ಹಬ್ಬದ ಸೀಸನ್ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ಗಣಪತಿ ವಿಶೇಷ ರೈಲುಗಳನ್ನು ಆರಂಭಿಸುತ್ತಿದೆ. ಪ್ರಮುಖವಾಗಿ ಗಣೇಶ ಚತುರ್ಥಿ ದಿನದಂದು ರೈಲಿನಲ್ಲಿ ಜನಜಂಗುಳಿ ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಸಾಮಾನ್ಯವಾಗಿಯೇ ಮುಂಬೈ ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಗಣೇಶ ಚತುರ್ಥಿ ದಿನ ಜನರು ಹೆಚ್ಚಾಗಿ ರೈಲುಗಳಲ್ಲಿ ಓಡಾಟ ನಡೆಸುತ್ತಾರೆ.
ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಜಂಟಿಯಾಗಿ ಗಣಪತಿ ಹಬ್ಬಕ್ಕೆ ಮುನ್ನ 312 ಗಣಪತಿ ವಿಶೇಷ ರೈಲುಗಳನ್ನು ಆರಂಭ ಮಾಡುವುದಾಗಿ ತಿಳಿಸಿದೆ. ಕೇಂದ್ರ ರೈಲ್ವೆ 257 ರೈಲುಗಳನ್ನು ನಿರ್ವಹಿಸಿದರೆ, ಪಶ್ಚಿಮ ರೈಲ್ವೆ 55 ಗಣಪತಿ ವಿಶೇಷ ರೈಲುಗಳನ್ನು ನಿರ್ವಹಣೆ ಮಾಡಲಿದೆ. ಗಮನಾರ್ಹವಾಗಿ, ಈ ರೈಲುಗಳನ್ನು ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ದೇಶದಲ್ಲಿ ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕಳೆದ ವರ್ಷಕ್ಕಿಂತ ಹೆಚ್ಚುವರಿ ವಿಶೇಷ ರೈಲು ಸೇವೆ
"ಈ ವರ್ಷ ಭಕ್ತಾದಿಗಳ ಓಡಾಟಕ್ಕೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಒಟ್ಟು 312 ಗಣಪತಿ ವಿಶೇಷ ರೈಲು ಸೇವೆಗಳನ್ನು ನಿರ್ವಹಿಸಲು ರೈಲ್ವೆ ನಿರ್ಧರಿಸಿದೆ. 2022 ರಲ್ಲಿ ಒಟ್ಟಾಗಿ 294 ವಿಶೇಷ ರೈಲುಗಳ ಸೇವೆಯನ್ನು ಒದಗಿಸಲಾಗಿತ್ತು. ಅದಕ್ಕಿಂತ 18 ಅಧಿಕ ಗಣಪತಿ ವಿಶೇಷ ರೈಲು ಸೇವೆಗಳನ್ನು ಈ ವರ್ಷ ಭಾರತೀಯ ರೈಲ್ವೆಯು ಒದಗಿಸಿದೆ," ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
"2023 ರಲ್ಲಿ 257 ಗಣಪತಿ ವಿಶೇಷ ರೈಲು ಸೇವೆಗಳನ್ನು ಆರಂಭ ಮಾಡಲಾಗುತ್ತಿದ್ದು, ಇದನ್ನು ನಿರ್ವಹಣೆ ಮಾಡುವಲ್ಲಿ ಕೇಂದ್ರ ರೈಲ್ವೇ ಪ್ರಮುಖ ಪಾತ್ರವನ್ನು ವಹಿಸಲಿದೆ. ಹಿಂದಿನ ವರ್ಷಕ್ಕಿಂತ 18 ಹೆಚ್ಚುವರಿ ರೈಲುಗಳ ಸೇವೆ ಈ ವರ್ಷವಿದೆ. ಮತ್ತೊಂದೆಡೆ, ಪಶ್ಚಿಮ ರೈಲ್ವೇಯು ಹೆಚ್ಚುವರಿ 55 ರೈಲುಗಳ ಸೇವೆಯನ್ನು ಈ ವರ್ಷ ಆರಂಭಿಸಲಿದೆ. 2023 ರ ಗಣಪತಿ ವಿಶೇಷ ರೈಲು ಸೇವೆಗಳ ಒಟ್ಟು ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ," ಎಂದು ಕೂಡಾ ರೈಲ್ವೆಯು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಸಾಮಾನ್ಯವಾಗಿ, ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇಯಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿರುತ್ತದೆ. ವಿಶೇಷವಾಗಿ ಮುಂಬೈನಿಂದ ರಾಜ್ಯದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ಜನರು ಹೆಚ್ಚಾಗಿ ಪ್ರಯಾಣ ಮಾಡುತ್ತಾರೆ.
ಈ ವರ್ಷ 218 ಟಿಕೆಟ್ ಬುಕ್ಕಿಂಗ್ ಮೊದಲೇ ಮಾಡುವ ಸೇವೆಗಳನ್ನು ನೀಡುವ (ರಿಸರ್ವ್ಡ್ ಟ್ರೈನ್) ರೈಲುಗಳಿರಲಿದೆ. ಆದರೆ ಕಳೆದ ವರ್ಷ 2022 ರಲ್ಲಿ 262 ರೈಲುಗಳು ರಿಸರ್ವ್ಡ್ ಸರ್ವಿಸ್ ನೀಡುತ್ತಿದ್ದವು. ಇನ್ನೊಂದೆಡೆ ನೀವು ಮೊದಲೇ ರಿಸರ್ವ್ ಮಾಡದೆ ಪ್ರಯಾಣದ ವೇಳೆ ಟಿಕೆಟ್ ಪಡೆದು ಪ್ರಯಾಣಿಸಬಹುದಾದ ಸ್ಥಳೀಯ ರೈಲುಗಳು ಈ ವರ್ಷ 94 ಇದೆ. ಆದರೆ ಕಳೆದ ವರ್ಷ 32 ರೈಲುಗಳು ಮಾತ್ರ ಇದ್ದವು ಎಂದು ರೈಲ್ವೆ ಹೇಳಿದೆ.
ಪ್ರಯಾಣಿಕರು, ಆದಾಯದ ಅಂದಾಜು ಎಷ್ಟಿದೆ?
ಈ ವರ್ಷ ಕೇಂದ್ರ ರೈಲ್ವೇ ಸುಮಾರು 1.04 ಲಕ್ಷ ಪ್ರಯಾಣಿಕರು ರಿಸರ್ವ್ಡ್ ರೈಲುಗಳಲ್ಲಿ ಪ್ರಯಾಣಿಸುವ ಅಂದಾಜನ್ನು ಮಾಡಿದೆ. ಇಷ್ಟು ಪ್ರಯಾಣಿಕರು ಪ್ರಯಾಣ ಮಾಡಿದರೆ ರೈಲ್ವೆಗೆ 5.13 ಕೋಟಿ ರೂಪಾಯಿ ಆದಾಯ ಲಭ್ಯವಾಗಲಿದೆ. ಇದಲ್ಲದೆ ಅನ್ರಿಸರ್ವ್ಡ್ ರೈಲಿನಲ್ಲಿ 1.50 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ 10 ದಿನಗಳ ಗಣಪತಿ ಹಬ್ಬದ ಸಮಯದಲ್ಲಿ ಹೆಚ್ಚಿನ ಬೇಡಿಕೆ ಕಾರಣದಿಂದಾಗಿ ಈ ಗಣಪತಿ ವಿಶೇಷ ರೈಲುಗಳನ್ನು ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೆಯು ಆರಂಭ ಮಾಡುತ್ತದೆ. ಈ ವರ್ಷ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುವುದು.
ಈ ವಿಶೇಷ ರೈಲುಗಳ ಪ್ರಾರಂಭದ ಮೊದಲು, ಕೇಂದ್ರ ರೈಲ್ವೇ ಆಡಳಿತವು ತಮ್ಮ ಬೆಂಬಲಕ್ಕಾಗಿ ಪ್ರಯಾಣಿಕರಿಗೆ ಕೃತಜ್ಞತೆ ಸಲ್ಲಿಸಿದೆ. "ನಮ್ಮ ಸೇವೆಗಳನ್ನು ಆಯ್ಕೆ ಮಾಡಿದ ಪ್ರಯಾಣಿಕರು ನಮ್ಮ ಮೇಲೆ ಇರಿಸಿರುವ ನಂಬಿಕೆ ಹಾಗೂ ನಮಗೆ ನೀಡುವ ಬೆಂಬಲಕ್ಕಾಗಿ ಕೇಂದ್ರ ರೈಲ್ವೆ ಆಡಳಿತವು ಪ್ರಯಾಣಿಕರಿಗೆ ಕೃತಜ್ಞತೆ ಸಲ್ಲಿಸುತ್ತದೆ. ನಮ್ಮ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣ ಸೇವೆಯನ್ನು ನಾವು ಒದಗಿಸುತ್ತೇವೆ," ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.


Click it and Unblock the Notifications