ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಾಗಲು ಕಾರಣ ಗೊತ್ತಾ?
ದೇಶದಲ್ಲಿ ಚಿಲ್ಲರೆ ಆಹಾರ ಹಣದುಬ್ಬರವು ಏರಿಕೆ ಕಾಣುತ್ತಿದೆ. ಏಪ್ರಿಲ್ನಲ್ಲಿ ಎರಡನೇ ಸತತ ತಿಂಗಳು ದೇಶದಲ್ಲಿ ಚಿಲ್ಲರೆ ಆಹಾರ ಹಣದುಬ್ಬರವು ಶೇಕಡ 8.1ಕ್ಕೆ ಏರಿದೆ. ಈಗ ಟೊಮೆಟೊ, ಬದನೆ, ಆಲೂಗಡ್ಡೆ, ಕೋಳಿ, ಗೋಧಿ ಮತ್ತು ಖಾದ್ಯ ತೈಲದಂತಹ ವಸ್ತುಗಳ ಬೆಲೆಯು ತೀವ್ರ ಏರಿಕೆ ಕಂಡಿದೆ. ಆದರೆ ಈ ಆಹಾರ ಹಣದುಬ್ಬರಕ್ಕೆ ಕಾರಣವೇನು ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ.
2022 ರ ಏಪ್ರಿಲ್ನಲ್ಲಿ ಕೋಳಿಮಾಂಸದ ಬೆಲೆಯಲ್ಲಿನ ಹಣದುಬ್ಬರವು ಶೇಕಡ 13.77ಕ್ಕಿಂತ ಅಧಿಕವಾಗಿದೆ. ಮಾಂಸ ಮತ್ತು ಮೀನು ಆಹಾರ ಹಣದುಬ್ಬರವು ಶೇಕಡ 6.97ರಷ್ಟಿದೆ. ಈ ನಡುವೆ ಮೀನು ಮತ್ತು ಸಿಗಡಿ ಬೆಲೆಯಲ್ಲಿ ಹಣದುಬ್ಬರವು ಶೇಕಡ 3.02ರಷ್ಟು ಮಧ್ಯಮ ಏರಿಕೆಯನ್ನು ಕಂಡಿದೆ.
ಹಣದುಬ್ಬರದ ಏರಿಕೆ ನಡುವೆ ಆನ್ಲೈನ್ ಫುಡ್ ಡೆಲವರಿ ದುಬಾರಿ!
ವರ್ಷದ ಆರಂಭದಿಂದಲೂ ಕೋಳಿ ಮಾಂಸದ ಬೇಡಿಕೆಯು ಸ್ಥಿರವಾಗಿ ಹೆಚ್ಚುತ್ತಿದೆ ಎಂದು ವ್ಯಾಪಾರ ಮೂಲಗಳು ಮಾಹಿತಿ ನೀಡಿದೆ. ಆದರೆ ಕೋಳಿಗಳಿಗೆ ನೀಡುವ ಆಹಾರ ಹಾಗೂ ಇಂಧನ ವೆಚ್ಚದ ಹೆಚ್ಚಳದಿಂದಾಗಿ ಕೋಳಿ ಮಾಂಸದ ಬೆಲೆಯು ಹೆಚ್ಚಳವಾಗಿದೆ. ಈ ನಡುವೆ ಖಾದ್ಯ ತೈಲದ ಬೆಲೆಯು ಕೂಡಾ ಹೆಚ್ಚಿದೆ. ಈ ವಲಯದಲ್ಲಿ ಏಪ್ರಿಲ್ 2022 ರಲ್ಲಿ ಶೇಕಡ 17.28ರಷ್ಟು ಹಣದುಬ್ಬರ ಕಂಡು ಬಂದಿದೆ. ಕಳೆದ ಒಂದು ವರ್ಷದಲ್ಲಿ ಖಾದ್ಯ ತೈಲದ ದೇಶೀಯ ಬೆಲೆಗಳಲ್ಲಿ ಭಾರೀ ಏರಿಕೆ ಕಂಡಿದೆ. ಈ ಬೆಲೆ ಏರಿಕೆಗಳಿಗೆ, ಆಹಾರ ಹಣದುಬ್ಬರಕ್ಕೆ ಕಾರಣವೇನು ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...
ಸಂಸ್ಕರಿಸಿದ ತೈಲ ಹಣದುಬ್ಬರ ಹೆಚ್ಚಳ
ಇನ್ನು ಸಾಸಿವೆ ಎಣ್ಣೆಯ ಬೆಲೆಯು ಕೂಡಾ ಏರಿಕೆ ಕಂಡಿದೆ. ಸಾಸಿವೆ ಎಣ್ಣೆಯಲ್ಲಿನ ಹಣದುಬ್ಬರವು ಏಪ್ರಿಲ್ 2022 ರಲ್ಲಿ ಶೇಕಡ 23.09 ಆಗಿತ್ತು. ಕಳೆದ ಒಂದು ವರ್ಷದಲ್ಲಿ ಸರಕುಗಳ ಚಿಲ್ಲರೆ ಬೆಲೆಗಳಲ್ಲಿ ಶೇಕಡ 30ಕ್ಕಿಂತ ಅಧಿಕವಾದ ಕಾರಣದಿಂದಾಗಿ ಈ ಹಣದುಬ್ಬರ ಸಂಭವಿಸಿದೆ. ಖಾದ್ಯ ತೈಲದ ಜಾಗತಿಕ ಬೆಲೆಗಳ ಏರಿಕೆಯಿಂದಾಗಿ ಸಂಸ್ಕರಿಸಿದ ತೈಲ (ಸೂರ್ಯಕಾಂತಿ, ಸೋಯಾಬೀನ್ ಮತ್ತು ತಾಳೆ) ಹಣದುಬ್ಬರವು ಶೇಕಡ 19.84ಕ್ಕೆ ಏರಿತ್ತು. ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬಳಕೆಯ ಶೇಕಡ 55ರಷ್ಟು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದಾಗಿ ಜಾಗತಿಕ ಬೆಲೆಯು ದೇಶದಲ್ಲಿ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ಭಾರತದಲ್ಲಿ ಬೆಲೆ ಏರಿಕೆಗೆ, ಆಹಾರ ಹಣದುಬ್ಬರಕ್ಕೆ ಕೂಡಾ ಕಾರಣವಾಗಿದೆ.
ಆಲೂಗಡ್ಡೆ, ಈರುಳ್ಳಿ ಬೆಳೆ ಇಳಿಕೆ
ಇನ್ನು ದೇಶದಲ್ಲಿ ತರಕಾರಿ ಬೆಲೆಯು ಕೂಡಾ ಭಾರೀ ಏರಿಕೆ ಕಂಡಿದೆ. ಶೇಕಡ 15.41ರಷ್ಟು ಹೆಚ್ಚಾದ ಹಣದುಬ್ಬರ ಉಂಟಾಗಿದೆ. ಆಲೂಗಡ್ಡೆ, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಬಟಾಣಿಯಂತಹ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಈ ಹಣದುಬ್ಬರ ಕಂಡಿದೆ. ಏಪ್ರಿಲ್ 2022 ರಲ್ಲಿ ನಿಂಬೆ ಹಣದುಬ್ಬರವು ಶೇಕಡ 66ಕ್ಕಿಂತ ಅಧಿಕವಾಗಿದೆ. ಆಲೂಗಡ್ಡೆ ಮತ್ತು ಟೊಮೆಟೊಗಳ ಹಣದುಬ್ಬರವು ಏಪ್ರಿಲ್ 2022 ರಲ್ಲಿ ಕ್ರಮವಾಗಿ ಶೇಕಡ 17.56 ಮತ್ತು ಶೇಕಡ 33.46ರಷ್ಟು ಏರಿಕೆಯಾಗಿದೆ. ಈರುಳ್ಳಿ ಹಣದುಬ್ಬರವು ಶೇಕಡ 3.77 ಆಗಿದೆ. 2021-22 ರ ಬೇಸಾಯ ವರ್ಷದಲ್ಲಿ (ಜುಲೈ-ಜೂನ್) ದೇಶದ ಆಲೂಗಡ್ಡೆ ಉತ್ಪಾದನೆಯು ಇಳಿಕೆ ಕಂಡಿದೆ. 2021-22 ರಲ್ಲಿ 53.6 ಮಿಲಿಯನ್ ಟನ್ ಆಲೂಗಡ್ಡೆ ಉತ್ಪಾದನೆ ಮಾಡಲಾಗಿದೆ. ಆದರೆ 2020-21 ರಲ್ಲಿ 56.1 ಮೆ.ಟನ್ನ ದಾಖಲೆಯ ಉತ್ಪಾದನೆ ಮಾಡಲಾಗಿತ್ತು. ಇದಕ್ಕಿಂತ ಕಡಿಮೆಯಾದ ಕಾರಣದಿಂದ ಬೆಲೆ ಏರಿಕೆಯಾಗಿ ಆಹಾರ ಹಣದುಬ್ಬರ ಕಂಡು ಬಂದಿದೆ.
ತರಕಾರಿ ಹಣದುಬ್ಬರ ಏರಿಕೆ
ಇದೇ ಸಂದರ್ಭದಲ್ಲಿ ಟೊಮೆಟೊ ಉತ್ಪಾದನೆಯು 2021-22 ರಲ್ಲಿ 20.30 ಮಿಲಿಯನ್ ಟನ್ಗಳಿಗೆ ಇಳಿದಿದೆ. ಹಿಂದಿನ ವರ್ಷದಲ್ಲಿ ದಾಖಲೆಯ 21.18 ಮಿಲಿಯನ್ ಟನ್ ಬೆಳೆಯಾಗಿತ್ತು. ಏಪ್ರಿಲ್ 2022 ರಲ್ಲಿ ಈರುಳ್ಳಿ ಹಣದುಬ್ಬರವು ಕೂಡಾ ಎದುರಾಗಿದೆ. 2021-22ರಲ್ಲಿ 31.12 ಮಿಲಿಯನ್ ಟನ್ಗಳಷ್ಟು ಈರುಳ್ಳಿ ಬೆಳೆಯಾಗಿತ್ತು. ಆದರೆ 2020-21 ರಲ್ಲಿ 26.64 ಮಿಲಿಯನ್ ಟನ್ ಆಗಿದೆ. ಈರುಳ್ಳಿ ಉತ್ಪಾದನೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಬದನೆ, ತೊಂಡೆಕಾಯಿ, ಬಟಾಣಿಗಳಂತಹ ತರಕಾರಿಗಳಲ್ಲಿನ ಹಣದುಬ್ಬರವು ಏಪ್ರಿಲ್ 2022 ರಲ್ಲಿ ಕ್ರಮವಾಗಿ ಶೇಕಡ 26.56, ಶೇಕಡ 11.13 ಮತ್ತು ಶೇಕಡ 13.22 ರಷ್ಟು ಏರಿಕೆಯಾಗಿದೆ. ತರಕಾರಿಯಲ್ಲಿನ ಹಣದುಬ್ಬರವು ಒಟ್ಟಾರೆಯಾಗಿ ಹೆಚ್ಚಾಗಿದೆ.
ಗೋಧಿಯ ಹಣದುಬ್ಬರವೂ ಹೆಚ್ಚಳ
"ನಮ್ಮ ಆಹಾರ ಹಣದುಬ್ಬರವು ಸಾಕಷ್ಟು ವೈವಿಧ್ಯಮಯ ಎಂದರೂ ತಪ್ಪಾಗದು. ಕೃಷಿ ಉತ್ಪನ್ನಗಳ ಬೆಲೆಗಳಲ್ಲಿನ ಏರಿಳಿತಗಳು ಹೆಚ್ಚಾಗಿ ಉತ್ಪಾದನೆ ಮತ್ತು ಆಮದು ಬೆಲೆಗಳಿಂದ ನಿರ್ಧರಿಸಲ್ಪಡುತ್ತವೆ. ದೇಶದಲ್ಲಿ ಗೋಧಿಯ ಹಣದುಬ್ಬರವು ಕೂಡಾ ಹೆಚ್ಚಾಗಿದೆ. ಗೋಧಿಯ ಹಣದುಬ್ಬರವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಏರಿಕೆಯಾಗಿದೆ," ಎಂದು ಅಧಿಕಾರಿಗಳು ಹೇಳಿದ್ದಾರೆ. ಬೇಳೆಕಾಳುಗಳು ಮತ್ತು ಹಣ್ಣುಗಳ ಹಣದುಬ್ಬರವು ಕೂಡಾ ಏಪ್ರಿಲ್ 2022 ರಲ್ಲಿ ಕ್ರಮವಾಗಿ ಶೇಕಡ 1.86 ಮತ್ತು ಶೇಕಡ 4.99 ರಷ್ಟಿತ್ತು. ದೇಶದ ಬೇಳೆಕಾಳುಗಳ ಉತ್ಪಾದನೆಯಲ್ಲಿ ಶೇಕಡ 45ಕ್ಕಿಂತ ಅಧಿಕ ಪಾಲನ್ನು ಹೊಂದಿರುವ ಕಡಲೆ ಕಾಳು ಹಣದುಬ್ಬರವು ಏಪ್ರಿಲ್ 2022 ರಲ್ಲಿ 2.72% ರಷ್ಟಿತ್ತು. ಆದರೆ ಕಡಲೆ ಬೇಳೆ ಹಣದುಬ್ಬರವು ಕೇವಲ ಶೇಕಡ -1.5ರಷ್ಟಿತ್ತು.