ಕೇಂದ್ರ ಬಜೆಟ್ 2020: ಷೇರು ಮಾರುಕಟ್ಟೆ ಹೂಡಿಕೆದಾರರ ನಿರೀಕ್ಷೆಗಳೇನು?
ಇನ್ನೇನು ಕೇಂದ್ರ ಬಜೆಟ್ ಗೆ ವಾರವೂ ಇಲ್ಲ. ಷೇರು ಮಾರುಕಟ್ಟೆ ದೃಷ್ಟಿಯಿಂದಲೂ ಕೇಂದ್ರ ಬಜೆಟ್ ಬಹಳ ಮುಖ್ಯವಾದದ್ದು. ಷೇರು ಮಾರುಕಟ್ಟೆ ಹೂಡಿಕೆದಾರರು ಕೇಂದ್ರ ಬಜೆಟ್ ನಿಂದ ಏನನ್ನು ನಿರೀಕ್ಷೆ ಮಾಡುತ್ತಾರೆ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ. ಆರ್ಥಿಕವಾಗಿ ದೇಶವು ಸಂಕಷ್ಟದಲ್ಲಿ ಇದ್ದರೂ ಷೇರು ಮಾರುಕಟ್ಟೆ ಸದ್ಯಕ್ಕಂತೂ ಹೂಡಿಕೆದಾರರಿಗೆ ಉತ್ತರ ರಿಟರ್ನ್ಸ್ ನೀಡುತ್ತಿದೆ.
ಅದಕ್ಕೆ ಕಾರಣ ಏನೆಂದರೆ, ಕೇಂದ್ರ ಸರ್ಕಾರದಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ. ಆ ಮೂಲಕ ಆರ್ಥಿಕತೆಗೆ ಜೀವ ತುಂಬುವ ಕೆಲಸ ಆಗಬಹುದು ಎಂಬ ನಂಬಿಕೆ. ಒಂದು ವೇಳೆ ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಕೇಂದ್ರ ಬಜೆಟ್ ಇರಲಿಲ್ಲ ಅಂದರೆ ಏನಾಗಬಹುದು? ಅದನ್ನು ತಿಳಿಯುವುದಕ್ಕೆ ಮುಂಚೆ ಷೇರು ಮಾರುಕಟ್ಟೆಯ ಪ್ರಮುಖ ನಾಲ್ಕು ನಿರೀಕ್ಷೆಗಳನ್ನು ತಿಳಿದುಕೊಳ್ಳೋಣ.
ಈಕ್ವಿಟಿ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ (ಎಲ್ ಟಿಸಿಜಿ) ತೆರಿಗೆ
ಷೇರುಗಳ ಮೇಲಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆಯನ್ನು ಸರ್ಕಾರವು ತೆಗೆಯಬಹುದು ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಇದರ ಜತೆಗೆ ಎಲ್ ಟಿಸಿಜಿ ಅವಧಿಯನ್ನು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಏರಿಸಬಹುದು ಎಂಬ ಬಗ್ಗೆಯೂ ವರದಿಗಳು ಬರುತ್ತಿವೆ. ಸದ್ಯದ ನಿಯಮದ ಪ್ರಕಾರ: ಷೇರುಗಳನ್ನು ಒಂದು ವರ್ಷದ ನಂತರ ಮಾರಾಟ ಮಾಡಿದರೆ ಅದಕ್ಕೆ ಎಲ್ ಟಿಸಿಜಿ ತೆರಿಗೆ ಹತ್ತು ಪರ್ಸೆಂಟ್ ಮತ್ತು ಸೆಸ್ ಹಾಕಲಾಗುತ್ತದೆ. ಈ ನಿಯಮವನ್ನು ಸಡಿಲಿಸಿದರೆ ಈಕ್ವಿಟಿ ಷೇರು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡುವವರಿಗೆ ಅನುಕೂಲ ಆಗುತ್ತದೆ.
ಲಾಭಾಂಶ ವಿತರಣೆ ತೆರಿಗೆ (ಡಿಡಿಟಿ)
ಲಾಭಾಂಶ ವಿತರಣೆ ತೆರಿಗೆಯನ್ನು ಸರ್ಕಾರ ತೆಗೆಯಬೇಕು ಎಂಬುದು ಮತ್ತೊಂದು ಮುಖ್ಯ ನಿರೀಕ್ಷೆ. ಸದ್ಯಕ್ಕೆ ಲಾಭಾಂಶ ವಿತರಣೆಗೆ ತೆರಿಗೆ ವಿಧಿಸಲಾಗುತ್ತಿದೆ. ಅದನ್ನು ಡಿವಿಡೆಂಡ್ ವಿತರಿಸುವ ಕಂಪೆನಿಗಳೇ ಭರಿಸುತ್ತಿವೆ. ಒಂದು ವೇಳೆ ಈ ತೆರಿಗೆಯನ್ನು ತೆಗೆದರೆ ಹೆಚ್ಚಿನ ಡಿವಿಡೆಂಡ್ ಪಾವತಿಸುವ ಒಎನ್ ಜಿಸಿ, ವೇದಾಂತ, ಹಿಂದೂಸ್ತಾನ್ ಜಿಂಕ್, ಕೋಲ್ ಇಂಡಿಯಾ ಮತ್ತು ಆಯಿಲ್ ಇಂಡಿಯಾದಂಥ ಕಂಪೆನಿಗಳಿಗೆ ಅನುಕೂಲ ಆಗುತ್ತದೆ. ಸರ್ಕಾರದ ಆರ್ಥಿಕ ಸ್ಥಿತಿ ಗಮನಿಸಿದರೆ ಇದು ಅಸಾಧ್ಯ ಎನಿಸುತ್ತದೆ.
ಆದಾಯ ತೆರಿಗೆ ದರ ಕಡಿತ
ಆದಾಯ ತೆರಿಗೆ ದರವನ್ನು ಇಳಿಸುವ ಮೂಲಕ ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡಬಹುದು ಅಥವಾ 80C ವಿನಾಯಿತಿ ಮಿತಿಯನ್ನು ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಇದೆ. ಏಕೆಂದರೆ ಆ ಮೂಲಕ ಜನರ ಬಳಿ ಹೆಚ್ಚಿನ ಹಣ ಉಳಿಯುತ್ತದೆ, ಅದರೊಂದಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದರ ಹೊರತಾಗಿ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಹೆಚ್ಚು ಮಾಡಿದರೆ ELSSಗೆ ಹಣ ಹರಿದು ಬರುವ ಪ್ರಮಾಣ ಏರಿಕೆ ಆಗುತ್ತದೆ. ELSSನಿಂದ ಹಣ ಹೂಡಿಕೆ ಮಾಡುವುದು ಈಕ್ವಿಟಿ ಷೇರುಗಳ ಮೇಲೆ.
ವಿತ್ತೀಯ ಕೊರತೆ
ವಿತ್ತೀಯ ಕೊರತೆ ದರ ಏನಾಗಬಹುದು ಎಂಬ ನಿರೀಕ್ಷೆ ಕೂಡ ಹೂಡಿಕೆದಾರರಲ್ಲಿ ದೊಡ್ಡ ಮಟ್ಟದಲ್ಲಿದೆ. ಮೊದಲಿಗೆ ವಿತ್ತೀಯ ಕೊರತೆ ಗುರಿ 3.3 ಪರ್ಸೆಂಟ್ ಇರಿಸಿಕೊಳ್ಳಲಾಗಿತ್ತು. ಅದೀಗ 3.8 ಪರ್ಸೆಂಟ್ ಗೆ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆ ಇದೆ. ಒಂದು ವೇಳೆ ಜಿಡಿಪಿಯ 4 ಪರ್ಸೆಂಟ್ ನಷ್ಟಾಗಿ ಬಿಟ್ಟರೆ ಆಗ ಪರಿಸ್ಥಿತಿ ಬೇರೆ ಆಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಬಜೆಟ್ ಯಾವ ದಿಕ್ಕಿನ ಕಡೆ ಸಾಗುತ್ತದೆ ಎಂದು ಹೇಳಲು ಆಗುತ್ತಿಲ್ಲ. ತುಂಬ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಸರ್ಕಾರದಿಂದ ಬಹಳ ಒಳ್ಳೆಯದನ್ನು ನಿರೀಕ್ಷೆ ಮಾಡುವುದು ಕೂಡ ಸಾಧ್ಯವಿಲ್ಲ.