ಕೊರೊನಾವೈರಸ್ ಲಾಕ್ಡೌನ್: ಮುಜರಾಯಿ ಇಲಾಖೆಯ ಆದಾಯಕ್ಕೆ ದೊಡ್ಡ ಹೊಡೆತ
ಬೆಂಗಳೂರು, ಜೂನ್ 2: ಕಳೆದ ಎರಡು ತಿಂಗಳಿನಿಂದ ಕೊರೊನಾವೈರಸ್ ಸೋಂಕು ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಕರ್ನಾಟಕದ ಮುಜರಾಯಿ ಇಲಾಖೆಯ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ.
ಕರ್ನಾಟಕದಲ್ಲಿ ವಿಶ್ವವಿಖ್ಯಾತ ದೇವಸ್ಥಾನಗಳಿವೆ. ಲಾಕ್ಡೌನ್ ನಿಂದ ಎಲ್ಲ ದೇವಸ್ಥಾನಗಳು ಕಳೆದ ಎರಡು ತಿಂಗಳಿನಿಂದ ಬಾಗಿಲು ಮುಚ್ಚಿವೆ. ಮುಜರಾಯಿ ಇಲಾಖೆಗೆ ವಾರ್ಷಿಕ ಸರಾಸರಿ 600 ಕೋಟಿ ರುಪಾಯಿ ಆದಾಯ ಬರುತ್ತದೆ. ಆದರೆ, ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ವಿಚಾರವಾಗಿ ದೇವಸ್ಥಾನಗಳು ಸಂಪೂರ್ಣ ಬಾಗಿಲು ಮುಚ್ಚಿವೆ.
ದೇವಸ್ಥಾನಗಳು ಬಾಗಿಲು ಮುಚ್ಚಿರುವುದರಿಂದ ಮುಜರಾಯಿ ಇಲಾಖೆಗೆ 600 ಕೋಟಿ ರುಪಾಯಿಯಲ್ಲಿ ಶೇ 30 ರಷ್ಟು ಆದಾಯಕ್ಕೆ ಹೊಡೆತ ಬಿದ್ದಿದೆ.
550-600 ಕೋಟಿ ರುಪಾಯಿ ಆದಾಯ
ಒಂದು ವರ್ಷದಲ್ಲಿ, ನಾವು ಸುಮಾರು 550-600 ಕೋಟಿ ರುಪಾಯಿ ಆದಾಯವನ್ನು ಮುಜರಾಯಿ ಇಲಾಖೆಯಿಂದ ನೀರಿಕ್ಷಿಸುತ್ತೇವೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆದಾಯದಲ್ಲಿ ಸುಮಾರು 30% ನಷ್ಟು ಕೊರತೆಯನ್ನು ಕಾಣುತ್ತಿದ್ದೇವೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಕೇಂದ್ರ ತೆರಿಗೆಗಳಲ್ಲಿ ರಾಜ್ಯದ ಪಾಲು ಕಡಿಮೆ
ಕೇಂದ್ರ ತೆರಿಗೆಗಳಲ್ಲಿ ರಾಜ್ಯದ ಪಾಲು ಕಡಿಮೆಯಾಗಿರುವುದು, ಸರಕು ಮತ್ತು ಸೇವಾ ತೆರಿಗೆಗಳಲ್ಲಿ ಬಾಕಿ ಇರುವುದರಿಂದ ಹಾಗೂ 60 ದಿನಗಳ ರಾಷ್ಟ್ರವ್ಯಾಪಿ ಲಾಕ್ಡೌನ್ ನಿಂದ ದೇವಸ್ಥಾನಗಳಿಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಸುಮಾರು 19 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆಯ ಅಡಿ ಬರುತ್ತವೆ.
ಸಿಬ್ಬಂದಿಗೆ ಕೊಡಲು ಸಂಬಳ ಇಲ್ಲ
ಕರ್ನಾಟಕದಲ್ಲಿ ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಇಲಾಖೆಯ ಸಹಾಯದನದಿಂದ ಅನೇಕ ಸಿಬ್ಬಂದಿ ಕೆಲಸ ಮಾಡುತ್ತಾರೆ. ಆದರೆ, ಇದೀಗ ಆದಾಯದಲ್ಲಿ ಗಣನೀಯ ಕೊರತೆಯಾಗಿರುವುದರಿಂದ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳುತ್ತಾರೆ.
ಜೂನ್ 8 ರ ನಂತರ ದೇವಸ್ಥಾನ ಶುರು
ಜೂನ್ 1 ರಿಂದ ಎಲ್ಲಾ ದೇವಸ್ಥಾನಗಳನ್ನು, ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಮುಜರಾಯಿ ಇಲಾಖೆ ನಿರ್ಧಾರ ಕೈಗೊಂಡಿತ್ತು. ಆದರೆ, ಜೂನ್ 8 ರ ನಂತರ ದೇವಸ್ಥಾನಗಳನ್ನು ತೆರೆಯುವುದಾಗಿ ಮುಜರಾಯಿ ಇಲಾಖೆ ಘೋಷಣೆ ಮಾಡಿದೆ.