ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
ಭಾರತದ ಕಿರಿಯವಯಸ್ಸಿನ ಬಿಲಿಯನೇರ್ಗಳಲ್ಲಿ ಒಬ್ಬರಾದ ಕರ್ನಾಟಕದ ನಿಖಿಲ್ ಕಾಮತ್ 2020ರಲ್ಲಿ ಭಾರತದ 100 ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಾಗ ಇಡೀ ಜಗತ್ತೇ ಒಮ್ಮೆ ಇವರತ್ತ ತಿರುಗಿ ನೋಡಿತ್ತು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಈತ ಶತಕೋಟ್ಯಧಿಪತಿ ಆಗಿದ್ದೇ ಹೇಗೆ ಎಂದು ಆಶ್ಚರ್ಯ ಪಟ್ಟ ಜನರೇ ಹೆಚ್ಚು.
ಸಹೋದರನ ಜೊತೆಗೂಡಿ ಬ್ರೋಕರೇಜ್ ಸಂಸ್ಥೆ ಜೆರೋಧಾವನ್ನು ಹುಟ್ಟುಹಾಕಿದ ನಿಖಿಲ್ ಕಾಮತ್ ಬೆಳೆದು ಬಂದ ರೀತಿ ಮಾತ್ರ ಎಂತವರಿಗೂ ಆಶ್ಚರ್ಯ ಮೂಡಿಸುತ್ತದೆ. ಮೂಲತಃ ಶಿವಮೊಗ್ಗದವರಾದ ನಿಖಿಲ್ ಕಾಮತ್ ಬೆಳೆದು, ದೊಡ್ಡವರಾಗಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ನಿಖಿಲ್ ಕಾಮತ್ ತಾನು ಬೆಳೆದು ಬಂದ ರೀತಿಯನ್ನು ಹಾಗೂ ರಹಸ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಶಾಲೆಗೆ ಬಂಕ್ ಹೊಡೀತಿದ್ದ ನಿಖಿಲ್ ಕಾಮತ್
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ನಿಖಿಲ್ ಕಾಮತ್ ತಾನು ಶಾಲೆ, ವಿದ್ಯಾಭ್ಯಾಸದ ಕುರಿತಾಗಿ ಹೊಂದಿದ್ದ ನಿರಾಸಕ್ತಿಯನ್ನು ತಿಳಿಸಿದ್ದಾರೆ. ನಿಖಿಲ್ ಅವರ ತಂದೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಸಿಲಿಕಾನ್ ಸಿಟಿಯಲ್ಲೇ ಇರಬೇಕಾಯ್ತು. ಪರಿಣಾಮ ನಿಖಿಲ್ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮುಂದುವರಿಸಿದರು.
ಆದರೆ ನಿಖಿಲ್ಗೆ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಷ್ಟವಿರಲಿಲ್ಲ. ಈ ಕಾರಣದಿಂದಾಗಿ ಅವರು ಶಾಲೆಗೆ ಬಂಕ್ ಮಾಡುವ ಮೂಲಕ ಚೆಸ್ ಆಡುತ್ತಿದ್ದರು.
14ನೇ ವಯಸ್ಸಿನಲ್ಲೇ ಹಳೆಯ ಫೋನ್ಗಳ ಖರೀದಿ, ಮಾರಾಟ
ನಿಖಿಲ್ ಶಾಲೆಗೆ ಬಂಕ್ ಮಾಡಿ ಚೆಸ್ ಹೆಚ್ಚಾಗಿ ಆಡಲು ಇಷ್ಟಪಡುತ್ತಿದ್ದರು. ಇನ್ನು ತಮ್ಮ 14 ನೇ ವಯಸ್ಸಿನಲ್ಲಿ ಸ್ನೇಹಿತರೊಡನೆ ಹಳೆಯ ಫೋನ್ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿದರು. ಇದು ಅವರ ತಾಯಿಗೆ ತಿಳಿದಾಗ ಆ ವ್ಯವಹಾರವು ಅಲ್ಲಿಯೇ ನಿಂತುಹೋಯಿತು.
ಶಾಲೆಯನ್ನು ತೊರೆದು ಕಾಲ್ ಸೆಂಟರ್ನಲ್ಲಿ ಕೆಲಸ
ಶಾಲೆಗೆ ಹೆಚ್ಚಾಗಿ ಬಂಕ್ ಹೊಡೀತಿದ್ದ ನಿಖಿಲ್ ಕಾಮತ್ ಬೋರ್ಡ್ ಪರೀಕ್ಷೆ ಬರೆಯಲು ಹಾಜರಿ ಕಡಿಮೆ ಇದ್ದುದ್ದರಿಂದ ಅವರಿಗೆ ಪರೀಕ್ಷೆಯನ್ನು ನೀಡದಿರುವ ಕುರಿತು ಶಾಲೆ ತೀರ್ಮಾನಿಸಿತ್ತು. ಜೊತೆಗೆ ಶಾಲೆಯ ಆಡಳಿತ ಮಂಡಳಿ ನಿಖಿಲ್ ಪೋಷಕರನ್ನು ಕರೆಸಿ ವಿಚಾರಣೆ ನಡೆಸಿತು. ಇದು ಪೋಷಕರನ್ನ ಸಾಕಷ್ಟು ಮುಜುಗರಕ್ಕೀಡು ಮಾಡಿದ್ದಲ್ಲದೇ, ಇಂತಹ ಯಾವುದೇ ಕೆಲಸವನ್ನು ಮತ್ತೆ ಮಾಡದಿರು ಎಂದು ನಿಕಿಲ್ಗೆ ಪೋಷಕರು ವಾರ್ನಿಂಗ್ ನೀಡಿದ್ದರು.
ಇದಾದ ನಂತರ, ಶಾಲೆಯು ಪರೀಕ್ಷೆಗಳನ್ನು ನೀಡಲು ಒಪ್ಪದೇ ಇದ್ದಾಗ, ಆತ ಶಾಲೆಯನ್ನು ತೊರೆದು, ತಿಂಗಳಿಗೆ 8,000 ರೂಪಾಯಿ ವೇತನ ನೀಡುವ ಕಾಲ್ ಸೆಂಟರ್ನಲ್ಲಿ ಕೆಲಸವನ್ನು ಪ್ರಾರಂಭಿಸಿದ.
ನಕಲಿ ಜನನ ಪ್ರಮಾಣಪತ್ರ ನೀಡಿದ್ದ ನಿಖಿಲ್
ನಿಖಿಲ್ ಸ್ವತಃ ಹೇಳಿರುವಂತೆ ಆತ ತನ್ನ 17 ನೇ ವಯಸ್ಸಿನಲ್ಲಿ ನಕಲಿ ಜನನ ಪ್ರಮಾಣಪತ್ರವನ್ನು ನೀಡುವ ಮೂಲಕ ಕಾಲ್ಸೆಂಟರ್ಗೆ ಸೇರಿಕೊಂಡರು. ಇವರಿಗೆ ಸಿಗುತ್ತಿದ್ದ ವೇತನ 8,000 ರೂಪಾಯಿ ಆಗಿದ್ದು, ಇವರ ಕೆಲಸದ ಅವಧಿ ಸಂಜೆ 4 ರಿಂದ ಮಧ್ಯ ರಾತ್ರಿ 1 ರವರೆಗೆ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ತಮ್ಮ 18 ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದರು.
ತಂದೆ ಬಳಿ ಸ್ವಲ್ಪ ಹಣವನ್ನು ಪಡೆದುಕೊಂಡು ನಿಖಿಲ್ ಷೇರುಪೇಟೆಯಲ್ಲಿ ಹೂಡಿಕೆಗೆ ಮುಂದಾದರು. ನಿಕಿಲ್ ಬಗ್ಗೆ ಆತನ ತಂದೆಗೆ ಅಪಾರ ನಂಬಿಕೆ ಇತ್ತು. ಇದರ ನಂತರ ನಿಖಿಲ್ ತಾನು ಕೆಲಸ ಮಾಡುತ್ತಿದ್ದ ಕಾಲ್ ಸೆಂಟರ್ನ ವ್ಯವಸ್ಥಾಪಕರನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮನವೊಲಿಸಿದರು ಮತ್ತು ವ್ಯವಸ್ಥಾಪಕರ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು
ಒಂದು ದಿನವೂ ಕಚೇರಿಗೆ ಹೋಗುತ್ತಿರಲಿಲ್ಲ!
ನಿಖಿಲ್ ಕಾಮತ್ ಅವರು ಕಾಲ್ ಸೆಂಟರ್ನಲ್ಲಿ ತಮ್ಮ ಅಂತಿಮ ವರ್ಷದಲ್ಲಿ ಒಂದೇ ಒಂದು ದಿನವೂ ಕಚೇರಿಗೆ ಹೋಗಲಿಲ್ಲ . ಇಷ್ಟಾದರೂ ಅವರಿಗೆ ತಿಂಗಳಿಗೆ ಸರಿಯಾದ ಸಂಬಳದ ಜೊತೆಗೆ ಇನ್ಸೆಂಟಿವ್ ಕೂಡ ಸಿಗುತ್ತಿತ್ತು. ಇದು ಹೇಗೆ ಸಾಧ್ಯ ಎಂದರೆ, ಆ ಹೊತ್ತಿಗೆ ನಿಕಿಲ್ ಅದಾಗಲೇ ಕಚೇರಿಯ ಅನೇಕರನ್ನು ಷೇರುಪೇಟೆಗೆ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು ಮತ್ತು ಅವರ ಎಲ್ಲಾ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಲ್ಲರಿಗೂ ಉತ್ತಮ ಲಾಭವನ್ನು ನೀಡುತ್ತಿದ್ದರು.
ಜೆರೋಧಾ ಬ್ರೋಕರೇಜ್ ಸಂಸ್ಥೆ ಸ್ಥಾಪನೆ
2010 ರಲ್ಲಿ, ಕಾಲ್ ಸೆಂಟರ್ನಲ್ಲಿ ಕೆಲಸವನ್ನು ತೊರೆದ ನಿಖಿಲ್ ಕಾಮತ್, ತನ್ನ ರ ಹಿರಿಯ ಸಹೋದರ ನಿತಿನ್ ಕಾಮತ್ ಅವರೊಂದಿಗೆ ಸೇರಿಕೊಂಡು ಜೆರೋಧಾ ಎಂಬ ಬ್ರೋಕರೇಜ್ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಸ್ಥಾಪನೆ ಬಳಿಕ ಕಾಮತ್ ಸಹೋದರರು ಹಿಂದೆ ತಿರುಗಿ ನೋಡಿದ್ದೇ ಇಲ್ಲ. ನಿಖಿಲ್ ಕಾಮತ್ ದೇಶದ ಕಿರಿಯ ಬಿಲಿಯನೇರ್ ಆದರು.
ಶತ ಕೋಟ್ಯಧಿಪತಿಯಾದರೂ ನಿಖಿಲ್ ಕಾಮತ್ ಕಾರ್ಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದಿದ್ದಾರೆ. ಅವರು ಇನ್ನೂ ತಮ್ಮ 85% ಸಮಯವನ್ನು ಕೆಲಸ ಮಾಡುತ್ತಾರೆ.
2020ರಲ್ಲಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಸಹೋದರರು
ಹೌದು ನಿಕಿಲ್ ಕಾಮತ್ ಮತ್ತು ಅವರ ಹಿರಿಯ ಸಹೋದರ ಹುಟ್ಟುಹಾಕಿದ ಜೆರೋಧಾ ಸಂಸ್ಥೆಯು ಭಾರತದ ಟಾಪ್ ಬ್ರೋಕರೇಜ್ ಸಂಸ್ಥೆಗಳಲ್ಲಿ ಒಂದಾಗಿದೆ. 2020 ರಲ್ಲಿ, ಫೋರ್ಬ್ಸ್ ಈ ಇಬ್ಬರು ಸಹೋದರರನ್ನು ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಸೇರಿಸಿಕೊಂಡಿತು.
ಜೆರೋಧಾ ಸಂಸ್ಥಾಪಕರಾದ ಸೇರಿದ ನಿತಿನ್ ಕಾಮತ್ (41) ಹಾಗೂ ನಿಖಿಲ್ ಕಾಮತ್ (34) ಸುಮಾರು 24,000 ಕೋಟಿ ರುಪಾಯಿ ಆಸ್ತಿಯೊಂದಿಗೆ ಅತಿ ಕಿರಿಯ ಭಾರತದ ಬಿಲಿಯನೇರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.