ಕನ್ನಡ ಧಾರಾವಾಹಿಗಳ- ರಿಯಾಲಿಟಿ ಶೋಗಳ ಜಗತ್ತಿನ ಬಗ್ಗೆ ನಿಮಗೆಷ್ಟು ಗೊತ್ತು? ನೀವು ಸಣ್ಣ ತೆರೆಯ ಮೇಲೆ ನೋಡುವ ಸೀರಿಯಲ್- ರಿಯಾಲಿಟಿ ಶೋಗಳ ಹಿಂದೆ ಅತಿ ದೊಡ್ಡ ಎಕನಾಮಿಕ್ಸ್ ಇದೆ. ನಿತ್ಯವೂ ಇದರಿಂದ ಸಾವಿರಾರು ಮಂದಿಯ ಜೀವನ ನಡೆಯುತ್ತಿದೆ. ಕಿರುತೆರೆಯಿಂದಲೇ ಜಿಗಿದು, ಸಿನಿಮಾ ರಂಗದಲ್ಲಿ ವಿಜೃಂಭಿಸಿದವರಿದ್ದಾರೆ. ಯಶ್, ಗಣೇಶ್, ರಾಧಿಕಾ... ಇವರೆಲ್ಲ ಉದಾಹರಣೆಗಳು.
ಇನ್ನು ಸಿನಿಮಾ ರಂಗದಲ್ಲಿ ಮಿಂಚಿ, ಹೆಸರಾದ ಮೇಲೂ ಧಾರಾವಾಹಿ- ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವವರಿದ್ದಾರೆ. "ಸಿನಿಮಾಗಳಲ್ಲಿ ಬೇಡಿಕೆ ಕಡಿಮೆ ಆಯಿತೇನೋ ಅದಕ್ಕೆ ಟೀವಿಗೆ ಬಂದಿದ್ದಾರೆ ನೋಡು" ಎನ್ನುತ್ತಿದ್ದ ಕಾಲವು ಬದಲಾಗಿದೆ. ಈಗ ಇಲ್ಲೂ ಒಳ್ಳೆ ಸಂಭಾವನೆ, ಗೌರವ, ಮನ್ನಣೆ ಎಲ್ಲವೂ ಸಿಗುತ್ತದೆ. ಮುಖ್ಯವಾಗಿ ಸುದೀರ್ಘ ಅವಧಿಗೆ ಕೆಲಸ ಸಿಗುತ್ತದೆ.
ಇಷ್ಟು ಹೇಳಿದ ಮೇಲೆ ದುಡ್ಡು-ಕಾಸಿನ ವಿಚಾರ ಹೇಳದಿದ್ದರೆ ಹೇಗೆ?
ಕನ್ನಡದಲ್ಲಿ 4 ಪ್ರಮುಖ ಚಾನೆಲ್ ಗಳು
ಕನ್ನಡದ 4 ಪ್ರಮುಖ ಚಾನೆಲ್ ಗಳು ಸೇರಿ 50ರಿಂದ 52 ಧಾರಾವಾಹಿಗಳು ಸದ್ಯಕ್ಕೆ ಪ್ರಸಾರ ಆಗುತ್ತಿವೆ. ಒಂದು ಅಂದಾಜಿನ ಪ್ರಕಾರ, ಈ ಚಾನೆಲ್ ಗಳು ತಲಾ 8ರಿಂದ 10 ಧಾರಾವಾಹಿಗಳನ್ನು ಪ್ರಸಾರ ಮಾಡುತ್ತವೆ. ಇವುಗಳನ್ನು ಜನರಲ್ ಎಂಟರ್ ಟೇನ್ ಮೆಂಟ್ ಚಾನೆಲ್ ಗಳು(ಜಿಇಸಿ) ಎಂದು ಕರೆಯಲಾಗುತ್ತದೆ. ಜೀ ಕನ್ನಡ, ಕಲರ್ಸ್, ಕಲರ್ಸ್ ಸೂಪರ್, ಸುವರ್ಣ ಮತ್ತು ಉದಯ ಇವೇ ನಾಲ್ಕು ಪ್ರಮುಖ ಚಾನೆಲ್ ಗಳು.
ಇವುಗಳಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳ ಸಲುವಾಗಿ ಮತ್ತು ನೋಡುಗರ ಸಂಖ್ಯೆಯನ್ನು ವಿಶ್ಲೇಷಣಾತ್ಮಕವಾಗಿ ಗಮನಿಸಿ ಮೂರು ಬಗೆಯಲ್ಲಿ ಸಮಯ ವಿಂಗಡಣೆ ಮಾಡಿಕೊಳ್ಳಲಾಗುತ್ತದೆ. ಸಂಜೆ 6 ರಿಂದ ರಾತ್ರಿ 10.30ರ ತನಕ ಸಮಯವನ್ನು ಪ್ರೈಮ್ ಟೈಮ್ (Prime time) ಎಂದು ಕರೆಯಲಾಗುತ್ತದೆ. ಇದರದಲ್ಲಿ Early Prime ಅಂತ ಸಂಜೆ 6ರಿಂದ 7 ಗಂಟೆ ಅವಧಿಯನ್ನು, ಕೋರ್ ಪ್ರೈಮ್ ಟೈಮ್ (Core Prime) ಅಂತ ರಾತ್ರಿ 7ರಿಂದ 9.30 ಸಮಯವನ್ನು ಕರೆದರೆ, ರಾತ್ರಿ 8 ಗಂಟೆಗೆ ಹಾರ್ಡ್ ಕೋರ್ ಪ್ರೈಮ್ ಟೈಮ್ (Hard core prime), ರಾತ್ರಿ 9.30ರಿಂದ 10.30ರ ತನಕ ಲೇಟ್ ನೈಟ್ ಪ್ರೈಮ್ (Late Night Prime) ) ಎನ್ನಲಾಗುತ್ತದೆ. ಈ ಪ್ರೈಮ್ ಟೈಮ್ ನಲ್ಲಿ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಎಲ್ಲ ಚಾನೆಲ್ ಗಳು ಈ ಅವಧಿಯಲ್ಲಿ ಅವರನ್ನು ಸೆಳೆಯುವ ಸಲುವಾಗಿ ಇನ್ನಿಲ್ಲದ ಕಸರತ್ತು ಮಾಡುತ್ತವೆ. ನಿಜದ ಅರ್ಥದಲ್ಲಿ ಆದಾಯ ಇರುವುದೇ ಈ ಸಮಯದಲ್ಲಿ.
ಎರಡನೇ ನಾನ್ ಪ್ರೈಮ್ ಟೈಮ್ (Non Prime Time) ಬೆಳಗ್ಗೆ 9ರಿಂದ ಸಂಜೆ 6ರ ತನಕ. ಅಷ್ಟೇನೂ ವೀಕ್ಷಕರು ಇರದ ಸಮಯ ಇದು. ಹಾಗಂತ ಏನೂ ಕಾರ್ಯಕ್ರಮ ಇಲ್ಲದೆ ಇರುವಂತಿಲ್ಲ. ಆದ್ದರಿಂದಲೇ ಅಡುಗೆ, ಆರೋಗ್ಯ, ಮಹಿಳೆಯರ ಕಾರ್ಯಕ್ರಮಗಳು, ಮಧ್ಯಾಹ್ನದ ಸಿನಿಮಾಗಳನ್ನು ಪ್ರಸಾರ ಮಾಡುತ್ತಾರೆ. ಇವುಗಳು ಪೇಯ್ಡ್ ಸ್ಲಾಟ್ ಗಳೂ ಇರುತ್ತವೆ. ಅಂದರೆ ಈ ಅವಧಿಯಲ್ಲಿ ಅರ್ಧ ಗಂಟೆ, ಒಂದು ಗಂಟೆಯ ಕಾರ್ಯಕ್ರಮಕ್ಕೆ ಇಂತಿಷ್ಟು ದುಡ್ಡಿಗೆ ಸ್ಲಾಟ್ ಮಾರಲಾಗುತ್ತದೆ.
ಇನ್ನು ಮಾರ್ನಿಂಗ್ ಬ್ಯಾಂಡ್ (Morning Band). ಇದರಲ್ಲಿ ಹೆಚ್ಚಿನ ಖರ್ಚು ಇಲ್ಲದ, ಅಧ್ಯಾತ್ಮ- ಜ್ಯೋತಿಷ್ಯ, ಉಪದೇಶ, ಪ್ರವಚನ ಮುಂತಾದವಕ್ಕೆ ಮೀಸಲು. ಬೆಳಗ್ಗೆ 6ರಿಂದ 9 ಗಂಟೆ ತನಕ ಈ ಅವಧಿ. ಕಾರ್ಯಕ್ರಮಗಳಿಗೆ ಕಡಿಮೆ ಖರ್ಚು ಇರುತ್ತದೆ ಮತ್ತು ಕೆಲವು ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ಜ್ಯೋತಿಷಿಗಳಿಂದ ಹಣ ಪಡೆದು, ಸ್ಲಾಟ್ ನೀಡಲಾಗುತ್ತದೆ. ಅದರಿಂದ ಸ್ವಲ್ಪ ಪ್ರಮಾಣದ ಆದಾಯವೂ ಇದೆ.
ಒಂದು ಕಂತಿಗೆ ಸರಾಸರಿ 1 ಲಕ್ಷ ರುಪಾಯಿ
ಮುಖ್ಯ ವಿಚಾರಕ್ಕೆ ಬರುವುದಾದರೆ, ಧಾರಾವಾಹಿಗಳ ಒಂದು ಎಪಿಸೋಡ್ ಗೆ ಚಾನೆಲ್ ಗಳು ಸರಾಸರಿ 1 ಲಕ್ಷ ರುಪಾಯಿ ನೀಡುತ್ತವೆ. ಅದನ್ನು ಹೀಗೂ ಹೇಳಬಹುದು. ಒಂದು ಎಪಿಸೋಡ್ ಗೆ 90 ಸಾವಿರದಿಂದ 1.20 ಲಕ್ಷ ರುಪಾಯಿ ನೀಡಲಾಗುತ್ತದೆ. ಈ ಮೊತ್ತಕ್ಕೆ ಹೊರತಾದ ಕೆಲವು ಸಂಗತಿ ಇವೆ. ಅದೇನೆಂದರೆ, ಧಾರಾವಾಹಿಗಳಲ್ಲಿ ಗ್ರಾಫಿಕ್ಸ್ ಕೆಲಸ ಜಾಸ್ತಿ ಇದ್ದಲ್ಲಿ, ನಟ- ನಟಿಯರ ಸಂಭಾವನೆ ಜಾಸ್ತಿ ಇದ್ದಲ್ಲಿ ಮೂರು ಲಕ್ಷದ ತನಕ ಒಂದು ಎಪಿಸೋಡ್ ಗೆ ನೀಡಲಾಗುತ್ತದೆ. ಉದಯ ಟೀವಿಯಲ್ಲಿ ಪ್ರಸಾರ ಆಗುವ ನಂದಿನಿ, ಜೀ ಕನ್ನಡದ ನಾಗಿಣಿ ಧಾರಾವಾಹಿಗಳನ್ನು ಆ ಕ್ಯಾಟಗರಿಗೆ ಸೇರಿಸಿಕೊಳ್ಳಬಹುದು. ಸದ್ಯಕ್ಕೆ ಕನ್ನಡದ ಚಾನೆಲ್ ಗಳು ಇನ್ ಹೌಸ್ ಪ್ರೊಡಕ್ಷನ್ ಮಾಡುತ್ತಿಲ್ಲ (ಜೀ ಕನ್ನಡ ಹೊರತುಪಡಿಸಿ). ಔಟ್ ಸೋರ್ಸ್ ಮಾಡುತ್ತವೆ. ಹೊರಗಿನ ನಿರ್ಮಾಪಕರು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾರೆ. ಅವರಿಗೆ ಪ್ರತಿ ಕಂತಿಗೆ ಇಷ್ಟು ಎಂದು ಹಣ ನಿಗದಿ ಮಾಡಿ, ಪಾವತಿಸುತ್ತಾ ಹೋಗಲಾಗುತ್ತದೆ.
ನಿರ್ಮಾಪಕರಿಗೆ ಎಂಬತ್ತು ಲಕ್ಷದಿಂದ ಒಂದು ಕೋಟಿ ಬೇಕು
ಧಾರಾವಾಹಿ ನಿರ್ಮಾಣ ಮಾಡುವ ನಿರ್ಮಾಪಕರಿಗೆ ಮೊದಲ ನಲವತ್ತೈದು ದಿನ ಏನೂ ಸಿಗಲ್ಲ. ಚಾನೆಲ್ ನವರು ಹಣ ಕೊಡಲ್ಲ. ಆ ಧಾರಾವಾಹಿಯನ್ನು ಜನರು ಇಷ್ಟ ಪಡಬೇಕು. ಅಲ್ಲಿಯ ತನಕ ನಿರ್ಮಾಣ ಸಂಸ್ಥೆಯವರೇ ಕೈಯಿಂದ ಹಣ ಹಾಕಬೇಕಾಗುತ್ತದೆ. ಹಾಗಿದ್ದರೆ ಆ ಹಣವನ್ನು ಕೊಡುವುದೇ ಇಲ್ಲವಾ? ಆ ನಲವತ್ತೈದು ದಿನದ ನಂತರವೂ ರೇಟಿಂಗ್ ಚೆನ್ನಾಗಿದ್ದರೆ ಹಣ ಬರುತ್ತದೆ. ಇಲ್ಲದಿದ್ದಲ್ಲಿ ಆ ಧಾರಾವಾಹಿಯನ್ನು ನಿಲ್ಲಿಸಿಬಿಡುತ್ತಾರೆ. ಇದಕ್ಕೂ ಮುನ್ನ ಧಾರಾವಾಹಿ ನಿರ್ಮಾಣ ಹಂತದಲ್ಲಿ ಕಥೆ ಸಿದ್ಧತೆ, ಕಲಾವಿದರ ಆಯ್ಕೆ, ಚಿತ್ರೀಕರಣ... ಇವೆಲ್ಲ ಸೇರಿ ನಿರ್ಮಾಪಕರಿಗೆ ಮೂರು ತಿಂಗಳ ಸಮಯ ಬೇಕಾಗುತ್ತದೆ. ಆ ನಂತರ ಧಾರಾವಾಹಿ ಚಾನೆಲ್ ನಲ್ಲಿ ಪ್ರಸಾರ ಆಗುತ್ತದೆ. ಅದುವರೆಗೂ ಕೈಯಿಂದ ಹಣ ಹಾಕಿರಬೇಕು. ಅದಕ್ಕಾಗಿ ಎಂಬತ್ತು ಲಕ್ಷದಿಂದ ಒಂದು ಕೋಟಿ ರುಪಾಯಿ ಹಣ ಇಟ್ಟುಕೊಂಡಿರಬೇಕು. ಧಾರಾವಾಹಿ ಕೊನೆ ಆದ ಮೇಲೆ ಸ್ವಲ್ಪ ಮೊತ್ತವನ್ನು ಚಾನೆಲ್ ನವರು ಹಾಗೇ ಬಾಕಿ ಇರಿಸಿಕೊಂಡಿರುತ್ತಾರೆ. ಯಾರಿಗೂ ಸಂಭಾವನೆ ಬಾಕಿ ಇಲ್ಲ (ಕಲಾವಿದರಿಗೆ ಯಾವುದೇ ಹಣ ಬಾಕಿ ಇಲ್ಲ) ಎಂದು ನಿರಾಕ್ಷೇಪಣಾ ಪತ್ರ (ಎನ್ ಒಸಿ) ನೀಡಿದ ಬಳಿಕವೇ ನಿರ್ಮಾಪಕರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ.
ಕನಿಷ್ಠ ಇನ್ನೂರು ಕಂತು ಪ್ರಸಾರ ಆಗಬೇಕು
ಯಾವುದೇ ನಿರ್ಮಾಪಕರಿಗೆ ಒಂದು ಧಾರಾವಾಹಿ ಇನ್ನೂರು ಕಂತುಗಳು ಪ್ರಸಾರವಾದರೆ ಲಾಭವೂ ಇಲ್ಲದ- ನಷ್ಟವೂ ಅಲ್ಲದ ಸ್ಥಿತಿಯಲ್ಲಿ ಇರುತ್ತಾರೆ. ಅದರ ಮೇಲೆ ಹೆಚ್ಚು ಕಂತುಗಳು ಆದಂತೆ ಲಾಭ ಕಾಣಬಹುದು. ಯಾವುದೇ ಚಾನೆಲ್ ಧಾರಾವಾಹಿಯನ್ನು ಲಾಭ ಅಥವಾ ನಷ್ಟ ಎಂದು ಪರಿಗಣಿಸುವುದು 1:3 ಸೂತ್ರದಲ್ಲಿ. 1 ಲಕ್ಷ ರುಪಾಯಿ ಖರ್ಚು ಮಾಡಿದರೆ 3 ಲಕ್ಷ ಆದಾಯ ಬರಬೇಕು. ಜಾಹೀರಾತುಗಳು ಚಾನೆಲ್ ಗಳ ಆದಾಯ ಮೂಲ. ಅದರ ಜತೆಗೆ ಕೇಬಲ್ ಪ್ರಸಾರ ಮಾಡುವವರ ಕಡೆಯಿಂದಲೂ ಸ್ವಲ್ಪ ಪ್ರಮಾಣದ ಆದಾಯ ಬರುತ್ತದೆ. ಇನ್ನು ರಿಯಾಲಿಟಿ ಶೋಗಳ ಲೆಕ್ಕಾಚಾರವೇ ಬೇರೆ. ತಮ್ಮ ಚಾನೆಲ್ ಗಳ ಹೆಸರು ವೀಕ್ಷಕರ ಬಳಿ ರಿಜಸ್ಟರ್ ಆಗಲಿ, ಅವರ ಗಮನಕ್ಕೆ ಬರಲಿ ಎಂಬ ಉದ್ದೇಶಕ್ಕೆ ಚಾನೆಲ್ ಗಳು ಮಾಡುತ್ತವೆ. ಇವುಗಳನ್ನು ಕೂಡ ಬಹುತೇಕ ಔಟ್ ಸೋರ್ಸ್ ಮಾಡಲಾಗುತ್ತದೆ. ಲಾಭ ನಿರೀಕ್ಷೆ ಮಾಡುವುದು ಕಷ್ಟ. ಆದರೆ ಅದನ್ನು ಈಚೆಗೆ ಬದಲಾಯಿಸಿಕೊಳ್ಳಲಾಗಿದೆ. ಅಲ್ಲೂ ಲೆಕ್ಕಾಚಾರದಿಂದ ಹೆಚ್ಚು ಇಟ್ಟು, ಯಶಸ್ವಿಯಾದವರಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಅತಿ ದೊಡ್ಡ ಬಜೆಟ್ ನ ರಿಯಾಲಿಟಿ ಶೋ. ಅದನ್ನು ಬಿಟ್ಟರೆ ಜೀ ಕನ್ನಡದ ಸ ರಿ ಗ ಮ ಪ... ಇದೆ. ಕನ್ನಡದ ಚಾನೆಲ್ ಗಳಿಗೆ ಅವುಗಳದೇ ಹಣೆಪಟ್ಟಿ ಇದೆ. ಉದಯ ಟೀವಿಯನ್ನು ಜನರು ಸಿನಿಮಾಗೆ ಮೀಸಲಾದ ಚಾನೆಲ್ ಅಂತಲೇ ನೋಡ್ತಾರೆ. ಇನ್ನು ಕಲರ್ಸ್ ಧಾರಾವಾಹಿಗಳಿಗೆ, ಜೀ- ನಾನ್ ಫಿಕ್ಷನ್ ಮತ್ತು ಈಚೆಗೆ ಧಾರಾವಾಹಿಗಳಿಗೆ ಮತ್ತು ಸುವರ್ಣ- ಧಾರಾವಾಹಿ- ರಿಯಾಲಿಟಿ ಶೋಗಳಿಗೆ ಹೆಸರಾಗಿದೆ. ಕನ್ನಡದ ಕಿರುತೆರೆ ಮಟ್ಟಿಗೆ ಕಲಾವಿದರಿಗೆ ಸಿಗುತ್ತಿರುವ ಅತಿ ಹೆಚ್ಚಿನ ದಿನದ ಸಂಭಾವನೆ ಅಂದರೆ ಮೂವತ್ತರಿಂದ ಮೂವತ್ತೈದು ಸಾವಿರ ರುಪಾಯಿ. ತಿಂಗಳಲ್ಲಿ ಹದಿನೈದರಿಂದ ಇಪ್ಪತ್ತು ದಿನ ಕೆಲಸ ಇರುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications