ಹಣ ಉಳಿತಾಯ ಯಾಕ್ ಮಾಡಬೇಕು? ಅನ್ನೋರಿಗೆ ಇಲ್ಲಿದೆ ಉತ್ತರ...

ಹಣ ಯಾಕ್ರೀ ಉಳಿತಾಯ ಮಾಡಬೇಕು? ಹಣ ಉಳಿತಾಯ ಮಾಡದಿದ್ದರೆ ಬದುಕೊಕೆ ಆಗಲ್ವಾ? ಹಣ ಕೂಡಿಟ್ಟು ಸತ್ತಾಗ ಹೊತ್ಕೊಂಡು ಹೋಗ್ತಿವಾ? ಅಂತಾ ನಮ್ಮಲ್ಲಿ ತುಂಬಾ ಜನ ಉದಾಸೀನತೆಯಿಂದ ಕೇಳ್ತಾರೆ. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ..

ಹಣ ಯಾಕ್ರೀ ಉಳಿತಾಯ ಮಾಡಬೇಕು? ಹಣ ಉಳಿತಾಯ ಮಾಡದಿದ್ದರೆ ಬದುಕೊಕೆ ಆಗಲ್ವಾ? ಹಣ ಕೂಡಿಟ್ಟು ಸತ್ತಾಗ ಹೊತ್ಕೊಂಡು ಹೋಗ್ತಿವಾ? ಅಂತಾ ನಮ್ಮಲ್ಲಿ ತುಂಬಾ ಜನ ಉದಾಸೀನತೆಯಿಂದ ಕೇಳ್ತಾರೆ. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ..
ದುಡ್ಡಿದ್ದವನೇ ದೊಡ್ಡಪ್ಪ, ಹಣ ಕಂಡರೆ ಹೆಣ ಕೂಡ ಬಾಯಿ ಬಿಡತ್ತೆ ಇವು ಹಣದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಗಾದೆ ಕನ್ನಡದ್ದಾದರೂ ಇದರ ಸತ್ಯ ಜಗತ್ತಿನ ಎಲ್ಲಾ ಜನರಿಗೂ ಅನ್ವಯ. ಹಣವಿದ್ದವರನ್ನು ಈ ಸಮಾಜ ಪ್ರಮುಖ ವ್ಯಕ್ತಿಯನ್ನಾಗಿ ಗುರುತಿಸುವುದನ್ನು ನೋಡಿದ್ದೇವೆ.
ಹಣ ಕೈಯಲ್ಲಿದ್ದರೇ ಏನೂ ಮಾಡಲು ಅಗತ್ಯವಾದ ಮನೋಬಲ ದೊರಕುತ್ತದೆ. ಇಷ್ಟವಾದುದನ್ನು ಖರೀದಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಪರಿ ಎಲ್ಲರ ಮನದಲ್ಲಿಯೂ ಮೂಡುತ್ತದೆ.
ಸಾಲ ಪಡೆದುಕೊಳ್ಳುವಾಗ ಇರುವ ಸುಖ ತೀರಿಸುವಾಗ ಇರುವುದಿಲ್ಲ. ಆದ್ದರಿಂದಲೇ ಹಿರಿಯರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದಿದ್ದಾರೆ. ಅಂದರೆ ನಮ್ಮ ಗಳಿಕೆಯ ಸಾಮರ್ಥ್ಯಕ್ಕನುಗುಣವಾಗಿಯೇ ನಮ್ಮ ಖರ್ಚುಗಳು ಅಥವಾ ದೊಡ್ಡ ಖರ್ಚಿಯ ಕಂತು ಇರಬೇಕು.

ಗಳಿಸಿದ್ದೆಲ್ಲವನ್ನು ಗುಳುಂ ಮಾಡದೇ ಒಂದಿಷ್ಟು ಮುಂದಿನ ದಿನಗಳಿಗಾಗಿ ಉಳಿತಾಯ ಮಾಡಿ ಎಂದೇಕೆ ಹೇಳುತ್ತಾರೆ ಗೊತ್ತೆ? ಇಲ್ಲಿ ಹತ್ತು ಕಾರಣಗಳನ್ನು ನೀಡಲಾಗಿದೆ.

ಹಣಕಾಸು ಸ್ವಾತಂತ್ರ್ಯ ಮುಖ್ಯ

ಹಣಕಾಸು ಸ್ವಾತಂತ್ರ್ಯ ಮುಖ್ಯ

ಶ್ರೀಮಂತಿಕೆಯ ಬಗ್ಗೆ ಮಾತನಾಡುವುದಕ್ಕೂ ಶ್ರೀಮಂತರಾಗಿರುವುದಕ್ಕೂ ಆಗಾಧ ವ್ಯತ್ಯಾಸವಿದೆ. ಆದರೆ ಆರ್ಥಿಕವಾಗಿ ಶ್ರೀಮಂತರಾಗಿರುವ ವ್ಯಕ್ತಿಗಳು ತಮ್ಮ ಗಳಿಕೆಯನ್ನು ವೃಥಾ ಖರ್ಚು ಮಾಡದೇ ಉಳಿಸಿಟ್ಟಿರುವುದು ಹಾಗೂ ತಮ್ಮ ಸ್ವಂತ ಗಳಿಕೆಯಿಂದಲೇ ಜೀವನ ನಡೆಸುತ್ತಿರುದನ್ನು ಕಾಣಬಹುದು. ಆರ್ಥಿಕವಾಗಿ ಪರಿಗಣಿಸಿದರೆ ಈ ವ್ಯಕ್ತಿಗಳು ಜೀವನದಲ್ಲಿ ತಮಗೆ ಬೇಕಾದುದನ್ನು ಖರೀದಿಸಲು ಅಗತ್ಯವಿರುವ ಹಣಕ್ಕಾಗಿ ಬೇರೆ ಯಾವುದೇ ಆದಾಯಕ್ಕೆ ಅವಲಂಬಿತರಾಗಬೇಕಿಲ್ಲ.
ಈ ಜಗತ್ತಿನಲ್ಲಿ ಆರ್ಥಿಕ ಸ್ವಾತಂತ್ರ್ಯತೆ ಎಂಬುದು ಶೇ 90ಕ್ಕೂ ಹೆಚ್ಚು ಜನರಿಗೆ ಲಭ್ಯವಿಲ್ಲ. ಇವರು ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ತಮ್ಮ ಕೆಲಸವನ್ನು ಹಾಗೇ ಬಿಟ್ಟು ಬರುವಂತಿಲ್ಲ. ಉದ್ಯೋಗದಲ್ಲಿ ಪರಿಣಿತಿಗಾಗಿ ಮತ್ತೊಮ್ಮೆ ಶಾಲೆಗೆ ಹೋಗಬೇಕಿರುತ್ತದೆ. ತಮ್ಮದೇ ಸ್ವಂತ ಉದ್ಯಮ ಅಥವಾ ಬೇರೊಬ್ಬರ ಜೊತೆಗೆ ಸೇರಿ ಉದ್ಯಮವನ್ನು ಸ್ಥಾಪಿಸುವುದು, ಕುಟುಂಬ ಸದಸ್ಯರಿಗೆ ನೆರವಾಗುವುದು, ವೇತನ ಕಡಿಮೆ ಇದ್ದರೂ ಮಾನಸಿಕವಾಗಿ ಹೆಚ್ಚು ತೃಪ್ತಿಕೊಡುವ ಕೆಲಸಗಳನ್ನು ಮಾಡುವುದು ಇತ್ಯಾದಿಗಳು ಇದಕ್ಕೆ ಉದಾಹರಣೆಯಾಗಿವೆ.

ಹಣಕಾಸು ಸ್ವಾತಂತ್ರ್ಯ ಅಂದರೆ ಶ್ರೀಮಂತರಾಗಿರುವುದಲ್ಲ. ಆದರೆ ಜೀವನದ ನಿರ್ವಹಣೆಗಾಗಿ ನಿಗದಿತ ಆದಾಯದ ಮೇಲೆ ಅವಲಂಬಿತರಾಗಿರದೇ ಇರುವುದಾಗಿದೆ. ಇದಕ್ಕಾಗಿ ನಿಮ್ಮದೇ ಆದ ಉಳಿತಾಯದ ಮೊತ್ತ ನಿಮ್ಮಲ್ಲಿರಬೇಕು.

 

ಎಲ್ಲದರಲ್ಲಿಯೂ 50% ಉಳಿಸಿ, ದಿನಬಳಕೆಯ ವಸ್ತುಗಳಲ್ಲಿ 24% ಉಳಿಸಿ

ಎಲ್ಲದರಲ್ಲಿಯೂ 50% ಉಳಿಸಿ, ದಿನಬಳಕೆಯ ವಸ್ತುಗಳಲ್ಲಿ 24% ಉಳಿಸಿ

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಇದೆ ಎಂದರೆ ಕೊಳ್ಳಬಹುದಾದ ವಸ್ತುಗಳ ಮೊತ್ತ ಕ್ರೆಡಿಟ್ ಕಾರ್ಡ್ ನಲ್ಲಿ ಲಭ್ಯವಿರುವ ಮೊತ್ತದ ಮಿತಿಯನ್ನು ಅವಲಂಬಿಸಿರುತ್ತದೆ. ಅದೇ ನಗದು ಖರೀದಿಗೆ ನಗದು ಹಣ ಎಷ್ಟಿದೆಯೋ ಅದರ ಮೇಲೆ ಅವಲಂಬಿತವಾಗಿರುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ವೇತನಕ್ಕೂ ಹೆಚ್ಚೇ ಮಿತಿ ಲಭ್ಯವಿರುವ ಕಾರಣ ಕೊಳ್ಳುವ ಮನಸ್ಸು ಹೆಚ್ಚೇ ಕೊಳ್ಳಲು ಪ್ರೇರಣೆ ನೀಡುತ್ತದೆ. ಹಾಗಾಗಿ ತಿಂಗಳಿಡೀ ಹೀಗೆ ಕೊಂಡ ವಸ್ತುಗಳ ಮೊತ್ತವನ್ನು ಅದೇ ತಿಂಗಳು ಕಟ್ಟಬೇಕಾಗಿ ಬರುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಮುಂದೆ ಕಟ್ಟಬೇಕಾಗಿ ಬರುವ ಬಡ್ಡಿ ಭಾರಿಯಾಗಿ ಪರಿಣಮಿಸುತ್ತದೆ. ಹೆಚ್ಚೂ ಕಡಿಮೆ ಶೇ. ಐವತ್ತರಷ್ಟು ವಸ್ತುಗಳನ್ನು ನಾವು ಅನಾವಶ್ಯಕವಾಗಿ ಕೊಂಡಿರುತ್ತೇವೆ. ಆದ್ದರಿಂದ ಈ ವಸ್ತುಗಳಿಗೆ ಅನುಸಾರವಾಗಿ ನಿಮ್ಮ ಜೀವನವನ್ನು ಈಗ ಮಾರ್ಪಾಡಿಸಿಕೊಂಡಿದ್ದರೆ ವಾಸ್ತವಿಕತೆಗೆ ಮರಳಿ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಕೊಳ್ಳುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಅಷ್ಟರ ಮಟ್ಟಿಗೆ ಉಳಿತಾಯ ಸಾಧಿಸಲು ನೆರವಾಗುತ್ತದೆ.

ಆಗಾಗ ವಿಶೇಷ ರಿಯಾಯಿತಿಯ ಅವಕಾಶಗಳು ಬರುತ್ತಲೇ ಇರುತ್ತವೆ. ಈ ಅವಕಾಶದ ಸದುಪಯೋಗಪಡಿಸಿಕೊಳ್ಳಲು ನಿಮ್ಮ ಉಳಿತಾಯದ ಮೊತ್ತ ಕೆಲಸಕ್ಕೆ ಬರುತ್ತದೆ. ಆಹಾರವಸ್ತುಗಳ ವಿಷಯ ಬಂದಾಗ ಹೆಚ್ಚು ಕಾಲ ಶೇಖರಿಸಿಡಬಹುದಾದ ಆಹಾರಗಳು ವಿಶೇಷ ರಿಯಾಯಿತಿಯ ಸಮಯದಲ್ಲಿ ಮಾರುಕಟ್ಟೆಗೆ ಬಂದಾಗ ಇವನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡು ಮನೆಯಲ್ಲಿ ಶೇಖರಿಸಿಡಬಹುದು. ಅಂದರೆ ಮುಂದಿನ ತಿಂಗಳು ಈ ವಸ್ತುಗಳನ್ನು ಕೊಳ್ಳುವ ಅಗತ್ಯವಿಲ್ಲ. ಈ ರೀತಿಯಾಗಿ ಸುಮಾರು 24% ರಷ್ಟು ಖರ್ಚನ್ನು ವಾರ್ಷಿಕವಾಗಿ ಉಳಿಸಬಹುದು.

 

ಸ್ವಂತ ಹಣದಲ್ಲಿ ಮನೆ ಖರೀದಿಸಿ

ಸ್ವಂತ ಹಣದಲ್ಲಿ ಮನೆ ಖರೀದಿಸಿ

ಅಂದದ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ ಯಾವುದೇ ಮನೆ ಇಂದು ಅಗ್ಗವಾಗಿ ಲಭಿಸುವುದಿಲ್ಲ. ಬ್ಯಾಂಕ್ ಸಾಲ ಮನೆಯನ್ನು ಕೊಳ್ಳುವುದನ್ನು ಸುಲಭವಾಗಿಸಿದರೂ ಇದಕ್ಕೆ ಪಾವತಿಸಬೇಕಾದ ಪ್ರಾಥಮಿಕ ಮೊತ್ತವನ್ನು ಮಾತ್ರ ನಿಮ್ಮ ಹತ್ತಿರ ಇರಬೇಕೆಂದು ಬ್ಯಾಂಕ್ ನ ನಿಯಮವಿದೆ. ಇದಕ್ಕೆ ಡೌನ್ ಪೇಮೆಂಟ್ ಎಂದು ಕರೆಯುತ್ತಾರೆ. ಆದರೆ ಈ ಮೊತ್ತವನ್ನು ಸಾಲವಾಗಿ ಯಾವುದೇ ಬ್ಯಾಂಕ್ ನೀಡುವುದಿಲ್ಲ. ಈ ಮೊತ್ತ ಸಾಮಾನ್ಯವಾಗಿ ಒಟ್ಟು ಮನೆಯ ಮೊತ್ತದ ಶೇಕಡಾ ಐದರಷ್ಟಿರುತ್ತದೆ. ಅಂದರೆ ಉಳಿದ ತೊಂಭತ್ತೈದು ಶೇಕಡಾ ಮೊತ್ತವನ್ನು ಹಂತಹಂತವಾಗಿ ಬ್ಯಾಂಕ್ ಸಾಲವಾಗಿ ನೀಡುತ್ತದೆ. ಮನೆ ಪೂರ್ಣಗೊಳ್ಳುವ ಹೊತ್ತಿಗೆ ವಿವರಿಸಲಾಗದ ಇನ್ನಷ್ಟು ಹೆಚ್ಚು ಖರ್ಚುಗಳು ಸೇರಿಕೊಳ್ಳುತ್ತವೆ. ಇದು ಸುಮಾರು ಐದು ಶೇಕಡಾದಷ್ಟಾಗಬಹುದು. ನಿಮ್ಮದೇ ಉಳಿತಾಯದ ಹಣ ಇದ್ದರೆ ಡೌನ್ ಪೇಮೆಂಟ್ ನೀಡಿ ಮನೆ ಸಾಲ ಪಡೆಯುವುದು ಸುಲಭವಾಗುತ್ತದೆ.

ಕೂಡಿಟ್ಟ ಹಣದಲ್ಲಿ ಕಾರು ಖರೀದಿಸಿ

ಕೂಡಿಟ್ಟ ಹಣದಲ್ಲಿ ಕಾರು ಖರೀದಿಸಿ

ಸ್ವಂತ ಮನೆಯಂತೆಯೇ ಸ್ವಂತ ಕಾರು ಕೂಡ ಹೆಚ್ಚಿನವರ ಕನಸು. ಮನೆ ಸಾಲದಂತೆಯೇ ಕಾರನ್ನು ಸಹ ಸಾಲದ ಮೂಲಕ ಖರೀದಿಸಬಹುದಾಗಿದೆ. ಇಲ್ಲಿಯೂ ಡೌನ್ ಪೇಮೆಂಟ್ ಅಗತ್ಯವಿದೆ. ಈ ಸಾಲಕ್ಕೆ ಸುಲಭ ಬಡ್ಡಿದರವೂ ಲಭ್ಯ. ಕ್ರೆಡಿಟ್ ಕಾರ್ಡ್ ಇದ್ದವರು ಈ ಡೌನ್ ಪೇಮೆಂಟ್ ಅನ್ನು ಕಾರ್ಡ್ ಮೂಲಕ ಪಾವತಿಸಿ ಉಳಿದ ಕಂತುಗಳನ್ನು ಸುಲಭ ದರದಲ್ಲಿ ಹಿಂದಿರುಗಿಸುವ ಇರಾದೆ ಹೊಂದಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡು ಬಂದರೂ ಮುಂದಿನ ತಿಂಗಳ ಕ್ರೆಡಿಟ್ ಕಾರ್ಡ್ ಬಿಲ್ಲಿನಲ್ಲಿ ಶೇ. 20ಕ್ಕೂ ಹೆಚ್ಚಿನ ಬಡ್ಡಿ ಬಂದಿರುವುದು ಗಮನಕ್ಕೆ ಬರುತ್ತದೆ. ಹೀಗಾಗಿ ನಮ್ಮದೇ ಹಣವನ್ನು ಉಳಿತಾಯದ ಮೂಲಕ ಸಂಗ್ರಹಿಸಿಟ್ಟು ನಮ್ಮ ಕನಸಿನ ಕಾರನ್ನು ಈ ಹಣವನ್ನೇ ಮುಂಗಡವಾಗಿ ನೀಡಿ ಉಳಿದ ಕಂತುಗಳನ್ನು ಸುಲಭವಾಗಿ ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಹೊರೆಯಿಲ್ಲದೇ ತೀರಿಸಬಹುದು. ಹೊಸ ಕಾರಿನ ಬದಲು ವಿಶ್ವಾಸಾರ್ಹವಾದ ಸೆಕೆಂಡ್ ಹ್ಯಾಂಡ್ ಕಾರನ್ನೂ ಕೊಂಚ ಕಡಿಮೆ ಬೆಲೆಗೆ ಖರೀದಿಸಬಹುದು.

ಸಾಲದಿಂದ ಮುಕ್ತರಾಗಿ, ತುರ್ತು ನಿಧಿ

ಸಾಲದಿಂದ ಮುಕ್ತರಾಗಿ, ತುರ್ತು ನಿಧಿ

ಸಾಲದಿಂದ ಮುಕ್ತರಾಗಲು ಹಣ ಉಳಿತಾಯ ಮಾಡಬೇಕು. ಈ ವಾಕ್ಯ ವಿರೋಧಾಭಾಸವಾಗಿ ಕಂಡುಬರುತ್ತಿದೆ ಅಲ್ಲವೇ? ಕ್ರೆಡಿಟ್ ಕಾರ್ಡ್ ಅನ್ನು ಎಲ್ಲಾ ತುರ್ತು ಸಮಯಗಳಿಗೆಲ್ಲಾ ಉಪಯೋಗಿಸಿ ಲಭ್ಯವಿರುವ ಮೊತ್ತವನ್ನು ಖರ್ಚು ಮಾಡಿದರೆ ಈ ಮೊತ್ತವನ್ನು ತೀರಿಸುವುದು ಸುಲಭ ಸಾಧ್ಯವಲ್ಲ.
ಆದ್ದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಡಿಲ ಬಿಟ್ಟು ಖರ್ಚು ಮಾಡುವ ಮೊದಲು ನಿಮ್ಮದೇ ಆದ 50 ಸಾವಿರದಿಂದ 1 ಲಕ್ಷದವರೆಗೆ ಉಳಿತಾಯವಿರುವಂತೆ ನೋಡಿಕೊಳ್ಳಿ. ಇದು ಅಪ್ಪಟವಾಗಿ 'ತುರ್ತು ಪರಿಸ್ಥಿತಿಗೆ ಮಾತ್ರ' ಎಂಬ ನಿಧಿಯಾಗಿರಬೇಕು. ಇದರಿಂದ ನೀವು ಅಕಸ್ಮಿಕವಾಗಿ ಎದುರಾಗುವ ಯಾವುದೇ ಖರ್ಚಿಗೆ ಸಿದ್ಧರಾಗಿರಬಹುದು. ಅಲ್ಲದೇ 'ತುರ್ತು ನಿಧಿ'ಯೊಂದು ಇದೆ ಎಂದ ಮಾತ್ರಕ್ಕೇ ಇದು ಮಾನಸಿಕವಾಗಿ ನೀಡುವ ನೆಮ್ಮದಿ ಹಾಗೂ ಕೆಟ್ಟ ಖರೀದಿಗಳಿಗೆ ಹಾಕುವ ಕಡಿವಾಣ ಅತ್ಯಮೂಲ್ಯ ಪ್ರಯೋಜನಗಳಾಗಿವೆ.

ಆಕಸ್ಮಿಕ ಖರ್ಚುಗಳು

ಆಕಸ್ಮಿಕ ಖರ್ಚುಗಳು

ಕೆಲವು ಖರ್ಚುಗಳು ಆಕಸ್ಮಿಕವಾಗಿ ಎದುರಾಗುತ್ತವೆ. ಮನೆಯ ಸದಸ್ಯರು ಆಸ್ಪತ್ರೆ ಸೇರುವುದು, ಉದ್ಯೋಗ ಕೈಕೊಡುವುದು, ಬಿಸಿನೆಸ್ ನಷ್ಟ, ಕಾರು ಥಟ್ಟನೇ ಸ್ಥಗಿತವಾಗುವುದು ಇತ್ಯಾದಿ. ಇದಕ್ಕೆ ಕನಿಷ್ಟ ಒಂದೆರಡು ಲಕ್ಷದವರೆಗೆ ಸಾಮಾನ್ಯವಾಗಿ ಖರ್ಚು ಬರುತ್ತದೆ. ಮಳೆ ಬಂದಾಗ ಸೋರುವ ಮಾಳಿಗೆ, ತೆಂಗಿನ ಮರ ಬಿದ್ದು ಛಾವಣಿ ಮುರಿದಿರುವುದು ಮೊದಲಾದ ಧುತ್ತನೇ ಎದುರಾಗುವ ಸಂದರ್ಭಗಳನ್ನು ಯಾರೂ ಊಹಿಸಿರುವುದೇ ಇಲ್ಲ. ಕೆಲವು ವಿಷಯಗಳಿಗೆ ವಿಮೆ ಲಭ್ಯವಿದ್ದರೂ ಎಲ್ಲಾ ವಿಷಯಗಳಿಗೆ ವಿಮೆ ಲಭ್ಯವಿರುವುದಿಲ್ಲ. ಪ್ರತಿ ಖರ್ಚಿಗೂ ನಿಮ್ಮ ಬ್ಯಾಂಕ್ ನೆರವು ನೀಡುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಈ ಸಂದರ್ಭಗಳಿಗೆ ತಕ್ಷಣವೇ ಸ್ಪಂದಿಸಿ ಅಗತ್ಯವಿರುವ ಹಣ ನೀಡಿ ಸರಿಪಡಿಸಿಕೊಳ್ಳುವುದು ಅಗತ್ಯವಾಗಿದ್ದು ಇದಕ್ಕೂ ಉಳಿತಾಯದ ಹಣವೇ ನೆರವಿಗೆ ಬರುತ್ತದೆ ಎಂಬುದನ್ನು ಮರೆಯಬಾರದು.

ವಾರ್ಷಿಕ ಖರ್ಚುಗಳು

ವಾರ್ಷಿಕ ಖರ್ಚುಗಳು

ಉತ್ತಮ ಹಾಗೂ ನೆಮ್ಮದಿಯ ಆರ್ಥಿಕ ಜೀವನಕ್ಕಾಗಿ ನಿಮ್ಮ ವಾರ್ಷಿಕ ಖರ್ಚುಗಳಿಗಾಗಿ ನಿಯಮಿತವಾಗಿ ಉಳಿತಾಯ ಮಾಡಬೇಕು. ವರ್ಷಕ್ಕೊಮ್ಮೆ ಬರುವ ಖರ್ಚುಗಳಾದ ಉಡುಗೊರೆಗಳು, ರಜಾ ದಿನದ ಪ್ರವಾಸ, ವಾಹನದ ದುರಸ್ತಿ, ಶಾಲಾ ಶುಲ್ಕ, ಮನೆಯ ರಿಪೇರಿ, ಬಣ್ಣ ಹೊಡೆಸುವುದು, ಉಪಕರಣಗಳ ದುರಸ್ತಿ, ಆಸ್ತಿ ತೆರಿಗೆ ಪಾವತಿ ಹಾಗೂ ಅನ್ವಯವಾದರೆ ಆದಾಯ ತೆರಿಗೆ ಪಾವತಿ ಇತ್ಯಾದಿಗಳು ವಾರ್ಷಿಕವಾಗಿರುತ್ತವೆ. ಕೆಲವೊಮ್ಮೆ ನಿಮ್ಮಲ್ಲಿರುವ ಕ್ರೆಡಿಟ್ ಕಾರ್ಡ್ ನ ಸಾಲ ವರ್ಷ ಕಳೆದ ಬಳಿಕ ಭಾರೀ ಮೊತ್ತವಾಗಿದ್ದು ಇದನ್ನು ತೀರಿಸಲು ಮನೆಯನ್ನೇ ಗಿರವಿ ಇಡಬೇಕಾಗಿ ಬರಬಹುದು. ಆದರೆ ಇದು ತೀರಾ ಅಪಾಯಕಾರಿಯಾದ ನಿರ್ಧಾರವಾಗಿದೆ. ಆದ್ದರಿಂದ ಇಂತಹ ಖರ್ಚುಗಳಿಂದ ರಕ್ಷಣೆ ಪಡೆಯಬೇಕಾದರೆ ಈ ಪರಿಸ್ಥಿತಿಗಾಗಿ ಪ್ರತಿತಿಂಗಳೂ ವಾರ್ಷಿಕ ನಿಧಿಯೊಂದಕ್ಕೆ ನಿಯಮಿತವಾಗಿ ಉಳಿತಾಯ ಮಾಡಿಡಬೇಕು. ಇದರಿಂದ ವಾರ್ಷಿಕ ಖರ್ಚುಗಳನ್ನು ನಿಭಾಯಿಸುವುದು ಸಾಧ್ಯವಾಗುವುದು ಮಾತ್ರವಲ್ಲ ಮನಸ್ಸಿಗೂ ನೆಮ್ಮದಿ.

ತುರ್ತು ಪರಿಸ್ಥಿತಿ ತಯಾರಿ

ತುರ್ತು ಪರಿಸ್ಥಿತಿ ತಯಾರಿ

ತುರ್ತು ಪರಿಸ್ಥಿತಿ ನಮಗಾರಿಗೂ ಬರಬಾರದು ಎಂದು ನಾವೆಲ್ಲಾ ಅಶಿಸುತ್ತೇವೆ. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ಪ್ರತಿಯೊಬ್ಬರಿಗೂ ತುರ್ತು ಪರಿಸ್ಥಿತಿ ಎದುರಾಗಬಹುದು. ಮನೆಯ ಸದಸ್ಯರಿಗೆ ಹಠಾತ್ತಾಗಿ ಅನಾರೋಗ್ಯ ಎದುರಾಗಬಹುದು. ಆಕಸ್ಮಿಕವಾಗಿ ದೂರದೂರಿಗೆ ಪ್ರಯಾಣ ಬೆಳೆಸಬೇಕಾಗಿ ಬರಬಹುದು. ಕಾರು ಅಪಘಾತಕ್ಕೊಳಗಾಗಬಹುದು, ನಿಸರ್ಗ ವಿಕೋಪದ ಕಾರಣ ಕಟ್ಟಡ ಕುಸಿಯಬಹುದು, ಮನೆಯೊಳಗೆ ನೀರು, ನೀರಿನ ಪೈಪುಗಳು ಒಡೆಯುವುದು, ಆಪ್ತರ ನಿಧನದಲ್ಲಿ ಭಾಗಿಯಾಗಲು ತಕ್ಷಣವೇ ದುಬಾರಿ ವಿಮಾನಯಾನದದ ಪ್ರಯಾಣ ಕೈಗೊಳ್ಳಬೇಕಾಗಿ ಬರಬಹುದು. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಂತೂ ಅಲ್ಲ ಆದರೆ ದುಬಾರಿ ಹೌದು. ನಾವೆಲ್ಲರೂ ಒಂದಲ್ಲಾ ಒಂದು ತುರ್ತು ಪರಿಸ್ಥಿತಿಯನ್ನು ಎದುರಿಸಿಯೇ ಇರುತ್ತೇವೆ. ಮುಂದಿನ ತುರ್ತು ಪರಿಸ್ಥಿತಿಗೆ ಉಳಿತಾಯದ ಹಣ ನೀಡುವ ಮಾನಸಿಕ ಬೆಂಬಲ ಬೇರಾವುದೂ ನೀಡದು.

ಕೆಲಸ ಕಳೆದುಕೊಳ್ಳಬಹುದು ಅಥವಾ ಅಪಘಾತ ಎದುರಾಗಬಹುದು

ಕೆಲಸ ಕಳೆದುಕೊಳ್ಳಬಹುದು ಅಥವಾ ಅಪಘಾತ ಎದುರಾಗಬಹುದು

ಎಲ್ಲವೂ ಚೆನ್ನಾಗಿದ್ದಾಗ ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ ಎಂಬುದು ನಾಣ್ಣುಡಿ. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಮಾತ್ರ ಯಾರ ಮೇಲಾದರೂ ಸಿಡಿಲು ಎರಗಬಹುದು. ಅಕಸ್ಮಿಕವಾಗಿ ನಿಮ್ಮ ಕೆಲಸ ಹೋಗಬಹುದು, ನಿಮ್ಮ ವ್ಯಾಪಾರ ಕುಸಿಯಬಹುದು ಅಥವಾ ಬೇರೆ ಯಾರದ್ದೋ ತಪ್ಪಿನ ಫಲವಾಗಿ ನಿಮಗೆ ಅಪಘಾತವಾಗಿ ಅಂಗವೈಕಲ್ಯಕ್ಕೆ ಒಳಗಾಗಬಹುದು. ಇದು ದೈಹಿಕ ಅಥವಾ ಮಾನಸಿಕವಾಗಿ ಭಾರೀ ಆಘಾತಕ್ಕೆ ಕಾರಣವಾಗಬಹುದು. Employment Insurance (EI) ಎಂಬ ವಿಮೆ ನಿಮ್ಮ ಕೆಲಸ ಹೋದ ಕನಿಷ್ಟ ಆರು ವಾರಗಳ ಬಳಿಕ ಮಾತ್ರವೇ ಅನ್ವಯವಾಗುತ್ತದೆ. ಈ ದಿನಗಳ ಖರ್ಚಿಗೇನು ಮಾಡುತ್ತೀರಿ? ಈಗ ಉಳಿತಾಯವಿಲ್ಲದಿದ್ದರೆ ಸಾಲ ಅನಿವಾರ್ಯವಾಗುತ್ತದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಮುಂದಿನ ದಿನಗಳಲ್ಲಿ ಕೆಲಸ ಸಿಕ್ಕರೂ ಇದರ ವೇತನವನ್ನು ಹಿಂದಿನ ದಿನಗಳ ಸಾಲವನ್ನು ತೀರಿಸಲು ಪ್ರತಿತಿಂಗಳೂ ಹೆಣಗಾಡುತ್ತಾ ಬರಬೇಕಾಗಿ ಬರಬಹುದು. ಅಲ್ಲದೇ ಈಗಿನ ಕೆಲಸದ ವೇತನ ಹಿಂದಿನ ವೇತನಕ್ಕಿಂತಲೂ ಹೆಚ್ಚಿದ್ದಾಗ ಮಾತ್ರವೇ ಇದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಹಿಂದಿನ ಸಾಲಗಳನ್ನು ಪಾವತಿಸಲು ವರ್ಷಗಟ್ಟಲೇ ತಗಲಬಹುದು.

ಉತ್ತಮ ಜೀವನಕ್ಕಾಗಿ

ಉತ್ತಮ ಜೀವನಕ್ಕಾಗಿ

ಎಲ್ಲರೂ ನಮ್ಮ ಜೀವನವನ್ನು ನೆಮ್ಮದಿಯಿಂದ, ಯಾವುದೇ ಮಾನಸಿಕ ಅಥವಾ ದೈಹಿಕ ತೊಂದರೆಯಿಲ್ಲದೇ ಕಳೆಯಲು ಬಯಸುತ್ತೇವೆ. ಆದರೆ ತಿಂಗಳ ಖರ್ಚನ್ನು ತಿಂಗಳ ಆದಾಯದಿಂದ ಸರಿದೂಗಿಸುವ ಹಾಗೂ ಮುಂದಿನ ದಿನಗಳಿಗೆ ಯಾವುದೇ ಯೋಜನೆ ಹಾಕಿಕೊಳ್ಳದ ಕುಟುಂಬಗಳು "ತೊಂದರೆ" ಯಿಂದ "ತೊಂದರೆ"ಗೆ ಧಾವಿಸುತ್ತಿರುತ್ತವೆ.
ಆದ್ದರಿಂದ ವೇತನ ಅಥವಾ ಆದಾಯವೆಷ್ಟೇ ಇರಲಿ, ಇದನ್ನು ಸೂಕ್ತವಾಗಿ ವಿನಿಯೋಗಿಸಿ ಮುಂದಿನ ದಿನಗಳಿಗಾಗಿ ಕೊಂಚ ಉಳಿತಾಯ ಸಾಧಿಸುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದು ಬರುವುದಿದೆ ಹಾಗೂ ಇದರ ಮೇಲೆ ನಿಮ್ಮ ನಿಯಂತ್ರಣವಿರುವುದಿಲ್ಲ. ಇಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಕೂಡಿಡುವ ಮೂಲಕ ಮುಂದಿನ ದಿನಗಳಲ್ಲಿ ಪಡೆಯಬಹುದಾದ ನೆಮ್ಮದಿಗೆ ನಾಂದಿಯಾಗಬಹುದು. ಉಳಿತಾಯದಿಂದ ಕಳೆದುಕೊಳ್ಳುವುದೇನೂ ಇಲ್ಲ, ಏನಿದ್ದರೂ ಮುಂದಿನ ದಿನಗಳಲ್ಲಿ ಸುಖಕರ ಜೀವನ ಹಾಗೂ ಮಾನಸಿಕ ನೆಮ್ಮದಿ ಗಳಿಸುವುದು ಮಾತ್ರ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+