ಐಷಾರಾಮಿ ಜೀವನದ ಮುನ್ನ ನಿಮಗಿದು ತಿಳಿದಿರಲಿ..
ಐಷಾರಾಮಿ ಜೀವನ ನಡೆಸಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ! ಐಷಾರಾಮಿ ಕಾರು, ಮಾರುಕಟ್ಟೆಗೆ ಬಂದಿರುವ ಹೊಸ ದುಬಾರಿ ಸ್ಮಾರ್ಟ್ ಫೋನ್ ಖರೀದಿಸುವ ಮುಂಚೆ ಒಂದು ಬಾರಿ ನಿಮಗೆ ನೀವೇ ಕೇಳಿಕೊಳ್ಳಿ.
ಐಷಾರಾಮಿ ಜೀವನ ನಡೆಸಲು ಪ್ರತಿಯೊಬ್ಬರೂ ಇಷ್ಟಪಡ್ತಾರೆ! ಐಷಾರಾಮಿ ಕಾರು, ಮಾರುಕಟ್ಟೆಗೆ ಬಂದಿರುವ ಹೊಸ ದುಬಾರಿ ಸ್ಮಾರ್ಟ್ ಫೋನ್ ಖರೀದಿಸುವ ಮುಂಚೆ ಒಂದು ಬಾರಿ ನಿಮಗೆ ನೀವೇ ಕೇಳಿಕೊಳ್ಳಿ. ನನಗೆ ನಿಜವಾಗಿಯೂ ಆ ಕಾರು ಅಥವಾ ಮೊಬೈಲ್ ನ ಅವಶ್ಯಕತೆ ಇದೆಯಾ ಅಥವಾ ನಮ್ಮ ಗೆಳೆಯ, ಬಂಧುಗಳು ಅಥವಾ ನೆರೆಮನೆಯವರು ಅದನ್ನು ಕೊಂಡಿದ್ದಾರೆ ಎಂಬ ಒಂದೇ ಕಾರಣದಿಂದ ಇವನ್ನೆಲ್ಲ ಕೊಳ್ಳಲು ಮುಂದಾಗಿದ್ದೇನೆಯಾ? ಎಂದು ಪ್ರಶ್ನೆ ಮಾಡಿಕೊಳ್ಳಿ. ಈ ಜಗತ್ತಿನಲ್ಲಿ ಅತಿ ಬುದ್ಧಿವಂತ ವ್ಯಕ್ತಿಗಳು ಸಹ ಅನೇಕ ಬಾರಿ ಮೂರ್ಖತನದಿಂದ ಹಣ ಖರ್ಚು ಮಾಡಿ, ಹಣಕಾಸಿನ ಮುಗ್ಗಟ್ಟು ತಂದುಕೊಳ್ಳುತ್ತಾರೆ- ನಿರ್ಲಕ್ಷತನದಿಂದ ಖರ್ಚು ಮಾಡುವುದು ಅಥವಾ ಬೇಜವಾಬ್ದಾರಿತನದಿಂದ ಚಿಕ್ಕ ಪುಟ್ಟ ವಸ್ತುಗಳನ್ನು ಕೊಳ್ಳುತ್ತ ಹೋಗುವುದರಿಂದ ಹಣ ಕರಗುತ್ತ ಹೋಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ಗಮನಕ್ಕೆ ಬಾರದೆ ಹಣಕಾಸಿನ ತೊಂದರೆ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಮಧ್ಯೆ ಹಣ ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯದೆ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ. ಹೀಗಾಗಿ ಹಣ ಖರ್ಚು ಮಾಡುವುದಕ್ಕಿಂತ ಮೊದಲು ವಿಚಾರ ಮಾಡುವುದು ಕ್ಷೇಮಕರ. ಯಾವುದು ನಮಗೆ ಅಗತ್ಯ ಹಾಗೂ ಅನಿವಾರ್ಯ ಎಂಬುದನ್ನು ಅರಿತುಕೊಂಡರೆ ಜೀವನ ಸುಖಕರವಾಗುತ್ತದೆ. ದುಂದುವೆಚ್ಚಕ್ಕೆ ಕಾರಣಗಳೇನು ಹಾಗೂ ಅದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಬ್ರೇಕ್ ಹಾಕಿ!
ತಕ್ಷಣದ ಆಸೆ ಆಕಾಂಕ್ಷೆಗಳಿಗೆ ಬ್ರೇಕ್ ಹಾಕಿ. ಹಣದ ಉಳಿತಾಯವೇ ಹಣದ ಗಳಿಕೆ ಎಂಬ ಉಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಒಮ್ಮೆಲೆ ರಾತ್ರಿ ಊಟಕ್ಕಾಗಿ ಹೋಟೆಲ್ ಗೆ ಹೋಗಲು ನಿರ್ಧರಿಸುವುದು, ದುಬಾರಿ ಫೋನ್ ಕೊಳ್ಳಲು ಮುಂದಾಗುವುದು, ಯಾವುದೇ ತಯಾರಿ ಇಲ್ಲದೇ ವೀಕೆಂಡ್ ಟ್ರಿಪ್ ಗೆ ತೆರಳುವುದು ಮುಂತಾದ ಹಠಾತ್ ಆಗಿ ಹುಟ್ಟಿಕೊಳ್ಳುವ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದಂತೆ ಜಾಗೃತರಾಗಿರಬೇಕು. ಜಾಲಿ ಟ್ರಿಪ್ ಹೋಗುವುದು ನನ್ನ ಸ್ವಾತಂತ್ರ್ಯ ಅಥವಾ ನಾನು ಎಂಜಾಯ್ ಮಾಡದಿದ್ದರೆ ಬದುಕಿದ್ದೂ ಏನು ಪ್ರಯೋಜನ ಎಂಬ ಬಣ್ಣದ ಮಾತುಗಳನ್ನು ಹೇಳುತ್ತ ಅನಾವಶ್ಯಕ ಖರ್ಚು ಮಾಡುವುದನ್ನು ಸಮರ್ಥಿಸಿಕೊಳ್ಳುವುದು ಯಾವತ್ತೂ ಸರಿಯಲ್ಲ. ಯಾವುದೇ ಸಂದರ್ಭದಲ್ಲಿ ಹಣ ಖರ್ಚು ಮಾಡುವ ಮೊದಲು ಒಂದು ಪ್ರಶ್ನೆ ಕೇಳಿಕೊಳ್ಳಿ -ಇದು ನಿಜವಾಗಿಯೂ ಅವಶ್ಯಕವೇ ಎಂದು. ಒಂದು ವೇಳೆ ನಿಮ್ಮ ಮನಸ್ಸು 'ತಕ್ಷಣಕ್ಕೆ ಇದು ಬೇಕಿಲ್ಲ' ಎಂದು ಹೇಳಿದರೆ ಆ ಖರ್ಚನ್ನು ಮುಂದೂಡಿ. ಆಧುನಿಕ ಜಗತ್ತಿನ ಆಕರ್ಷಣೆಯ ಒತ್ತಡಕ್ಕೆ ಒಳಗಾಗುವುದು ಬೇಡ.
ಬಜೆಟ್ ಮತ್ತು ಖರ್ಚು
ಅನವಶ್ಯಕ ಖರ್ಚು ವೆಚ್ಚ ತಡೆಗಟ್ಟಲು ತಿಂಗಳ ಆರಂಭದಲ್ಲಿ ಒಂದು ಸರಳ ಹಣಕಾಸಿನ ಬಜೆಟ್ ಹಾಕಿಕೊಳ್ಳುವುದು ಉತ್ತಮ ಉಪಾಯವಾಗಿದೆ. ಸಂಬಳ ಬರುವ ಮೊದಲು ಅಥವಾ ಸಂಬಳ ಆದ ಮೇಲೆ ನೀವು ಇದನ್ನು ಮಾಡಬಹುದು. ಮೊದಲಿಗೆ ತಿಂಗಳಲ್ಲಿ ಮಾಡಲೇಬೇಕಿರುವ ಅವಶ್ಯಕ ಖರ್ಚುಗಳ ಪಟ್ಟಿ ತಯಾರಿಸಿ. ದಿನಗಳು ಕಳೆದಂತೆ ಖರ್ಚುಗಳನ್ನು ಗುರುತು ಮಾಡುತ್ತ ಹೋಗಿ. ಈ ಪಟ್ಟಿಯ ಆಧಾರದಲ್ಲಿ ಖರ್ಚು ಮಾಡುತ್ತ ಹೋದರೆ ಖಂಡಿತವಾಗಿಯೂ ಹಣ ಉಳಿತಾಯ ಸಾಧ್ಯ. ಇದೇ ಹಣವನ್ನು ಸರಿಯಾಗಿ ಹೂಡಿಕೆ ಮಾಡಿದಲ್ಲಿ, ದೊಡ್ಡ ಸಂಪತ್ತು ಸೃಷ್ಟಿಸಬಹುದು. ಸಣ್ಣ ಮೊತ್ತದ ಹಣ ಉಳಿಸಿದಾಗ ಅದನ್ನು ಖರ್ಚು ಮಾಡಬೇಕೆನ್ನುವ ಆಸೆಯಿಂದ ದೂರವಿರಿ. ತೀರಾ ಅನಿವಾರ್ಯವಾದರೆ ಅದರಲ್ಲಿನ ಶೇ.೫ ಅಥವಾ ೧೦ ರಷ್ಟನ್ನು ಮಾತ್ರ ಖರ್ಚು ಮಾಡಿ. ಇದನ್ನು ನಿಮ್ಮ ಹಣಕಾಸಿನ ಶಿಸ್ತಿಗೆ ನೀವೇ ಕೊಟ್ಟುಕೊಳ್ಳುವ ಬಹುಮಾನ ಎಂದು ಭಾವಿಸಿ. ಖರ್ಚು ಮಾಡುವುದರಲ್ಲಿಯೇ ಆನಂದ ಪಡುವ ಸ್ವಭಾವವನ್ನು ಬಿಟ್ಟು, ಉಳಿತಾಯ ಮಾಡುವ ಪ್ರವೃತ್ತಿ ನಿಮ್ಮದಾಗಲಿ. ಎಷ್ಟು ಖರ್ಚು ಮಾಡುತ್ತೀರೋ ಅಷ್ಟೇ ಹಣವನ್ನು ಉಳಿಸಲು ಪ್ರಯತ್ನಿಸಿ.
ಉಳಿತಾಯ - ಹೂಡಿಕೆ
ಸಾಮಾನ್ಯವಾಗಿ ಶೇಕಡಾ ೫೦ ರಷ್ಟು ಶ್ರೀಮಂತರು ಹಣ ಉಳಿತಾಯ ಮಾಡುತ್ತಾರೆ. ಇನ್ನುಳಿದ ಶೇ.೫೦ ರಷ್ಟು ಜನ ಹಣದುಬ್ಬರ ಮೀರಿ ಆದಾಯ ತರಬಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ನೀವು ಪ್ರತಿ ತಿಂಗಳು ನಿಮ್ಮ ನೆಟ್ಫ್ಲಿಕ್ಸ್ ಗೆ ನೀಡುವ ೮೦೦ ರೂಪಾಯಿ ಹಣವನ್ನು ಉಳಿತಾಯ ಮಾಡಿ ಹೂಡಿಕೆ ಮಾಡಿದರೆ ಎಷ್ಟಾಗುತ್ತದೆ ಎಂಬುದನ್ನು ನೋಡೋಣ. ಶೇ.೧೫ ರ ವಾರ್ಷಿಕ ಬಡ್ಡಿದರದಲ್ಲಿ ೩೦ ವರ್ಷಗಳವರೆಗೆ ಪ್ರತಿ ತಿಂಗಳು ೮೦೦ ರೂಪಾಯಿ ಹೂಡಿಕೆ ಮಾಡಿದರೆ ನೀವು ೫೫ ಲಕ್ಷ ರೂಪಾಯಿ ಒಟ್ಟು ಮಾಡಬಲ್ಲಿರಿ ಎಂಬುದು ಗೊತ್ತೆ? ಸ್ಮಾರ್ಟ್ ಇನ್ವೆಸ್ಟ್ಮೆಂಟ್ ನ ವಿಶೇಷತೆಯೇ ಇದಾಗಿದೆ. ಒಂದು ವೇಳೆ ನೀವು ೩೦ ಕ್ಕಿಂತ ಕಡಿಮೆ ಪ್ರಾಯದವರಾಗಿದ್ದರೆ, ಹೆಚ್ಚಿನ ಮೊತ್ತವನ್ನು ಇಕ್ವಿಟಿ ಹಾಗೂ ಸ್ಟಾಕ್ ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಸಾಲದ ಪ್ರಮಾಣ ನಿಮ್ಮ ಉಳಿತಾಯದ ಒಂದು ಚಿಕ್ಕ ಭಾಗವಾಗಿರುವಂತೆ ನೋಡಿಕೊಳ್ಳಿ. ಮ್ಯುಚುವಲ್ ಫಂಡ್ ಯೋಜನೆಗಳಲ್ಲಿನ ಹಲವಾರು ವಿಧಾನಗಳಲ್ಲಿ ಹೂಡಿಕೆ ಮಾಡಬಹುದು. ಚಿನ್ನದಲ್ಲಿ ಶೇ.೫ ರಷ್ಟು ಹೂಡಿಕೆ ಮಾಡಿ. ೫ ರಿಂದ ೧೦ ವರ್ಷಗಳಿಗಾದರೆ ರಿಯಲ್ ಎಸ್ಟೇಟ್ನಲ್ಲಿ ಹಣ ತೊಡಗಿಸುವಿಕೆ ಸಲ್ಲದು.
ಸಾಲಗಳಿಂದ ದೂರವಿರಿ
ಶ್ರೀಮಂತರಾಗಿರುವುದು ದರೆ ಸಾಲದಿಂದ ಮುಕ್ತರಾಗಿರುವುದು ಎಂದರ್ಥವಲ್ಲ. ಬಹುತೇಕ ಶ್ರೀಮಂತರು ಎಂದಿಗೂ ವೈಯಕ್ತಿಕವಾಗಿ ಸಾಲ ಪಡೆಯುವುದಿಲ್ಲ. ಉದ್ಯಮಿಗಳು ಹಾಗೆ ಮಾಡಿದ್ದರೆ ಸಾಲದಿಂದ ಮುಚ್ಚುವ ಅವರ ಕಂಪನಿಗಳ ಕಾರಣದಿಂದ, ವೈಯಕ್ತಿಕವಾಗಿ ದಿವಾಳಿ ಎಂದು ಘೋಷಿಸಲ್ಪಡುತ್ತಿದ್ದರು. ಆದರೆ ಸಾಮಾನ್ಯ ಜನತೆ ಇಂದಿನ ಖರ್ಚಿಗಾಗಿ ಸಾಲ ಮಾಡುತ್ತಾರೆ. ಕೈಯಲ್ಲಿ ಹಣವಿಲ್ಲದಿದ್ದರೂ ಖರ್ಚು ಮಾಡಲೇಬೇಕೆಂಬ ಪರಿಸ್ಥಿತಿ ಎದುರಾದಾಗ ನಿಮಗೆ ಸಾಲದ ಅಗತ್ಯ ಬೀಳುತ್ತದೆ. ಹಾಗಾಗಿ ಭವಿಷ್ಯದ ನಿಮ್ಮ ಆದಾಯವನ್ನು ಈಗಲೇ ಪಡೆದು ಅದನ್ನು ದೊಡ್ಡ ಮೊತ್ತದ ಬಡ್ಡಿಯೊಂದಿಗೆ ಹಿಂದಿರುಗಿಸಬೇಕಾಗುತ್ತದೆ. ಹೀಗೆ ನೀವು ಪಡೆದುದಕ್ಕಿಂತ ಹೆಚ್ಚು ಪಾವತಿಸುತ್ತ ಹೋದಾಗ ಶ್ರೀಮಂತರಾಗುವುದು ಹೇಗೆ? ಸಾಲಗಳು ನಮ್ಮ ಆದಾಯದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತ ಹೋಗುತ್ತವೆ. ಪ್ರತಿ ತಿಂಗಳು ನೀವು ೨೦ ಸಾವಿರ ರೂಪಾಯಿ ಕಂತು ಕಟ್ಟುತ್ತ ನಡೆದರೆ, ಪಡೆದ ೩೬ ಲಕ್ಷ ರೂಪಾಯಿಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಲದಲ್ಲಿ ಮುಳುಗಿದರೆ ಶ್ರೀಮಂತರಾಗಲು ಸಾಧ್ಯವೇ ಇಲ್ಲ.
ಬಿಲ್ಲು ಪಾವತಿ
ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್, ಪ್ರತಿ ತಿಂಗಳು ಬರುವ ಇತರ ಬಿಲ್ಲುಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿಲ್ಲವಾದರೆ, ನಿಮಗೆ ತಿಳಿಯದೆ ಸಾಕಷ್ಟು ಹಣವನ್ನು ನೀವು ಕಳೆದುಕೊಳ್ಳುತ್ತಿರುವಿರಿ. ಉದಾಹರಣೆಗೆ ಹೇಳುವುದಾದರೆ- ಒಂದು ವೇಳೆ ನಿಮ್ಮ ಹತ್ತಿರ ಎರಡು ಕ್ರೆಡಿಟ್ ಕಾರ್ಡ್ಗಳಿದ್ದು, ಸೂಕ್ತ ಅವಧಿಯಲ್ಲಿ ಕನಿಷ್ಠ ಮೊತ್ತವನ್ನು ಪಾವತಿ ಮಾಡದಿದ್ದರೆ ಬರೀ ದಂಡದ ಮೊತ್ತದ ರೂಪದಲ್ಲಿಯೇ ಅಪಾರ ಹಣವನ್ನು ಕಳೆದುಕೊಳ್ಳುವಿರಿ. ಪ್ರತಿ ತಿಂಗಳು ಈ ರೀತಿ ೧ ಸಾವಿರ ರೂಪಾಯಿಗಳನ್ನು ದಂಡ ಕಟ್ಟುವುದನ್ನು ತಪ್ಪಿಸಿ, ಅದೇ ಹಣವನ್ನು ಶೇ.೮ ಬಡ್ಡಿದರದಲ್ಲಿ ೩೦ ವರ್ಷಗಳವರೆಗೆ ಉಳಿತಾಯ ಮಾಡಿದರೆ ಅದು ೧೫ ಲಕ್ಷ ರೂಪಾಯಿ ಆಗುತ್ತದೆ.
ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?