ಮುಂದಿನ ವರ್ಷವೇ ಅಂದರೆ 2024ರಲ್ಲಿಯೇ ಲೋಕಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೂ ಮುನ್ನವೇ ಸರ್ಕಾರ ಹಲವಾರು ಕೊಡುಗೆಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಸರ್ಕಾರ ಈಗಾಗಲೇ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಕ್ಷಾಬಂಧನ ಸಂದರ್ಭದಲ್ಲಿ ಎಲ್ಪಿಜಿ ಸಿಲಿಂಡರ್ಗಳ ದರವನ್ನು 200 ರೂಪಾಯಿ ಇಳಿಕೆ ಮಾಡಿದೆ. ಈಗ ರೈತರಿಗೆ ಸಿಹಿಸುದ್ದಿ ನೀಡುವ ನಿರೀಕ್ಷೆಯಿದೆ.
2024ರ ಲೋಕಸಭೆ ಚುನಾವಣೆ ಗೂ ಮುನ್ನ ರೈತರಿಗೆ ನೀಡುವ ಸಹಾಯಧನವನ್ನು ಹೆಚ್ಚಳ ಮಾಡುವ ಚಿಂತನೆಯನ್ನು ಕೇಂದ್ರ ಸರ್ಕಾರ ನಡೆಸಿದೆ ಎಂಬ ಮಾಹಿತಿಯಿದೆ. ಮುಂಬರುವ ಚುನಾವಣೆಯಲ್ಲಿ ರೈತರ ಮತಬ್ಯಾಂಕ್ ಅನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ರೈತರಿಗೆ ವಾರ್ಷಿಕವಾಗಿ ನೀಡುತ್ತಿರುವ 6000 ರೂಪಾಯಿಯನ್ನು 8000 ರೂಪಾಯಿಗೆ ಏರಿಕೆ ಮಾಡಬಹುದು ಎಂಬ ಮಾಹಿತಿಯಿದೆ.

ಲೋಕಸಭೆಗೂ ಮುನ್ನ ರೈತರಿಗೆ ಈ ಗಿಫ್ಟ್?
ಬ್ಲೂಮ್ಬರ್ಗ್ ವರದಿಯ ಪ್ರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ನೀಡಲಾಗುತ್ತಿರುವ ವಾರ್ಷಿಕ ಬೆಂಬಲವನ್ನು 6000 ರೂಪಾಯಿಯಿಂದ 8000 ರೂಪಾಯಿಗೆ ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ. ಇಬ್ಬರು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಎಬಿಪಿ ಲೈವ್ ಪ್ರಕಾರ, ಹಣಕಾಸು ಸಚಿವಾಲಯವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸರ್ಕಾರವು ಸಹಾಯಧನವನ್ನು 8000 ರೂಪಾಯಿಗೆ ಏರಿಕೆ ಮಾಡಿ, ರೈತರಿಗೆ ನಾಲ್ಕು ಕಂತುಗಳಲ್ಲಿ ನೀಡಲು ನಿರ್ಧಾರ ಮಾಡಿದರೆ, 2023-24 ರ ಆರ್ಥಿಕ ವರ್ಷಕ್ಕೆ ಅಸ್ತಿತ್ವದಲ್ಲಿರುವ 60000 ಕೋಟಿ ರೂಪಾಯಿಗಳ ಬಜೆಟ್ಗೆ ಹೆಚ್ಚುವರಿಯಾಗಿ 20000 ಕೋಟಿ ರೂಪಾಯಿಗಳ ಹಂಚಿಕೆ ಅಗತ್ಯವಿರುತ್ತದೆ.
ಮಧ್ಯಂತರ ಬಜೆಟ್ನಲ್ಲಿ ಘೋಷಣೆ ಸಾಧ್ಯ
2024 ರ ಲೋಕಸಭಾ ಚುನಾವಣೆಯ ಮೊದಲು, ಮೋದಿ ಸರ್ಕಾರವು ಫೆಬ್ರವರಿ 1, 2024 ರ ಮಧ್ಯಂತರ ಬಜೆಟ್ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ನಿಧಿಯ ಮೊತ್ತವನ್ನು ಹೆಚ್ಚಳ ಮಾಡುವ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ಗಾಗಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ.
ಪಿಎಂ ಕಿಸಾನ್ ಹಣ ಬರುತ್ತಿಲ್ಲವೇ?
ಹಲವಾರು ರೈತರಿಗೆ ಕಳೆದ ಒಂದು ವರ್ಷದಿಂದ ಪಿಎಂ ಕಿಸಾನ್ ಮೊತ್ತವು ಲಭ್ಯವಾಗುತ್ತಿಲ್ಲ ಎಂಬ ಆರೋಪವಿದೆ. ಇ-ಕೆವೈಸಿ ಮಾಡಿಸಿದರೂ ಕೂಡಾ ಮೊತ್ತ ಲಭ್ಯವಾಗುತ್ತಿಲ್ಲ ಎಂದು ರೈತರು ಹೇಳಿದ್ದಾರೆ. ದೂರು ದಾಖಲಿಸಲು ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು.
ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. [email protected] ಗೆ ಮೇಲ್ ಮಾಡಬಹುದು.
ಇಮೇಲ್ ಐಡಿ: [email protected]. ಮತ್ತು [email protected]
ಸಹಾಯವಾಣಿ ಸಂಖ್ಯೆ: 011-24300606, 155261
ಟೋಲ್-ಫ್ರೀ ಸಂಖ್ಯೆ: 1800-115-526
ಆದರೆ ಈ ಸಂಖ್ಯೆಗಳು ಕನೆಕ್ಟ್ ಆಗುವುದೇ ಇಲ್ಲ ಎಂಬ ಆರೋಪವೂ ಕೂಡಾ ಕೇಳಿಬಂದಿದೆ. "ನನಗೆ ಹಲವಾರು ಕಂತುಗಳ ಮೊತ್ತ ಲಭ್ಯವಾಗಿಲ್ಲ. ಒಂದು ವರ್ಷದಿಂದ ನಾನು ಕಚೇರಿ ಕಚೇರಿ ಅಲೆದಾಡುತ್ತಿದ್ದೇನೆ. ಸಹಾಯವಾಣಿಗೂ ಕರೆ ಮಾಡಿದೆ, ಅದು ಕನೆಕ್ಟ್ ಆಗಲ್ಲ. ಮಕ್ಕಳ ಮೂಲಕ ಇಮೇಲ್ ಮಾಡಿಸಿದೆ. ಆದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಇಕೆವೈಸಿ ಕೂಡಾ ಮಾಡಿಸಿ ಆಗಿದೆ," ಎಂದು ಹೆಸರು ಹೇಳಲು ಬಯಸದ ರೈತರೊಬ್ಬರು ತಿಳಿಸಿದ್ದಾರೆ.


Click it and Unblock the Notifications