ಬಜೆಟ್ ನಲ್ಲಿ ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಲಿರುವ 5 ಪ್ರಮುಖ ಕೊಡುಗೆಗಳು!
ಜೇಟ್ಲಿಯವರು ಮಂಡಿಸಲಿರುವ ಬಜೆಟ್ ಕೇವಲ ಜನಹಿತ ದೃಷ್ಟಿಯಿಂದ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಘಡ ರಾಜ್ಯಗಳಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಉಳಿಸಿಕೊಳ್ಳಲು ಯತ್ನಿಸುವ ರಾಜಕೀಯ ನಡೆಯೂ ಆಗಿದೆ
2018ನೇ ವರ್ಷದ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಜನಸಾಮಾನ್ಯರು ಈ ಬಜೆಟ್ ಕುರಿತಾಗಿ ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಯವರು ಯಾವ ಆಶ್ವಾಸನೆಗಳನ್ನು ನೀಡುತ್ತಾರೆ ಎಂದು ಕಾತುರರಾಗಿದ್ದಾರೆ. ಇದು ಮೋದಿ ಸರ್ಕಾರದ ಐದನೆಯ ವರ್ಷವಾಗಿದ್ದು, 2019ರ ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರವಿರುವ ಕೊನೆಯ ವರ್ಷವಾಗಿರುವ ಕಾರಣ ಜನಸಾಮಾನ್ಯರ ಓಲೈಕೆಗಾಗಿ ಕೊಂಚ ಹೆಚ್ಚೇ ಜನಪರ ಬಜೆಟ್ ಮಂಡಿಸಬಹುದು ಎಂದು ಎಲ್ಲಾ ವರ್ಗದ ಜನರ ಅಭಿಪ್ರಾಯವಾಗಿದೆ. ಈ ವರ್ಷದ ಬಜೆಟ್ ನಿಂದ ಕೆಲವು ಕ್ಷೇತ್ರಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ದೇಶಹಿತದ ಕಾರ್ಯಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೊಂದು ಅವಕಾಶವೂ ಆಗಿದೆ. ಅದಕ್ಕೂ ಮುನ್ನ ಹಲವಾರು ವಿಷಯಗಳ ಕುರಿತು ವಿಶ್ಲೇಷಣೆ ನಡೆಯುತ್ತದೆ ಹಾಗೂ ಹಿಂದಿನ ಆಗು ಹೋಗುಗಳು, ಅಂಕಿ ಅಂಶಗಳನ್ನು ಪರಿಗಣಿಸಿ ಈ ಬಜೆಟ್ ನಲ್ಲಿ ಮಂಡಿಸಬಹುದಾದ ಅಂಶಗಳನ್ನು ಅಂಕಿಅಂಶ ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಜೇಟ್ಲಿಯವರು ಮಂಡಿಸಲಿರುವ ಬಜೆಟ್ ಕೇವಲ ಜನಹಿತ ದೃಷ್ಟಿಯಿಂದ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಘಡ ರಾಜ್ಯಗಳಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಉಳಿಸಿಕೊಳ್ಳಲು ಯತ್ನಿಸುವ ರಾಜಕೀಯ ನಡೆಯೂ ಆಗಿದೆ. ಕೆಲವು ದಿನಗಳ ಹಿಂದೆ ಜೇಟ್ಲಿಯವರು ನೀಡಿದ ಹೇಳಿಕೆಯ ಪ್ರಕಾರ ದೇಶದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲು ಮೋದಿ ಸರ್ಕಾರ ಮೂಲಸೌಕರ್ಯಗಳು, ಗ್ರಾಮೀಣ ವಿಕಾಸ, ಚಿಕ್ಕ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಮೇಲೆ ಹೆಚ್ಚು ಗಮನ ಹರಿಸಲಿದೆ. ಅಲ್ಲದೇ ಉದ್ಯೋಗಾವಕಾಶಗಳ ಹೆಚ್ಚಳಕ್ಕೂ ಮೋದಿ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಈ 10 ತೆರಿಗೆ ಕಡಿತ/ಲಾಭಗಳನ್ನು ತಪ್ಪದೇ ಪಡೆಯಿರಿ..
ಈ ಬಜೆಟ್ ನಲ್ಲಿ ಫೆಬ್ರವರಿ ಒಂದರಂದು ಮಂಡಿಸಲಿರುವ ಬಜೆಟ್ ನಲ್ಲಿ ಮೋದಿ ಸರ್ಕಾರ ಜನತೆಗೆ ನೀಡಲಿರುವ ಕೊಡುಗೆಗಳಲ್ಲಿ ಈ ಐದು ಅಂಶಗಳು ಪ್ರಮುಖವಾಗಲಿವೆ.
ಕೃಷಿ
ಮೋದಿ ಸರ್ಕಾರದ ಗಮನ ಕೃಷಿಯ ಕಡೆ ಹೆಚ್ಚಾಗಿರುವುದು ಈಗ ಸ್ಪಷ್ಟವಾಗಿರುವ ಅಂಶವಾಗಿದ್ದು, ಈ ಬಜೆಟ್ ನಲ್ಲಿಯೂ ಕೃಷಿಗೆ ಹೆಚ್ಚಿನ ಒಲವು ತೋರುವ ಸಾಧ್ಯತೆ ಹೆಚ್ಚಿದೆ. ಜೇಟಿಯವರ ಪ್ರಕಾರ ಸರ್ಕಾರಕ್ಕೆ ಕೃಷಿ ಪ್ರಥಮ ಆದ್ಯತೆಯ ವಿಷಯವಾಗಿದ್ದು ಎಲ್ಲಿಯವರೆಗೆ ಕೃಷಿಯಿಂದ ಬರುವ ಆದಾಯ ಸ್ಪಷ್ಟ ಹಾಗೂ ಅರ್ಹರಿಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಸಮರ್ಥನೀಯ ಮತ್ತು ನ್ಯಾಯಸಮ್ಮತ ಆರ್ಥಿಕ ಏಳಿಗೆ ಅಸಾಧ್ಯ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿಯೂ ಕೇಂದ್ರದ ನೆರವು ಲಭ್ಯವಾಗಿಸುವ ಮೂಲಕ ಕೃಷಿಕರಿಗೆ ಹೆಚ್ಚಿನ ಉಪಯೋಗವಾಗಲಿದೆ. ಕೇಂದ್ರ ಅಂಕಿ ಅಂಶ ಇಲಾಖೆ (Central Statistics Office) ನೀಡಿರುವ ಮಾಹಿತಿಯ ಪ್ರಕಾರ ದೇಶದ ಅಭಿವೃದ್ದಿಯ ವೇಗ 2017-18 ರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ ಕಡಿಮೆಯಾಗಿದ್ದು ಶೇ. 6.5ಕ್ಕೆ ಇಳಿದಿದೆ. ಇದು ಮೋದಿ ಸರ್ಕಾರದ ಕಳೆದ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಕೃಷಿ ಹಾಗೂ ಉತ್ಪಾದನಾ ಕ್ಷೇತ್ರಗಳ ಕಳಪೆ ಪ್ರದರ್ಶನವೇ ಕಾರಣವಾಗಿದೆ.
ಮೂಲಸೌಕರ್ಯ
ಬಜೆಟ್ 2018 ರಲ್ಲಿ ಮೂಲಸೌಕರ್ಯಕ್ಕೆ ಜೇಟ್ಲಿಯವರು ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಆರ್ಥಿಕ ವ್ಯವಹಾರ ಕಾರ್ಯದರ್ಶಿ ಸುಭಾಶ್ ಗರ್ಗ್ ರವರು ಇತ್ತೀಚಿಗೆ ನೀಡಿದ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರದ ಬಜೆಟ್ ನ ಪ್ರಮುಖ ಪಾಲನ್ನು ಮೂಲ ಸೌಕರ್ಯಗಳ ಮೇಲೆ ಹಾಗೂ ವಿದೇಶೀ ಹೂಡಿಕೆಯ ಮೇಲೆ ಪ್ರಮುಖವಾಗಿ ವ್ಯಯಿಸಲಿದೆ. ಅರುಣ್ ಜೇಟ್ಲಿಯವರೂ ಈ ಬಗ್ಗೆ ನೀಡಿರುವ ಮಾಹಿತಿಯಂತೆ ಇದುವರೆಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಬಂದರುಗಳಿಂದ ಉತ್ತಮ ಪ್ರತಿಫಲ ಕಂಡುಬಂದಿದ್ದು, ರೈಲ್ವೇ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ದಿ ತ್ವರಿತವಾಗಿ ಆಗಬೇಕಾಗಿದೆ. "ರೇಲ್ವೇ ನಿಲ್ದಾಣ, ರೈಲು ಬೋಗಿಗಳ ಗುಣಮಟ್ಟ ಉತ್ತಮಗೊಳಿಸುವುದು, ಸಂಭಾವ್ಯ ಬುಲೆಟ್ ರೈಲು ಮೊದಲಾದ ಎಲ್ಲಾ ವಿಷಯಗಳಲ್ಲಿ ಅಭಿವೃದ್ದಿಯನ್ನು ಬಲಪಡಿಸಬೇಕಾಗಿದೆ" ಎಂದು ಜೇಟ್ಲಿಯವರು ತಿಳಿಸಿದ್ದಾರೆ.
ಉದ್ಯೋಗಗಳಲ್ಲಿ ಬೆಳವಣಿಗೆ
ಪ್ರಧಾನಿ ಮೋದಿಯವರು ಕಾಲಕಾಲಕ್ಕೆ ಉದ್ಯೋಗಗಳ ಬೆಳವಣಿಗೆಯ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. 2018ರ ಬಜೆಟ್ ಪೂರ್ವ ಭಾಷಣದಲ್ಲಿ ಜೇಟ್ಲಿಯವರು 'ಮೋದಿ ಸರ್ಕಾರ ಉದ್ಯೋಗ ಹಾಗೂ ಉದ್ಯೋಗ ಸಂಬಂಧಿತ ಬಂಡವಾಳಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ' ಎಂದು ತಿಳಿಸಿದ್ದಾರೆ. ವರದಿಗಳ ಪ್ರಕಾರ ಈ ಬಜೆಟ್ ನಲ್ಲಿಯೇ ಉದ್ಯೋಗಗಳ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ (National Employment Policy) ಅಥವಾ ರಾಷ್ಟ್ರೀಯ ಉದ್ಯೋಗ ಪಾಲಿಸಿ ಯನ್ನು ಬಿಡುಗಡೆಗೊಳಿಸಲಿದೆ.
ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಏರಿಕೆ
2018ರ ಬಜೆಟ್ ನಲ್ಲಿ ಮೋದಿ ಸರ್ಕಾರ ಈಗಿರುವ ವಾರ್ಷಿಕ ಎರಡೂವರೆ ಲಕ್ಷ ರೂಪಾಯಿ ಆದಾಯದಿಂದ ಮೂರು ಲಕ್ಷದ ವರೆಗಿನ ಆದಾಯವನ್ನು ತೆರಿಗೆ ರಹಿತವಾಗಿ ಘೋಷಿಸುವ ಸಾಧ್ಯತೆ ಇದೆ. ಹಲವಾರು ಷೇರುದಾರರು ಬಜೆಟ್ ಪೂರ್ವ ಸಭೆಗಳಲ್ಲಿ ಈ ವಿಷಯದ ಕುರಿತು ತಮ್ಮ ಕಾಳಜಿ ಹಾಗೂ ಸಲಹೆಗಳನ್ನು ನೀಡಿದ್ದು, ಜನಸಾಮಾನ್ಯರ ಹಿತರಕ್ಷಣೆಗಾಗಿ ಈ ಮಿತಿಯನ್ನು ಐದು ಲಕ್ಷದವರೆಗಾದರೂ ಏರಿಸಬೇಕು ಎಂದು ಜೇಟ್ಲಿಯವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂದು ಕಾದು ನೋಡಬೇಕು.
ಕಾರ್ಪೋರೇಟ್ ತೆರಿಗೆಯಲ್ಲಿ ಕಡಿತ
ಬಜೆಟ್ 2018ರ ಇನ್ನೊಂದು ಪ್ರಮುಖ ಅಂಶವೆಂದರೆ ಸಂಸ್ಥೆಗಳಿಗೂ ನೀಡುವ ತೆರಿಗೆಯಲ್ಲಿನ ಕಡಿತ. 2015ರ ಬಜೆಟ್ ಭಾಷಣದಲ್ಲಿ ಜೇಟ್ಲಿಯವರು ಈ ತೆರಿಗೆಯನ್ನು ನಾಲ್ಕು ವರ್ಷಗಳಲ್ಲಿ ಶೇ. 30 ರಿಂದ 25ಕ್ಕೆ ಇಳಿಸುವ ಪ್ರಸ್ತಾಪವನ್ನಿಟ್ಟಿದ್ದರು. ಈ ಬಜೆಟ್ ನಲ್ಲಿ 2015ರಲ್ಲಿ ನೀವು ಹೇಳಿದ್ದ ಆಶ್ವಾಸನೆಗಳನ್ನು ಎಷ್ಟರ ಮಟ್ಟಿಗೆ ಪೂರೈಸಿದ್ದೀರಿ ಎಂದು ಈ ವರ್ಷ ಕೇಳುವ ಸಾಧ್ಯತೆ ದಟ್ಟವಾಗಿದ್ದು ಈ ಪ್ರಶ್ನೆಗೆ ಉತ್ತರವೋ ಎಂಬಂತೆ ಈ ತೆರಿಗೆ ಇಳಿತದ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ಈಗಾಗಲೇ ಅಮೇರಿಕಾದಲ್ಲಿಯೂ ಈ ತೆರಿಗೆಯನ್ನು ಶೇ. 35 ರಿಂದ ಕೇವಲ ಶೇ. 21ಕ್ಕೆ ಇಳಿಸಲಾಗಿದೆ. ಕಾರ್ಪೋರೇಟ್ ಇಂಡಿಯಾ ಸಂಸ್ಥೆ ಬಜೆಟ್ ಪೂರ್ವ ಭಾಷಣದ ಸಮಯದಲ್ಲಿ ಜೇಟ್ಲಿಯವರನ್ನು ಭೇಟಿಯಾಗಿ ಈಗಾಗಲೇ ಹಿಂದಿನ ಆಶ್ವಾಸನೆಯ ಬಗ್ಗೆ ನೆನಪು ಮಾಡಿಸಿ, ಅಮೇರಿಕಾದ ತೆರಿಗೆ ಕಡಿತವನ್ನೂ ತೋರಿಸಿ ಈಗ ತೆರಿಗೆ ಇಳಿಸಲೇಬೇಕು ಎಂದು ಆಗ್ರಹಿಸಿಯೂ ಆಗಿದೆ.