ಭಾರತದ ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ಹಿಡಿಯಲಿವೆ ಈ ಐದು ರಾಜ್ಯಗಳು
ಕೊರೊನಾವೈರಸ್ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳ ಜಂಘಾಬಲವೇ ಉಡುಗಿ ಹೋಗಿದೆ.
ಅಭಿವೃದ್ದಿಶೀಲ ರಾಷ್ಟ್ರವಾದ ಭಾರತದ ಮೇಲೆ ಕೊರೊನಾ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ. ಆರ್ಥಿಕ ಕುಸಿತ, ನಿರುದ್ಯೋಗ, ಬಡತನ ಹೆಚ್ಚಳದಂತಹ ಗಂಭೀರ ಸಮಸ್ಯೆಗಳು ಮತ್ತಷ್ಟು ದೊಡ್ಡದಾಗುತ್ತಿವೆ. ಕುಸಿಯುತ್ತಿರುವ ಆರ್ಥಿಕ ಶಕ್ತಿಯನ್ನು ಎತ್ತಿ ಹಿಡಿಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೀವ್ರ ಹೆಣಗಾಡುತ್ತಿವೆ.
ಸರ್ಕಾರಕ್ಕೂ ಆದಾಯಕ್ಕೂ ಕೊರೊನಾ ಕಾಟ:ಏಪ್ರಿಲ್ನಲ್ಲಿ ಜಿಎಸ್ಟಿ ಸಂಗ್ರಹ 70% ಕುಸಿತ
ಎರಡು ತಿಂಗಳಿಗೂ ಹೆಚ್ಚು ದೇಶವೇ ಲಾಕ್ಡೌನ್ ಆಗಿರುವ ಪರಿಣಾಮ ಆರ್ಥಿಕತೆ ಪಾತಾಳಕ್ಕೆ ಕುಸಿಯುವ ಹಂತ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಕುಸಿಯುತ್ತಿರುವ ಆರ್ಥಿಕತೆಯನ್ನು ಎತ್ತಿ ಹಿಡಿಯುವವರಾರು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸದ್ಯದ ಮಟ್ಟಿಗೆ ದೇಶದ ಐದು ರಾಜ್ಯಗಳು ಆ ಕೆಲಸವನ್ನು ಮಾಡಲಿವೆ ಎನ್ನುತ್ತದೆ Elara Securities Inc ವರದಿ.
ಐದು ರಾಜ್ಯಗಳು ಯಾವವು?
ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು 27% ರಷ್ಟು ಕೊಡುಗೆ ನೀಡುವ ಐದು ರಾಜ್ಯಗಳಾದ ಕರ್ನಾಟಕ, ಪಂಜಾಬ್, ತಮಿಳುನಾಡು, ಹರಿಯಾಣ ಮತ್ತು ಕೇರಳದಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಸಡಿಲಿಕೆಯ ನಂತರ ಆರ್ಥಿಕ ಚಟುವಟಿಕೆಗಳು ಗರಿಗೆದರಿರುವುದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ಎಂದು ವರದಿ ಹೇಳುತ್ತದೆ.
ಗರಿಗೆದರಿದ ಆರ್ಥಿಕ ಚಟುವಟಿಕೆಗಳು
ವಿದ್ಯುತ್ ಬಳಕೆ, ಜನ ಸಂಚಾರ, ಸಗಟು ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಆಗಮನ ಮತ್ತು ಗೂಗಲ್ ದತ್ತಾಂಶಗಳ ವಿಶ್ಲೇಷಣೆಯ ಆಧಾರದ ಮೇಲೆ ಕರ್ನಾಟಕ, ಪಂಜಾಬ್, ತಮಿಳುನಾಡು, ಹರಿಯಾಣ ಮತ್ತು ಕೇರಳದಲ್ಲಿ ಆರ್ಥಿಕ ಚಟುವಟಿಕೆಗಳು ಉನ್ನತ ಮಟ್ಟದಲ್ಲಿ ಏರುವ ಲಕ್ಷಣ ನೀಡಿವೆ. ಈ ಐದೂ ರಾಜ್ಯಗಳು ದೇಶದ ಆರ್ಥಿಕತೆಯನ್ನು ಮೇಲಕೆತ್ತಲಿವೆ ಎಂದು ವರದಿ ಹೇಳುತ್ತದೆ.
ಹಿಂದುಳಿದ ಮಹಾರಾಷ್ಟ್ರ, ಗುಜರಾತ್
ವ್ಯಾಪಕ ಕೈಗಾರಿಕೆಗಳನ್ನು ಹೊಂದಿರುವ ಹಾಗೂ ಜಿಡಿಪಿ ಕೊಡುಗೆಯಲ್ಲಿ ಮೇಲೆ ಹೇಳಲಾದ ರಾಜ್ಯಗಳಿಗಿಂತಲೂ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಜರ್ಜರಿತವಾಗಿವೆ. ಇನ್ನೂ ಈ ರಾಜ್ಯಗಳಲ್ಲಿ ಲಾಕ್ಡೌನ್ ಸಡಿಲಿಕೆ ಅಷ್ಟೊಂದು ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ದೇಶದ ಆರ್ಥಿಕತೆಗೆ ಬೆಂಬಲವಾಗಿ ನಿಲ್ಲಲು ಈ ರಾಜ್ಯಗಳು ಹಿಂದುಳಿಯಬಹುದು ಎಂದು ವರದಿ ಹೇಳುತ್ತದೆ.
ಬೇಡಿಕೆ ಮುಂದುವರಿಯುತ್ತದೆ
"ಮುಂಬರುವ ತಿಂಗಳುಗಳಲ್ಲಿ ಬೇಡಿಕೆ ಮುಂದುವರಿಯುತ್ತದೆ. ಅಲ್ಲದೇ ಕೊರೊನಾವೈರಸ್ ನಂತರದ ಬದಲಾವಣೆ ಖಂಡಿತವಾಗಿಯೂ ಆರ್ಥಿಕತೆಗೆ ಹೊಸ ದಿಕ್ಕು ತೋರಿಸುತ್ತದೆ'' ಎಂದು Elara Securities Inc ನ ಗರಿಮಾ ಕಪೂರ್ ಹೇಳುತ್ತಾರೆ.