ನಿಮ್ಮ ಮಕ್ಕಳಿಗಾಗಿ ಉತ್ತಮ ಉಳಿತಾಯ ಯೋಜನೆಗಳು ಇಲ್ಲಿವೆ..
ಮಕ್ಕಳ ಭವಿಷ್ಯತ್ತಿಗಾಗಿ ಪೋಷಕರು ಮೊದಲ ಆದ್ಯತೆ ನೀಡುತ್ತಾರೆ. ಇದರಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಸಂಗತಿಗಳು ಪ್ರಥಮ ಆಧ್ಯತೆ ಪಡೆಯುತ್ತವೆ. ಪಾಲಕರು ಮಕ್ಕಳಿಗೊಸ್ಕರ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ.
ಮಕ್ಕಳ ಭವಿಷ್ಯತ್ತಿಗಾಗಿ ಪೋಷಕರು ಮೊದಲ ಆದ್ಯತೆ ನೀಡುತ್ತಾರೆ. ಇದರಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ಸಂಗತಿಗಳು ಪ್ರಾಮುಖ್ಯತೆ ಪಡೆಯುತ್ತವೆ. ಪಾಲಕರು ಮಕ್ಕಳಿಗೊಸ್ಕರ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಹೆಚ್ಚಿನ ಪಾಲಕರು ಮಕ್ಕಳ ಹೆಸರಿನಲ್ಲಿ ಉತ್ತಮ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಬಯಸುತ್ತಾರೆ.
ಹಾಗಿದ್ದರೆ ಉಳಿತಾಯ ಮಾಡುವುದು ಹೇಗೆ? ಮಕ್ಕಳ ಭವಿಷ್ಯಕ್ಕಾಗಿ ಯಾವ ಯೋಜನೆ ಬೆಸ್ಟ್? ನಿಮ್ಮ ಇಷ್ಟದ ಬೆಸ್ಟ್ ಉಳಿತಾಯ ಯೋಜನೆಗಳ ವಿವರ ಇಲ್ಲಿದೆ ನೋಡಿ...
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಸೌಲಭ್ಯ ಹೊಂದಿರುತ್ತದೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ.
ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ. 1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು. ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.5ರಷ್ಟು ಬಡ್ಡಿದರ ಇತ್ತು. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ. ಆದರೆ ಖಾತೆದಾರರು ಶೇ. 4ರಷ್ಟು ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ. ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.5ರಷ್ಟು ಇದೆ. ಖಾತೆ ತೆರೆದ ದಿನದಿಂದ 21ನೇ ವಯಸ್ಸು ಪೂರೈಸಿದ ನಂತರ ಈ ಖಾತೆಯ ಮೆಚುರಿಟಿ ಅವಧಿ ಮುಗಿಯುತ್ತದೆ. 21 ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.
ಪಿಪಿಎಫ್
ಸಾಮಾನ್ಯವಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಎಲ್ಲರ ನೆಚ್ಚಿನ ಆಯ್ಕೆ. 15 ವರ್ಷಗಳ ದೀರ್ಘಾವಧಿಗಾಗಿ ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ. ವಾರ್ಷಿಕವಾಗಿ ಒಂದು ಲಕ್ಷ ಹೂಡಿಕೆ ಮಾಡಬಹುದಾಗಿದ್ದು, ಶೇ. 8ರಷ್ಟು ಬಡ್ಡಿದರವನ್ನು ನಿರೀಕ್ಷಿಸಬಹುದು. ವಾರ್ಷಿಕವಾಗಿ ಒಂದು ಲಕ್ಷ ಮೊತ್ತ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದರೆ 15 ವರ್ಷಗಳ ಅವಧಿಯಲ್ಲಿ ಒಟ್ಟು ಮೊತ್ತ ರೂ. 31.30 ಲಕ್ಷ ಆಗುತ್ತದೆ. ಈ ಮೊತ್ತ ತೆರಿಗೆ ರಹಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಪಿಪಿಎಫ್ ಖಾತೆಯನ್ನು ಬ್ಯಾಂಕು ಹಾಗೂ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ.
ಇನ್ಸೂರೆನ್ಸ್ ಪಾಲಿಸಿ
ಉತ್ತಮವಾದ ಟರ್ಮ್ ಇನ್ಸೂರೆನ್ಸ್ ಪ್ಲಾನ್ ತೆಗೆದುಕೊಳ್ಳುವುದು ಒಳಿತು. ನಿಮ್ಮ ಮಗುವಿನ ಹೆಸರಿನಲ್ಲಿಯೇ ತೆಗೆದುಕೊಳ್ಳಬೇಕೆಂದು ಹೇಳುತ್ತಿಲ್ಲ. ಬದಲಿಗೆ ನಿಮ್ಮ ಹೆಸರಿನಲ್ಲಿ ಹೆಚ್ಚುವರಿ ಟರ್ಮ್ ಇನ್ಸೂರೆನ್ಸ್ ಪ್ಲಾನ್ ತೆಗೆದುಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಬಹುದು.
ಉದಾ: ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ಅಥವಾ ಮದುವೆಗಾಗಿ 20 ಲಕ್ಷ ಖರ್ಚಾಗಬಹುದು ಎಂದುಕೊಂಡರೆ 20 ಲಕ್ಷದ ಹೆಚ್ಚುವರಿ ವಿಮಾ ಯೋಜನೆಯನ್ನು ಮಾಡಿಸಿಕೊಳ್ಳಬಹುದು.
ರಿಕರಿಂಗ್ ಡಿಪಾಸಿಟ್ (RD)
ರಿಕರಿಂಗ್ ಡಿಪಾಸಿಟ್ ಇನ್ನೊಂದು ಉತ್ತಮ ಹಾಗೂ ಕಡಿಮೆ ರಿಸ್ಕ್ ಇರುವ ಹೂಡಿಕೆ ಎಂದರೆ ಮರುಕಳಿಸುವ ಠೇವಣಿ. ಮಕ್ಕಳ ಭವಿಷ್ಯಕ್ಕಾಗಿ ಹಣಕಾಸು ಉಳಿತಾಯ ಮಾಡುವುದಕ್ಕಾಗಿ ಇದು ನೆಚ್ಚಿನ ಆಯ್ಕೆ. ಪ್ರತಿ ತಿಂಗಳು 1 ಸಾವಿರ ಹೂಡಿಕೆ ಮಾಡಿದರೆ ಹತ್ತು ವರ್ಷಗಳ ನಂತರ ಎರಡು ಲಕ್ಷ ಅಥವಾ 15 ವರ್ಷಗಳ ನಂತರ 2.8 ಲಕ್ಷವನ್ನು ಶೇ. 9ರ ಬಡ್ಡಿದರದಂತೆ ಪಡೆಯಬಹುದು. ಒಂದು ವೇಳೆ ನೀವು ತಿಂಗಳಿಗೆ ಹತ್ತು ಸಾವಿರ ಹೂಡಿಕೆ ಮಾಡಿದರೆ ನಿಮ್ಮ ಆದಾಯ ಎಷ್ಟಾಗಬಹುದೆಂದು ಊಹಿಸಿ.
ಮ್ಯೂಚುವಲ್ ಫಂಡ್
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಶಿಕ್ಷಣ ಅಥವಾ ಮದುವೆಗಾಗಿ ಹಣ ಉಳಿತಾಯ ಮಾಡಬೇಕೆಂದಲ್ಲಿ ಉತ್ತಮ ಇಳುವರಿ ಕೊಡುವ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ.
ಲಾರ್ಜ್ ಕ್ಯಾಪ್ ಫಂಡ್ಸ್ ಮತ್ತು ಬ್ಯಾಲೆನ್ಸ್ಡ್ ಫಂಡ್ ಗಳನ್ನು ಹೂಡಿಕೆಗೆ ಆಯ್ಕೆ ಮಾಡಬಹುದು. ಬೇರೆಯವುಗಳಿಗೆ ಹೋಲಿಸಿದರೆ ಇವುಗಳಲ್ಲಿ ಸಲ್ಪ ರಿಸ್ಕ್ ಕಡಿಮೆ ಎನ್ನಬಹುದು. ಉತ್ತಮವಾದ ಮ್ಯೂಚುವಲ್ ಫಂಡ್ ಗಳಲ್ಲಿ ತಿಂಗಳಿಗೆ ಒಂದು ಸಾವಿರ ಹೂಡಿಕೆ ಮಾಡಿದರೆ ಶೇ. 13ರ ಬಡ್ಡಿದರದಲ್ಲಿ ಹತ್ತು ವರ್ಷಗಳ ಅವಧಿಗೆ 2.5 ಲಕ್ಷ ಅಥವಾ 15 ವರ್ಷಗಳ ಅವಧಿಯಲ್ಲಿ 5.5 ಲಕ್ಷ ಉಳಿತಾಯ ಮಾಡಬಹುದು.
ಚಿನ್ನದಲ್ಲಿ ಹೂಡಿಕೆ
ಚಿನ್ನದಲ್ಲಿ ಹೂಡಿಕೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಆಯ್ಕೆ. ಚಿನ್ನದ ದರ ಏರುಮುಖವಾಗಿ ಸಾಗುತ್ತಿದ್ದು, ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ಬಂಗಾರದ ನಾಣ್ಯಗಳು ಮತ್ತು ಬಂಗಾರ ETF ಗಳು 20% ಕ್ಕಿಂತಲೂ ಹೆಚ್ಚಿನ ಉತ್ತಮ ಫಲವನ್ನೆ ನೀಡಿವೆ. ವರ್ಷದ ಪ್ರಾರಂಭದಲ್ಲಿ 24K ಕ್ಯಾರೆಟ್ ಬಂಗಾರಕ್ಕೆ 25,000 ರೂ. ಬೆಲೆ ಇತ್ತು. ಆದರೆ ಈಗ ಅದರ ಬೆಲೆ 3೧,000 ಸಾವಿರಕ್ಕೆ ಏರಿದೆ. ಬಂಗಾರ ಈ ವರ್ಷದಲ್ಲಿ ಅತ್ಯುತ್ತಮ ಲಾಭ ತಂದುಕೊಟ್ಟಿದೆ.
ಗೋಲ್ಡ್ ಇಟಿಎಫ್ ಮೂಲಕ ಹೂಡಿಕೆ ಮಾಡುವುದು ಅತ್ಯುತ್ತಮವಾಗಿದ್ದು, 10-15 ವರ್ಷಗಳ ಅವಧಿ ಮೇಲೆ ಉತ್ತಮ ಪ್ರತಿಫಲ ಪಡೆಯಬಹುದು.
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಉಳಿತಾಯ ಯೋಜನೆಯಾಗಿದೆ. ಎನ್ಎಸ್ಸಿ ಯಲ್ಲಿ ಹೂಡಿಕೆ ಮಾಡುವುದಕ್ಕೆ ಗರಿಷ್ಠ ಮಿತಿ ಇರುವುದಿಲ್ಲ.
ಇದು ಭಾರತ ಸರ್ಕಾರದ ಉಳಿತಾಯ ಭಾಂಡ್ ಎಂದೇ ಪ್ರಸಿದ್ದಿ ಪಡೆದಿದೆ. ಇದರಲ್ಲಿ ಟಿಡಿಎಸ್ ಕಡಿತವಾಗುವುದಿಲ್ಲ. ತೆರಿಗೆ ಇಲಾಖೆಯ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಮಕ್ಕಳಿಗಾಗಿ ಕೊನೆ ಮಾತು
ಮಕ್ಕಳಿಗಾಗಿ ಉಳಿತಾಯ ಅಥವಾ ಹೂಡಿಕೆ ಮಾಡಬೇಕಾದ ಅಗತ್ಯ ಏನಿದೆ ಎಂಬ ಪ್ರಶ್ನೆ ತುಂಬಾ ಜನರಲ್ಲಿ ಮೂಡಬಹುದು. ಇಂದಿನ ಆಧುನಿಕ ಜಗತ್ತಿನಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಆಫೀಸ್ಸ್ಇನಲ್ಲಿ ಮೀಟಿಂಗ್, ಟಾರ್ಗೆಟ್, ಕರೆಗಳು, ಡೆಡ್ಲೈನ್, ಅನವಶ್ಯಕ ಒತ್ತಡ ಇತ್ಯಶಾದಿಗಳಲ್ಲಿಯೇ ಇಡೀ ದಿನ ಕಳೆದು ಹೋಗುತ್ತದೆ. ಆರೋಗ್ಯದ ಬಗ್ಗೆ ಅಥವಾ ಮಕ್ಕಳ ಬಗ್ಗೆ ವಿಚಾರ ಮಾಡುವಷ್ಟು ತಾಳ್ಮೆ ಅಥವಾ ಸಮಯ ನಮ್ಮಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳ ಮುಂದಿನ ಹಣಕಾಸು ಭವಿಷ್ಯದ ಬಗ್ಗೆ ಚಿಂತಿಸುವುದು ಮುಖ್ಯವಾಗಿರುತ್ತದೆ. ಮಕ್ಕಳ ಶಿಕ್ಷಣ, ಆರೋಗ್ಯ, ಮದುವೆ ಹಾಗೂ ಪ್ರಸ್ತುತ ಖರ್ಚುವೆಚ್ಚಗಳ ಹಿನ್ನೆಲೆಯಲ್ಲಿ ಉತ್ತಮ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.