ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?
ಅಪಾರ ಸಿರಿವಂತಿಕೆ ಗಳಿಸುವುದು ಕೆಲವರಿಗೆ ಅಸಾಧ್ಯವಾಗಿ ತೋರಿದರೆ ಇನ್ನು ಕೆಲವರು ಶ್ರೀಮಂತರಾಗಲು ಬೇಕಾದ ಅಭ್ಯಾಸಗಳನ್ನು ಸಹಜವಾಗಿಯೇ ರೂಢಿಸಿಕೊಂಡಿರುತ್ತಾರೆ. ಆದರೆ ಶ್ರೀಮಂತಿಕೆ ಎಂದರೆ ಕೇವಲ ಆರ್ಥಿಕ ಶ್ರೀಮಂತಿಕೆ ಎಂದುಕೊಂಡರೆ ತಪ್ಪಾಗುತ್ತದೆ.
ಸಮುದ್ರ ದಂಡೆಯಲ್ಲೊಂದು ಸುಂದರವಾದ ಮನೆ ಕಟ್ಟಿಕೊಳ್ಳುವುದು, ಜಗತ್ತಿನ ಸುಂದರ ಸ್ಥಳಗಳಿಗೆ ಭೇಟಿ ನೀಡುವುದು ಹೀಗೆ ಒಟ್ಟಾರೆಯಾಗಿ ಸುಂದರವಾದ ಜೀವನ ನಡೆಸುವುದು ಬಹುತೇಕ ಎಲ್ಲರ ಇಷ್ಟದ ಸಂಗತಿಯಾಗಿರುತ್ತದೆ. ಆದರೆ ಈ ಎಲ್ಲ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ನಮ್ಮ ಬಳಿ ಸಾಕಷ್ಟು ಹಣವೂ ಇರಬೇಕಾಗುತ್ತದೆ. ಅಂದರೆ ಜೀವನದಲ್ಲಿ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಳ್ಳಬೇಕಾಗುತ್ತದೆ.
ಅಪಾರ ಸಿರಿವಂತಿಕೆ ಗಳಿಸುವುದು ಕೆಲವರಿಗೆ ಅಸಾಧ್ಯವಾಗಿ ತೋರಿದರೆ ಇನ್ನು ಕೆಲವರು ಶ್ರೀಮಂತರಾಗಲು ಬೇಕಾದ ಅಭ್ಯಾಸಗಳನ್ನು ಸಹಜವಾಗಿಯೇ ರೂಢಿಸಿಕೊಂಡಿರುತ್ತಾರೆ. ಆದರೆ ಶ್ರೀಮಂತಿಕೆ ಎಂದರೆ ಕೇವಲ ಆರ್ಥಿಕ ಶ್ರೀಮಂತಿಕೆ ಎಂದುಕೊಂಡರೆ ತಪ್ಪಾಗುತ್ತದೆ. ಹಣ ಗಳಿಸಿದ ಮೇಲೆ ಎಷ್ಟು ಉತ್ತಮವಾಗಿ ಜೀವಿಸುತ್ತೇವೆ ಎಂಬುದು ಸಹ ಜೀವನದ ನಿಜವಾದ ಶ್ರೀಮಂತಿಕೆಯಾಗಿದೆ. ಆದರೆ ಹಣ ಗಳಿಕೆ ಮಾತ್ರ ಬೇಕೆ ಬೇಕು. ಶ್ರೀಮಂತರಾಗಲು ಕೆಲ ಅಭ್ಯಾಸಗಳನ್ನು ಬಿಡಬೇಕಾಗುತ್ತದೆ ಹಾಗೂ ಇನ್ನು ಕೆಲ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಕೆಲ ಆರ್ಥಿಕ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿದರೆ ಶ್ರೀಮಂತರಾಗುವ ಹಾದಿ ಸುಗಮವಾಗುತ್ತದೆ.
ಕೋಟ್ಯಧೀಶರಾಗಿರುವವರು ಶ್ರೀಮಂತಿಕೆ ಸಂಪಾದಿಸುವ ದಾರಿಯಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಭವಿಷ್ಯದಲ್ಲಿ ಸಿರಿವಂತರಾಗುವವರ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿಯುವುದು ಕುತೂಹಲಕರ ಸಂಗತಿಯಾಗಿದೆ. ನಿಮ್ಮಲ್ಲಿಯೂ ಈ ಲಕ್ಷಣಗಳಿವೆಯಾ ಹಾಗೂ ನೀವೂ ಶ್ರೀಮಂತರಾಗುವ ದಾರಿಯಲ್ಲಿ ಮುನ್ನಡೆಯುತ್ತಿದ್ದೀರಾ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ ತಿಳಿದುಕೊಳ್ಳಿ.
ತಕ್ಷಣದ ಆಸೆಗಳಿಗೆ ಕಡಿವಾಣ ಹಾಕಿ
ಯಾವುದೋ ವಸ್ತು ಈಗಲೇ ಬೇಕು ಎಂಬ ತಕ್ಷಣದ ಆಸೆಗೆ ನೀವು ಕಡಿವಾಣ ಹಾಕಬಲ್ಲವರಾಗಿದ್ದರೆ ಶ್ರೀಮಂತಿಕೆಯ ದಾರಿಯಲ್ಲಿ ಮೊದಲ ಮೆಟ್ಟಿಲನ್ನು ನೀವು ಹತ್ತಿದ್ದೀರಿ ಎಂದರ್ಥ. ಕ್ಷಣಿಕವಾದ ತಕ್ಷಣದ ಆಸೆಗಳಿಗೆ ಯಾವತ್ತೂ ಬಲಿಯಾಗಬಾರದು. ಆ ಕ್ಷಣಕ್ಕೆ ಅದಕ್ಕಾಗಿ ನಾವು ಮಾಡುವ ಖರ್ಚು ಭವಿಷ್ಯದಲ್ಲಿ ಬಲು ದುಬಾರಿಯಾಗಿ ಪರಿಣಮಿಸುತ್ತದೆ. ಇವತ್ತು ಒಂದೇ ರೂಪಾಯಿ ಉಳಿಸಿದರೂ ಕಷ್ಟಕಾಲದಲ್ಲಿ ಅದೇ ನೆರವಿಗೆ ಬರುತ್ತದೆ ಹಾಗೂ ನಿಮ್ಮ ಸಂಪತ್ತು ವೃದ್ಧಿಗೆ ಅದು ಕಾರಣವಾಗುತ್ತದೆ.
ಕನಸಿನ ಬೆನ್ನು ಹತ್ತಿ
ಕೆಲಸದಲ್ಲಿ ಪರಿಣಿತಿ ಸಾಧಿಸಲು ನೀವು ನಿರಂತರವಾಗಿ ಯತ್ನಿಸುತ್ತಿದ್ದಲ್ಲಿ ಸಹಜವಾಗಿಯೇ ಹಣ ಗಳಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಹಾಗೆಯೇ ನಿಮ್ಮ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಪರಿಶ್ರಮ ಪಡುತ್ತಿದ್ದಲ್ಲಿ ಒಂದಿಲ್ಲೊಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆದರೆ ಈ ಹಾದಿಯಲ್ಲಿ ಹಲವಾರು ಬಾರಿ ಸೋಲು ಅನುಭವಿಸಬೇಕಾಗುತ್ತದೆ. ತಿರಸ್ಕಾರ, ಸಂಶಯ ಎಲ್ಲವನ್ನೂ ಮೀರಿ ಮುನ್ನಡೆಯಬೇಕಾಗುತ್ತದೆ. ಆದರೆ ನಿಮ್ಮ ಕೆಲಸದಲ್ಲಿ ನೀವು ಅತ್ಯುತ್ತಮವಾಗಿದ್ದರೆ ಯಶಸ್ಸು ನಿಮ್ಮದಾಗುವುದು ಖಚಿತ.
ಮಿತವ್ಯಯ ಹಾಗೂ ಸಮತೋಲಿತ ಜೀವನ ಸಾಗಿಸಿ
ಖರ್ಚು ಮಾಡುವಾಗ ನೀವು ಸ್ವಲ್ಪ ಯೋಚನೆ ಮಾಡುತ್ತೀರಾ? ಆಸೆಗಳಿಗಿಂತ ಅವಶ್ಯಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಾ?
ಕಷ್ಟಪಟ್ಟು ದುಡಿದ ಹಣವನ್ನು ಆಸೆ ಹಾಗೂ ಅವಶ್ಯಕತೆಗಳನ್ನು ಸರಿಯಾಗಿ ಅರಿತು ಖರ್ಚು ಮಾಡುವುದು ಅತಿ ಮುಖ್ಯವಾಗಿದೆ. ಶ್ರೀಮಂತರು ಯಾವತ್ತೂ ಅನವಶ್ಯಕವಾಗಿ ಖರ್ಚು ಮಾಡುವುದಿಲ್ಲ ಎಂಬುದು ಗೊತ್ತಿರಲಿ. ಫೇಸ್ ಬುಕ್ ಸಂಸ್ಥಾಪಕ, ಬಿಲಿಯನೇರ್ ಮಾರ್ಕ್ ಝುಕರಬರ್ಗ್ ಇಂದಿಗೂ ಸಾದಾ ಉಡುಪು ಧರಿಸುತ್ತಾರೆ. ವಿಶ್ವದ ಮತ್ತೊಬ್ಬ ಅತಿ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಸಾದಾ ಮನೆಯಲ್ಲಿ ವಾಸಿಸುತ್ತಾರೆ. ಇವರೆಲ್ಲ ಬಿಲಿಯನೇರ್ಗಳಾದರೂ ಮಿತವ್ಯಯದ ಜೀವನವನ್ನೇ ಸಾಗಿಸುತ್ತಾರೆ.
ಅನವಶ್ಯಕ ಖರ್ಚು ಬೇಡ
ನಮ್ಮಲ್ಲಿ ಹೆಚ್ಚಿನವರು ಅನಗತ್ಯವಾಗಿ ಖರ್ಚುಗಳನ್ನು ಕೈಮೀರಿ ಮಾಡುತ್ತಿರುತ್ತಾರೆ. ನಮ್ಮ ಆರ್ಥಿಕ ಪರಿಸ್ಥಿತಿ ನಾವು ಯಾವ ರೀತಿ ಹಣ ಖರ್ಚು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವುದು, ಪ್ರತಿದಿನ ಹೋಟೆಲ್ ಊಟ ಮಾಡುವುದನ್ನು ಬಿಟ್ಟು ಬಿಡುವುದು. ಹೀಗೆ ಮಿತವ್ಯಯದ ಜೀವನ ನಮ್ಮದಾಗಿಸಿಕೊಂಡರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ.
ಬಜೆಟ್ ಹಾಕಿಕೊಳ್ಳಿ
ನೀವು ಉಳಿತಾಯ ಹಾಗೂ ಖರ್ಚಿಗಾಗಿ ಬಜೆಟ್ ತಯಾರಿಸಿದ್ದೀರಾ? ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬುದರ ಬಜೆಟ್ ತಯಾರಿಸುವುದು ಹಾಗೂ ಅದರಂತೆ ನಡೆದುಕೊಳ್ಳುವುದು ಸಿರಿವಂತಿಕೆ ಗಳಿಸಲು ಅತಿ ಮುಖ್ಯವಾಗಿದೆ. ಹಣಕಾಸಿನ ಉತ್ತಮ ನಿರ್ವಹಣೆಗೆ ಸೂಕ್ತವಾದ ಬಜೆಟ್ ತಯಾರಿ ಇರಲೇಬೇಕು. ಪ್ರತಿ ತಿಂಗಳು ನಮ್ಮ ಅವಶ್ಯಕತೆಗಳೇನು ಹಾಗೂ ಅನವಶ್ಯಕ ವಿಷಯಗಳ ಮೇಲೆ ಎಷ್ಟು ಹಣ ಖರ್ಚಾಗುತ್ತಿದೆ ಎಂಬುದರ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಸಮರ್ಪಕ ಆರ್ಥಿಕ ನಿರ್ವಹಣೆಯನ್ನು ರೂಢಿಸಿಕೊಂಡಲ್ಲಿ ಗಣನೀಯ ಉಳಿತಾಯ ಸಾಧ್ಯವಾಗುತ್ತದೆ.
ಸಾಧ್ಯವಾದಷ್ಟೂ ಉಳಿತಾಯ ಮಾಡಿ
ವ್ಯಕ್ತಿಯ ಬಳಿ ಎಷ್ಟು ಹಣ, ಖ್ಯಾತಿ ಇದೆ ಎಂಬುದರ ಮೇಲೆ ಮಾತ್ರ ಸಿರಿವಂತಿಕೆ ನಿರ್ಧಾರವಾಗುವುದಿಲ್ಲ. ಆದರೆ ದುಡಿದ ಹಣವನ್ನು ಉಳಿತಾಯ ಮಾಡಿ ಸೂಕ್ತವಾಗಿ ಹೂಡಿಕೆ ಮಾಡುವುದೇ ಸಂಪತ್ತು ಸೃಷ್ಟಿಯ ದಾರಿಯಾಗಿದೆ. ಬಹುತೇಕರು ಇದರಲ್ಲಿ ಎಡವುತ್ತಾರೆ. ಎಷ್ಟೇ ದುಡಿದರೂ ಅದನ್ನು ಉಳಿಸಿಕೊಳ್ಳದೆ ಸಂಪತ್ತು ಸೃಷ್ಟಿಸಲು ವಿಫಲರಾಗುತ್ತಾರೆ.
ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣ ಬೇಕು ಎಂಬುದು ಸತ್ಯವಲ್ಲ. ಹನಿ ಹನಿ ಕೂಡಿದರೆ ಹಳ್ಳವಾಗುವುದು ಎಂಬ ಗಾದೆಯಂತೆ ಚಿಕ್ಕ ಚಿಕ್ಕ ಉಳಿತಾಯದಿಂದಲೇ ದೊಡ್ಡ ಸಂಪತ್ತು ಸೃಷ್ಟಿಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಹೀಗಾಗಿ ಪ್ರತಿನಿತ್ಯ ಚಿಕ್ಕ ಮೊತ್ತವನ್ನಾದರೂ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕ್ರಮಬದ್ಧ ಉಳಿತಾಯ ಯೋಜನೆಯಿಂದ ಹಾಗೂ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತ ಹೋಗುವುದರಿಂದ ಕಾಲಾವಧಿಯಲ್ಲಿ ಹಣದಿಂದಲೇ ಹಣ ಬೆಳೆಯುತ್ತದೆ. ಆದ್ದರಿಂದ ಯಾವ ಮೊತ್ತವೂ ಚಿಕ್ಕದಲ್ಲ. ಹೂಡಿದ ಒಂದೊಂದು ರೂಪಾಯಿ ಸಹ ಸಾವಿರ ರೂಪಾಯಿಗಳಾಗಿ ಬೆಳೆಯುತ್ತದೆ ಎಂಬುದು ಗೊತ್ತಿರಲಿ.
ಕೊನೆ ಮಾತು
ಶ್ರೀಮಂತರಾಗಲು ತಕ್ಷಣದ ದಾರಿಗಳು ಇಲ್ಲ. ಸಿರಿವಂತಿಕೆ ಹೊಂದುವುದು ಒಂದು ಜೀವನ ಕ್ರಮವೇ ಆಗಿದೆ. ಖರ್ಚು, ವೆಚ್ಚಗಳನ್ನು ಸರಿಯಾಗಿ ನಿಭಾಯಿಸುವುದು, ನಿಯಮಿತ ಉಳಿತಾಯ, ಹೂಡಿಕೆ ಮಾಡುವುದು, ಮಿತವ್ಯಯದ ಜೀವನ ಸಾಗಿಸುವುದು ಮುಂತಾದುವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.
ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ..
ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!
ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..
ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಈ ಜಗತ್ತಿನಲ್ಲಿ ಅತಿಹೆಚ್ಚು ಇಷ್ಟ ಪಡುವ ವಸ್ತು ಇದ್ರೆ ಅದು ದುಡ್ಡೆ ಇರಬೇಕು. ಅದಕ್ಕೆ ಇರಬೇಕು ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ ಅಂದಿದ್ದು.! ಜೀವನದಲ್ಲಿ ಸರಿಯಾಗಿ ದುಡ್ಡು ಮಾಡಬೇಕಪ್ಪಾ ಅನ್ನೋದು ಕೋಟ್ಯಾಂತರ ಜನರ ಹಂಬಲ ಆಗಿರುತ್ತದೆ. ಆದರೆ ದುಡ್ಡು ಮಾಡೋದು ಹೇಗೆ ಅನ್ನೋದು ತುಂಬಾ ಕಾಡುವ ಪ್ರಶ್ನೆ. ಹಾಸಿಗೆ ಇದ್ದಷ್ಟು ಕಾಲು ಚಾಚು. ಹಗಲುಗನಸು ಕಾಣಬೇಡಪ್ಪಾ ಅನೋರು ಇದ್ದಾರೆ. ಏನೇ ಆಗಲಿ ದುಡ್ಡು ಮಾಡೋಕೆ ಅನೇಕ ಮಾರ್ಗಗಳಿವೆ. ಕೆಲವರಿಗೆ ಪಿತ್ರಾರ್ಜಿತವಾಗಿ ತಲೆಮಾರುಗಳಿಂದ ಆಸ್ತಿ ಬಂದಿದ್ದರೆ, ಕೆಲವರು ವಾಮಮಾರ್ಗಗಳಿಂದ ಹಣ ಗಳಿಸಿರುತ್ತಾರೆ. ಇನ್ನೂ ಕೆಲವರು ತಮ್ಮ ಸ್ವಂತ ಸಾಮರ್ಥ್ಯದಿಂದ, ಸ್ವಾಭಿಮಾನದಿಂದ ನ್ಯಾಯಸಮ್ಮತವಾಗಿ ಹಣ ಸಂಪಾದನೆ ಮಾಡುತ್ತಾರೆ. ಸ್ವಂತ ಸಾಮರ್ಥ್ಯದಿಂದ ಹಣ ಮಾಡುವುದು ಯಾವಾಗಲೂ ಶ್ರೇಷ್ಠ ಮಾರ್ಗ. ಹಾಗಿದ್ದರೆ ಹೆಚ್ಚು ದುಡ್ಡು ಮಾಡುವುದು ಹೇಗೆ? ಅದಕ್ಕಾಗಿ ಗಮನಿಸಬೇಕಾದ ಸಂಗತಿಗಳಾವುವು ಎನ್ನುವುದನ್ನು ನೋಡೋಣ...
1. ಟೈಮ್ ವೇಸ್ಟ್ ಮಾಡಲೇಬಾರದು
ಜೀವನದಲ್ಲಿ ಅದೇನೆ ಮಾಡಬೇಕಂದ್ರೂ ಟೈಮ್ ಮ್ಯಾನೆಜ್ಮೆಂಟ್ ಮಾತ್ರ ಪಕ್ಕಾ ಇರ್ಬೇಕು. ಸಮಯ ವ್ಯರ್ಥ ಮಾಡೋದನ್ನ ವಿಷದಂತೆ ವರ್ಜಿಸಬೇಕು. ಟೈಮ್ ವೇಸ್ಟ್ ಮಾಡಿದ್ರೆ, ಕೆಲಸಗಳು ಮುಗಿಸೋದಕ್ಕೆ ಲೇಟ್ ಆಗತ್ತೆ, ಲೇಟ್ ಆದ್ರೆ ಎಲ್ಲಾ ಉಲ್ಟಾ ಪಲ್ಟಾ ಆಗೋದಕ್ಕೆ ಶುರು ಆಗತ್ತೆ. ಆಮೇಲೆ ಟೈಮ್ ಅಂದ್ರೆ ಪಕ್ಕಾ 420 ಆಗಿಬಿಡತ್ತೆ. ಒಬ್ಬ ರಾಜ ಹೇಳಿದ್ದು 'ನಾನು ರಾಜನೇ ಆಗಿರಬಹುದು ಆದರೆ ಸಮಯವನ್ನು ವ್ಯರ್ಥ ಮಾಡುವಷ್ಟು ಶ್ರೀಮಂತ ನಾನಲ್ಲ' ಈ ಮಾತುಗಳು ಸಮಯದ ಮಹತ್ವ ತಿಳಿಸುತ್ತದೆ. ಹೀಗಾಗಿ ಟೈಮ್ ನ್ನು ಗೌರವಿಸಿ, ಪಾಲಿಸಿದರೆ ಮುಂದಿನದೇಲ್ಲವೂ ನಾವು ಅಂದುಕೊಂಡ ಹಾಗೇ ಸಾಗುತ್ತದೆ.
2. ಅರಾಮಾಗಿರಬೇಕು ಅನ್ನೋ ಮನಸ್ಥಿತಿ ಇರಬಾರದು
ತುಂಬಾ ದುಡ್ಡು ಮಾಡಬೇಕು ಅನ್ನೋರು ಜೀವನದಲ್ಲಿ ಕಷ್ಟಪಡದೇ ಅರಾಮಾಗಿ ಕಾಲ ಕಳೆದರೆ ಹೇಗೆ ಸಾಧ್ಯ? ರಿಲ್ಯಾಕ್ಸ್ ಅನ್ನೋದು ಮಾಡುವ ಕೆಲಸದಲ್ಲೇ ಕಾಣುವಂತಿರಬೇಕು. ಪ್ರತಿ ತಿಂಗಳ ಸಂಬಳಕ್ಕಾಗಿ ಕಾಯುವ ಮನಸ್ಥಿತಿ ಮನುಷ್ಯನನ್ನು ಬೆಳೆಯೋದಕ್ಕಾಗಲಿ, ನಾವು ಅಂದುಕೊಂಡಷ್ಟು ಹಣ ಗಳಿಸುವುದಕ್ಕಾಗಲಿ ಬಿಡಲ್ಲ. ಅರಾಮಾಗಿರಬೇಕು ಅನ್ನೋದೇ ನಮ್ಮೊಳಗಿನ ಶತ್ರು. ನಮ್ಮ ಇಚ್ಛೆಯ ಮಾರ್ಗದಲ್ಲಿ ಹೊಸತನ ಹುಡುಕುತ್ತಾ ಮುನ್ನಡೆಯಬೇಕು.
3. ಸ್ವತಂತ್ರವಾಗಿ ಏನ್ ಮಾಡಬಹುದು?
ಹೌದು... ಈ ಪ್ರಶ್ನೆ ಹೆಚ್ಚು ದುಡ್ಡು ಮಾಡಬೇಕು ಅನ್ನೊರ ತಲೆಯೊಳಗೆ ಬರಬೇಕು. ಹೊಸ ಹೊಸ ಪ್ರಶ್ನೆಗಳು, ಐಡಿಯಾಗಳು ಹೊಳೆದಾಗ ಅದು ಹೊಸತನಕ್ಕೆ ನಾಂದಿ ಆಗುತ್ತದೆ. ಉದಾ: ನಿಮ್ಮದೇ ಒಂದು ಸ್ವಂತ ಕಂಪನಿ ಇದ್ರೆ? ಹೆಚ್ಚೆಚ್ಚು ದುಡಿಬಹುದು ಅಲ್ವಾ. ನಿಮ್ಮ ಬಳಿ ಹೊಸ ಐಡಿಯಾ ಇದ್ರೆ ಒಂದು ಕೈ ನೋಡಿ. ಪ್ರಾರಂಭದಲ್ಲಿ ಕಷ್ಟ ಖಂಡಿತ ಇರತ್ತೆ. ಆದರೆ ಕೊನೆಯಲ್ಲಿ ಸುಖಾನೂ ಸಿಗತ್ತೆ. ಇಲ್ಲಾಂದ್ರೆ ತಿಂಗಳ ಸಂಬಳಕ್ಕಾಗಿ ಸೈಕಲ್ ತುಳಿತಾನೇ ಇರಬೇಕು. ನಮ್ಮ ಬಳಿ ಲಭ್ಯವಿರುವಂತ ಸಂಪನ್ಮೂಲ ಬಳಸಿ ಹೊಸ ಸಾಹಸಕ್ಕೆ ಮುಂದಾಗಬೇಕು. ಜೀವನ ನಿಂತ ನೀರಾಗಬಾರದು ಅಷ್ಟೇ. ಅದೇನೇ ಆಗಲಿ ಒಂದು ಕೈ ನೋಡೆಬಿಡೋಣ ಅಂತಾ ಮುನ್ನುಗ್ಗಿ ಯಶಸ್ಸು ನಮಗಾಗಿಯೇ ಕಾದಿರುತ್ತದೆ.
4. ಯರ್ರಾಬಿರ್ರಿ ಖರ್ಚು ಮಾಡೋದು ಬೇಡ
ಬೇಕು ಬೇಡಿಕೆಗಳ ಮೇಲೆ ನಮಗೆ ನಿಗಾ ಇರಬೇಕು. ಇಲ್ಲದಿದ್ದರೆ ಹಳಿ ತಪ್ಪಿದ ರೈಲಿನಂತೆ ಜೀವನ ಹಳ್ಳ ಹಿಡಿಯುತ್ತದೆ. ಜೇಬಲ್ಲಿ ದುಡ್ಡು ಇದೆಯಂತಾ ಹೇಗೆ ಬೇಕೊ ಹಾಗೇ ಖರ್ಚು ಮಾಡಿ ಕೈ ಒರೆಸ್ಕೊಬಾರದು. ಬೇಕಾಗಿರೋದು, ಬೇಡಾ ಆಗಿರೋದು ಹೀಗೆ ಎಲ್ಲವೂ ಖರೀದಿಸುತ್ತಾ ಹೋಗಬಾರದು. ಹೀಗೆ ದುಡಿದು ಹಾಗೇ ಖರ್ಚು ಮಾಡ್ತಾ ಇದ್ರೆ ಏನ್ ಬಂತು? ದುಡ್ಡು ಮಾಡಲೇಬೇಕು ಅನ್ನೋರಿಗೆ ಮನಿ ಮ್ಯಾನೆಜಮೆಂಟ್ ತುಂಬಾನೇ ಮುಖ್ಯ ಆಗಿರುತ್ತದೆ. ದುಡಿಯೋದಕ್ಕಾಗಿ ರಿಸ್ಕ್ ತಗೊಳಿ, ಉಳಿತಾಯ ಮಾಡೋಕ್ಕಾಗಿ ಕೇರ್ ತಗೊಳಿ.
5. ಇನ್ನೊಬ್ಬರಿಂದ ಒಳ್ಳೆಯದನ್ನ ಕಲಿರಿ
ಇದು ತುಂಬಾ ಮುಖ್ಯವಾದ ಸಂಗತಿ. ಜೀವನದಲ್ಲಿ ಏಳ್ಗೆ ಬಯಸುವ ವ್ಯಕ್ತಿ ಸುತ್ತಮುತ್ತಲಿನವರಿಂದ ತುಂಬಾ ಕಲಿಯಬೇಕಾಗುತ್ತದೆ. ಯಾಕಂದ್ರೆ ಎಲ್ಲಾ ತಪ್ಪುಗಳನ್ನು ನಾವೇ ಮಾಡಿ ಸರಿಪಡಿಸಿಕೊಂಡು ಹೋಗುವಷ್ಟು ದೀರ್ಘವಾದ ಜೀವನ ನಮ್ಮದಲ್ಲ. ಇನ್ನೊಬ್ಬರೂ ಮಾಡಿರುವ ತಪ್ಪುಗಳು ನಮ್ಮಿಂದ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳೋದು ಕೂಡ ಮುಖ್ಯ. ಯಾರಿಂದ ಹೊಸ ಹೊಸ ವಿಚಾರ ಕಲಿಯಬಹುದು ಅಂತವರ ಸಹವಾಸ ಮಾಡಿ. ಜಾಸ್ತಿ ದುಡೀಬೇಕು, ಹಣ ಗಳಿಸಬೇಕು ಅಂದುಕೊಂಡ್ರೆ ಅಂತಹ ವ್ಯಕ್ತಿಗಳ ಜತೆ ಹೆಚ್ಚು ಬೆರೆಯಬೇಕು. ಅದಕ್ಕೆ ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ ಅನ್ನೋದು. ನಾವು ಏನು ಆಗಬೇಕಂತ ಬಯಸುತ್ತೇವೊ ಅಂಥ ವಾತಾವರಣ ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು. ನೀವೂ ದುಡ್ಡು ಮಾಡಬೇಕಾ? ಹಾಗಿದ್ರೆ ದುಡ್ಡು ಮಾಡಿರುವ ವ್ಯಕ್ತಿಗಳ ಹಾಗೇ ಯೋಚಿಸಬೇಕು..!
6. ಸಿಕ್ಕಾಪಟ್ಟೆ ಉಳಿತಾಯ ಮಾಡಿ
ಹೆಚ್ಚಿನವರು ಸಂಬಳ ಇಲ್ಲವೇ ಆದಾಯ ಬಂದ ತಕ್ಷಣ ಕ್ರೆಡಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಉಜ್ಜಿ ಚಿಂದಿ ಉಡಾಯಿಸಿ ಬಿಡ್ತಾರೆ. ಉಳಿತಾಯ ಮಾಡೋ ಬಗ್ಗೆ ಯೋಚನೆಯನ್ನೇ ಮಾಡಲ್ಲ. ಅಂತವರು ಕಷ್ಟ ಕಾಲದಲ್ಲಿ ಅಥವಾ ಆಕಸ್ಮಿಕ ದುರ್ಘಟನೆಗಳ ಸಂದರ್ಭದಲ್ಲಿ ಕಂಗಾಲಾಗಿ ಬಿಡುತ್ತಾರೆ. ಏನೂ ಮಾಡಬೇಕು ಅನ್ನೋದು ತೋಚುವುದಿಲ್ಲ. ಹೀಗಾಗಿ ಪ್ರತಿ ತಿಂಗಳ ಬಜೆಟ್ ಪ್ಲಾನ್ ರೂಪಿಸಿ ಅದಕ್ಕನುಗುಣವಾಗಿ ಖರ್ಚುವೆಚ್ಚ ಮಾಡುತ್ತಾ ಹೋಗಬೇಕು. ಹೆಚ್ಚೆಚ್ಚು ಹಣ ಉಳಿತಾಯ ಮಾಡುವ ಹವ್ಯಾಸ ತಪ್ಪದೇ ಅಳವಡಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಕಷ್ಟವೆನಿಸಿದರೂ ನಿಧಾನವಾಗಿ ಸಮತೋಲನ ಸಾಧ್ಯವಾಗುತ್ತದೆ. ಅನಗತ್ಯ ವಸ್ತುಗಳ ಖರೀದಿ, ಪಾರ್ಟಿ, ಮೋಜುಮಸ್ತಿಗಳನ್ನು ವರ್ಜಿಸಬೇಕು.
7. ಲೆಕ್ಕಾಚಾರದ ವ್ಯವಹಾರ ನಿಮ್ಮದಾಗಿರಲಿ
ಪ್ರತಿಯೊಂದು ವ್ಯವಹಾರಗಳಲ್ಲಿ ನಿಮ್ಮದೆಯಾದ ಲೆಕ್ಕಾಚಾರ ಇರಲಿ. ಅವರೇನು ಅಂತಾರೆ, ಇವರೇನು ಅಂತಾರೆ ಅನ್ನೊದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಪ್ರೆಸ್ಟಿಜ್ ಗೊಸ್ಕರ ಏನೇನೋ ಮಾಡಲು ಹೋಗಿ ಇನ್ನೇನೋ ಮಾಡ್ಕೊಂಡು ಕೈ ಸುಟ್ಕೊಬಾರದು. ಯಾವುದಕ್ಕೆ ಖರ್ಚು ಮಾಡಬೇಕು ಅಥವಾ ಖರ್ಚು ಮಾಡಬಾರದು ಅನ್ನುವ ಲೆಕ್ಕಾಚಾರ ನಮ್ಮದಾಗಿರಬೇಕು. ಎಲ್ಲೆಲ್ಲೋ ಹಣ ವೇಸ್ಟ್ ಮಾಡುವ ಬದಲು ಉತ್ತಮ ಇಳುವರಿ ಕೊಡುವ ಕಡೆ ಹೂಡಿಕೆ ಮಾಡಿ.
8. ಉಳಿತಾಯ ಮಾಡುತ್ತಿರಿ, ಸಂಪಾದನೆ ಮಾಡುತ್ತಲೇ ಇರಿ
ಉಳಿತಾಯ ಮಾಡಿದ ಮೇಲೆ ಇಲ್ಲವೇ ಉಳಿತಾಯ ಮಾಡುತ್ತಿದ್ದೇವೆ ಅಂದುಕೊಂಡು ಸಂಪಾದನೆ ಮಾಡುವುದನ್ನು ನಿಲ್ಲಿಸಬಾರದು. ಸಂಪಾದನೆ ಅನ್ನೋದು ಸದಾ ಹರಿಯುವ ನದಿಯಾಗಿರಬೇಕು. ಸಂಪಾದನೆಗಾಗಿ ಅನೇಕ ಮೂಲಗಳನ್ನು ಹುಡುಕಿಕೊಳ್ಳಬೇಕು. ಬರೀ ಉಳಿತಾಯ ಮಾಡಿದ ಹಣದಿಂದ ಬೇಕಾದ್ದನ್ನು ಮಾಡುತ್ತೇನೆ ಎನ್ನದೇ ಸಂಪಾದನೆ ಮಾಡುವ ಮಂತ್ರ ಜಪಿಸಿ. ಆಗ ಹೆಚ್ಚೆಚ್ಚು ದುಡ್ಡು ನಿಮ್ಮ ಖಜಾನೆಗೆ ಸೇರುತ್ತದೆ.
9. ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಮುಖ್ಯ
ನಮ್ಮಲ್ಲಿ ತುಂಬಾ ಜನರು ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡ್ತಾರೆ. ಕತ್ತೆ ದುಡಿದ ಹಾಗೇ ದುಡಿದ್ರೂ ನಿನ್ನಿಂದ ಏನೂ ಮಾಡಕ್ಕೆ ಆಗ್ತಾ ಇಲ್ಲ ಅನ್ನುವ ಜನರನ್ನು ನೀವು ಕೇಳಿರ್ತಿರಿ. ತಿಂಗಳ ಸಂಬಳಕ್ಕಾಗಿ ಒಂದು ಕಂಪನಿಯಲ್ಲಿ ಕಷ್ಟಪಟ್ಟು ದುಡಿದು ಆಮೇಲೆ ಅಬ್ಬಬ್ಬಾ ಅಂದ್ರೆ ಒಂದೆರಡು ಪ್ರಮೋಷನ್ ಆಗ್ಬಹುದು. ಆದರೆ ನಿಮ್ಮದೇಯಾದ ಹೊಸ ಐಡಿಯಾದೊಂದಿಗೆ ಸ್ಮಾರ್ಟ್ ವರ್ಕ್ ಮಾಡಿದ್ರೆ ಯಶಸ್ಸು ನಿಮ್ಮದಾಗುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ. ಈಗೀನ ತಾಂತ್ರಿಕ ಮತ್ತು ವೈಜ್ಞಾನಿಕ ಯುಗದಲ್ಲಿ ಸ್ಮಾರ್ಟ್ ವರ್ಕ್ ಗೆ ಹೆಚ್ಚು ಬೆಲೆ. ನಿಮ್ಮ ಬಿಸಿನೆಸ್ ಅಭಿವೃದ್ಧಿ ಮಾಡಬಹುದು ಎನ್ನುವುದರ ಬಗ್ಗೆ ವಿಚಾರ ಮಾಡಿದರೆ ತುಂಬಾ ವೇಗವಾಗಿ ಬೆಳೆಯಬಹುದು.
10. ಬೇಗ ಎದ್ದೇಳಿ
ಹೆಚ್ಚೆಚ್ಚು ದುಡಿಬೇಕು, ದುಡ್ಡು ಮಾಡಬೇಕು ಅನ್ನೋರು ಮುಂಜಾನೆ ಬೇಗ ಎದ್ದೇಳುವ ಹವ್ಯಾಸ ಇಟ್ಟುಕೊಳ್ಳಬೇಕು. ಪ್ರಪಂಚದಲ್ಲಿನ ಹೆಚ್ಚಿನ ಯಶಸ್ವಿ ವ್ಯಕ್ತಿಗಳು ಬೇಗ ಎದ್ದೇಳುವ ಹವ್ಯಾಸ ಹೊಂದಿದ್ದಾರೆ. ಮುಂಜಾನೆ ಬೇಗ ಎದ್ದೇಳುವುದರಿಂದ ಹೆಚ್ಚಿನ ಸಮಯ ಸಿಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಇಡೀ ದಿನ ಉಲ್ಲಾಸದಿಂದ ಇರುವುದು ಮುಖ್ಯವಾಗಿರುತ್ತದೆ. ಒಟ್ಟಿನಲ್ಲಿ ರಾತ್ರೋರಾತ್ರಿ ಶ್ರೀಮಂತರಾದವರೂ, ಸಾಧನೆ ಮಾಡಿದವರೂ ಯಾರೂ ಇಲ್ಲ. ಹಾಗೇ ಯಾರಾದ್ರೂ ಇದ್ರೆ ಅವರೇಲ್ಲಾ ಜೈಲಿನಲ್ಲಿದ್ದಾರೆ. Short cut will cut you short ಅನ್ನುವ ಹಾಗೇ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ.