ಹಣಕಾಸು ನಿರ್ವಹಣೆ ಕರಗತವಾದರೆ ನಿಮ್ಮ ಬಾಳು ಬಂಗಾರ!
ಜಗತ್ತಿನಲ್ಲಿ ಪ್ರತಿಯೊಬ್ಬರೂ ಅತಿಹೆಚ್ಚು ಇಷ್ಟಪಡುವ ವಸ್ತು ಅಂದರೆ ಅದು ಹಣ ಇರಬಹುದಲ್ಲವೇ? ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬುದು ಜನಪ್ರಿಯ ಗಾದೆ ಮಾತು. ಇದು ಹಣದ ಮೌಲ್ಯವನ್ನು ಸಾರುತ್ತದೆ.
ಜಗತ್ತಿನಲ್ಲಿ ಪ್ರತಿಯೊಬ್ಬರೂ ಅತಿಹೆಚ್ಚು ಇಷ್ಟಪಡುವ ವಸ್ತು ಅಂದರೆ ಅದು ಹಣ ಇರಬಹುದಲ್ಲವೇ? ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬುದು ಜನಪ್ರಿಯ ಗಾದೆ ಮಾತು. ಇದು ಹಣದ ಮೌಲ್ಯವನ್ನು ಸಾರುತ್ತದೆ. ಹೀಗಾಗಿ ಜೀವನದಲ್ಲಿ ಹಣಕಾಸು ನಿರ್ವಹಣೆ ಬಹುಮುಖ್ಯ. ನಮ್ಮ ಇಂದಿನ ಹವ್ಯಾಸಗಳೇ ಮುಂದಿನ ಆರ್ಥಿಕ ಭದ್ರತೆಗೆ ಸುರಕ್ಷಿತ ಅಡಿಪಾಯ. ಸರಿಯಾದ ಹಣಕಾಸು ನಿರ್ಧಾರ, ನಿರ್ವಹಣೆಗಳು ನಿಮ್ಮ ಉಜ್ವಲ ಭವಿಷ್ಯಕ್ಕೆ ದಾರಿದೀಪ ಆಗಬಲ್ಲದು.
ಹಾಗಿದ್ದರೆ ನಮ್ಮ ಜೀವನದಲ್ಲಿ ಹಣಕಾಸು ಅಡಿಪಾಯವನ್ನು ಸುಭದ್ರಗೊಳಿಸಿ ಆರ್ಥಿಕ ಸುಸ್ಥಿರತೆ ಸಾಧಿಸುವುದು, ಉತ್ತಮ ಹಣಕಾಸು ನಿರ್ವಹಣೆ ಮಾಡುವುದು ಬಹುಮುಖ್ಯ ಅಲ್ಲವೆ? ಹಾಗಿದ್ದರೆ ಇದರ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? ನಾವು ರೂಢಿಸಿಕೊಳ್ಳಬೇಕಾದ ಹವ್ಯಾಸಗಳೇನು? ಇಂತಹ ಪ್ರಶ್ನೆಗಳು ಎದುರಾಗುವುದು ಸಹಜ.
ಹಣಕಾಸು ಉಳಿತಾಯ ಮತ್ತು ನಿರ್ವಹಣೆಯ ಬಗ್ಗೆ ತಿಳಿದುಕೊಂಡು ನಮ್ಮ ಜೀವನದ ಶಿಸ್ತುಬದ್ದ ಭಾಗವಾಗಿಸಲು ಈ ಸಂಗತಿಗಳನ್ನು ಅರಿಯೋಣ ಬನ್ನಿ...
ಬಜೆಟ್ ಯೋಜನೆ
ಒಂದು ದೇಶಕ್ಕೆ ಬಜೆಟ್ ಹೇಗೆ ಮುಖ್ಯವೋ ಹಾಗೆಯೇ ಒಂದು ಕುಟುಂಬಕ್ಕೂ ಬಜೆಟ್ ಪ್ಲಾನ್ ಅಷ್ಟೇ ಮುಖ್ಯ. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಹಣಕಾಸು ಪರಿಸ್ಥಿತಿ ತಿಳಿಯಲು ಪ್ರತಿ ತಿಂಗಳ ಆದಾಯವನ್ನು ಲೆಕ್ಕ ಹಾಕಬೇಕಾಗುತ್ತದೆ. ಅದರಲ್ಲಿ ಹಣ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ (ದಿನನಿತ್ಯದ ಖರ್ಚು, ಮಕ್ಕಳ ಖರ್ಚು, ಶಿಕ್ಷಣ, ಮನರಂಜನೆ ಮತ್ತು ಗೃಹ ನಿರ್ಮಾಣ, ಆಹಾರ, ಬಟ್ಟೆ ಮತ್ತು ಇನ್ನಿತರ ಉಪಯುಕ್ತತೆ) ಎಂಬುದನ್ನು ತಿಳಿದುಕೊಳ್ಳಬೇಕು. ನಿಮ್ಮ ದೈನಂದಿನ ಆದಾಯ, ಖರ್ಚು ವೆಚ್ಚಗಳ ಯೋಜನೆಗಾಗಿ ವ್ಯವಸ್ಥಿತ ಬಜೆಟ್ ತಯಾರಿಸಿ.
ಬಜೆಟ್ ಪ್ಲಾನ್ ನಂತರ ನಿಮ್ಮ ವೆಚ್ಚವನ್ನು ಟ್ರ್ಯಾಕ್ ಮಾಡಿ ಆದಾಯಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಅವಕಾಶ ಕೊಡದೆ ವಾಸ್ತವಿಕವಾಗಿ ಖರ್ಚುವೆಚ್ಚ ನಿರ್ವಹಿಸಿ.
ಮಕ್ಕಳ ಭವಿಷ್ಯ ನಿಧಿ
ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮುಂಜಾಗ್ರತಾ ಕ್ರಮ ವಹಿಸುವುದು ತುಂಬಾ ಮುಖ್ಯ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ತಗಲುವುದರಿಂದ ಪ್ರತ್ಯೇಕವಾಗಿ ಹಣ ತೆಗೆದಿಡುವುದು ಮುಂಜಾಗ್ರತೆ ದೃಷ್ಟಿಯಿಂದ ಒಳ್ಳೆಯದು. ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಮಕ್ಕಳ ಶಿಕ್ಷಣ, ಮದುವೆ ಮತ್ತು ಜೀವನ ಭವಿಷ್ಯಕ್ಕಾಗಿ ವಿಮೆ ಮಾಡಿಸುವುದನ್ನು ಮರೆಯದಿರಿ.
ಆಸ್ತಿ ಖರೀದಿಸಿ
ನಿಮಗೆ ಸಾಕಾಗುವಷ್ಟು ಆಸ್ತಿ ಅಥವಾ ಸ್ವಂತ ಮನೆ ಇಲ್ಲದಿದ್ದರೆ ಎಸ್ಟೇಟ್ ಪ್ಲಾನ್ ಮಾಡಲು ಮರೆಯಬೇಡಿ. ಈ ಮೇಲಿನ ಎಲ್ಲ ಯೋಜನೆಗಳೊಂದಿಗೆ ಎಸ್ಟೇಟ್ ಯೋಜನೆ ಕೂಡ ಅಷ್ಟೇ ಮುಖ್ಯ. ನಿಮ್ಮ ಮರಣದ ನಂತರ ಕೂಡ ನಿಮ್ಮ ವಂಶದ ಆಸ್ತಿಯಾಗಿ ಮುಂದುವರೆಯುವುದರಿಂದ ಸರಿಯಾದ ದಾಖಲಾತಿ, ವಿಲ್ ಮಾಡಿಸಬೇಕಾಗುತ್ತದೆ.
ತುರ್ತು ನಿಧಿ ಇರಲಿ
ಪ್ರತಿಯೊಬ್ಬರೂ ತುಂಬಾ ಮುಖ್ಯವಾಗಿ ಗಮನವಹಿಸಿಬೇಕಾದ ವಿಚಾರ. ಕಷ್ಟಗಳು ಹೇಳಿ ಕೇಳಿ ಬರುವಂತವುಗಳಲ್ಲ. ಎಲ್ಲರಿಗೂ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ತುರ್ತು ಸನ್ನಿವೇಷಗಳು, ಕಷ್ಟ-ಕಾರ್ಪಣ್ಯಗಳು ಎದುರಾಗುತ್ತವೆ. ಹೀಗಾಗಿ ಪೂರ್ವ ಯೋಜಿತವಾಗಿ ತುರ್ತುನಿಧಿಯನ್ನು ಇಡುವುದು ಉತ್ತಮ ಹವ್ಯಾಸ. ಇದು ಕಷ್ಟಕಾಲದ ಆಪತ್ ಬಾಂಧವನಾಗಿ ಕೆಲಸ ಮಾಡುತ್ತದೆ. ಹೆಚ್ಚಿಗೆ ಉಳಿದರೆ ಹೂಡಿಕೆ ಮಾಡಬಹುದು.
ಕ್ರೆಡಿಟ್ ಕಾರ್ಡ್ ನಿರ್ವಹಣೆ
ಹಣಕಾಸು ನಿರ್ವಹಣೆಯಲ್ಲಿ ತುಂಬಾ ಮುಖ್ಯವಾದ ಸಂಗತಿ ಕ್ರೆಡಿಟ್ ಕಾರ್ಡ್ ನಿರ್ವಹಣೆ. ಕ್ರೆಡಿಟ್ ಎನ್ನುವುದು ಒಂದು ಕರಾರಿನ ಒಪ್ಪಂದ (contractual agreement) ಆಗಿರುತ್ತದೆ. ಸಾಲಗಾರ ಸರಕುಗಳನ್ನು ಖರೀದಿ ಮಾಡಿ ನಂತರ ಅದರ ಮೊತ್ತವನ್ನು ಪಾವತಿಸಲು ಒಪ್ಪುವ ವಿಧಾನವಾಗಿದೆ.
ಇದು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ನ್ನು ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಮೇಲಿನ ಕ್ರೆಡಿಟ್ ನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಕ್ರೆಡಿಟ್ ಬಳಸುವುದರ ಮೇಲೆ ವೆಚ್ಚಗಳು ಅನ್ವಯವಾಗುತ್ತವೆ.
ಕ್ರೆಡಿಟ್ ಆಫರ್ ಜತೆ ಬರುವ ಅನೇಕ ಪ್ರಯೋಜನಗಳನ್ನು ವಿಧದ ಕ್ರೆಡಿಟ್ ಆಯ್ಕೆಗಳ ವೆಚ್ಚಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕಾಗುತ್ತದೆ. ಹೆಚ್ಚು ವೆಚ್ಚ ಮಾಗೂ ಸಾಲಕ್ಕೆ ಆಧ್ಯತೆ ನೀಡದೆ ಕ್ರೆಡಿಟ್ ನ್ನು ಹೇಗೆ ಉಪಯೋಗಿಸುತ್ತಿರಿ ಎಂಬುದಕ್ಕೆ ನೀವು ಜವಾಬ್ಧಾರರಾಗಿರುತ್ತಿರಿ. ಇಲ್ಲದಿದ್ದರೆ ಸಾಲದ ಕೂಪಕ್ಕೆ ಬೀಳುತ್ತಿರಿ.
ಕ್ರೆಡಿಟ್ ವರದಿ ಪರಿಶೀಲಿಸಿ
ನಿಮ್ಮ ಕ್ರೆಡಿಟ್ ಸ್ಕೋರ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಾ, ಸುಸ್ಥಿರತೆ ಕಾಪಾಡಿಕೊಳ್ಳವುದು ಹಣಕಾಸು ನಿರ್ವಹಣೆಯ ಇನ್ನೊಂದು ಮುಖ್ಯ ಸಂಗತಿಯಾಗಿದೆ. ನಿಮ್ಮ ವಾರ್ಷಿಕ ವರದಿಯ ಉಚಿತ ಪ್ರತಿಯನ್ನು ಪಡೆದು ಎಲ್ಲಾ ಮಾಹಿತಿ ನಿಖರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಕೆಟ್ಟದಾಗಿದ್ದರೆ ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಸಾಲ ಪಾವತಿಸಿ ಅನಗತ್ಯ ಖರ್ಚುವೆಚ್ಚಗಳನ್ನು ತಪ್ಪಿಸಿಕೊಳ್ಳಿ.
ಸಾಲದಿಂದ ಹೊರಬನ್ನಿ?
ಸಾಲದಿಂದ ಹೊರಬರುವುದು ದೀರ್ಘಾವಧಿ ಗುರಿಯಾದರೆ, ಅಲ್ಪಾವಧಿಗಾಗಿ ಕೆಲ ಗುರಿಗಳನ್ನಿಟ್ಟು ಅದನ್ನು ಸಾಧಿಸಲು ಮುಂದಾಗಬೇಕು. ಪ್ರತಿಯೊಬ್ಬರಿಗೂ ಹಣಕಾಸು ನಿರ್ವಹಣೆ ಸಂದರ್ಭದಲ್ಲಿ ಕ್ರೆಡಿಟ್ ಸ್ಕೋರ್ ತುಂಬಾ ಪ್ರಧಾನ ಘಟ್ಟ. ಇದರ ಕುರಿತು ವೃತ್ತಿಪರರಿಂದ ಸಲಹೆ ಪಡೆದುಕೊಳ್ಳಿ. ತೀರಾ ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಸಾಲ ಪಡೆಯಿರಿ.
ಅಲ್ಲದೇ, ಕೆಲವೊಮ್ಮೆ ಸಾಲದ ಸಮಸ್ಯೆಗಳನ್ನು ಒಂದು ಪ್ರತಿಷ್ಠಿತ ಕಂಪನಿ ಅಥವಾ ವೃತ್ತಿಪರರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಿ. ನಿಮಗೆ ವಿಶ್ವಾಸ ಅಥವಾ ಪರಿಚಯ ಇರುವ ವೃತ್ತಿಪರರನ್ನು ಇಲ್ಲವೆ ಕಂಪನಿಯನ್ನು ಆಯ್ಕೆ ಮಾಡಿ ಸಲಹೆ ಪಡೆಯಿರಿ. ಪರಿಹಾರ ಒದಗಿಸುವವರು ಸಾಮರ್ಥ್ಯ ಹೊಂದಿದವರಾಗಿರಬೇಕು. ಜತೆಗೆ ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹಕ್ಕೆ ಪಾತ್ರರಾಗಿರುವುದರೊಂದಿಗೆ ಉತ್ತಮ ಅನುಭವ, ಸಂಪನ್ಮೂಲ, ಪ್ರಮಾಣಿತ ಸಲಹೆಗಾರ ಆಗಿರಬೇಕು. ಅಂತವರು ಮಾತ್ರ ನಿಮ್ಮ ಹಣಕಾಸು ಸಂಬಂಧಿ ಸಲಹೆಗಳನ್ನು ನೀಡಲು ಸಾಧ್ಯ.
ಉಳಿತಾಯ ಭದ್ರಗೊಳಿಸಿ
ನಮ್ಮಲ್ಲಿ ಹೆಚ್ಚಿನ ಜನರಿಗೆ ಉಳಿತಾಯ ಯೋಜನೆ ಬಗ್ಗೆ ತಿಳುವಳಿಕೆ ಕಡಿಮೆ ಇದೆ. ನೀವು ಅವರಲ್ಲಿ ಒಬ್ಬರಾಗಬೇಡಿ. ನಿಮ್ಮ ಉಳಿತಾಯ ಮಾಡುವ ವಿಧಾನಗಳನ್ನು ಹುಡುಕಿ ಅದಕ್ಕನುಗುಣವಾಗಿ ಆರ್ಥಿಕ ಭದ್ರತೆ ಸುಭದ್ರಗೊಳಿಸಿ. ಇದು ದೊಡ್ಡ ಸಾಲಗಳನ್ನು ಮಾಡುವುದರಿಂದ ತಪ್ಪಿಸಿಕೊಳ್ಳಲು ಸಹಕಾರಿ. ಹೀಗಾಗಿ ಪ್ರತಿನಿತ್ಯ ನಿಯಮಿತವಾಗಿ ಉಳಿತಾಯ ಮಾಡಲು ಪ್ರಾರಂಭಿಸಿ.
ನಿವೃತ್ತಿ ಜೀವನ ಆರಾಮದಾಯಕವಾಗಿರಬೇಕು
ದೈನಂದಿನ ಜೀವನ ನಿರ್ವಹಣೆಗೆ ಎಷ್ಟು ಹಣ ಬೇಕು ಎಂಬುದನ್ನು ನಿರ್ಧರಿಸಿ ಹಾಗೂ ಯಾವ ಹಣಕಾಸು ಮೂಲ ನಿಮ್ಮ ನಿವೃತ್ತಿ ಜೀವನಕ್ಕೆ ಸಹಾಯಕ ಆಗಬಲ್ಲದು ಎಂಬುದನ್ನು ತಿಳಿದುಕೊಂಡು ಯೋಜನೆ ರೂಪಿಸಿ. ಮೂಲ ಉಳಿತಾಯ ಖಾತೆಗಳು, ಠೇವಣಿ ಪತ್ರಗಳು, ಪಿಂಚಣಿ ಯೋಜನೆಗಳು, ಮ್ಯೂಚುವಲ್ ಫಂಡ್, ಸ್ಟಾಕ್, ಬಾಂಡ್ಸ್ ಮತ್ತು ಇನ್ನಿತರ ಉಳಿತಾಯ ಆಯ್ಕೆಗಳನ್ನು ಅಳವಡಿಸಿ. ಇದರ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸಿ ಅಗತ್ಯತೆಗೆ ಅನುಗುಣವಾಗಿ ಹಣಕಾಸು ಯೋಜನೆ ರೂಪಿಸಿಕೊಳ್ಳಬೇಕು.
ಆರೋಗ್ಯ ಯೋಜನೆ ನಿಮ್ಮದಾಗಿರಲಿ
ನಿಮ್ಮ ನಿಮ್ಮ ಕುಟುಂಬದ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮಮವಾದ ಆರೋಗ್ಯ ವಿಮೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಏನೋ ಒಂದು ಅವಘಡ ಸಂಭವಿಸಿ ಆರ್ಥಿಕ ಪರಿಸ್ಥಿತಿ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಿಗಾಗಿ ಈಗಿನಿಂದಲೇ ಸರಿಯಾದ ಹಣಕಾಸು(ವಿಮೆ/ಪಾಲಿಸಿ) ಯೋಜನೆ ಪ್ರಾರಂಭಿಸುವುದು ಉತ್ತಮ ನಡೆ. ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರಿಂದ ಅಗತ್ಯ ಸಂದರ್ಭದಲ್ಲಿ ಆಪತ್ ಬಾಂಧವನಾಗಿ ಸಹಾಯಕ್ಕೆ ಬರುತ್ತದೆ.
ವಿಮೆ ಖರೀದಿಸಲು ಮರೆಯದಿರಿ
ನಮ್ಮಲ್ಲಿ ಬಹುತೇಕ ಜನರಿಗೆ ವಿಮೆಯ ಮೌಲ್ಯ, ಪ್ರಯೋಜನ ಹಾಗೂ ಯಾವ ವಿಧದ ವಿಮೆ ಖರೀದಿಸಬೇಕು ಎಂಬುದು ಗೊತ್ತಿರುವುದಿಲ್ಲ.
ನಿಮ್ಮ ಸಂಗಾತಿ ಉದ್ಯೋಗದಲ್ಲಿ ಇಲ್ಲದಿದ್ದರೆ ಅಥವಾ ಕುಟುಂಬದ ಸದಸ್ಯರು ನಿಮ್ಮನ್ನು ಅವಲಂಬಿಸಿದರೆ ಅವರ ಹೆಸರಿನಲ್ಲಿ ಅವಶ್ಯವಾಗಿ ವಿಮೆ ಮಾಡಿಸಿ. ಜತೆಗೆ ಆರೋಗ್ಯ ವಿಮೆಯನ್ನು ಮಕ್ಕಳ ಹೆಸರಿನಲ್ಲಿ ಪ್ರತ್ಯೇಕವಾಗಿ ಮಾಡಿಸುವುದು ಇನ್ನೂ ಸುರಕ್ಷಿತ.