ಸಾಲ ಪಾವತಿಗೆ ಋಣ ಪರಿಹಾರ ಕಾಯಿದೆ: ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ
ಬ್ಯಾಂಕು, ಹಣಕಾಸು ಸಂಸ್ಥೆಗಳ ಸಾಲದ ನೋಟಿಸುಗಳಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗುವ ರೈತರು ಆತ್ಮಹತ್ಯೆಗೆ ಶರಣಾಗಿರುವ ಸಾವಿರಾರು ಘಟನೆಗಳು ನಡೆದಿವೆ.
ಬ್ಯಾಂಕು, ಹಣಕಾಸು ಸಂಸ್ಥೆಗಳ ಸಾಲದ ನೋಟಿಸುಗಳಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗುವ ರೈತರು ಆತ್ಮಹತ್ಯೆಗೆ ಶರಣಾಗಿರುವ ಸಾವಿರಾರು ಘಟನೆಗಳು ನಡೆದಿವೆ. ಸಾಲದ ಸುಳಿಗೆ ಸಿಲುಕಿದ ರೈತರ ಸಾಲವನ್ನು ಪಾವತಿಸಲು ಕೇರಳ ಮಾದರಿಯಲ್ಲಿ ಕಾಯಿದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಆತ್ಮಹತ್ಯೆಗೆ ಶರಣಾಗುವ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ 'ಋಣ ಪರಿಹಾರ ಆಯೋಗ' ಕಾನೂನು ಸಿದ್ಧಪಡಿಸಿದೆ. ಇದು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳ ತರುವಾಯ 'ಋಣ ಪರಿಹಾರ' ಮಹತ್ವದ ಯೋಜನೆಯಾಗಲಿದೆ.
ಋಣ ಪರಿಹಾರ ಆಯೋಗ
ರೈತರು ಪಡೆದಿರುವ ಸಾಲಕ್ಕಿಂತಹೆಚ್ಚು ಬಡ್ಡಿಯನ್ನು ಪಾವತಿಸಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇನ್ನೊಂದೆಡೆ ರೈತರು ಬರಗಾಲ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿ ಸಾಲ ಪಾವತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಋಣ ಪರಿಹಾರ ಆಯೋಗದ ನೆರವು ಪಡೆಯಬಹುದಾಗಿದೆ. ಈಗಾಗಲೇ ಕೇರಳದಲ್ಲಿ ಋಣ ಪರಿಹಾರ ಆಯೋಗ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಋಣ ಪರಿಹಾರ ಆಯೋಗ ಜಾರಿಗೆ ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ ಎಂದು ಹೇಳಲಾಗಿದೆ.
ರೈತರ ಸ್ಥಿತಿಗತಿಯ ಪರಿಶೀಲನೆ
ಬ್ಯಾಂಕುಗಳಿಂದ ಅಥವಾ ಸಾಲದಾತ ಸಂಸ್ಥೆಗಳಿಂದ ನೋಟಿಸ್ ಬಂದಾಗ ರೈತರು ಗಾಬರಿಯಾಗುತ್ತಾರೆ. ಸ್ವಾಭಿಮಾನಿ ರೈತರು ಮನನೊಂದು ಆತ್ಮಹತ್ಯೆಗೂ ಮುಂದಾಗುತ್ತಾರೆ. ಅಂತಹ ರೈತರಿಗೆ ಪರಿಹಾರ ಒದಗಿಸಲು ಆಯೋಗ ರಚಿಸಲಾಗುತ್ತಿದೆ. ಈ ಆಯೋಗವು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿದೆ. ಸಾಲದ ಸಂಕಷ್ಟದಲ್ಲಿ ಸಿಲುಕಿರುವ ರೈತರ ಸ್ಥಿತಿಗತಿಯ ಪರಿಶೀಲನೆ ನಡೆಸಿ ಅವರ ಸಾಲ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.
ಆಯೋಗದ ಸ್ವರೂಪ
ಹೈಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿರುವ ಋಣ ಪರಿಹಾರ ಆಯೋಗವು ನ್ಯಾಯಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಏಳು ಸದಸ್ಯರು, ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ರೈತರಾಗಲಿ, ಬ್ಯಾಂಕುಗಳಾಗಲಿ ಆಯೋಗದ ತೀರ್ಮಾನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದಂತೆ ಕಾನೂನು ಸಿದ್ಧಪಡಿಸಲಾಗುತ್ತಿದೆ. ಒಟ್ಟಿನಲ್ಲಿ ರೈತರಿಗೆ ಪ್ರಾಮಾಣಿಕವಾಗಿ ಪರಿಹಾರ ಕೊಡಿಸುವುದು ಆಯೋಗದ ಕರ್ತವ್ಯ.
ರೈತರು ಏನು ಮಾಡಬಹುದು?
ಯಾವುದೇ ಬ್ಯಾಂಕುಗಳಿಂದ ಸಾಲದ ಕುರಿತಾದ ನೋಟಿಸು ಬಂದ ಕೂಡಲೇ ಆಯೋಗವನ್ನು ಸಂರ್ಪಸಿ ದೂರು ದಾಖಲಿಸಬಹುದು.ಈ ಬಗ್ಗೆ ಆಯೋಗ ವಿವರವಾದ ವಿಚಾರಣೆ ನಡೆಸಿ ಪರಿಶೀಲಿಸಲಿದೆ. ದೂರಿನನ್ವಯ ರೈತರ ಸ್ಥಿತಿಗತಿ ಅಧ್ಯಯನಕ್ಕೆ ಸ್ಥಳ ಪರಿಶೀಲನೆ ಕೂಡ ಮಾಡಬಹುದು. ರೈತರ ಪರಿಸ್ಥಿತಿ ಅಧ್ಯಯನದ ಬಳಿಕ ಬ್ಯಾಂಕುಗಳಿಗೂ ಬಡ್ಡಿ ಮನ್ನಾ ಸೇರಿ ಕೆಲವು ಸೂಚನೆಗಳನ್ನು ನೀಡಲಿದೆ.
ಸಾಲ ಮನ್ನಾ ಶಾಶ್ವತ ಪರಿಹಾರವಲ್ಲ
ಸರ್ಕಾರಗಳು ಕೈಗೊಳ್ಳುವ ಸಾಲಮನ್ನಾ ಯೋಜನೆಗಳು ಶಾಶ್ವತ ಪರಿಹಾರ ಒದಗಿಸುವುದಿಲ್ಲ. ಸಾಲ ಪಡೆದ ಬ್ಯಾಂಕುಗಳಿಗೆ ರೈತರು ಎಷ್ಟು ಹಣ ಪಾವತಿಸಬೇಕು,ಸರ್ಕಾರದಿಂದ ಯಾವ ರೀತಿಯ ನೆರವು ನೀಡಬೇಕು ಎಂಬ ಬಗ್ಗೆ ತೀರ್ಪು ಋಣಪರಿಹಾರ ಆಯೋಗ ನೀಡಲಿದೆ. ಆದ್ದರಿಂದಲೇ ಬ್ಯಾಂಕುಗಳ/ಸಾಲದಾತರ ಕಿರಿಕಿರಿಯಿಂದ ಮುಕ್ತಿ ನೀಡಲು ಆಯೋಗ ರಚಿಸಲಾಗುತ್ತಿದೆ.
ಋಣ ಪರಿಹಾರ ಕಾಯಿದೆ ಕೇಂದ್ರದ ಒಪ್ಪಿಗೆ ಸಿಗಲಿಲ್ಲ
ಗ್ರಾಮೀಣ ಭಾಗಗಳಲ್ಲಿ ಖಾಸಗಿ ಲೇವಾದೇವಿದಾರರು ಬಡ್ಡಿ ಮೂಲಕ ರೈತರ, ಬಡವರ ರಕ್ತ ಹೀರುತ್ತಾರೆ. ಇಂತವರನ್ನು ಬಗ್ಗು ಬಡಿಯುವ ನಿಟ್ಟಿನಲ್ಲಿ ಋಣ ಪರಿಹಾರ ಕಾಯಿದೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದ್ದರೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿಲ್ಲ. ರಾಜ್ಯ ಸರ್ಕಾರವು ದೇವರಾಜ ಅರಸು ಸರ್ಕಾರದ ಮಾದರಿಯಲ್ಲಿ ಕಾಯಿದೆ ರೂಪಿಸಿತ್ತು. ಖಾಸಗಿ ಲೇವಾದೇವಿದಾರರು ರೈತರಿಗೆ ಒಂದು ವರ್ಷದ ಅವಧಿಯಲ್ಲಿ ಯಾವುದೇ ಹಿಂಸೆ ನೀಡದಿರುವಂತೆ ಕಾಯಿದೆ ರೂಪಿಸಲಾಗಿತ್ತು.
ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..