ಅಯ್ಯೋ ಪಾಪ ಎನಿಸಿದ ಕಾರ್ಪೊರೇಟ್ ಗೌರ್ನನ್ಸ್ ಲೋಪ!
ಕಾರ್ಪೊರೇಟ್ ಗೌರ್ನನ್ಸ್ ಎಂದರೆ ಕಂಪೆನಿಗಳಲ್ಲಿ ನೈತಿಕ ಮಟ್ಟ ಹೆಚ್ಚಿಸಿ ನಂಬಿಕೆಗೆ ಅರ್ಹವಾದುದು ಎಂಬ ಪಟ್ಟ ಕಟ್ಟುವತ್ತ ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಈ ಕಾರಣ ಕಂಪನಿಗಳು ಮಂಡಳಿಗಳು ಅಸಹಜ ನಿರ್ಧಾರಗಳನ್ನು, ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ.
ಕಾರ್ಪೊರೇಟ್ ಗೌರ್ನನ್ಸ್ ಎಂದರೆ ಕಂಪೆನಿಗಳಲ್ಲಿ ನೈತಿಕ ಮಟ್ಟ ಹೆಚ್ಚಿಸಿ ನಂಬಿಕೆಗೆ ಅರ್ಹವಾದುದು ಎಂಬ ಪಟ್ಟ ಕಟ್ಟುವತ್ತ ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಈ ಕಾರಣ ಕಂಪನಿಗಳು ಮತ್ತು ಅವುಗಳ ಆಡಳಿತ ಮಂಡಳಿಗಳು ಅಸಹಜ ನಿರ್ಧಾರಗಳನ್ನು, ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ಕಂಪನಿಯ ಕಾರ್ಪೊರೇಟ್ ಗೌರ್ನನ್ಸ್ ಬಗ್ಗೆ ಪೇಟೆಗೆ ಅನುಮಾನ ಬಂದರೆ ಅಂತಹ ಷೇರಿನ ಬೆಲೆಯನ್ನು ಹೇಗೆ ಯಾವ ಮಟ್ಟದಲ್ಲಿ ಹೊಸಕಿ ಬಿಡುತ್ತದೆ ಎಂಬುದಕ್ಕೆ ಸತ್ಯಂ ಕಂಪ್ಯೂಟರ್ ಲಿಮಿಟೆಡ್ ಘಟನೆ ಸೂಕ್ತ ಉದಾಹರಣೆಯಾಗಿದೆ.
ತಾತ್ಕಾಲಿಕ ಏರಿಳಿತ
2008ರ ವರ್ಷದ ಆರಂಭಿಕ ತಿಂಗಳು ಜನವರಿಯಲ್ಲಿ ಸೆನ್ಸೆಕ್ಸ್ 21 ಸಾವಿರದ ಗಡಿ ದಾಟಿ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ. 71 ಲಕ್ಷ ಕೋಟಿ ದಾಟಿ ಹೊಸ ದಾಖಲೆ ಬರೆಯುವುದರೊಂದಿಗೆ ಆರಂಭವಾಗಿತ್ತು. ಆದರೆ ಆ ಸಂಭ್ರಮೋಪೇರಿತ ದಿನಗಳು ಕೇವಲ ತಾತ್ಕಾಲಿಕವಾಗಿ ಪರಿಣಮಿಸಿದವು. ಆ ವರ್ಷ ಜುಲೈ ನಲ್ಲಿ ಕಚ್ಚಾ ತೈಲಬೆಲೆಯು 147 ಡಾಲರ್ ವರೆಗೂ ಜಿಗಿದು ಅಂತರಾಷ್ಟ್ರೀಯ ಪೇಟೆಗಳನ್ನು ತಲ್ಲಣಗೊಳಿಸಿದರೆ, ನಮ್ಮ ದೇಶದ ಹಣದುಬ್ಬರದ ಪ್ರಮಾಣವನ್ನು ಶೇ. 12.34ರವರೆಗೂ ಏರಿಕೆ ಕಾಣುವಂತೆ ಮಾಡಿ, ಸೆನ್ಸೆಕ್ಸ್ ನ್ನು ಭಾರಿ ಕುಸಿತಕ್ಕೆ ತಳ್ಳಿತು. ಸತ್ಯಂ ಕಂಪ್ಯೂಟರ್ ಲಿಮಿಟೆಡ್ ಕಂಪನಿಯು 2008ರಲ್ಲಿ ದೇಶದ ನಾಲ್ಕನೇ ಅತಿ ದೊಡ್ಡ ಸಾಫ್ಟ್ ವೇರ್ ಕಂಪೆನಿಯೆಂಬ ಪಟ್ಟ ಗಳಿಸಿತ್ತು.
ಸತ್ಯಂ ಕಂಪ್ಯೂಟರ್ ನಿರ್ಧಾರ
ಡಿಸೆಂಬರ್ 16ರಂದು ಸತ್ಯಂ ಕಂಪ್ಯೂಟರ್ ಕಂಪನಿಯ ಚೇರ್ಮನ್ ರ ಮಕ್ಕಳ ಕಂಪೆನಿಯಾಗಿದ್ದ ಮೆಟಾಸ್ ಇನ್ಫ್ರಾಸ್ಟ್ರಕ್ಚರ್ಸ್ ಮತ್ತು ಮೆಟಾಸ್ ಪ್ರಾಪರ್ಟಿಸ್ ಗಳನ್ನು 1.6 ಶತಕೋಟಿ ಡಾಲರ್ ಗಳಿಗೆ ಖರೀದಿಸುವ ನಿರ್ಧಾರವನ್ನು ಸಂಜೆ ಪ್ರಕಟಿಸಲಾಯಿತು. ಈ ನಿರ್ಧಾರವು ಸ್ವಹಿತಕ್ಕಾಗಿ ತೆಗೆದುಕೊಂಡದ್ದು ಎಂದು ಪೇಟೆ ತೀರ್ಮಾನಿಸಿತು. ಅಂದು ರಾತ್ರಿ ಅಮೆರಿಕಾದಲ್ಲಿನ ಷೇರುಪೇಟೆಯಲ್ಲಿ ಟ್ರೇಡಿಂಗ್ ಗೆ ಲೀಸ್ಟ್ ಮಾಡಿಕೊಂಡಿದ್ದ ಎಡಿಆರ್ ಗಳು ತರಗೆಲೆಗಳಂತೆ ಕುಸಿಯಲಾರಂಭಿಸಿದವು. ಶೇ. 50 ಕ್ಕೂ ಹೆಚ್ಚಿನ ಕುಸಿತ ಕಂಡವು. ಅಂದು ರಾತ್ರಿ ಸ್ಥಳೀಯ ಮತ್ತು ವಿದೇಶಿ ವಿಶ್ಲೇಷಕರು, ಹೂಡಿಕೆದಾರರು, ಕಂಪನಿಯ ಈ ನಿರ್ಧಾರದ ಬಗ್ಗೆ ಹೆಚ್ಚಿನ ವಿರೋಧವನ್ನು ವ್ಯಕ್ತಪಡಿಸಿದ ಕಾರಣ ಕಂಪನಿಯ ಆಡಳಿತ ಮಂಡಳಿಯು ರಾತ್ರೋರಾತ್ರಿ ಈ ನಿರ್ಧಾರದಿಂದ ಹಿಂದೆ ಸರಿಯಿತು. ಅಂದರೆ ಮೆಟಾಸ್ ಇನ್ಫ್ರಾಸ್ಟ್ರಕ್ಚರ್ಸ್ ಮತ್ತು ಮೆಟಾಸ್ ಪ್ರಾಪರ್ಟಿಸ್ ಗಳನ್ನು 1.6 ಶತಕೋಟಿ ಡಾಲರ್ ಗಳಿಗೆ ಖರೀದಿಸುವ ನಿರ್ಧಾರವನ್ನು ಕೈಬಿಟ್ಟಿತು.
ಅಮಾಯಕ ಹೂಡಿಕೆದಾರರು
ಆದರೆ ಪೇಟೆಯ ನಿರ್ಧಾರವೇ ಬೇರೆಯಾಗಿತ್ತು. ಡಿಸೆಂಬರ್ 17ರಂದು ಪೇಟೆಯಲ್ಲಿ ಆರಂಭಿಕ ಕ್ಷಣಗಳಿಂದಲೂ ಷೇರಿನ ಬೆಲೆಯು ಮಾರಾಟದ ಒತ್ತಡಕ್ಕೆ ಸಿಲುಕಿತು. ಷೇರಿನ ಬೆಲೆಯು ರೂ. 222-113ರವರೆಗೂ ಇಳಿಯಿತು. ಈ ಭಾರಿ ಕುಸಿತಕ್ಕೆ ಬಲಿಯಾಗುವುದು ಅಮಾಯಕ ಹೂಡಿಕೆದಾರರು ಅದರಲ್ಲೂ ವಿಶೇಷವಾಗಿ ಸ್ವಲ್ಪ ಹಣ ನೀಡಿ ಹೆಚ್ಚಿನ ಷೇರುಗಳನ್ನು ಖರೀದಿಸುವ ಮಾರ್ಜಿನ್ ಟ್ರೇಡರ್ಸ್ ಗಳು. ಅಂದಿನ ಈ ಕುಸಿತದ ಪ್ರಭಾವವು ಕಂಪನಿಯ ಪ್ರಮೋಟರ್ ಗಳ ಬಂಡವಾಳವನ್ನು ಅರ್ಧದಷ್ಟು ಕರಗಿಸಿತು. ಇದು ವಿಸ್ಮಯಕಾರಿಯಲ್ಲವೇ?
ಷೇರುಬೆಲೆ ಕುಸಿತ
ಕಂಪನಿಯ ಪ್ರಮೋಟರ್ ಗಳು ಆಗಿನ ಸಂದರ್ಭದಲ್ಲಿ ಕಂಪನಿಯಲ್ಲಿ ಹೊಂದಿದ್ದ ಸ್ಟೇಕ್ ಶೇ. 8.27ರಷ್ಟನ್ನು ಹೊಂದಿದ್ದರು. ಅದನ್ನು ಸಂಪೂರ್ಣವಾಗಿ ಪ್ಲೆಡ್ಜ್ ಮಾಡಿದ್ದರು. ಅಂದು ಷೇರಿನ ಬೆಲೆಯು ಅರ್ಧದಷ್ಟು ಕುಸಿತ ಕಂಡಾಗ ಫೈನಾನ್ಶಿಯರ್ ಗಳಿಗೆ ತುಂಬಾ ಬೇಕಾದ ಮಾರ್ಜಿನ್ ಹಣವನ್ನು ನೀಡಲು ಪ್ರಮೋಟರ್ ಗಳಿಗೆ ಸಾಧ್ಯವಾಗದೆ ಇದ್ದ ಕಾರಣ ಫೈನಾನ್ಶಿಯರ್ ಗಳು ಅಗತ್ಯವಿದ್ದ ಮಾರ್ಜಿನ್ ಹಣ ಪಡೆಯಲು ಪ್ಲೆಡ್ಜ್ ಮಾಡಿದ್ದ ಷೇರುಗಳನ್ನು ಮಾರಾಟ ಮಾಡಲು ಮುಂದಾದ ಕಾರಣ ಷೇರಿನ ಬೆಲೆಯ ಮೇಲೆ ಮತ್ತಷ್ಟು ಒತ್ತಡ ಬಿತ್ತು. ಅಂತಿಮವಾಗಿ ಅಂದು ಅವರು ಹೊಂದಿದ್ದ ಶೇ. 8.27ರ ಸ್ಟೇಕ್ ಕರಗಿ ಶೇ. 4.4 ಇಳಿಯಿತು. ಅಂದರೆ ಪ್ರಮೋಟರ್ ಗಳು ಒಂದು ಜಾರಿಗೊಳಿಸಲಾಗದ ನಿರ್ಧಾರ ತೆಗೆದುಕೊಂಡು ಕೈಬಿಟ್ಟರು ಸಹ ಪೇಟೆಯು ಆ ನಿರ್ಧಾರದ ಹಿಂದಿನ ವಾಸನೆಯನ್ನು ಹಿಡಿದು ಸೂಕ್ತವಾದ ದಂಡ ವಿಧಿಸುತ್ತದೆ ಎಂಬುದು ಸಾಭಿತಾಯಿತು. ಆ ಸಂದರ್ಭದಲ್ಲಿ ಕಂಪನಿಯ ಪ್ರಮೋಟರ್ ಗಳು ತಮ್ಮ ಸ್ಟೀಕನ್ನು ಪ್ಲೆಡ್ಜ್ ಮಾಡಿರುವ ವಿಚಾರಕ್ಕೆ ಅಷ್ಟು ಮಹತ್ವವಿರಲಿಲ್ಲ ಮತ್ತು ಅದನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ತಿಳಿಸಬೇಕೆಂಬ ನಿಯಮವಿರಲಿಲ್ಲ.
ಪ್ರಮೋಟರ್ ಸ್ಟೇಕ್ ಪ್ಲೆಡ್ಜ್
ಈ ಬೆಳವಣಿಗೆಯು, ಕಂಪನಿಗಳ ಪ್ರಮೋಟರ್ ಗಳು ತಮ್ಮ ಸ್ಟೇಕ್ ನಲ್ಲಿ ಎಷ್ಟು ಪ್ಲೆಡ್ಜ್ ಆಗಿದೆ ಎಂಬುದಲ್ಲದೆ ಅದರಲ್ಲಾಗುವ ಬದಲಾವಣೆಗಳನ್ನು ಸ್ಟಾಕ್ ಎಕ್ಸ್ಚೇಂಜ್ ಗಳಿಗೆ ತಿಳಿಸುವುದು ಕಡ್ಡಾಯಗೊಳಿಸಲು ಮಾರ್ಕೆಟ್ ರೆಗ್ಯುಲೇಟರ್ ಸೆಬಿ ಮುಂದಾಗುವಂತೆ ಮಾಡಿತು. ಮುಂದೆ ಪ್ರಮೋಟರ್ ಸ್ಟೇಕ್ ಪ್ಲೆಡ್ಜ್ ಆಗಿರುವ ಅಂಶವು ಪೇಟೆಯಲ್ಲಿ ಷೇರಿನ ಬೆಳೆಗಳ ಏರಿಳಿತಗಳ ಸೂತ್ರದಾರಿಯಾಗಿಯೂ ಪರಿಣಮಿಸಿತು.