ಈಗಂತೂ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಇಚ್ಛಿಸುವ ಮಂದಿ ಬಹಳ ಹೆಚ್ಚಾಗಿದ್ದಾರೆ. ಅದಕ್ಕೆ ಕುರುಹಾಗಿ ಈಗ ಹಲವಾರು ಐಪಿಒಗಳಿಗೆ ರೀಟೇಲ್ ಹೂಡಿಕೆದಾರರಿಂದ ಬಹಳಷ್ಟು ಸ್ಪಂದನೆ ಸಿಗುತ್ತಿದೆ. ಸಣ್ಣ ಆದಾಯದ ವರ್ಗದವರೂ ಈಗ ಷೇರು ವ್ಯವಹಾರದತ್ತ ಆಸಕ್ತರಾಗಿದ್ದಾರೆ. ಟ್ರೇಡಿಂಗ್ ಅವಕಾಶ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದರೆ ಬಹಳ ಮಂದಿ ಸಕ್ರಿಯವಾಗಿ ಟ್ರೇಡಿಂಗ್ನಲ್ಲಿ ತೊಡಗುವುದು ಕಡಿಮೆ. ಮ್ಯೂಚುವಲ್ ಫಂಡ್ ಇತ್ಯಾದಿ ಮೇಲೆ ಹೂಡಿಕೆ ಮಾಡುವವರು ಹೆಚ್ಚು. ಅಥವಾ ಒಬ್ಬ ಫಂಡ್ ಮ್ಯಾನೇಜರ್ ಕೈಗೆ ತಮ್ಮ ಹೂಡಿಕೆಯ ನೊಗವನ್ನು ಕೊಟ್ಟು ಸುಮ್ಮನಾಗುತ್ತಾರೆ. ಆದರೆ, ಝೀರೋಧ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಒಬ್ಬ ಸಾಮಾನ್ಯ ಹೂಡಿಕೆದಾರನಿಗೆ ಷೇರುಪೇಟೆಯ ಟ್ರೇಡಿಂಗ್ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಫಂಡ್ ಮ್ಯಾನೇಜರ್ಗಿಂತಲೂ ರೀಟೇಲ್ ಹೂಡಿಕೆದಾರರು ಹೇಗೆ ಹೆಚ್ಚು ಹಣ ಗಳಿಸಲು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ.
ಫಂಡ್ ಮ್ಯಾನೇಜರ್ಸ್ ಯಾರು?
ಸಾಮಾನ್ಯವಾಗಿ ಷೇರುಗಳ ಮೇಲೆ ಹೂಡಿಕೆ ಮಾಡಬಯಸುವ ಜನರು ಸುರಕ್ಷಿತವೆಂಬ ಕಾರಣಕ್ಕೆ ಮ್ಯೂಚುವಲ್ ಫಂಡ್ಗಳ ಮೇಲೆ ಹಣ ಹಾಕುತ್ತಾರೆ. ಹೂಡಿಕೆದಾರರ ಈ ಹಣವನ್ನು ಮ್ಯೂಚುವಲ್ ಫಂಡ್ಗಳು ವಿವಿಧ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ, ವಹಿವಾಟು ನಡೆಸುತ್ತವೆ. ಈ ಕಾರ್ಯವನ್ನು ನಿಭಾಯಿಸುವವರೇ ಫಂಡ್ ಮ್ಯಾನೇಜರ್ಸ್.
ಎಸ್ಬಿಐ ಮ್ಯೂಚುವಲ್ ಫಂಡ್ ಅನ್ನು ಆರ್ ಶ್ರೀನಿವಾಸನ್ ಎಂಬುವರು ನಿಭಾಯಿಸುತ್ತಾರೆ. ಎಕ್ಸಿಸ್ ಮ್ಯೂಚುವಲ್ ಫಂಡ್ ಅನ್ನು ಶ್ರೇಯಶ್ ದೇವಾಳ್ಕರ್ ಎಂಬುವವರು ಮ್ಯಾನೇಜ್ ಮಾಡುತ್ತಾರೆ. ಹೀಗೆ ಪ್ರತಿಯೊಂದು ಮ್ಯೂಚುವಲ್ ಫಂಡ್ ಸಂಸ್ಥೆಗಳು ಹೂಡಿಕೆಗಳನ್ನು ನಿರ್ವಹಿಸಲು ಫಂಡ್ ಮ್ಯಾನೇಜರ್ಗಳನ್ನು ನಿಯೋಜಿಸುತ್ತವೆ. ಈ ಫಂಡ್ ಮ್ಯಾನೇಜರ್ ಅಡಿಯಲ್ಲಿ ಪ್ರತ್ಯೇಕ ತಂಡವೇ ಇರಬಹುದು.
ಈ ಫಂಡ್ ಮ್ಯಾನೇಜರ್ಗಳು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಪ್ರತಿಯೊಂದು ಕಂಪನಿಯ ಹಣಕಾಸು ಬಲ, ಆ ಕಂಪನಿಗೆ ಸಂಬಂಧಿಸಿದ ಕ್ಷೇತ್ರದ ಭವಿಷ್ಯ ಸ್ಥಿತಿ, ದೇಶದ ಆರ್ಥಿಕ ದಿಕ್ಕು ಇತ್ಯಾದಿ ಹಲವಾರು ಅಂಶಗಳ ಬಗ್ಗೆ ಸದಾ ನಿಗಾ ಇಟ್ಟಿರುತ್ತಾರೆ. ಯಾವ ಕಂಪನಿಗೆ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ ಎಂಬುದರ ನಾಡಿಮಿಡಿತವನ್ನು ಇವರು ಅರಿತುಕೊಳ್ಳಬಲ್ಲುರು. ಒಂದು ಕಂಪನಿ ನಷ್ಟಕ್ಕೆ ಸಿಲುಕಬಹುದು ಎಂಬುದನ್ನು ಇವರು ಬಹಳ ಬೇಗ ಅಂದಾಜಿಸಬಲ್ಲುರು.
ಫಂಡ್ ಮ್ಯಾನೇಜರ್ರನ್ನು ಮೀರಿಸಬಲ್ಲುರೇ ಸಾಮಾನ್ಯ ಹೂಡಿಕೆದಾರ?
ಸ್ಟಾಕ್ ಬ್ರೋಕರೇಜ್ ಕಂಪನಿ ಝೀರೋಧದ ಸಿಇಒ ಹಾಗೂ ಕನ್ನಡಿಗ ಉದ್ಯಮಿ ನಿತಿನ್ ಕಾಮತ್ ಅವರು ಸಾಮಾನ್ಯ ಹೂಡಿಕೆದಾರನಿಗೆ ಫಂಡ್ ಮ್ಯಾನೇಜರ್ಗಿಂತ ಚೆನ್ನಾಗಿ ಹಣ ಬೆಳೆಸುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.
ಮೊದಲಿಗೆ ಫಂಡ್ ಮ್ಯಾನೇಜರ್ ಮತ್ತು ಎಚ್ಎನ್ಐ ಹೂಡಿಕೆದಾರರು (ಅಧಿಕ ಆದಾಯ ಗುಂಪಿಗೆ ಸೇರಿದವರು) ಇವರಿಗೆ ಕೆಲವಾರು ನಿರ್ಬಂಧಗಳಿರುತ್ತವೆ. ಫಂಡ್ ಮ್ಯಾನೇಜರ್ ಕೈಯಲ್ಲಿ ಭಾರೀ ಮೊತ್ತದ ಸ್ಟಾಕ್ಗಳನ್ನು ನಿಭಾಯಿಸುವ ಹೊಣೆ ಇರುತ್ತದೆ. ಇವರು ತಮ್ಮಿಚ್ಛೆ ಬಂದಂತೆ ಷೇರುಗಳನ್ನು ಹಿಂಪಡೆಯಲು, ಹೂಡಲು ಸಂಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಆದರೆ, ಸಾಮಾನ್ಯ ಹೂಡಿಕೆದಾರರಿಗೆ (ರೀಟೇಲ್ ಇನ್ವೆಸ್ಟರ್ಸ್) ಈ ಸ್ವಾತಂತ್ರ್ಯ ಉಂಟು. ಯಾವಾಗ ಬೇಕಾದರೂ ಅವರು ಷೇರುಗಳನ್ನು ಮಾರಬಹುದು. ಯಾವಾಗ ಬೇಕಾದರು ಷೇರು ಕೊಳ್ಳಬಹುದು.
"ನಾನೀಗ ರೀಟೇಲ್ ಟ್ರೇಡರ್ ಆಗಿದ್ದು ಒಂದು ಲಕ್ಷ ರೂಪಾಯಿಯನ್ನು ಷೇರುಗಳ ಮೇಲೆ ಹೂಡಿದ್ದೇನೆ ಎಂದಿಟ್ಟುಕೊಳ್ಳಿ. ನಾನು ಷೇರು ಖರೀದಿಸಿದ ಕಂಪನಿ ಮುಂದೆ ನಷ್ಟಕ್ಕೆ ಸಿಲುಕಬಹುದು ಎಂದು ಅನಿಸಿದ ತತ್ಕ್ಷಣವೇ ನಾನು ಷೇರು ಮಾರಿಬಿಡಬಹುದು. ಆದರೆ, ಫಂಡ್ ಮ್ಯಾನೇಜರ್ಗೆ ಈ ಸ್ವಾತಂತ್ರ್ಯ ಇರುವುದಿಲ್ಲ. ಷೇರುಪೇಟೆ ನಿಯಮಗಳ ಪ್ರಕಾರ ಫಂಡ್ ಮ್ಯಾನೇಜರ್ ಆದವರು ಷೇರುಗಳನ್ನು ಮಾರಿ ನಗದು ರೂಪದಲ್ಲಿ ಶೇ. 15-20ಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಇಟ್ಟುಕೊಳ್ಳುವಂತಿಲ್ಲ. ಹೀಗಾಗಿ, ಫಂಡ್ ಮ್ಯಾನೇಜರ್ಗಳು ಸುಖಾಸುಮ್ಮನೆ ಷೇರುಗಳನ್ನು ಮಾರಲು ಸಾಧ್ಯವಾಗುವುದಿಲ್ಲ" ಎಂದು ನಿತಿನ್ ಕಾಮತ್ ಹೇಳುತ್ತಾರೆ.
ಫಂಡ್ ಮ್ಯಾನೇಜರ್ ಮೀರಿಸುವವರು ಟ್ರೇಡರ್ಸ್
ಷೇರುಗಳಿಂದ ಲಾಭ ಗಳಿಸುವ ವಿಚಾರದಲ್ಲಿ ಫಂಡ್ ಮ್ಯಾನೇಜರ್ಗಳನ್ನು ಮೀರಿಸುವ ರೀಟೇಲ್ ಹೂಡಿಕೆದಾರರು ಬಹಳ ಕಡಿಮೆ. ಷೇರುಪೇಟೆಯಲ್ಲಿ ಯಶಸ್ಸು ಕಂಡಿರುವ ಕೆಲವೇ ರೀಟೇಲ್ ಹೂಡಿಕೆದಾರರಲ್ಲಿ ಬಹುತೇಕರು ಆ್ಯಕ್ಟಿವ್ ಟ್ರೇಡರ್ಗಳಾಗಿರುತ್ತಾರೆ. ರೀಟೇಲ್ ಹೂಡಿಕೆದಾರರಂತೆ ದೊಡ್ಡ ಹೂಡಿಕೆದಾರರಿಗಿರುವ ನಿರ್ಬಂಧ ಈ ಟ್ರೇಡರ್ಗಳಿಗೆ ಇರುವುದಿಲ್ಲ.
ಗಮನಿಸಬೇಕಾದ ಸಂಗತಿ ಎಂದರೆ ಈ ಟ್ರೇಡರ್ಗಳು ಬೇರೆಯವರ ಪರವಾಗಿ ಷೇರುವಹಿವಾಟು ನಡೆಸುವುದಿಲ್ಲ. ತಮ್ಮ ಹೂಡಿಕೆಯನ್ನು ನಿಭಾಯಿಸುತ್ತಾರೆ. ಹೀಗಾಗಿ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಇವರಿಂದ ಸಾಧ್ಯವಾಗುತ್ತದೆ. ಫಂಡ್ ಮ್ಯಾನೇಜರ್ಗಳ ರೀತಿಯಲ್ಲಿ ಈ ಟ್ರೇಡರ್ಗಳಿಗೂ ವ್ಯಾವಹಾರಿಕ ಜಗತ್ತಿನ ಬಗ್ಗೆ ಅರಿವು ಇರುತ್ತದೆ. ಬಹಳ ಕ್ಷಿಪ್ರಗತಿಯಲ್ಲಿ ಇವರು ನಿರ್ಧಾರಗಳನ್ನು ತೆಗೆದುಕೊಂಡು ದಿನನಿತ್ಯ ಷೇರು ವಹಿವಾಟು ನಡೆಸಿ ಲಾಭ ಮಾಡಬಹುದು.
ರೀಟೇಲ್ ಹೂಡಿಕೆದಾರರು ಯಾಕೆ ಯಶಸ್ವಿಯಾಗಿಲ್ಲ?
ಸಕ್ರಿಯ ಷೇರು ವರ್ತಕರು ಫಂಡ್ ಮ್ಯಾನೇಜರ್ಗಳಿಗಿಂತ ಹೆಚ್ಚು ಲಾಭ ಮಾಡಬಹುದು. ಆದರೆ ಅದಕ್ಕೂ ಒಂದು ಸೀಮೆ ಇರುತ್ತದೆ. ಒಂದು ಸೀಮಿತ ಬಂಡವಾಳ ಇಟ್ಟುಕೊಂಡು ಷೇರುಗಳ ವಹಿವಾಟು ನಡೆಸುವುದು ಹೆಚ್ಚು ರಿಸ್ಕ್ ಎನಿಸುವುದಿಲ್ಲ. ಆದರೆ, ಹೂಡಿಕೆ ಮೊತ್ತ ಹೆಚ್ಚಿದಷ್ಟೂ ಟ್ರೇಡರ್ಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಸ್ವಲ್ಪ ಯಡವಟ್ಟಾದರೂ ನಷ್ಟದ ಮೊತ್ತ ಹೆಚ್ಚಾಗಿರುತ್ತದೆ ಎಂಬ ಭಯ ಇದ್ದೇ ಇರುತ್ತದೆ.
ಝೀರೋಧದ ಸಿಇಒ ನಿತಿನ್ ಕಾಮತ್ ಪ್ರಕಾರ, ಇದು ರೀಟೇಲ್ ಹೂಡಿಕೆದಾರರಿಗೂ ಅನ್ವಯ ಆಗುತ್ತದೆ. ಕಡಿಮೆ ಮೊತ್ತ ಇದ್ದಾಗ ಹೆಚ್ಚು ಮುಕ್ತವಾಗಿ ಷೇರು ವಹಿವಾಟು ನಡೆಸುತ್ತಾರೆ. ಹೂಡಿಕೆ ಮೊತ್ತ ಹೆಚ್ಚಾದಾಗ ಬಹಳ ಯೋಚಿಸಿ ಹೆಜ್ಜೆ ಇಡುತ್ತಾರೆ. ಹೀಗಾಗಿ, ಲಾಭದ ಅವಕಾಶ ಮತ್ತು ನಷ್ಟದ ಸಾಧ್ಯತೆ ಎರಡೂ ಕಡಿಮೆ ಆಗುತ್ತದೆ.
ಇದೇ ಕಾರಣಕ್ಕೆ ಬಹಳ ಜನರು ದೊಡ್ಡ ಮೊತ್ತದ ಹೂಡಿಕೆ ಇದ್ದಾಗ ಮ್ಯೂಚುವಲ್ ಫಂಡ್ಗಳ ಮೊರೆ ಹೋಗುತ್ತಾರೆ. ಕ್ಷಿಪ್ರಗತಿಯಲ್ಲಿ ಹಣ ಬೆಳೆಸಬಯಸುವವರು ರೀಟೇಲ್ ಹೂಡಿಕೆದಾರರಾಗಿ ರಿಸ್ಕ್ ತೆಗೆದುಕೊಂಡು ವ್ಯವಹರಿಸಬಹುದು. ಆದರೆ, ನೀವು ಹೂಡಿಕೆ ಮಾಡಿದ ಮತ್ತು ಮಾಡಬಯಸುವ ಕಂಪನಿ ಹಾಗೂ ಆ ಕ್ಷೇತ್ರದ ಬೆಳವಣಿಗೆ ಬಗ್ಗೆ ಸದಾ ಒಂದು ಕಣ್ಣಿಟ್ಟಿರುವುದು ಉತ್ತಮ.
More From GoodReturns

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications