾರರು ಡಿಸೆಂಬರ್ 16ರ ತನಕ 25,000 ರುಪಾಯಿ ಮಾತ್ರ ವಿಥ್ ಡ್ರಾ ಮಾಡಲು ಸಾಧ್ಯ.
ಲಕ್ಷ್ಮೀ ವಿಲಾಸ್ ಬ್ಯಾಂಕ್ ಆರ್ಥಿಕ ಸ್ಥಿತಿಯು ನಿರಂತರವಾಗಿ ಕುಸಿಯುತ್ತಾ ಸಾಗಿತ್ತು. ಕಳೆದ ಮೂರು ವರ್ಷಗಳಿಂದ ಸತತವಾಗಿ ನಷ್ಟ ಆಗುತ್ತಿತ್ತು. ಅದರ ನಿವ್ವಳ ಮೌಲ್ಯ ಕೊಚ್ಚಿ ಹೋಗುತ್ತಿದೆ. ಯಾವುದೇ ಸರಿಯಾದ ವ್ಯೂಹಾತ್ಮಕ ಯೋಜನೆ ಇಲ್ಲದೆ, ಎನ್ ಪಿಎ ಹೆಚ್ಚಾಗಿ ನಷ್ಟ ಮುಂದುವರಿದಿದೆ. ಬ್ಯಾಂಕ್ ನಲ್ಲೂ ಸತತವಾಗಿ ವಿಥ್ ಡ್ರಾ ಮುಂದುವರಿದಿದೆ ಮತ್ತು ನಗದು ಕಡಿಮೆ ಆಗಿದೆ. ಜತೆಗೆ ಗಂಭೀರವಾದ ಆಡಳಿತಾತ್ಮಕ ಸಮಸ್ಯೆಗಳಿದ್ದವು. ಅದರಿಂದಾಗಿ ಬ್ಯಾಂಕ್ ಫಲಿತಾಂಶ ಇಳಿಮುಖ ಆಗುತ್ತಾ ಬಂತು. ಬ್ಯಾಂಕ್ ಅನ್ನು ಈಗ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಅಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಿಂದ ಇಡಲಾಗಿತ್ತು ಎಂದು ಆರ್ ಬಿಐ ತಿಳಿಸಿದೆ.
ಲಕ್ಷ್ಮೀ ವಿಲಾಸ್ ಬ್ಯಾಂಕ್ ನಲ್ಲಿ ಆಗಿದ್ದೇನು?
2004ರಿಂದ 2015ರ ಮಧ್ಯೆ ಆರ್ಥಿಕತೆ ಏರುಗತಿಯಲ್ಲಿ ಇತ್ತು. ಆಗ ಎಲ್ಲ ಬ್ಯಾಂಕ್ ಗಳು ಕಾರ್ಪೊರೇಟ್ ಸಾಲಗಳು ನೀಡಲು ಆರಂಭಿಸಿದವು. ಆದರೆ ನಂತರದಲ್ಲಿ ವಿದ್ಯುತ್, ಏರ್ ಲೈನ್ಸ್ ಹಾಗೂ ಟೆಲಿಕಾಂ ಸೇರಿ ಪ್ರಮುಖ ಉದ್ಯಮಗಳು ಹಳ್ಳ ಹಿಡಿಯಲು ಆರಂಭಿಸಿದವು. ಕಳೆದ ಕೆಲ ವರ್ಷಗಳಿಂದ ಅನುತ್ಪಾದಕ ಆಸ್ತಿ ವಿಪರೀತ ಹೆಚ್ಚಾಗಿದೆ.

ಸಾಲ ನೀಡಿದಂಥ ಯೆಸ್ ಬ್ಯಾಂಕ್ ಹಾಗೂ ಲಕ್ಷ್ಮೀವಿಲಾಸ್ ಬ್ಯಾಂಕ್ ನಂಥವನ್ನು ಅಪಾಯಕ್ಕೆ ಸಿಲುಕಿಸಿವೆ. ದೊಡ್ಡ ಹಾಗೂ ಮಧ್ಯಮ ಗಾತ್ರದ ಕಾರ್ಪೊರೇಟ್ ಗಳು ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಅನುತ್ಪಾದಕ ಆಸ್ತಿ (ಎನ್ ಪಿಎ) ಏರುತ್ತಲೇ ಇದೆ. ಲಕ್ಷ್ಮೀ ವಿಲಾಸ್ ಬ್ಯಾಂಕ್ ಗೆ ರಿಲಯನ್ಸ್ ಹೋಮ್, ಕಾಕ್ಸ್ ಅಂಡ್ ಕಿಂಗ್ಸ್ ಮತ್ತು ಜೆಟ್ ಏರ್ ವೇಸ್ ಗ್ರೂಪ್ ಗಳಿಂದ ಸಾಲ ಬರಬೇಕಿದೆ.
ದೊಡ್ಡ ಬ್ಯಾಂಕ್ ಗಳಾಗಿ ಕಾರ್ಪೊರೇಟ್ ಸಾಲ ನೀಡಿ, ಅದು ವಾಪಸ್ ಆಗದಿದ್ದಾಗ ಶೀಘ್ರವಾಗಿ ಬಂಡವಾಳ ಸಂಗ್ರಹಿಸಬಹುದು. ಅಥವಾ ಬಲವಾದ ಸಾಲದ ಮೂಲಗಳು ಇರುತ್ತವೆ. ಅವರು ಬಹಳ ಬೇಗ ಠೇವಣಿ ಸಂಗ್ರಹಿಸಬಹುದು. ಆ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿಯೂ ಇರುತ್ತವೆ.
ಈಗಿನ ಬ್ಯಾಂಕಿಂಗ್ ವಲಯದ ಅತಿ ದೊಡ್ಡ ಸವಾಲೆಂದರೆ, ಯಾವುದೇ ಬ್ಯಾಂಕ್ ನಲ್ಲಿ ಸಣ್ಣ ಸಮಸ್ಯೆ ಅಂತ ಕಾಣಿಸಿಕೊಂಡರೂ ಠೇವಣಿದಾರರು ಹಣ ತೆಗೆದುಕೊಳ್ಳುವುದಕ್ಕೆ ಆರಂಭಿಸುತ್ತಾರೆ. ಯಾವಾಗ ಹಣ ಹೀಗೆ ಹೊರಗೆ ಹೋಗಲು ಆರಂಭವಾಗುತ್ತದೋ ಸಮಸ್ಯೆ ದೊಡ್ಡದಾಗುತ್ತಾ ಸಾಗುತ್ತದೆ. ಬ್ಯಾಂಕ್ ವರ್ಚುವಲಿ ಪತನ ಆಗಿಹೋಗುತ್ತದೆ.
ಇದೇ ಲಕ್ಷ್ಮೀ ವಿಲಾಸ್ ಬ್ಯಾಂಕ್ ನಲ್ಲೂ ಆಗಿದ್ದು. ತುಂಬ ಸರಳವಾಗಿ ಹೇಳಬೇಕೆಂದರೆ, ಬ್ಯಾಂಕ್ ಗೆ ಬಂಡವಾಳ ಸಂಗ್ರಹ ಆಗಲಿಲ್ಲ. ನಷ್ಟ ಹೆಚ್ಚಾಯಿತು. ಠೇವಣಿ ಕಡಿಮೆ ಆಗಿ, ನಿಧಾನಕ್ಕೆ ಬ್ಯಾಂಕ್ ಹಳ್ಳ ಹಿಡಿಯಲು ಕಾರಣ ಆಯಿತು. ಲಕ್ಷ್ಮೀವಿಲಾಸ್ ಬ್ಯಾಂಕ್ ಅನ್ನು ಇಂಡಿಯಾಬುಲ್ಸ್ ಹೌಸಿಂಗ್ ಜತೆ ವಿಲೀನ ಮಾಡಲು ಕಳೆದ ವರ್ಷ ಅಕ್ಟೋಬರ್ ನಲ್ಲಿ ಆರ್ ಬಿಐ ಒಪ್ಪಲಿಲ್ಲ.
ಲಕ್ಷ್ಮೀವಿಲಾಸ್ ಬ್ಯಾಂಕ್ ಠೇವಣಿದಾರರಿಗೆ ಹಣ ವಾಪಸ್ ಬರುತ್ತಾ?
ಸದ್ಯಕ್ಕೆ ಠೇವಣಿದಾರರ ಹಣ ಸುರಕ್ಷಿತವಾಗಿದೆ ಎನಿಸುತ್ತಿದೆ. ಲಕ್ಷ್ಮೀವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾ ಜತೆ ವಿಲೀನಕ್ಕೆ ಆರ್ ಬಿಐ ಒಪ್ಪಿದೆ. ಸಿಂಗಾಪೂರ ಡಿಬಿಎಸ್ ಬ್ಯಾಂಕ್ ಅಂಗ ಸಂಸ್ಥೆ ಡಿಬಿಐಎಲ್ ಜತೆ ಸೇರಿದಲ್ಲಿ ಅದರ ಆರ್ಥಿಕ ಸ್ಥಿತಿ ಉತ್ತಮವಾಗಿದೆ.
ಜತೆಗೆ ಹೆಚ್ಚುವರಿಯಾಗಿ ಎರಡೂವರೆ ಸಾವಿರ ಕೋಟಿ ರುಪಾಯಿ ಬಂಡವಾಳವನ್ನು ತರಲಿದೆ. ಈ ತನಕ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಹಣ ಮುಳುಗಿರುವುದರ ಉದಾಹರಣೆ ಸಿಗುತ್ತದೆಯೇ ವಿನಾ ಉಳಿದ ಬ್ಯಾಂಕ್ ಗಳಲ್ಲಿ, ಅಂದರೆ ಖಾಸಗಿ ಅಥವಾ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಂದ ಸಮಸ್ಯೆಯಿಂದ ಉದಾಹರಣೆ ಇಲ್ಲ. ಆದ್ದರಿಂದ ಠೇವಣಿದಾರರು ಆಶಾಭಾವನೆಯಿಂದ ಇರಬಹುದು.


Click it and Unblock the Notifications