ತಿಂಗಳಿನ ಆದಾಯ 5,000 ರುಪಾಯಿ, ಖರೀದಿ ಮಾಡಿದ್ದು ಮಾತ್ರ 200 ಕೋಟಿ ಮೌಲ್ಯದ ಆಸ್ತಿ
ಆಂಧ್ರಪ್ರದೇಶದಲ್ಲಿ ಭೂ ವ್ಯವಹಾರಗಳ ಭಾರೀ ಅಕ್ರಮಗಳು ನಡೆದಿರುವುದು ಬಹಿರಂಗವಾಗಿದೆ. ಅಮರಾವತಿ ರಾಜಧಾನಿ ಪ್ರದೇಶದಲ್ಲಿ 200 ಕೋಟಿ ಮೌಲ್ಯದ ಭೂ ವ್ಯವಹಾರ ಅಕ್ರಮ ನಡೆದಿದ್ದು, ಸರ್ಕಾರ ತನಿಖೆಗೆ ಆದೇಶಿಸಿದೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಜನರು 2014-15ರ ಅವಧಿಯಲ್ಲಿ 200 ಕೋಟಿ ರುಪಾಯಿಗಿಂತ ಹೆಚ್ಚು ಮೌಲ್ಯದ 700 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಸಿಐಡಿ ಆರೋಪಿಸಿದೆ. ಸಿಐಡಿ ಪ್ರಕಾರ, ಅಮರಾವತಿ ರಾಜಧಾನಿ ಪ್ರದೇಶದಲ್ಲಿ ತಿಂಗಳಿಗೆ 5,000 ರುಪಾಯಿಗಿಂತ ಕಡಿಮೆ ಆದಾಯ ಗಳಿಸುವ 797 ಪಡಿತರ ಚೀಟಿದಾರರು 700 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯವು 200 ಕೋಟಿ ರುಪಾಯಿಯಷ್ಟಿದೆ.
ಬಡತನ ರೇಖೆಗಿಂತ ಕೆಳಗಿನ ಜನರು 200 ಕೋಟಿ ಆಸ್ತಿ ಖರೀದಿಸಿದ್ದು ಹೇಗೆ?
"700 ಎಕರೆ ಭೂಮಿಯನ್ನು ಹೊಂದಿರುವ ಬಿಪಿಎಲ್ ಪಡಿತರ ಕಾರ್ಡುದಾರರು ತಮ್ಮ ಮಾಸಿಕ ಆದಾಯ 5,000 ರೂ.ಗಿಂತ ಕಡಿಮೆ ಎಂದು ಘೋಷಿಸಿದ್ದಾರೆ. ಈ ಗಳಿಕೆಯೊಂದಿಗೆ ಅವರು 200 ಕೋಟಿ ರುಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಭೂಮಿಯನ್ನು ಹೇಗೆ ಖರೀದಿಸಬಹುದು, ಇದು ದೊಡ್ಡ ಪ್ರಶ್ನೆಯಾಗಿದೆ" ಎಂದು ಸಿಐಡಿ ಎಡಿಜಿ ಪಿವಿ ಸುನಿಲ್ ಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜಮೀನು ಖರೀದಿ ವೇಳೆ ನಡೆದಿದೆ ಭಾರೀ ಅವ್ಯವಹಾರ
"ಅಮರಾವತಿಯಲ್ಲಿ 2014 ಮತ್ತು 2015 ರ ಅವಧಿಯಲ್ಲಿ ಭೂ ನೋಂದಣಿ ನಡೆದಿತ್ತು. ಜಮೀನುಗಳನ್ನು ಖರೀದಿಸುವುದರಲ್ಲಿ ಭಾರಿ ಹಣದ ವಹಿವಾಟು ನಡೆದಿತ್ತು. ಒಪ್ಪಂದಗಳಲ್ಲಿ ಭಾಗಿಯಾಗಿರುವ ಅನೇಕರಿಗೆ ಪ್ಯಾನ್ ಕಾರ್ಡ್ಗಳೂ ಇಲ್ಲ" ಎಂದು ತನಿಖಾಧಿಕಾರಿಯೂ ಆಗಿರುವ ಸಿಐಡಿ ಎಸ್ಪಿ ಮೇರಿ ಪ್ರಶಾಂತಿ ಹೇಳಿದ್ದಾರೆ.
ಮನಿ ಲಾಂಡರಿಂಗ್ ಬಗ್ಗೆ ತನಿಖೆಗೆ ಆದೇಶ
ಸಂಭವನೀಯ ತೆರಿಗೆ ವಂಚನೆ ಮತ್ತು ಮನಿ ಲಾಂಡರಿಂಗ್ ಬಗ್ಗೆ ತನಿಖೆ ನಡೆಸಲು ಇಲಾಖೆ ಈಗ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಸಹಾಯವನ್ನು ಕೋರಿದೆ ಎಂದು ಸಿಐಡಿ ಎಡಿಜಿ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.
ದಲಿತ ಮಹಿಳೆಯಿಂದ ಬಲವಂತವಾಗಿ ಭೂಮಿ ಖರೀದಿ, ಕೇಸ್ ದಾಖಲು
ದಲಿತ ಮಹಿಳೆಯೊಬ್ಬರಿಂದ ಭೂಮಿಯನ್ನು ಬಲವಂತವಾಗಿ ಖರೀದಿಸಿದ್ದಕ್ಕಾಗಿ ಸಿಐಡಿ ಗುರುವಾರ ಚಂದ್ರಬಾಬು ನಾಯ್ಡು ಆಡಳಿತದ ಇಬ್ಬರು ಮಾಜಿ ಮಂತ್ರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಮಾಜಿ ಮಂತ್ರಿಗಳು ಮತ್ತು ಟಿಡಿಪಿ ನಾಯಕರಾದ ಪಿ ನಾರಾಯಣ ಮತ್ತು ಪಿ ಪುಲ್ಲಾ ರಾವ್ ಅವರ ವಿರುದ್ಧ ಕೇಸ್ ದಾಖಲಾಗಿದೆ.